ಗಿನ್ನಿಸ್ ಬಾಗಿಲಲ್ಲಿ ನಮ್ಮ ನಟರಾಜ!
-
ಹ.ಚ.ನಟೇಶ್
ಬಾಬು
[email protected]
-ಕಳೆದ ವಾರ ರಾಜಧಾನಿಯಲ್ಲಿ ಎಲ್ಲರದು ಇದೇ ಪ್ರಶ್ನೆ. ಎಲ್ಲರಿಗೂ ಎಂಥದ್ದೋ ಕುತೂಹಲ. ಮಲ್ಲೇಶ್ವರಂ ಆಟದ ಮೈದಾನಕ್ಕೆ ಭೇಟಿ ನೀಡುವ ತನಕ, ಮನದಲ್ಲೊಂದು ಪುಳಕ!
ಹೌದು. ಇದು ಗಿನ್ನಿಸ್ ದಾಖಲೆಗಾಗಿ ಯುವಕನೊಬ್ಬ ವಾರವಿಡೀ ಹಗಲು-ರಾತ್ರಿ ಕುಣಿದ ಕಥೆ! ಸುಡುವ ಬಿಸಿಲಿಗೆ ಬಗ್ಗದೇ, ಸುರಿವ ಮಳೆಗೆ ಜಗ್ಗದೇ, ಮನಸೊಂದಿದ್ದರೆ ಮಾರ್ಗವು ಉಂಟು ಎಂಬಂತೆ ದಾಖಲೆಯ ಹಿಂದೆ ಬಿದ್ದ ಯುವಕನ ಹೆಸರು ಕ.ರಾ.ಚಂದ್ರಕುಮಾರ್.
ಕನಕಪುರದ ಇವರು ಕಷ್ಟದ ಸಾಧನೆಯಾಂದನ್ನು ಯಶಸ್ವಿಯಾಗಿ ಮಾಡಿ ಮುಗಿಸಿದ್ದಾರೆ. ಗಿನ್ನಿಸ್ ದಾಖಲೆಯಲ್ಲಿ ಹೆಸರು ಸೇರುವುದೊಂದೀಗ ಬಾಕಿ ಇದೆ. ಆ ಹೆಮ್ಮೆ ಕನ್ನಡಿಗನಿಗೆ ಸಲ್ಲುವ ಖುಷಿಯೂ ಬಾಕಿ ಇದೆ.
ಜು.17ರ ಸಂಜೆ 6.15ರಿಂದ ಜು.24ರ ಸಂಜೆ 6.15ರವರೆಗೆ ಚಂದ್ರಕುಮಾರ್ ದಣಿವೆನ್ನದೆ ಕುಣಿದಿದ್ದಾರೆ. ಆದರೂ ಅವರ ಪಾದಗಳಿಗೆ ದಣಿವಾಗಲಿಲ್ಲ. ಕುಣಿವ ಮನಸ್ಸಿನ ಖುಷಿ ತೀರಲಿಲ್ಲ!. ಹೊಟ್ಟೆಯ ಸಮಾಧಾನಕ್ಕೆ ಮತ್ತು ನಿತ್ಯಕರ್ಮಗಳಿಗಾಗಿ ಆ ಏಳೂ ದಿನ, ಪ್ರತಿ ಎಂಟು ಗಂಟೆಗೆ ಒಂದು ಸಲ ಹದಿನೈದು ನಿಮಿಷಗಳ ಬಿಡುವು ಪಡೆದದ್ದೂ ಬಿಟ್ಟರೆ ಚಂದ್ರಕುಮಾರ್, ನಿರಂತರವಾಗಿ ಹಾಡಿಗೊಂದು ಹೆಜ್ಜೆ ಹಾಕಿದ್ದಾರೆ.
ನಿದ್ರೆಯಿಂದ ಸಾಧನೆಗೆ ಭಂಗವಾಗದಿರಲೆಂದು ಲಘು ಪಾನೀಯಗಳನ್ನು ಸೇವಿಸಿದ್ದು, ಆ ಏಳು ರಾತ್ರಿ, ಏಳು ಹಗಲು ಸುಮಾರು 240 ಹಾಡುಗಳಿಗೆ, ಅದರಲ್ಲೂ ಕನ್ನಡ ಚಿತ್ರಗಳ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ. ಗಿನ್ನಿಸ್ ನಿಯಮದಂತೆ ಎರಡು ನಿಮಿಷಕ್ಕೊಮ್ಮೆ ಹಾಡು ಬದಲಾಗಿದ್ದವು. ಹಾಡಿಗೆ ಹಾಕುವ ಸ್ಟೆಪ್ಸ್ ಬದಲಾಗಿದ್ದವು ಎನ್ನುವುದನ್ನು ವಿಡಿಯೋ ಕ್ಯಾಮರ ಸೆರೆಹಿಡಿದಿದೆ.
