ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಸರಾ...... ಕಾಡತಾವ ಸವಿನೆನಪು !

By Staff
|
Google Oneindia Kannada News

ಎನ್‌. ಆರ್‌. ಐ. ಒಬ್ಬರು ‘ದಸರಾ ತಪ್ಪದೆ ನೋಡಿ’ ಎಂದು ನನಗೆ ಈ-ಮೈಲ್‌ ಕಳುಹಿಸಿದ್ದಾರೆ. ‘ಮೈಸೂರು ದಸರಾ! ಎಷ್ಟೊಂದು ಸುಂದರಾ .... ’ ಎಂಬ ಮನೋಹರವಾದ ಆ ಒಂದು ಹಳೇ ಪದ್ಯವನ್ನೂ ನೆನಪಿಸಿದ್ದಾರೆ.

ಅವರಿಗೆ ಇದು ನಾನು ಬರೆದ ಉತ್ತರ :

ನಮಸ್ಕಾರಗಳು!

ಮೈಸೂರು ದಸರಾದ ‘ಇಂಟರ್ನೆಟ್‌ ಜಾಹೀರಾತು’ ಅದೆಷ್ಟು ಸುಂದರವಾಗಿ ಮಾಡಿದ್ದಾರೆ! ಆದರೆ, ಈಗಿನ ದಸರಾ ಡಾಲರ್‌ ಸುರಿದು ‘ಗೋಲ್ಡ್‌ ಕಾರ್ಡ್‌’ ಪಡೆಯುವ ‘ಡಾಲರ್‌ ವಂತರಿಗಾಗಿ’ ಮಾತ್ರ! ಜನಸಾಮಾನ್ಯನಾದ ನನ್ನಂತಹನಿಗೆ ಅಲ್ಲಿ ಏನಿದೆ?

ಮುದುಕರಾಗುತ್ತಿರುವ ನನ್ನಂತಹರಿಗೆ ಅಲ್ಲಿರುವುದು ಹಿಂದಿನ ವೈಭವದ ನೆನಪು ಮಾತ್ರ! ಈಗ ನವರಾತ್ರಿಯ ದಿನಗಳಲ್ಲಿ ಮೈಸೂರಿನ ಉತ್ತಮ ಹೋಟೆಲ್‌ಗಳಲ್ಲಿ ಉಪಹಾರ ಸೇವಿಸಿ, ಭಾರತೀಯ ರೂಪಾಯಿಗಳ ‘ಟಿಪ್‌’ ಕೊಟ್ಟರೆ, ನಮ್ಮನ್ನು ಒಂದು ತರಹಾ ನೋಡುತ್ತಾರೆ, ನಮ್ಮ ಪಂಚತಾರಾ ಸಂಸ್ಕೃತಿಯ ‘ಬೇರಾ’ಗಳು! ಮೈಸೂರಲ್ಲಿ ಈಗ ‘ಡಾಲರ್‌’ ಸುರಿಯುವವರಿಗೆ ಬೇರೆ ಏರ್ಪಾಡು! ರೂಪಾಯಿ ತೆರುವ ಸ್ಥಳೀಯರಿಗೆ ಮತ್ತೊಂದು ಏರ್ಪಾಡು!

‘ಹಣವೇ! ನಿನ್ನಯ ಗುಣ ಬೇರೆ ಬೇರೆ ಯಾಕಯ್ಯ?’

ಇದರ ಮಧ್ಯೆ, ಅರಮನೆಯನ್ನು ಸರಕಾರೀ ಸ್ವಾಧೀನ ಮಾಡಿಕೊಳ್ಳುವ ಪ್ರಕ್ರಿಯೆ ಬೇರೆ! ಶ್ರೀಕಂಠದತ್ತ ಅರಸರಿಗೆ ಈಗ ಎಲ್ಲಿಲ್ಲದ ಟೆನ್ಷನ್‌! ಧರ್ಮ ಸಿಂಗ್‌ ಅವರು ‘ಹಾವೂ ಸಾಯಬಾರದು, ಕೋಲೂ ಮುರಿಯಬಾರದು’ ಎಂಬ ನೀತಿ ಅನುಸರಿಸುತ್ತಿದ್ದಾರೆ. ಸಿದ್ದರಾಮಯ್ಯನವರು ‘ಹಿಡಿದ ಪಟ್ಟು’ ಬಿಡುತ್ತಾ ಇಲ್ಲ!

