ಮೂಡಿದ ಚಂದ್ರನಿಲ್ಲ ; ಮೂಡಿಸಿದ ನೀರೂ ಇಲ್ಲ
ಒಬ್ಬ ವ್ಯಕ್ತಿಗೆ ಯಾವಾಗ ಜ್ಞಾನೋದಯವಾಗುತ್ತದೆ?
ಈ ಪ್ರಶ್ನೆಗೆ ಉತ್ತರವಿಲ್ಲ. ಅದು ಅವರವರ ಅನುಭವಕ್ಕೆ ಬಿಟ್ಟದ್ದು. ಒಬ್ಬನಿಗಾದ ಜ್ಞಾನೋದಯ ಇನ್ನೊಬ್ಬನಿಗೆ ಏನೂ ಅಲ್ಲ ಅನ್ನಿಸಬಹುದು. ಕೇವಲ ಭ್ರಮೆ ಅನ್ನಿಸಬಹುದು. ಸಾಹಿತ್ಯ ಮತ್ತು ಕಲೆಯಂತೆಯೇ ಜ್ಞಾನ ಕೂಡ ಅವರವರಲ್ಲೇ ಮೊಳೆಯಬೇಕು. ಪ್ರೀತಿಯ ಅನುಭವದಂತೆ ಅದು ಸ್ವತಃ ಅನುಭವಿಸದ ಹೊರತು ಅರಿವಿಗೆ ದಕ್ಕುವಂಥದಲ್ಲ ಅನ್ನುತ್ತಾರೆ.
ಭಗವದ್ಗೀತೆಯ ಬಹಳ ಮುಖ್ಯವಾದ ಮತ್ತು ಕುತೂಹಲಕರವಾದ ಅಧ್ಯಾಯ ಇದೇ. ಅದು ನಾವು ಕಲಿತದ್ದದ್ದು ಮರೆಯುವುದಕ್ಕೆ ಹೇಳುತ್ತದೆ. ಕಲಿಯುವುದು ದೊಡ್ಡ ಸಂಗತಿಯಲ್ಲ; ಕಲಿತದ್ದನ್ನು ಮರೆಯುವುದು ದೊಡ್ಡದು. Learningಗಿಂತ ್ಠ್ಞ್ಝಛಿಚ್ಟ್ಞಜ್ಞಿಜ ಕಷ್ಟದ್ದು ಎನ್ನುತ್ತದೆ.
ಹಾಗೆ ನೋಡಿದರೆ ನಮ್ಮನ್ನು ದಾರಿತಪ್ಪಿಸುವುದು ನಮ್ಮ ಕಲಿಕೆ. ಒಂದು ವಯಸ್ಸಿನಲ್ಲಿ ಏನನ್ನೋ ಕಲಿಯುತ್ತೇವೆ. ಕಲಿತದ್ದು ನಮ್ಮದಾಗುತ್ತದೆ. ನಮ್ಮಲ್ಲಿ ಪೂರ್ವಗ್ರಹಗಳನ್ನು ಬಿತ್ತುತ್ತದೆ. ನಮ್ಮನ್ನು ಸದಾ ಆ ದಿಕ್ಕಿನಲ್ಲಿ ಯೋಚಿಸುವಂತೆ ಮಾಡುತ್ತದೆ. ಉದಾಹರಣೆಗೆ ಧ್ಯಾನದಿಂದ ಜ್ಞಾನೋದಯವಾಗುತ್ತದೆ ಎಂದು ಯಾರದೋ ಉದಾಹರಣೆ ಮುಂದಿಟ್ಟುಕೊಂಡು ಕಲಿತದ್ದನ್ನು ನಾವು ಆಚರಿಸುತ್ತಾ ಬರುತ್ತೇವೆ. ಆದರೆ ಧ್ಯಾನದಿಂದ ಯಾರೋ ಒಬ್ಬನಿಗೆ ಆದ ಜ್ಞಾನೋದಯ ಎಲ್ಲರಿಗೂ ಆಗಬೇಕೆಂದೇನಿಲ್ಲ. ಕಾಡ ಮೂಲಕವೇ ಪಥ ಆಗಸಕ್ಕೆ, ಧ್ರುವ ನಕ್ಷತ್ರಕ್ಕೆ ಅನ್ನುವುದೂ ನಿಜ. ಪ್ರತಿಯಾಬ್ಬನೂ ತನ್ನ ಹಾದಿಯನ್ನು ತನ್ನ ಪಥವನ್ನು ತಾನೇ ಕಂಡುಕೊಳ್ಳಬೇಕು ಅನ್ನುವುದೂ ನಿಜ. ಅದು ಅರ್ಥವಾಗಬೇಕೆಂದರೆ ಕಲಿಯಬೇಕು, ಕಲಿತದ್ದನ್ನು ಮರೆಯಬೇಕು.