ಡ್ಯಾನ್ಸ್ ಸಪ್ತಾಹದ ಏಳೂ ದಿನ ಸಾವಿರಾರು ಜನ ಕಾರ್ಯಕ್ರಮವನ್ನು ಕಂಡು ಆನಂದಿಸಿದ್ದಾರೆ. ನೋಡುವ ಜನರಿಗೆ ಚಂದ್ರಕುಮಾರ್ ಅಚ್ಚರಿಯಾಗಿದ್ದರು. ಕೆಲವರು ಹಾರ ಹಾಕಿ, ಕೈಕುಲುಕಿದರೆ, ಯಾರೋ ಒಬ್ಬರು ಉಂಗುರ ತೊಡಿಸಿ ಮನದ ಪ್ರೀತಿಯನ್ನು ಹಂಚಿಕೊಂಡರು.
ಪಾಪ ಕುಣಿದು ದಣಿವಾಗಿದ್ದಾನೆ...ಅದಕ್ಕೆ ನಿಧಾನವಾಗಿ ಕುಣಿಯುತ್ತಿದ್ದಾನೆ... ಎಂದು ಜನರು ಮನದಲ್ಲಿ ಲೆಕ್ಕ ಹಾಕುವಾಗಲೇ, ಒಮ್ಮೆ ಜೋರಿನ ಸ್ಪೆಪ್ಸ್ ಹಾಕಿ ನೋಡುವವರನ್ನು ಬೆರಗು ಮಾಡಿದ್ದಾರೆ. ಚಂದ್ರಕುಮಾರ್ ಅವರಲ್ಲಿನ ಪ್ರತಿಭೆ ಗುರ್ತಿಸಿದ್ದ ವಿಧಾನ ಪರಿಷತ್ತು ಸದಸ್ಯ ಎಸ್.ರವಿ ಮೊನ್ನೆಯ ಕಾರ್ಯಕ್ರಮವನ್ನು ಪ್ರಾಯೋಜಿಸಿದ್ದರು.
ದಟ್ಸ್ಕನ್ನಡದೊಡನೆ ಮಾತುಕತೆ : ಡ್ಯಾನ್ಸ್ ನಡುವಿನ ಬಿಡುವಿನ ಸಮಯದಲ್ಲಿ ‘ದಟ್ಸ್ಕನ್ನಡ’ ಜೊತೆ ಚಂದ್ರಕುಮಾರ್ ಮಾತಿಗೆ ಕುಳಿತರು. ನಿದ್ದೆಯಿಲ್ಲದೇ ಕಣ್ಣುಗಳು ಕೆಂಪಗಾಗಿದ್ದವು. ಮುಖ ಚಿಕ್ಕದಾಗಿತ್ತು. ಆದರೂ ಉತ್ಸಾಹ ಮತ್ತು ಆತ್ಮವಿಶ್ವಾಸ ಮಾತ್ರ ಅವರಲ್ಲಿ ಕಡಿಮೆಯಾಗಿರಲಿಲ್ಲ.
ಯಾವುದಾದರೂ ಸಾಧನೆ ಮಾಡುವ ಬಯಕೆ ಬಾಲ್ಯದಿಂದಲೂ ಇತ್ತು. ಅದಕ್ಕೆ ಸಾಧನವಾಗಿದ್ದು ಡ್ಯಾನ್ಸ್ . ಈ ಏಳು ದಿನ ಕುಣಿದರೂ ನನಗೆ ದಣಿವಾಗಿಲ್ಲ. ಆರೋಗ್ಯ ಕೈಕೊಟ್ಟಿಲ್ಲ. ಸಾಧಿಸುವ ಮನಸ್ಸಿದ್ದರೆ ಯಾವುದೂ ಅಸಾಧ್ಯವಲ್ಲ. ಜನರ ಅಭಿಮಾನ ಕಂಡು ಎದೆ ಉಬ್ಬುತ್ತಿದೆ. ಆ ಖುಷಿಯೇ ನನ್ನಿಂದ ಈ ಕೆಲಸ ಮಾಡಿಸಿದೆ ಎನ್ನುತ್ತಾರೆ ಚಂದ್ರಕುಮಾರ್.