ನಾವು ಆ ಕಾಲದಲ್ಲಿ ಅಂದರೆ ‘ಮಹಾರಾಜರ ಕಾಲದಲ್ಲಿ ’ ದಸರಾ ನೋಡಿದವರು! ಅಂದಿನ ಕಾಲದಲ್ಲಿಯೇ, ತಾವು ನನಗೆ ನೆನಪಿಸಿದ ‘ಮೈಸೂರು ದಸರಾ ಎಷ್ಟೊಂದು ಸುಂದರ..... ’ ಹಾಡು ಬರೆಯಲ್ಪಟ್ಟಿತು! ಸುಮಾರು ಹತ್ತು ವರ್ಷಗಳ ಹಿಂದೆ ನಾವು ನಮ್ಮ ‘ನವ ಕರ್ನಾಟಕದ ದಸರಾ’ ನೋಡಲು ಸಂಸಾರ ಸಮೇತ ಹೋಗಿದ್ದೆವು. ಆಗಲೇ ‘ಡಾಲರ್‌ ಹುಚ್ಚು’ ಶುರು ಆಗಿತ್ತು! ಬಾಳೆ ಹಣ್ಣು ಮಾರುವವರು ಕೂಡಾ ಡಾಲರ್‌ ಕೇಳುತ್ತಿದ್ದರು!

ನಮ್ಮ ‘ಧಡೂತಿ ಸೈಜ್‌’ ನೋಡಿದವರೆಲ್ಲಾ, ನಾವು ಅಮೇರಿಕಾದ ಎನ್‌. ಆರ್‌. ಐ. ಗಳು ಎಂದು ಭಾವಿಸಿಬಿಟ್ಟು ನಮಗೆ ‘ಡೊಗ್ಗು ಸಲಾಮ್‌’ ಹೊಡೆಯುತ್ತಿದ್ದರು! ನಾನು ಐ. ಎನ್‌. ಆರ್‌. ( ಇಂಡಿಯನ್‌ ರೂಪಾಯಿ ) ಬಿಚ್ಚಿದಾಗ ‘ಡಾಲರ್‌ ಕೊಡಿಸಾರ್‌!’ ಎನ್ನುತ್ತಿದ್ದರು.

ಅಧಿಕಾರಿ ಒಬ್ಬರು ನಮಗಾಗಿಯೇ ಅರಮನೆಯಾಳಗಿನ ‘ವಾಲಂಟರಿ ಗೈಡ್‌’ ಆಗಿ ಬಂದೇ ಬಿಟ್ಟರು! ನಾವು ಎಲ್ಲಾ ನೋಡಿ ಹೊರಟಾಗ ತಮ್ಮ ಪ್ಯಾದೆಯ ಕೈಯ್ಯಲ್ಲಿ ‘ಡಾಲರ್‌ ಭಕ್ಷೀಸು’ ಬೇಡಿಕೆ ಸಲ್ಲಿಸಿದರು. ನಾವು ಐದು ಡಾಲರ್‌ಗಳಿಗೆ ಸಮನಾದ ಭಕ್ಷೀಸು ಕಳುಹಿಸಿದ ನಂತರ ‘ಸ್ವಲ್ಪ ಬೇಸ್ತು ಬಿದ್ದವರಂತೆ’ ಕಂಡರೂ, ಅಪರೂಪದ ಮುಗುಳ್ನಗೆ ನಕ್ಕು ನಮ್ಮನ್ನು ಬೀಳ್ಕೊಟ್ಟರು.

