‘ಬಡವರ ನಗುವಿನ ಶಕ್ತಿ ’
ಕಣ್ಣತೆಯ ದೂರದಲ್ಲಿ ಇಬ್ಬರು ಮನುಷ್ಯರಿಗೆ ನೊಗ ಹೂಡಿ ಹೊಲ ಉಳುಮೆ ಮಾಡುವುದನ್ನು ನೋಡಲು ಚೆನ್ನಾಗಿಯೇ ಇತ್ತು !
ನೊಗ ಹೊತ್ತವರು ನಿಧಾನವಾದಾಗ ಕೈಯಲ್ಲಿ ಚಾಟಿ ಹಿಡಿದು ಬೀಸುತ್ತಿದ್ದ ವ್ಯಕ್ತಿಯಾಬ್ಬ ದನಗಳಿಗೆ ಹೊಡೆದಂತೆಯೇ ಹೊಡೆಯುತ್ತಿದ್ದ . ಆ ನೊಗ ಹೊತ್ತವರಲ್ಲಿ ಒಬ್ಬ ವ್ಯಕ್ತಿ ಅಪ್ಪನೆಂದು ತಿಳಿದಾಗ ಅರಗಿಸಿಕೊಳ್ಳುವುದು ಕಷ್ಟವಾಯಿತು... ಕಣ್ಣು ತುಂಬ ನೀರು ತುಂಬಿಕೊಂಡಿತು...
ಇಂಥ ಹತ್ತಾರು ಕಷ್ಟಗಳನ್ನು ಬಾಲ್ಯದಲ್ಲಿಯೇ ಅರಗಿಸಿಕೊಂಡ ಬಾಲಕ, ಕೊಳಗೇರಿಗಳಲ್ಲಿ ಬೆಳೆಯುತ್ತ - ಕೊಳಚೆ ನೀರಿಗೆ ಜರಡಿ ಹಿಡಿಯುತ್ತ ಬೆಳೆದದ್ದು ಅಂಬೇಡ್ಕರ್, ಲೋಹಿಯಾ ಹಾಗೂ ಕಮ್ಯುನಿಸಂ ವಿಚಾರಧಾರೆಯ ಪ್ರಭಾವಳಿಯಲ್ಲಿ . ಅದೇ ಹುಡುಗ ಮುಂದೊಂದು ದಿನ ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ ಎಂದು ಪ್ರಶ್ನಿಸಿದಾಗ ರೋಮಾಂಚನಗೊಂಡವರ ಸಂಖ್ಯೆ ದೊಡ್ಡದು. ಸೈಜುಗಲ್ಲು ಹೊತ್ತೋರು ನನ್ನ ಜನಗಳು ಎಂದು ಎದೆಗುದಿಯ ತೋಡಿಕೊಂಡಾಗ ಕನ್ನಡ ಸಾಹಿತ್ಯಲೋಕವೇ ಕಿವಿಕೊಟ್ಟಿತು. ಅವರು ಸಿದ್ದಲಿಂಗಯ್ಯ! ಇಕ್ರಲಾ.. ವದೀರ್ಲಾ ಎಂದು ನೆಲ ಕಚ್ಚಿದವರಿಗೆ ಕೆಚ್ಚು ತುಂಬಿದ ಸಿದ್ದಲಿಂಗಯ್ಯ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾಗಡಿಯ ಹೊಲೇರ ಹಟ್ಟಿಯಲ್ಲಿ ದೇವಯ್ಯ- ವೆಂಕಟಪ್ಪ ದಂಪತಿಗಳಿಗೆ ಹುಟ್ಟಿದ ಸಿದ್ಧಲಿಂಗಯ್ಯ ಬೆಂಗಳೂರಿನ ಸರ್ಕಾರಿ ಕಲಾ ಕಲಾ ಕಾಲೇಜಿನಲ್ಲಿ ಬಿಎ ಪದವಿ ಪಡೆದು ಹೊರಬಿದ್ದದ್ದು ಅಪ್ಪಟ ವಿಚಾರವಾದಿಯಾಗಿ.