ಗೀತೆ ಹೇಳುವುದು ಅದನ್ನೇ;
ಯದಾ ತೇ ಮೋಹಕಲಿಲಂ ಬುದ್ಧಿರ್ವ್ಯತಿತರಿಷ್ಯತಿ।।
ತದಾ ಗಂತಾಸಿ ನಿರ್ವೇದಂ ಶ್ರೋತವ್ಯಸ್ಯ ಶ್ರುತಸ್ಯ ಚ।।
ಕೇಳಿದ್ದು ಮತ್ತು ಕೇಳಬೇಕಾದುದೆಲ್ಲದರ ಬಗ್ಗೆ ಉಪೇಕ್ಷೆಯನ್ನು ತಳೆಯಲು ಸಾಧ್ಯವಾದಾಗ ವ್ಯಕ್ತಿ ಬದಲಾಗುತ್ತಾನೆ. ಇಂಥ ಕಲಿಕೆಯ ಗೊಂಡಾರಣ್ಯದಿಂದ ಬುದ್ಧಿ ಹೊರಗೆ ಬರಬೇಕು ಅನ್ನುತ್ತದೆ ಗೀತೆ. ಮುಂದಿನ ಶ್ಲೋಕದಲ್ಲಿ ಯಾವುದರಿಂದಲೂ ಪ್ರಭಾವಿತನಾಗಬೇಡ ಎನ್ನುವ ಮಾತನ್ನೂ ಕೃಷ್ಣ ಹೇಳುತ್ತಾನೆ.
ಇಲ್ಲಿ ಅರ್ಜುನ ನಮಗೆಲ್ಲರಿಗೂ ಕೇಳಬೇಕು ಎನ್ನಿಸುವಂಥ, ಯಾರಾದರೂ ಕೇಳಬಹುದಾದ ಒಂದು ಪ್ರಶ್ನೆಯನ್ನು ಕೇಳುತ್ತಾನೆ. ಭಗವದ್ಗೀತೆಯ ಒಂದು ಅನುಕೂಲ ಗಮನಿಸಿ. ಇವತ್ತು ಅದನ್ನು ನಮಗೆ ಬೋಧಿಸುವವರು ನಮ್ಮ ಗುರುಗಳು. ಭಗವದ್ಗೀತಾ ಸಾರವನ್ನು ವರ್ಣಿಸುವವರು ಪಂಡಿತರು. ಅವರೆಲ್ಲ ಪ್ರಶ್ನಾತೀತರು. ನಮ್ಮ ಸಂದೇಹಗಳನ್ನು ಅವರ ಬಳಿ ಪರಿಹರಿಸಿಕೊಳ್ಳುವಂತಿಲ್ಲ. ಆದರೆ ಅರ್ಜುನ ಪುಣ್ಯವಂತ. ಇಂಥದ್ದೊಂದು ಸುದೀರ್ಘ ಭಾಷಣವನ್ನು ಆತ ಕೇಳಿದ್ದು ಗೆಳೆಯನ ಬಾಯಿಯಿಂದ; ಕನಿಷ್ಠ ಆಕಳಿಸಬಹುದಾದ ಸ್ವಾತಂತ್ರವಾದರೂ ಅವನಿಗಿತ್ತು. ಪ್ರಶ್ನಿಸುವ ಅನುಕೂಲವೂ ಇತ್ತು.
