‘ಕನ್ನಡ’ ರಾಷ್ಟ್ರಭಾಷೆಯೂ ಆಗಲಿ...
ಬ್ಯಾಂಗ್ಲೂರ್, ಬೆಂಗಳೂರು ಆದ ತಕ್ಷಣ ಭಾಗ್ಯ ಬರುತ್ತಾ ಅನ್ನೋರು ಕೆಲವರು. ಇವರಿಗೆ ಉತ್ತರ ನೀಡುವುದಕ್ಕಾಗಿಯೇ ಈ ಲೇಖನ.
- ಚಂದ್ರಶೇಖರನ್ ಕಲ್ಯಾಣ ರಾಮನ್, ಬೆಂಗಳೂರು
ಮದ್ರಾಸ್, ಚೆನ್ನೈ ಆಗಿ ಬದಲಾದಲ್ಲಿ ಅಲ್ಲಿನ ಸೆಕೆ-ದಗೆ-ಹಬೆಯ ಹವಾಮಾನದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂಬ ಪ್ರತಿಕ್ರಿಯೆಗಳು ಮೂಡಿಬಂದಿದ್ದವು. ಹೀಗೆಯೇ ರಂಗೂನ್, ಯಾಂಗೋನ್ ಆಗಿ ಮರು ನಾಮಾಂಕಿತವಾದಾಗ ಮತ್ತು ಎಡೊ-ಟೋಕಿಯೋ, ಲೆನಿನ್ಗಾರ್ಡ್-ಸೇಂಟ್ ಪೀಟರ್ಸ್ಬರ್ಗ್, ಸಲಿಸ್ಬರಿ-ಹರಾರೆ, ಸೇಗೋನ್-ಹೊ ಚಿ ಮಿನ್ಗಳಾಗಿ ಪರಿವರ್ತನೆಗೊಂಡಾಗ ಬಹಳಷ್ಟು ಪ್ರತಿರೋಧಗಳು ವ್ಯಕ್ತವಾಗಿರಬಹುದು. ಇದೀಗ ನೋಡಿ ನಮ್ಮ ಬೆಂಗಳೂರಿನ ಸರದಿ.
Bangalore, Mysore, Belgaum ಇತರೆ ಊರುಗಳ ಅಸಂಗತ ಉಚ್ಚಾರಣೆಯನ್ನು ಸ್ಥಳೀಯೀಕರಿಸುವ ಪ್ರಯತ್ನ ಮತ್ತು ಹೆಸರಿನ ಪ್ರಾದೇಶಿಕ ವೈಶಿಷ್ಟ್ಯವನ್ನು ಸ್ವಲ್ಪ ಮಟ್ಟಿಗೆ ಮರುಕಳಿಸುವ ಉದ್ದೇಶದಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಿದೆ. ಈ ಸಮರ್ಥನೆ ಸಮಂಜಸವಾಗಿದೆ. ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶವಾಗಲಿ, ಅನ್ಯಭಾಷಿಕರನ್ನು ತೊಂದರೆಗೆ ಸಿಲುಕಿಸುವ ಪರಿಯಾಗಲಿ ಅಥವ ಈಗಾಗಲೇ ಅಂತಾರಾಷ್ಟ್ರೀಯವಾಗಿ ಪ್ರಚಾರಕ್ಕೆ ಬಂದಿರುವ ಹೆಸರನ್ನು ಸಂದಿಗ್ಧತೆಗೆ ದೂಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.
ಈ ವಾದ ನೋಡಿ...