ಹೊಲೆ ಮಾದಿಗರ ಹಾಡು, ಸಾವಿರಾರು ನದಿಗಳು, ಕಪ್ಪು ಕಾಡಿನ ಹಾಡು ಕವನ ಸಂಕಲನಗಳ ಮೂಲಕ ಸಿದ್ದಲಿಂಗಯ್ಯ ತುಳಿತಕ್ಕೀಡಾದ ದಲಿತರಿಗೆ ದನಿಯಾದವರು. ಬೇಡವೆಂದರೂ ದಲಿತಕವಿ ಎನ್ನುವ ಹಣೆಪಟ್ಟಿಯಲ್ಲೇ ಗುರ್ತಿಸಿಕೊಂಡವರು. ಗ್ರಾಮದೇವತೆಗಳು ಅನ್ನುವ ಪ್ರೌಢ ಪ್ರಬಂಧಕ್ಕೆ ಡಾಕ್ಟರೇಟ್ ಪದವಿಯನ್ನೂ ಪಡೆದರು.
ಸಮಾಜದಲ್ಲಿ ಪರಿವರ್ತನೆ ತರುವ ಬಯಕೆ ತೀವ್ರವಾದಾಗ ಗೆಳೆಯರೊಡಗೂಡಿ ವಿಚಾರವಾದಿ ಪರಿಷತ್ ಸ್ಥಾಪಿಸಿದರು. 1973 ರಲ್ಲಿ ಅಖಿಲ ಕರ್ನಾಟಕ ವಿಚಾರವಾದಿ ಸಮ್ಮೇಳನವನ್ನೂ ನಡೆಸಿದರು. ಅವು ಸಿದ್ದಲಿಂಗಯ್ಯನವರ ಸಾರ್ವಜನಿಕ ಜೀವನದ ಪ್ರಾರಂಭದ ದಿನಗಳು. ಸಂಘರ್ಷ ಸಮಿತಿ, ಸಮುದಾಯದ ಸದಸ್ಯರೊಂದಿಗೆ ನಾಡಿನಾದ್ಯಂತ ಓಡಾಡಿದರು. ಆನಂತರ ಬೂಸಾ ಪ್ರಕರಣದಲ್ಲಿ ಬಸವಲಿಂಗಯ್ಯನವರೊಂದಿಗೆ ಹೋರಾಡಿದರು. ನಂತರ ಬಸವಲಿಂಗಯ್ಯನವರ ಸಂಪರ್ಕ ಕಡಿದುಕೊಂಡ ಅವರು, ರಾಮಕೃಷ್ಣ ಹೆಗಡೆ ಕಾಲದಲ್ಲಿ ವಿಧಾನ ಪರಿಷತ್ತಿಗೂ ಕಾಲಿಟ್ಟರು.
ದೀರ್ಘಾವಧಿ ಶಾಸಕರಾಗಿ ಸಾಧಿಸಿದ್ದೇನು ಅನ್ನುವ ಪ್ರಶ್ನೆಗೆ ಸಿದ್ದಲಿಂಗಯ್ಯನವರೇ ಉತ್ತರಿಸಬೇಕು. ಮೊನ್ನೆಯಷ್ಟೇ ವಿಧಾನಸೌಧದಿಂದ ಹೊರಬಿದ್ದಿರುವ ಅವರು- ಶಾಸಕರಾಗಿದ್ದಾಗ ಪದ್ಯ ಮರೆತರು, ಇತರ ರಾಜಕಾರಣಿಗಳಂತೆಯೇ ಜನರಿಂದ ದೂರವಾದರು ಎನ್ನುವ ಆಪಾದನೆಗಳನ್ನು ಅಭಿಮಾನಿಗಳಿಂದಲೇ ಎದುರಿಸುತ್ತಿದ್ದಾರೆ. ಉತ್ತರ ಕೊಡಲೀಗ ಅವರಿಗೆ ಬಿಡುವಿದೆ.
ಸದನದಲ್ಲಿ ದಲಿತರ ಪರವಾಗಿ ಸಿದ್ದಲಿಂಗಯ್ಯ ದನಿ ಎತ್ತಿದ್ದಾರೆ ಅನ್ನುವ ಬಗ್ಗೆ ಅಪಸ್ವರಗಳಿಲ್ಲ . ಆದರೆ, ಕಷ್ಟದ ದಿನಗಳಲ್ಲಿ ಅವರೊಂದಿಗಿದ್ದ ಜನರು, ಶಾಸಕರಾಗಿದ್ದ ಕಾಲದಲ್ಲಿ ದೂರ ಸರಿದರು. ಸಂಘರ್ಷ ಸಮಿತಿ, ಸಮುದಾಯದ ಗೆಳೆಯರು ಸಿದ್ದಲಿಂಗಯ್ಯನವರಿಗೆ ಬೆನ್ನು ತೋರಿದರು.