ಆತ ಕೇಳುತ್ತಾನೆ;
ಇಂಥ ಗುಣಗಳನ್ನೆಲ್ಲ ವಿವರಿಸುತ್ತಿಯಲ್ಲ ? ಅವುಗಳನ್ನು ಮೈಗೂಡಿಸಿಕೊಂಡವನ ಲಕ್ಷಣಗಳೇನು? ಅವನ ಭಾಷೆ ಯಾವುದು? ಅವನು ಹೇಗೆ ಕುಳಿತುಕೊಳ್ಳುತ್ತಾನೆ? ಹೇಗೆ ನಡೆಯುತ್ತಾನೆ? ಹೇಗೆ ಮಾತಾಡುತ್ತಾನೆ? ಹೇಗೆ ವರ್ತಿಸುತ್ತಾನೆ?
ಇಲ್ಲಿಂದ ಮುಂದೆ ಕೃಷ್ಣ ಹೇಳುವುದೆಲ್ಲವೂ ಮನುಷ್ಯನನ್ನು ಪುರುಷೋತ್ತಮನನ್ನಾಗಿ ಮಾಡುವಂಥ ಮಾತುಗಳನ್ನು. ಇವುಗಳನ್ನು ಪಾಲಿಸುವುದು ಕಷ್ಟ. ಪಾಲಿಸಬೇಕೆಂದು ಆಶಿಸುವುದೂ ತಪ್ಪು. ಅವೇನಿದ್ದರೂ ಆದರ್ಶಗಳು.
ಕೃಷ್ಣನ ಪ್ರಕಾರ ಸ್ಥಿತಪ್ರಜ್ಞನು ಮುಕ್ತ. ತಾಪತ್ರಯಗಳಿಗೆ ಉದ್ವಿಗ್ನಗೊಳ್ಳುವುದಿಲ್ಲ. ಸುಖ ಬಂದಾಗ ಆಸಕ್ತನಾಗುವುದಿಲ್ಲ. ಆಸಕ್ತಿ, ಭೀತಿ, ಸಿಟ್ಟುಗಳನ್ನು ಮೀರುತ್ತಾನೆ. ಅಂಥವನು ಮುನಿ ಎನ್ನಿಸಿಕೊಳ್ಳುತ್ತಾನೆ. ಅಷ್ಟೇ ಅಲ್ಲ, ಆತ ಐಹಿಕ ಜಗತ್ತಿನ ಒಳ್ಳೆಯದನ್ನೂ ಕೆಟ್ಟದ್ದನ್ನೂ ಅಂಟಿಸಿಕೊಳ್ಳುವುದಿಲ್ಲ. ಯಾರನ್ನೂ ಪ್ರೀತಿಸುವುದೂ ಇಲ್ಲ, ದ್ವೇಷಿಸುವುದೂ ಇಲ್ಲ. ಆಮೆಯು ತನ್ನ ಅಂಗಗಳನ್ನು ಚಿಪ್ಪಿನೊಳಗೆ ಎಳೆದುಕೊಳ್ಳುವಂತೆ ಈತನು ತನ್ನ ಇಂದ್ರಿಯ ವಿಷಯಗಳಿಂದ ಇಂದ್ರಿಯಗಳನ್ನು ಒಳಗೆಳೆದುಕೊಳ್ಳುತ್ತಾನೆ.
ಕೃಷ್ಣನ ಪ್ರಕಾರ ಪಂಚೇಂದ್ರಿಯಗಳು ಆಸೆಪಡುವ ಸಂಗತಿಗಳ ಬಗ್ಗೆ ಯೋಚಿಸಿದಾಗ ಆ ಬಗ್ಗೆ ಆಸಕ್ತಿ ಹುಟ್ಟುತ್ತದೆ. ಇಂಥ ಆಸಕ್ತಿಯಿಂದ ಕಾಮವು ಹುಟ್ಟುತ್ತದೆ. ಕಾಮದಿಂದ ಕ್ರೋಧವು ಉದ್ಭವವಾಗುತ್ತದೆ. ಕ್ರೋಧದಿಂದ ಸಮ್ಮೋಹ ಉಂಟಾಗುತ್ತದೆ, ಸಮ್ಮೋಹದಿಂದ ಸ್ಮೃತಿವಿಭ್ರಮೆಯಾಗುತ್ತದೆ, ಸ್ಮೃತಿವಿಭ್ರಮೆಯಿಂದ ಬುದ್ಧಿನಾಶವಾಗುತ್ತದೆ. ಬುದ್ಧಿನಾಶದಿಂದ ಮನುಷ್ಯ ಪತನಹೊಂದುತ್ತಾನೆ.