ಅರಮನೆಯ ಆವರಣದಲ್ಲಿ, ಪಂಚತಾರಾ ಹೋಟೆಲುಗಳಲ್ಲಿ, ಡಾಲರ್‌ ಇಲ್ಲದವರು ಆ ಹತ್ತುವರ್ಷಗಳ ಹಿಂದಿನ ಕಾಲದಲ್ಲೇ ‘ಮನುಷ್ಯರಲ್ಲ !’ ಎನ್ನುತ್ತಿತ್ತು ನಮ್ಮ ಸರಕಾರೀ ದಸರಾ! ನಮ್ಮ ಸರಕಾರೀ ಆಡಳಿತ ಈಗ ‘ಗೋಲ್ಡ್‌ ಕಾರ್ಡ್‌’ ಬಿಡುಗಡೆ ಮಾಡಿ, ಸಿರಿವಂತರಿಗೆ, ಅದರಲ್ಲೂ ಮುಖ್ಯವಾಗಿ ಹೊರ ದೇಶಗಳಿಂದ ಬರುವ ‘ಡಾಲರ್‌ವಂತರಿಗೆ ಮಾತ್ರ’ ಮಣೆ ಹಾಕಿದೆ.

ದಸರಾ ಮೆರವಣಿಗೆಯಲ್ಲಿ ಪಾಪ! ಆ ಅರಮನೆಯ ಹಳೇ ಪ್ಯಾದೆಗಳು ಮತ್ತು ‘ಬಿಟ್ಟಿಸೇವೆ’ ಮಾಡುವ ಪರಂಪರೆಯ ಜನರು ತಮ್ಮ ಓಬೀರಾಯನ ಕಾಲದ ಹಳೆ ಸಮವಸ್ತ್ರಗಳನ್ನು ಧರಿಸಿ ಭಕ್ತಿಯಿಂದ ಈಗಲೂ ದಸರಾ ಮೆರವಣಿಗೆಯಲ್ಲಿ ಹಾಜರಾಗಿತ್ತಾರೆ. ಶ್ರೀಕಂಠದತ್ತ ಒಡೆಯರು ದೂರದಲ್ಲಿ ಕಂಡರೂ ಸಾಕು, ಅಲ್ಲಿಂದಲೇ ಉದ್ದಕ್ಕೆ ನಮಸ್ಕಾರ ಮಾಡುತ್ತಾರೆ. ದಿವಂಗತ ಶ್ರೀ ಜಯಚಾಮರಾಜೇಂದ್ರ ಒಡೆಯರ ಭಾವ ಚಿತ್ರಕ್ಕೆ ಅಡ್ಡಬಿದ್ದು ಕಣ್ಣೀರು ಹಾಕುತ್ತಾ ‘ನಮೋ’ ಎನ್ನುತ್ತಾರೆ. ಅಂಬಾರಿ ಮೇಲಿನ ಭುವನೇಶ್ವರಿಯನ್ನು ನೋಡಿದಾಗ ಅವರಿಗೆ ’‘ಆ ಸುಂದರವಾದ ದಸರಾದ ನೆನಪು’ ಮರುಕಳಿಸಿ ಬಂದು ಕಣ್ಣು ಮಂಜಾಗುತ್ತದೆ!

ಇದು ನಮ್ಮ ಮೈಸೂರಿಗರ ಪರಂಪರೆ ಮತ್ತು ಸಂಸ್ಕೃತಿ.

‘ಈಗ ನೀವೇ ಹೇಳಿ? ಹಳೆಯ ದಸರಾಗಳ ನೆನಪುಳ್ಳ ನಾನು ‘ಈ ಹೊಸಾ ವೈಭವ’ ನೋಡಲು, ಯಾಕೆ ಮೈಸೂರಿಗೆ ಹೋಗಬೇಕು?’ ಎಂದು ಕೇಳಿದರೆ ತಾವು ನನ್ನನ್ನು ತಪ್ಪು ತಿಳಿಯುವುದಿಲ್ಲ ಎಂದು ಭಾವಿಸುತ್ತೇನೆ.

ಇಂತೀ,

- ಒಬ್ಬ ಹಿರಿಯ ಮೈಸೂರಿಗ ಪ್ರಜೆ.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X