ಅನಂತಮೂರ್ತಿಗೆ ಹುಷಾರಿಲ್ಲ
‘ಕರ್ನಾಟಕದ ಬಹು ರಾಷ್ಟ್ರೀಯ ಕಂಪನಿಗಳು ಕನ್ನಡದಲ್ಲೇ ಮಾತಾಡಲಿ’ ಎಂದು ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಡಾ।ಯು.ಆರ್.ಅನಂತಮೂರ್ತಿ ನಮ್ಮ ಮೆಸೇಜ್ ಬೋರ್ಡಿನಲ್ಲಿ ಅಪ್ಪಣೆ ಕೊಡಿಸಿದ್ದರು. ಅದಕ್ಕೆ ಅಪಾರ ಸಂಖ್ಯೆಯ ಓದುಗರ ಬಳಗ ಪರ- ವಿರೋಧ ಪ್ರತಿಕ್ರಿಯೆಗಳನ್ನು ಕೊಟ್ಟಿದ್ದಾರೆ. ಕೆಲವರದು ಚುರುಕು ತರ್ಕ. ಇನ್ನು ಕೆಲವರದು ಚಾಟಿ ಏಟು. ಬೆರಳೆಣಿಕೆಯಷ್ಟು ಮಂದಿಗೆ ಅನಂತಮೂರ್ತಿ ಅವರ ಮಾತೇ ಆಪ್ಯಾಯಮಾನ.
ನಾವು ಇಷ್ಟೆಲ್ಲಾ ಹೇಳುತ್ತಿದ್ದರೂ ಅನಂತಮೂರ್ತಿ ಸುಮ್ಮಗಿರುವುದೇಕೆ ಎಂಬ ಪ್ರಶ್ನೆಗಳು ಈಗ ಮೆಸೇಜ್ ಬೋರ್ಡಿನಲ್ಲಿ ನಿಚ್ಚಳವಾಗತೊಡಗಿವೆ. ಇತ್ತೀಚೆಗಷ್ಟೆ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಬೈಪಾಸ್ ಶಸ್ತ್ರ ಚಿಕಿತ್ಸೆಗೆ ಒಳಗಾದ ಡಾ। ಯು.ಆರ್.ಅನಂತ ಮೂರ್ತಿ ಅವರನ್ನು ಡಿಸ್ಟರ್ಬ್ ಮಾಡುವ ಗೊಡವೆಗೆ ನಾವು ಹೋಗಿರಲಿಲ್ಲ.
ಓದುಗರ ಬಳಗದ ಆಗ್ರಹಕ್ಕೆ ಸ್ಪಂದಿಸುವ ಉದ್ದಿಶ್ಯದಿಂದ ಈಗಲಾದರೂ ಅನಂತಮೂರ್ತಿ ಅವರನ್ನು ಸಂಪರ್ಕಿಸೋಣವೆಂದು ಅನಂತಮೂರ್ತಿ ಅವರ ನಂಬರಿಗೆ ಫೋನಾಯಿಸಿದೆವು. The number you have dialed is 3315125. It is changed to 6697351 ಎಂಬೊಂದು ಆಟೊಮೇಟೆಡ್ ಸಂದೇಶ ಬಂತು. 6697351 ನಂಬರನ್ನು ಸಂಪರ್ಕಿಸಿದರೆ, ಡಯಲ್ ಮಾಡಿರುವ ಸಂಖ್ಯೆಯ ಸೇವೆಯನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಳ್ಳಲಾಗಿದೆ ಎಂಬ ಮತ್ತೊಂದು ಆಟೊಮೇಟೆಡ್ ಸಂದೇಶ.
ಅನಂತಮೂರ್ತಿ ಎಲ್ಲಿರಬಹುದು ಎಂಬೊಂದು ಕುತೂಹಲದಿಂದ ಅವರ ಆಪ್ತ ವಲಯವನ್ನು ವಿಚಾರಿಸಿದಾಗ ತಿಳಿದದ್ದು, ಅವರು ಮತ್ತೆ ಆಸ್ಪತ್ರೆಗೆ ಸೇರಿದ್ದಾರೆ. ನಾರಾಯಣ ಹೃದಯಾಲಯದಲ್ಲಿ ಅವರಿಗೆ ಮತ್ತೆ ಚಿಕಿತ್ಸೆ. ಭಯ ಪಡುವ ಅಗತ್ಯವಿಲ್ಲ. ಅನಂತಮೂರ್ತಿ ಹೃದಯ ಗಟ್ಟಿ ಮಾಡಿಕೊಳ್ಳುತ್ತಿದ್ದಾರೆ. ಅವರು ಚೇತರಿಸಿಕೊಂಡು, ಯಥಾ ಸ್ಥಿತಿಗೆ ಮರಳಿದ ತಕ್ಷಣವೇ ನಿಮ್ಮೆಲ್ಲರ ಕುತೂಹಲಕ್ಕೆ ಸ್ಪಂದಿಸುವರೆಂಬ ಆಶಯ ನಮ್ಮದು.