ಮೂಡಬಿದಿರೆ ಸಾಹಿತ್ಯ ಮೆರವಣಿಗೆಗೆ ಸಂಸ್ಕೃತಿ ಸೊಗಡಿನ ಸಿಂಚನ
- ಭರತ್ಕುಮಾರ್, ಮೂಡಬಿದಿರೆಯಿಂದ
ಮಹಾವೀರ ಕಾಲೇಜು ಆವರಣದಿಂದ ಆರಂಭವಾದ ಮೆರವಣಿಗೆ ಪೊಲೀಸ್ ಸ್ಟೇಷನ್ ಹಾದು ಮುದ್ದಣ್ಣ ನಗರ ತಲುಪಿತು. 71 ಕೊಂಬುಗಳು, 71 ಭೂತದ ವೇಷ, ಅಷ್ಟೇ ಸಂಖ್ಯೆಯ ಯಕ್ಷಗಾನ ವೇಷ, ಚಂಡೆ, ಡೋಲು, ಶಂಖ, ಜಾಗಟೆ, ಕೀಲು ಕುದುರೆ, ಕೊಡೆಗಳು ಇರುವ ಸಾಂಸ್ಕೃತಿಕ ತಂಡಗಳು ಮೆರವಣಿಗೆಗೆ ಅಕ್ಷರಶಃ ರಂಗು ತಂದವು.
ಸಿಂಗರಗೊಂಡಿದ್ದ ವಾಹನದಲ್ಲಿ ಸಮ್ಮೇಳನಾಧ್ಯಕ್ಷರನ್ನು ಕರೆ ತರುವಾಗ 71 ಪೂರ್ಣ ಕುಂಭ ಕಳಸ ಹೊತ್ತ ಮುತ್ತೆೈದೆಯರ ದಂಡು ಮುಂದೆ ಮುಂದೆ ಸಾಗಿತು. ಈ ಸಾಂಪ್ರದಾಯಿಕ ಸಾಹಿತ್ಯಿಕ ಕ್ಷಣಗಳಿಗೆ ಸಾಕ್ಷಿಯಾಗಿ ನಾಡಿನ ಅನೇಕ ಸಾಹಿತಿಗಳ ದಂಡು ನೆರೆದಿತ್ತು. ಡೊಳ್ಳುಕುಣಿತ, ನಂದಿಕಂಬ ಕುಣಿತ, ಕಂಸಾಳೆ ನೃತ್ಯದ ಸಾಂಸ್ಕೃತಿಕ ರಂಗು ಸಮಾರಂಭದ ಕಳೆಯೇರಿಸಿತು.
ನಾಡು- ನುಡಿಯ ಸೊಗಡು ಹಾಗೂ ಇತಿಹಾಸ ಬಿಂಬಿಸುವ ಛಾಯಾಚಿತ್ರಗಳ ಪ್ರದರ್ಶನ, ಸ್ತಬ್ಧ ಚಿತ್ರಗಳು, ಜನಪದ ಕಲೆ ಬಿಂಬಿಸುವ ನೃತ್ಯ ತಂಡಗಳ ಮೈಲುದ್ದ ಸಾಲು ಮೂಡಬಿದಿರೆಯಲ್ಲಿ ಹಬ್ಬದ ವಾತಾವರಣ ನಿರ್ಮಿಸಿತ್ತು.
ಬೆಳಗ್ಗೆ ಧ್ವಜಾರೋಹಣದ ವೇಳೆಗೆ ಸರಿಯಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹರಿಕೃಷ್ಣ ಪುನರೂರು ಬರಲಿಲ್ಲ. ಆದ ಕಾರಣ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಗೂ ಸಮ್ಮೇಳನ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ ಕಲ್ಕುರ ಧ್ವಜಾರೋಹಣ ಮಾಡಿದರು. ನಂತರ ಬಂದ ಪುನರೂರು ಮುಖದ ತುಂಬ ಕೋಪ ತುಂಬಿಕೊಂಡಿದ್ದರು. ತಾವು ಮಾಡಬೇಕಾದ ಕೆಲಸವನ್ನು ಕಲ್ಕುರ ಮಾಡಿದ್ದು ಅವರಿಗೆ ಸರಿಬೀಳಲಿಲ್ಲ. ಕಾರ್ಯಕ್ರಮದ ಸಮಯಕ್ಕೆ ಸರಿಯಾಗಿ ಹಾಜರಾಗದಿರುವುದು ಪುನರೂರು ಜಾಯಮಾನ ಅಂತ ಅಲ್ಲಿ ಯಾರೋ ಕಟಕಿಯಾಡಿದ್ದು ಅವರ ಕೋಪದ ತಾಪಮಾನವನ್ನು ಇನ್ನಷ್ಟು ಏರಿಸಿತ್ತು.
ಮುಖಪುಟ / ಮೂಡಬಿದಿರೆ ಸಾಹಿತ್ಯ ಸಮ್ಮೇಳನ











Click it and Unblock the Notifications