ಪತ್ರಿಕೆ ಮತ್ತು ಇತರ ಮಾಧ್ಯಮಗಳಲ್ಲಿ ಇದರ ಬಗೆಗಿನ ಚರ್ಚೆಗಳಲ್ಲಿ ಹೆಸರುಗಳ ಇಂಗ್ಲೀಷ್ ಕಾಗುಣಿತ ರೂಪಗಳನ್ನು ಬದಲಾಯಿಸಲು ಹೊರಟಿರುವುದು ಅಭಾಷಾ ವ್ಶೆಜ್ಞಾನಿಕ! ಇಂಗ್ಲೀಷ್, ಹಿಂದಿ, ಬೆಂಗಾಲಿ ಮತ್ತು ಇತರ ಕನ್ನಡೇತರ ಭಾಷೆಗಳಲ್ಲಿ ಳ, ವ ಇತರ ಅನೇಕ ಅಕ್ಷರಗಳಿಲ್ಲ. ಊರುಗಳು ಬೆಂಗಲೂರು ಮತ್ತು ಬೆಳಗಾಬಿಗಳಾಗಿ ಮತ್ತಷ್ಟು ಅಪಭ್ರಂಶಗೊಳ್ಳುವ ಬದಲು ಹೆಸರುಗಳು ಹಾಗೆಯೇ ಉಳಿದುಕೊಳ್ಳಲಿ ಎಂದು ಕೆಲವರು ಪ್ರತಿಪಾದಿಸಿದ್ದಾರೆ.
ಯಾವುದೇ ಪದ, ಶಬ್ದ, ಸ್ವರಗಳನ್ನು ವ್ಶೆಜ್ಞಾನಿಕವಾಗಿ ಉಚ್ಚಾರ ಮಾಡಲು ಸರ್ವಶಕ್ಯವಾಗಿರುವ ಕನ್ನಡ ಭಾಷೆಯಂತೆ ಇತರೆ ಭಾಷೆಗಳ ವರ್ಣಮಾಲೆಯಲ್ಲಿ ಅಕ್ಷರಗಳಿಲ್ಲದಿದ್ದರೆ ಅದು ಬೆಂಗಳೂರು ಎಂದು ಸರಿಯಾಗಿ ಉಚ್ಚರಿಸಿ ಎನ್ನಲು ಪ್ರಯತ್ನಿಸುತ್ತಿರುವವರ ತಪ್ಪೇ?
ಇಂಗ್ಲಿಷ್ ಭಾಷೆಯ ಒಂದು ಅಭಾಸ ಗಮನಿಸಿ Minuteಎಂಬ ಪದವನ್ನು ಅವರು ಮಿನಿಟ್ ಮತ್ತು ಮೈನ್ಯೂಟ್ ಎಂದು ಸಂದರ್ಭೋಚಿತವಾಗಿ ಉಚ್ಚರಿಸುತ್ತಾರೆ. Lead ಎನ್ನುವ ಪದಕ್ಕೆ ಮೂರು ವಿವಿಧ ಅರ್ಥ ಮತ್ತು ಎರಡು ಬೇರೆ ಉಚ್ಚಾರಣೆಗಳಿವೆ. Caseಗೆ ಕೇಸ್ ಅಂತೀವಿ. Cashಗೆ ಕ್ಯಾಷ್ ಅಂತೀವಿ. ಹೀಗೆ ಹಲವಾರು ಅಭಾಸಕರ ಇಂಗ್ಲಿಷ್ ಪದಗಳಿವೆ. ಆ ಪದಗಳನ್ನೆಲ್ಲಾ ಕನ್ನಡಿಗರು ಸರಿಯಾಗಿ ಉಚ್ಚಾರ ಮಾಡಲು ಕಲಿತಿಲ್ಲವೆ.
ಎಲ್ಲವೂ ಸರಳ.. ಜೊತೆಗೆ ಸುಲಭ..
ಇನ್ನು ನಮ್ಮ ಸಹೋದರ ತಮಿಳರನ್ನು ಗಮನಿಸಿ ಅವರ ಭಾಷೆಯಲ್ಲಿ ಪೆಂಕಳೂರು ಎಂದು ಕರೆಯಲ್ಪಡಬಹುದಾದ ಪದವನ್ನು ಅವರು ಬೆಂಗಳೂರು ಎಂದೇ ಸರಿಯಾಗಿ ಉಚ್ಚರಿಸುತ್ತಿದ್ದಾರೆ. ನನ್ನ ಹೆಸರೂ ಸಹ ಅವರ ಬಾಯಲ್ಲಿ ಗಲ್ಯಾನ್ ಆಗದೇ ಕಲ್ಯಾಣ್ ಆಗಿಯೇ ಉಳಿದಿದೆ.