ಇಷ್ಟಾದರೂ, ಸಿದ್ದಲಿಂಗಯ್ಯ ಅವರ ಬಗೆಗೆ ದಲಿತರಲ್ಲಿ ಈಗಲೂ ಅಕ್ಕರೆಯಿದೆ. ಸಾಹಿತ್ಯ ಲೋಕದಲ್ಲಿ ಅವರ ಕವಿತೆಗಳಿಗೊಂದು ಬೆಲೆಯಿದೆ. ಅಭಿಮಾನಿಗಳು ಸಿದ್ದಲಿಂಗಯ್ಯನವರ ಕವಿತೆಗಳನ್ನು ವಿವಿಧ ಕಾರ್ಯಕ್ರಮ- ರ್ಯಾಲಿಗಳಲ್ಲಿ ಗಟ್ಟಿಯಾಗಿ ಹಾಡುತ್ತಾರೆ. ಏಕೆಂದರೆ, ಹೊಲೆ ಮಾದಿಗರ ಹಾಡು ಅಂಥ ಮತ್ತೊಂದು ಪುಸ್ತಕ ಮತ್ತೆ ಬಂದಿಲ್ಲ .
ಇಷ್ಟೆಲ್ಲ ನೆನಪಿಸಿಕೊಳ್ಳಲಿಕ್ಕೆ ಕಾರಣವೆಂದರೆ ...
ಆಗಸ್ಟ್ 04ರ ಶನಿವಾರ, ಬೆಂಗಳೂರಿನ ಯವನಿಕಾ ಸಭಾಂಗಣದಲ್ಲಿ ಸಿದ್ದಲಿಂಗಯ್ಯ ಅವರನ್ನು ಅಭಿಮಾನಿಗಳು ಆತ್ಮೀಯವಾಗಿ ಸನ್ಮಾನಿಸಿದರು. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ, ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ, ಕವಿ ಚಂದ್ರಶೇಖರ ಕಂಬಾರ ಸಿದ್ದಲಿಂಗಯ್ಯ ಅವರನ್ನು ಹೊಗಳಿದರು. ವಿಧಾನಸೌಧದಿಂದ ಹೊರಬಿದ್ದ ನಂತರ ದೊಡ್ಡ ರೀತಿಯಲ್ಲಿ ಸಿದ್ದಲಿಂಗಯ್ಯ ಕಾಣಿಸಿಕೊಂಡದ್ದು ಇದೇ ಮೊದಲು. ಇದು ಅವರ ಎರಡನೆಯ ಅವತಾರವೇ..?
ಕಾರ್ಯಕ್ರಮದಲ್ಲಿ ಸಿದ್ಧಲಿಂಗಯ್ಯನವರ ಹಾಡುಗಳು ಉಕ್ಕುತ್ತಿದ್ದವು. ಈ ಗೀತೆಗಳೊಂದಿಗೆ ಅಭಿಮಾನಿಗಳ ಗುಂಪು, ಚಪ್ಪಾಳೆಗಳ ಸದ್ದು, ಹೋರಾಟದ ಕವಿಯ ಸಾಧನೆಗೆ ಶ್ಲಾಘನೆ, ಭಾಷಣ ಎಲ್ಲವೂ ಸೇರಿತ್ತು . ಆಯ್ದ ಭಾಗಗಳನ್ನು ಓದಿ ನೀವೂ ಸಂತೋಷಿಸಿ.
ಜ್ಞಾನಪೀಠ ಸಿಗಲಿ !
