ಪಾತ್ರಗಳ ಮೂಲಕ ವೈಚಾರಿಕತೆ ಮಿಡಿದ ಶಾಂತಿನಾಥ ದೇಸಾಯಿ
ಮಾರ್ಚ್
26,
ಖ್ಯಾತ
ಸಾಹಿತಿ
ದಿವಂಗತ
ಶಾಂತಿನಾಥ
ದೇಸಾಯಿ
ಅವರ
ಪುಣ್ಯತಿಥಿ.
ಈ
ಸಂದರ್ಭದಲ್ಲಿ
ಅವರು
ಸೃಜಿಸಿದ
ಸಾಹಿತ್ಯ,
ಬೆಳೆದ
ಪರಿಸರ
ಹಾಗೂ
ವಸ್ತುನಿಷ್ಠ
ಮನೋಧರ್ಮದಿಂದಲೇ
ಅವರು
ಬಾಳಿದ
ಪರಿಯ
ಕುರಿತು
ಒಂದು
ಕಿರುನೋಟ.
ನಾನು ಇವರ ಮತ್ತು ಎಸ್. ಎಲ್. ಭೈರಪ್ಪನವರ ಕಾದಂಬರಿಗಳನ್ನು ಬಹಳ ಆಸಕ್ತಿಯಿಂದ ಓದುತ್ತಿದ್ದೆ. ಅವರು ವಂಶವೃಕ್ಷ ಕಾದಂಬರಿಯ ಕಥಾ ಹಂದರವನ್ನು ಬಹಳ ಮೆಚ್ಚಿಕೊಂಡಿದ್ದರು. ‘ಪಾತ್ರಗಳಲ್ಲಿ ವೈಚಾರಿಕತೆಯ ಜೊತೆಗೆ ರಕ್ತಮಾಂಸಗಳನ್ನು ತುಂಬಬೇಕು. ಅವು ಜೀವಂತವಾಗಿರಬೇಕು. ಲವಲವಿಕೆಯಿಂದಿರಬೇಕು. ವಂಶವೃಕ್ಷದಲ್ಲಿ ವಿಧವೆ ಕಾತ್ಯಾಯನಿಯು ಪಾಪಪ್ರಜ್ಞೆಯಿಂದ ಸಾಯುತ್ತಾಳೆ. ಅವಳು ನನಗೆ ಹಾಗೆ ಸಾಯುವುದು ಬೇಡಾಗಿತ್ತು. ಅವಳು ಮೃತ್ಯುಮುಖಿಯಾಗದೇ ಜೀವನ್ಮುಖಿಯಾಗಬೇಕಿತ್ತು. ಅವಳನ್ನು ನಾನು ನನ್ನ ‘ಸಂಬಂಧ’ ಕಾದಂಬರಿಯಲ್ಲಿ ವಿಧವೆ ರಾಧಿಕೆಯ ಪಾತ್ರದಲ್ಲಿ ಬದುಕಲು ಹಚ್ಚಿದೆ’ ಎಂದು ಒಮ್ಮೆ ನನಗೆ ಹೇಳಿದ್ದರು.