ತಮಿಳು ವರ್ಣಮಾಲೆಯಲ್ಲಿ ಕ-ಗ, ತ-ದ, ಪ-ಬ, ನ-ಣ ಹೀಗೆ ಹಲವು ಅಕ್ಷರಗಳಿಗೆ ಕೇವಲ ಒಂದೊಂದು ಅಕ್ಷರ ಮಾತ್ರ ಇದೆ. ಹಾಗಿದ್ದರೂ ಅವರಿಗೆ ಕ್ಲಿಷ್ಟವಾದ ಕುತ್ಬುದೀನ್ ಐಬಕ್ ಎಂಬ ಪದವನ್ನು ನಮ್ಮ ರೀತಿಯಲ್ಲಿಯೇ ಸ್ಪಷ್ಟವಾಗಿ ಉಚ್ಛರಿಸುವುದನ್ನು ನಾನು ಕಂಡಿದ್ದೇನೆ. ನಲಂದ, ಮಾಲವಿಕ, ಕಾಲಿದಾಸ ಹೀಗೆ ಇತರ ಪದಗಳನ್ನು ಸುಲಲಿತವಾಗಿ ಹಿಂದಿ ಭಾಷಿಕರು ನಳಂದ, ಮಾಳವಿಕ, ಕಾಳಿದಾಸ ಎಂದು ಉಚ್ಚರಿಸುವುದನ್ನು ನಾವು ಕೇಳಿದ್ದೇವೆ.
ಮತ್ತೊಂದು ಉದಾಹರಣೆ ಗಮನಿಸಿ, ನಾವೆಲ್ಲರೂ ಅಮೇರಿಕಾಗೆ ಹೋದ ಮೊದಲೆರಡು ದಿನದಲ್ಲಿ ಟ್ವೆಂಟಿಯ್ಯೆಟ್ ಅನ್ನು ಬದಿಗಿರಿಸಿ ಟೊಣಿಯೆಟ್ ಎನ್ನುವ ಉಚ್ಚಾರಣೆ ಕಲಿಯುತ್ತೇವೆ. ತಂತ್ರಜ್ಞಾನದ ಅವಿಷ್ಕಾರಕ್ಕಾಗಿ, ಅಗ್ರಸ್ಥಾನಕ್ಕಾಗಿ ಅದರ ಸರಿಯಾದ ನಿರ್ವಹಣೆಗಾಗಿ ಹಲವಾರು ಭಾಷೆ! ಅ, ಅ++ ಇತ್ಯಾದಿ ಎಲ್ಲರೂ ಕಲಿಯುತ್ತಾರೆ. ಅವುಗಳ ಬಗೆಗಿರುವ ಗ್ರಹಣ-ಧಾರಣ ಶಕ್ತಿ ಮಾತನಾಡುವ ಭಾಷೆಯ ಅದರಲ್ಲೂ ಕನ್ನಡದ ಮೇಲೆ ಅವರಿಗೇಕೆ ಒಲವಿಲ್ಲ ಎಂಬುದೇ ಪ್ರಶ್ನೆಯಾಗಿದೆ.
ಇಲ್ಲಿಗೆ ಬರೋರು ಭಾಷೆ ಕಲಿಯಲಿ...
ಇನ್ನು ಜಾಗತೀಕರಣದ ಸ್ಪೋಟದಿಂದ ಭಾರತವೊಂದೇ ಅಲ್ಲಾ ಇಡೀ ವಿಶ್ವವೇ ಈಗ ಬೆಂಗಳೂರಿನತ್ತ ದಾಪುಗಾಲಿಟ್ಟಿದೆ. ಹೇಗೆ ನಾವು ಹೊರದೇಶಕ್ಕೆ ಹೋಗುವ ಮೊದಲು ಕನಿಷ್ಠ ಇಂಗ್ಲಿಷ್ Tofel ಇತ್ಯಾದಿ ಕಲಿತು ತೆರಳುತ್ತೇವೆಯೋ ಹಾಗೆ ಅವರುಗಳು ಸಹ ಇಲ್ಲಿಗೆ ಬರುವ ಮೊದಲು ಕನ್ನಡ ಸರಿಯಾಗಿ, ಕನಿಷ್ಟ ಊರ ಹೆಸರನ್ನಾದರೂ ಸರಿಯಾಗಿ ಉಚ್ಚರಿಸಲು ಕಲಿತು ಬರಲಿ. ಇಷ್ಟೆ ಅಲ್ಲದೆ ಭಾರತದೆಲ್ಲೆಡೆಯಿಂದ ಬೆಂಗಳೂರು ಮತ್ತು ಕರ್ನಾಟಕಕ್ಕೆ ಕೆಲಸದ ಸಲುವಾಗಿ ವಲಸೆ ಹೆಚ್ಚಿದೆ. ಆಯಾ ರಾಜ್ಯಗಳವರು ಅಲ್ಲಿಂದ ಇಲ್ಲಿಗೆ ಬರುವ ಮೊದಲು ಕನ್ನಡವನ್ನು ಒಂದು ಭಾಷೆಯಾಗಿ ಕಲಿತು ಬರಲಿ.