ಶೋಷಿತರ ದನಿಯಾದ ಸಿದ್ಧಲಿಂಗಯ್ಯ ಅವರಿಗೆ ಜ್ಞಾನಪೀಠ ಸಿಗಬೇಕು ಎಂದು ಅಪ್ಪಣೆ ಕೊಡಿಸಿದ ಹೆಗಡೆ, ‘ಸಿದ್ಧಲಿಂಗಯ್ಯ ಯಾರಿಗೂ ಕೇಡು ಬಯಸಿದವರಲ್ಲ, ಅವರ ಕೃತಿಗಳಲ್ಲಿ ಸಿಟ್ಟು ರೋಷವಿದ್ದುದು ಅನ್ಯಾಯದ ವಿರುದ್ಧ ಮಾತ್ರ. ನಾನು ಅವರನ್ನು ಶಾಸಕರನ್ನಾಗಿ ಮಾಡಿದ್ದಕ್ಕೆ ಪ್ರತಿಯಾಗಿ ಕೀರ್ತಿ ತಂದುಕೊಟ್ಟರು’ ಎಂದು ಹೆಗಡೆ ಖುಷಿ ಪಟ್ಟರು.
ಆಶ್ಚರ್ಯಕರ ಬೆಳವಣಿಗೆ ..
ನಮ್ಮ ಕೆಳಗಿರುವ ಅಧೋಲೋಕ, ಶೋಷಿತರ ಲೋಕವನ್ನು ಪರಿಚಯಿಸಿದ ಸಿದ್ದಲಿಂಗಯ್ಯ, ಸಾಹಿತ್ಯದ ಚಳವಳಿಗಳು ನಿಂತ ನೀರಾಗಿದ್ದಾಗ ಇಕ್ರಲ್ಲಾ ಒದೀರ್ಲಾ ಕವನದ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಹೊಸತನ ತಂದವರು. ಇದೊಂದು ಆಶ್ಚರ್ಯಕರ ಬೆಳವಣಿಗೆ ಎಂದು ಚಂದ್ರಶೇಖರ ಕಂಬಾರ ಆಶ್ಚರ್ಯ ಪಟ್ಟರು.
ಹೂವ ತಂದವರು !
ತಮ್ಮನ್ನು ಶಾಸಕರನ್ನಾಗಿ ನೇಮಿಸಿದವರಿಗೆ ಸಿದ್ದಲಿಂಗಯ್ಯ ಕೀರ್ತಿ ತಂದಿದ್ದಾರೆ. ಅವರು ಸದನಕ್ಕೆ ಶೋಭೆಯಾಗಿದ್ದರು. ಸರ್ಕಾರದ ನಿರ್ಣಯಗಳನ್ನು ಬದಲಿಸುವ ಶಕ್ತಿ ಹೊಂದಿದ್ದರು. ಗೃಹ ಸಚಿವ ಖರ್ಗೆ ಮಾತು ಮುಂದುವರಿಸುತ್ತಿದ್ದರು.. ದಕ್ಷಿಣ ಕನ್ನಡದಲ್ಲಿ ಜಾರಿಯಲ್ಲಿದ್ದ ಅಜಲು ಪದ್ಧತಿ ನಿಷೇಧಿಸಲು ಹೋರಾಡಿ ಸಿದ್ದಲಿಂಗಯ್ಯ ಯಶಸ್ವಿಯಾದುದನ್ನು ಖರ್ಗೆ ಸ್ಮರಿಸಿಕೊಂಡರು.
ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಕೆ. ಸಿದ್ಧಪ್ಪ ಮತ್ತು ತುಳು ಅಕಾಡೆಮಿಯ ಮಾಜಿ ಅಧ್ಯಕ್ಷ ಬಿ.ಎ. ವಿವೇಕ ರೈ ಅಭಿನಂದನಾ ಭಾಷಣ ಮಾಡಿದರು. ಅಪ್ಪಗೆರೆ ತಿಮ್ಮ ರಾಜು, ಬಾನಂದೂರು ಕೆಂಪಯ್ಯ, ಮೈಸೂರು ಮಹಾದೇವಪ್ಪ ಮುಂತಾದ ಗಾಯಕರು ಸಮಾರಂಭದಲ್ಲಿ ಸಿದ್ಧಲಿಂಗಯ್ಯ ಅವರ ಗೀತೆಗಳನ್ನು ಹಾಡಿದರು. ಇದೇ ಸಂದರ್ಭದಲ್ಲಿ ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಲಾಯಿತು.
ಮುಖಪುಟ / ಸಾಹಿತ್ಯ ಸೊಗಡು-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications