ಯುವ ಬರಹಗಾರರ ಬೆಂಬಲಕ್ಕೆ ಸಹೇಲಿ, ಕವಿಸಂಗಮ ಉಗಮ
ಬೆಂಗಳೂರು : ಕೊಳೆಗೇರಿ ಮಕ್ಕಳ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸಹೇಲಿ ಸಂಸ್ಥೆಯು ಯುವ ಬರಹಗಾರರಿಗೆ ನೆರವಾಗುವ ದೃಷ್ಟಿಯಿಂದ ಕವಿಸಂಗಮ ಎಂಬ ಘಟಕವನ್ನು ಸ್ಥಾಪಿಸಲು ನಿರ್ಧರಿಸಿದೆ.
ಸಹೇಲಿ ಸಂಸ್ಥೆಯ ಸ್ಥಾಪಕ ಕಿರಣ್ ಹಾಗೂ ಹಿರಿಯ ಸಾಹಿತಿ ಪ್ರೊ. ದೊಡ್ಡರಂಗೇಗೌಡ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಕವಿಸಂಗಮ ಘಟಕದ ಸದಸ್ಯತ್ವ ಪಡೆಯುವ ಸದಸ್ಯರ ಪುಸ್ತಕಗಳನ್ನು ತಪೋನಿಧಿ ಪ್ರಕಾಶನದ ಮೂಲಕ ಪ್ರಕಟಿಸಬಹುದು. ಆರ್ಥಿಕವಾಗಿ ತೀರಾ ಹಿಂದುಳಿದ ಬರಹಗಾರರಿಗೆ ಘಟಕವು ಧನ ಸಹಾಯ ನೀಡಲಿದೆ.
ಡಿಸೆಂಬರ್ 12ರಂದು ಸಂಜೆ ನಗರದ ಸಂಸ ಬಯಲುರಂಗ ಮಂದಿರದಲ್ಲಿ ನಡೆಯುವ ಸಮಾರಂಭದಲ್ಲಿ ಕವಿಸಂಗಮದ ಉದ್ಘಾಟನೆ ನಡೆಯಲಿದೆ.
ಘಟಕದ ವತಿಯಿಂದ ಪ್ರತಿದಿನವೂ ಕವಿಗೋಷ್ಠಿ , ವಿಚಾರ ಸಂಕಿರಣ ಹಾಗೂ ಕವಿ ಸಂಗಮ ಕಾರ್ಯಕ್ರಮಗಳನ್ನು ಏರ್ಪಡಿಸಿ ಉದಯೋನ್ಮುಖ ಪ್ರತಿಭಾವಂತರಿಗೆ ಘಟಕ ವೇದಿಕೆಯಾಗಲಿದೆ. ಕವಿಸಂಗಮದಲ್ಲಿ ಭಾಗವಹಿಸಲು ಇಚ್ಛಿಸುವವರು ಹಾಗೂ ಘಟಕದ ಬಗೆಗೆ ಹೆಚ್ಚಿನ ವಿವರ ತಿಳಿದುಕೊಳ್ಳಬಯಸುವವರು ಈ ವಿಳಾಸವನ್ನು ಸಂಪರ್ಕಿಸಬಹುದು.
ನಂ. 914 / 2/1, ಮಾರುತಿ ವೃತ್ತ, ಹನುಮಂತ ನಗರ, ಬೆಂಗಳೂರು. ಫೋನ್ : 080- 5725825 , 98451-74503.
(ಇನ್ಫೋ ವಾರ್ತೆ)