ಈ ಇಬ್ಬರೂ ಸಾಹಿತಿಗಳು ಬೇರೆ ಬೇರೆ ವಾತಾವರಣದಲ್ಲಿ ಬೆಳೆದ ಬೇರೆ ಬೇರೆ ಮನೋಧರ್ಮದ, ದೃಷ್ಟಿಕೋನದ ಪ್ರಬುದ್ಧ ಸಾಹಿತಿಗಳು. ಇವರಿಬ್ಬರೂ ಕನ್ನಡ ಸಾಹಿತ್ಯಕ್ಕೆ ಅಮೂಲ್ಯವಾದ ಪಾತ್ರಗಳನ್ನು ಸೃಷ್ಟಿಸಿಕೊಟ್ಟಿದ್ದಾರೆ. ಭೈರಪ್ಪನವರ ಕಾತ್ಯಾಯನಿಯ ಸಾವೇ ಶಾಂತಿನಾಥರ ರಾಧಿಕೆಯ ಹುಟ್ಟಿಗೆ ಕಾರಣವಾಗಿರಬಹುದು. ಪ್ರೇರಣೆಯಾಗಿರಬಹುದು. ಇದು ಒಂದು ಆರೋಗ್ಯಕರ ವಿಚಾರಧಾರೆ. ರಾಧಿಕೆ ಶಿಕ್ಷಿತ, ಜಾಣ, ದಿಟ್ಟ, ಧೈರ್ಯವಂತ ವಿಧವೆ. ಮೊದಲು ಪ್ರೊಫೆಸರ್ ಶೀತಲ್ಕುಮಾರ್ ಅವಳಲ್ಲಿ ಅನುರಕ್ತನಾದರೂ, ಅವಳು ಶೇಖರನ ಕಾಮುಕ ಕಣ್ಣಿಗೆ ಬಲಿಯಾಗುವಾಗ ಶೀತಲನ ಹೃದಯದಲ್ಲಿ ಹುಟ್ಟಿದ ಪ್ರೀತಿ ಪೋಷಕನ ಪ್ರೀತಿಯಾಗುತ್ತದೆ. ಅವಳಿಗೆ ಹೊಸ ಜೀವನ ಕಲ್ಪಿಸಿಕೊಡುವಾಗ ಹೊಣೆಗಾರಿಕೆಯ ಮತ್ತು ತಿಳಿವಳಿಕೆಯ ಪ್ರೀತಿಯಾಗುತ್ತದೆ. ನಿಷ್ಕಪಟ ಪ್ರೇಮಕ್ಕೆ ಈ ಎಲ್ಲ ಆಯಾಮಗಳು ಇವೆ ಎಂದು ಎರಿಕ್ ಫ್ರಾಮ್ ಹೇಳಿದ್ದಾನೆ. ಶೀತಲಕುಮಾರನ ಪ್ರೀತಿ ಕಾದಂಬರಿಗುಂಟ ಈ ಎಲ್ಲ ರೂಪಗಳನ್ನು ತಳೆಯುತ್ತ ಹೋಗುತ್ತದೆ.
ಅವರ ‘ಮುಕ್ತಿ’ ಕಾದಂಬರಿ ಧಾರಾವಾಹಿಯಾಗಿ ಪ್ರಕಟಗೊಳ್ಳುತ್ತಿರುವಾಗ ಅದರ ನಾಯಕ ಗೌರೀಶನ ಪ್ರೇಮದಲ್ಲಿ ಅಂದಿನ ಯುವಕರು ತಮ್ಮ ಸಂದಿಗ್ಧ ಮನಸ್ಥಿತಿಯನ್ನು ಗುರುತಿಸಿಕೊಳ್ಳುತ್ತಿದ್ದರು. ಅದರ ಪ್ರತಿ ಕಂತನ್ನು ಕಾತರದಿಂದ ಕಾಯಿತ್ತಿದ್ದೆವೆಂದು ಇಂದಿನ ವೃದ್ಧರು ನನಗೆ ಹೇಳುತ್ತಾರೆ. ಅಂದಿನ ಯುವಕರಲ್ಲಿ ಈ ಕಾದಂಬರಿ ಅಷ್ಟೊಂದು ಗಾಢ ಪ್ರಭಾವವನ್ನು ಬೀರಿತ್ತು.