ಯಾರೀ ಅಭಿನವ ಏಕಲವ್ಯ? : ಅಂದ ಹಾಗೇ ಚಂದ್ರಕುಮಾರ್ ಶಾಸ್ತ್ರೀಯವಾಗಿ ನೃತ್ಯ ಕಲಿತವರಲ್ಲ. ಸ್ವಯಂ ಗುರುವಾಗಿ ನಟರಾಜನನ್ನು ಒಲಿಸಿಕೊಂಡಿದ್ದಾರೆ. ಬಾಲ್ಯದಲ್ಲಿ ಸಂಬಂಧಿಗಳಿಂದ ಭರತನಾಟ್ಯದ ಒಂದೆರಡು ಶೈಲಿಗಳನ್ನು ಕಲಿತ ಬಗ್ಗೆ ನೆನಪು ಮಾಡಿಕೊಳ್ಳುವ ಅವರು, ಶಿವತಾಂಡವ ನೃತ್ಯವನ್ನು ಜಾನಪದ ಶೈಲಿಗೆ ಅಳವಡಿಸಿದ್ದಾರೆ. ಈ ವಿಶಿಷ್ಟ ನೃತ್ಯವನ್ನು ಹೆಬ್ಬೆರಳ ಮೇಲೆ 24ಗಂಟೆಗಳ ಕಾಲ ಪ್ರದರ್ಶಿಸುವ ಬಯಕೆ ಹೊಂದಿದ್ದಾರೆ.
ಮಲ್ಲೇಶ್ವರಂನ ಅರಣ್ಯ ಭವನದಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿರುವ ಚಂದ್ರಕುಮಾರ್, ಸುಮಾರು ಹತ್ತು ವರ್ಷದಿಂದ ಕುಣಿತಕ್ಕೆ ಮನಸ್ಸು ಕೊಟ್ಟಿದ್ದಾರೆ. ಸುಮಾರು 33ವರ್ಷದ ಚಂದ್ರಕುಮಾರ್ ಹವ್ಯಾಸಗಳು ಹತ್ತಾರು. ಚಿತ್ರಕಲೆ, ಸಂಗೀತ, ಶಿಲ್ಪಕಲೆಯಲ್ಲೂ ಅವರು ಪಳಗಿದ್ದಾರೆ. ಜೊತೆಗೆ ಸಾಹಿತ್ಯದಲ್ಲೂ ಆಸಕ್ತಿ . ಕ.ರಾ.ಚಕು ಕಾವ್ಯನಾಮದಲ್ಲಿ ಪದ್ಯ ಬರೆಯುವ ಅವರು, ‘ ಸಂಸರ್ಗ ’ ಎಂಬ ಧ್ವನಿ ಸುರುಳಿಯನ್ನು ಹೊರತಂದಿದ್ದಾರೆ. ಅವರಿಗೆ ಬೆಂಬಲವಾಗಿ ಗೆಳೆಯರಾದ ಸಂತೋಷ್ ಕುಮಾರ್, ರಾಘವೇಂದ್ರ, ಮಂಜುನಾಥ್, ಕಾಂತರಾಜು ಮತ್ತಿತರರು ನಿಂತಿದ್ದಾರೆ.
ಕಾರವಾರದಲ್ಲಿ ಕಲ್ಪನಾ ರಶ್ಮಿ ಕಲಾಲೋಕ ಎಂಬ ನೃತ್ಯ ಶಾಲೆಯನ್ನು ಸ್ವಲ್ಪ ದಿನ ಅವರು ನಡೆಸಿದ್ದು ಉಂಟು. ಅದನ್ನೀಗ ಶಿಷ್ಯ ಬಿ.ಎನ್.ಸೂರ್ಯಪ್ರಕಾಶ್ ನಿರ್ವಹಿಸುತ್ತಿದ್ದಾರೆ.
ಅದೆಲ್ಲ ಇರಲಿ, ಕನ್ನಡದ ಹುಡುಗನ ಸಾಧನೆಯನ್ನು ನೀವೂ ಅಭಿನಂದಿಸಬೇಕೇ ? ಅವರ ದೂರವಾಣಿ ಸಂಖ್ಯೆ : 9880620408