ಇಲ್ಲಿ ಕೇಳಿ; ಮತ್ತೊಂದು ತುಂಬ ಪ್ರಸಿದ್ಧವಾದ ಶ್ಲೋಕ;
ಯಾ ನಿಶಾ ಸರ್ವಭೂತಾನಿ ತಸ್ಯಾಂ ಜಾಗರ್ತಿ ಸಂಯಮೀ।
ಇಂಥ ಸಂಯಮಿ ಎಲ್ಲಾ ಪ್ರಾಣಿಗಳೂ ಮಲಗಿರುವಾಗ ಎಚ್ಚರವಾಗಿರುತ್ತಾನೆ. ಎಲ್ಲರೂ ಎಚ್ಚರವಾಗಿರುವಾಗ ಅದು ಸಂಯಮಿಯ ಪಾಲಿಗೆ ರಾತ್ರಿಯಾಗಿರುತ್ತದೆ.
ಝೆನ್ ಪ್ರಸಂಗದಲ್ಲಿ ಒಬ್ಬ ಮುದುಕಿಯ ಕತೆ ಬರುತ್ತದೆ. ಆಕೆ ಗುರುವಿನ ಆಶ್ರಮಕ್ಕೆ ಹರೆಯದಲ್ಲೇ ಬಂದಾಕೆ. ಆದರೆ ಆಕೆಗೆ ಜ್ಞಾನೋದಯವಾಗಿರುವುದಿಲ್ಲ. ಆಶ್ರಮದ ಕೆಲಸಕಾರ್ಯಗಳನ್ನು ಮಾಡಿಕೊಂಡಿರುತ್ತಾಳೆ.
ಒಂದು ರಾತ್ರಿ ಆಕೆ ಕಾವಡಿಯಲ್ಲಿ ದೂರದ ಬಾವಿಯಿಂದ ನೀರು ತರುತ್ತಿರುತ್ತಾಳೆ. ಹೆಗಲ ಮೇಲಿಟ್ಟ ಕಾವಡಿಗೆ ಜೋತುಬಿದ್ದ ಕೊಡಗಳಲ್ಲಿ ಚಂದ್ರನ ಪ್ರತಿಬಿಂಬ ಕಾಣಿಸುತ್ತಿರುತ್ತದೆ. ತನ್ನ ಕೊಡದೊಳಗೆ ಮೂಡಿದ ಚಂದ್ರಬಿಂಬದಿಂದ ಮೋಹಿತಳಾದ ಆಕೆ ಹಾಗೇ ನೋಡುತ್ತಾ ಬೆಳದಿಂಗಳಲ್ಲಿ ನಡೆಯುತ್ತಾ ಇದ್ದಕ್ಕಿದ್ದಂತೆ ಏನನ್ನೋ ಎಡವುತ್ತಾಳೆ. ಮಣ್ಣಿನ ಕೊಡ ನೆಲಕ್ಕೆ ಬಿದ್ದು ಒಡೆದುಹೋಗಿ ನೀರು ಸೋರುತ್ತದೆ.
ಆಕೆಗೆ ಆ ಕ್ಷಣ ಜ್ಞಾನೋದಯವಾಗುತ್ತದೆ. ಅವಳ ಬಾಯಿಯಿಂದ ಹೊರಟ ಉದ್ಗಾರ ಇಷ್ಟೇ;
No water, No moon.
ನೀರಿಲ್ಲ; ಚಂದಿರನೂ ಇಲ್ಲ.
ಇದೆ ಅಂದುಕೊಂಡದ್ದು ಇಲ್ಲ ಅಂತ ಗೊತ್ತಾದಾಗ ಇಲ್ಲ ಅಂದುಕೊಂಡದ್ದು ಇದೆ ಅನ್ನುವುದೂ ತಿಳಿಯುತ್ತದೆ.
ಅದೇ ಜ್ಞಾನೋದಯವಾ?
(ಸ್ನೇಹಸೇತು : ಓ ಮನಸೇ)
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ












Click it and Unblock the Notifications