ಶಾಂತಿನಾಥರು ಪಾತ್ರಗಳಲ್ಲಿ ಜೀವತುಂಬುವ ರೀತಿ, ಎಡೆಬಿಡದೆ ಓದಿಸಿಕೊಂಡು ಹೋಗುವ ಸಂಭಾಷಣೆ ಹೆಣೆಯುವ ಕಲೆ ಅನನ್ಯವಾದುದು. ಅವರ ಪ್ರತಿ ಕಥೆ, ಕಾದಂಬರಿಯಲ್ಲಿ ಹೊಸತನ ಇದ್ದೇ ಇರುತ್ತಿತ್ತು. ‘ಸೃಷ್ಟಿ’ ಕಾದಂಬರಿಯನ್ನು ಹೊಸ ತಂತ್ರ-ವಿನ್ಯಾಸಗಳನ್ನು ಬಳಸಿಕೊಂಡು ಬರೆದಿದ್ದಾರೆ. ತಮ್ಮ ಪ್ರಯೋಗಾತ್ಮಕ ಬರವಣಿಗೆಯಿಂದ ಕಾದಂಬರಿಯ ಪ್ರಕಾರವನ್ನು ಜೀವಂತವಾಗಿರಿಸಿದ್ದಾರೆ, ಸಮೃದ್ಧಗೊಳಿಸಿದ್ದಾರೆ. ಅವರ ಕಾದಂಬರಿಗಳು ಮನೋರಂಗದಲ್ಲಿಯೇ ನಡೆದು ಹೋಗುತ್ತವೆ. ನಿಸರ್ಗ ನೇಪಥ್ಯಕ್ಕೆ ಸರಿಯುತ್ತದೆ. ಇವರ ಬರವಣಿಗೆ ಕನ್ನಡ ಕಾದಂಬರಿ ಲೋಕದಲ್ಲಿ ಈ ಪ್ರಮುಖ ಬದಲಾವಣೆಯನ್ನು ತಂದಿತು ಎಂದು ಹೇಳಬಹುದು.
ಇವರು ಮೂಲತಃ ಕಾರವಾರ ಜಿಲ್ಲೆಯ ಹಳಿಯಾಳ ಮತ್ತು ಹವಗಿಯವರು. ಇವರ ಕಾದಂಬರಿಯಲ್ಲಿ ಬರುವ ಕೃಷ್ಣಾಪುರದ ಓಣಿಗಳು, ಮನೆಗಳು ಮುತ್ತಿನಕೆರೆ ಇಲ್ಲಿಯೇ ಇವೆ. ಬಸ್ತಿ, ಹೊಂಡಗಳು ಹವಗಿಯಲ್ಲಿವೆ. ಇವರ ಪಾತ್ರಗಳು ಆಡುವ ಮಾತುಗಳು ಇಲ್ಲಿಯ ಆಡುಭಾಷೆಯಾಗಿರುತ್ತದೆ. ಇಂಥ ಶ್ರೇಷ್ಠ ಸಾಹಿತಿ ನಮ್ಮಿಂದ ದೂರ ಹೋದರೂ ಅವರು ಸೃಷ್ಟಿಸಿದ, ಆಧುನಿಕ ಜೀವನಕ್ಕೆ ಸ್ಪಂದಿಸುವ, ಜೀವನೋತ್ಸಾಹ ಚಿಮ್ಮುವ, ಪ್ರೇಮಕ್ಕೆ ಹಾತೊರೆಯುವ, ಕಿಲಾಡಿತನ ಮಾಡುತ್ತಲೇ ಬದುಕನ್ನು ಉತ್ಕಟವಾಗಿ ಪ್ರೀತಿಸುವ, ಜೀವನದ ಅರ್ಥವನ್ನು ಹುಡುಕುತ್ತಲೇ ಓದುಗನನ್ನು ವಿಚಾರಕ್ಕೆ ತೊಡಗಿಸುವ, ಅವರ ಪಾತ್ರಗಳ ಮುಖಾಂತರ ಶಾಂತಿನಾಥರು ಕನ್ನಡಿಗರ ಹೃದಯಗಳಲ್ಲಿ ಇನ್ನೂ ಇದ್ದಾರೆ. ಅವರ ‘ಓಂ ಣಮೋ’ ಕಾದಂಬರಿಯ ಮುನ್ನುಡಿಯಲ್ಲಿ ಕೆ.ವಿ. ತಿರುಮಲೇಶ ಹೇಳಿದಂತೆ ‘ಶಾಂತಿನಾಥರು ನಮಗೆ ಎಂದರೆ ಆಧುನಿಕ ಕನ್ನಡಕ್ಕೆ ಪಂಪ ರನ್ನರ ಸಮಾನ!’