ಕನ್ನಡ ರಾಷ್ಟ್ರಭಾಷೆಯಾಗಲಿ...
ಬೆಂಗಳೂರಿನಲ್ಲಿ ನೆಲಸಿರುವ ಅನ್ಯಭಾಷಿಕರು ಮತ್ತು ಇಲ್ಲಿನ ಉದ್ಯಮಪತಿಗಳು ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ಮಾಡಿ ಎಂಬ ಬೇಡಿಕೆ ಇಡುತ್ತಿದ್ದಾರೆ. ಆದರೆ 2500 ವರ್ಷಗಳ ಇತಿಹಾಸವಿರುವ, ವೈಜ್ಞಾನಿಕವಾಗಿ ಪರಿಪಕ್ವವಾಗಿರುವ, ಇಲ್ಲಿನ ಆಡುವ-ಆಳುವ ಭಾಷೆಯಾದ ಕನ್ನಡವನ್ನು ಹೊರಗಿನವರೆಲ್ಲರೂ ಕಡ್ಡಾಯವಾಗಿ ಕಲಿಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕನ್ನಡಕ್ಕೆ ಕೇವಲ ಶಾಸ್ತ್ರೀಯ ಭಾಷೆ ಸ್ಥಾನಮಾನ ನೀಡುವುದು ಮಾತ್ರವಲ್ಲದೆ ರಾಷ್ಟ್ರಭಾಷೆ ಮಾಡುವ ನಿಟ್ಟಿನಲ್ಲಿ ಸಹ ಚಿಂತಿಸಬೇಕಿದೆ. ಕೇಂದ್ರ ಸರ್ಕಾರ, ನಮ್ಮ ಸಂವಿಧಾದನದ ಒಕ್ಕೂಟ ವ್ಯವಸ್ಥೆಗೆ ತೋರುವ ಬಹುದೊಡ್ಡ ಗೌರವ ಇದಾಗುತ್ತದೆ.
ಇದೆಲ್ಲಕಿಂತ ಮೊದಲಿಗೆ ಇಂಗ್ಲೀಷರನ್ನೂ ಒಳಗೊಂಡು ಇತರ ಎಲ್ಲಾ ಭಾಷಿಕರು ತಮ್ಮ ದುರಾಭಿಮಾನ / ಅಜ್ಞಾನ ತೊಡೆಯಲು ತಮ್ಮ ಭಾಷೆಗಳಲ್ಲೂ ಎಲ್ಲಾ ಪದ, ಶಬ್ದ, ಸ್ವರಗಳನ್ನು ಸರಿಯಾಗಿ ಉಚ್ಚರಿಸಲು ವರ್ಣಮಾಲೆಯಲ್ಲಿ ಅಕ್ಷರಗಳನ್ನು ಬಳಕೆಗೆ ತರುವ ಪ್ರಯತ್ನ ನಡೆಸಬೇಕಿದೆ. ನಮ್ಮ ಎಲ್ಲಾ ಊರುಗಳ ಹೆಸರನ್ನು ಇತರರು ಸ್ಥಳೀಯ ತಳುಕಿನಿಂದ ಉಚ್ಚರಿಸಲು ಮಾಡುತ್ತಿರುವ ನಮ್ಮ ಸರ್ಕಾರದ ಈ ಪ್ರಯತ್ನ ಪ್ರಶಂಸನೀಯ ಮತ್ತು ಶ್ಲಾಘನೀಯ.











Click it and Unblock the Notifications