ಕೆಲಸ ಮಾಡು-ಗೀತೆ: ಕಾರ್ನಾಡರೂ ಕೆಲಸ ಮಾಡುತ್ತಿದ್ದಾರೆ, ಇಂಗ್ಲೆಂಡಲ್ಲಿ!
*ಇನ್ಫೋ ಇನ್ಸೈಟ್
ಬ್ರಿಟನ್ನಲ್ಲಿರುವ ಗಿರೀಶ್ ಕಾರ್ನಾಡ್ ಈ ತಿಂಗಳ ಕೊನೆಗೆ ಭಾರತಕ್ಕೆ ಬರುತ್ತಾರೆ. ಆದರೆ ಇಲ್ಲೇ ಇರ್ತಾರೆ ಅಂತೇನಿಲ್ಲ. ಅಗ್ನಿ ಮತ್ತು ಮಳೆಯ ಇಂಗ್ಲಿಷ್ ರೂಪಾಂತರದ ನಂತರ ಅವರು ಭಗವದ್ಗೀತೆಯತ್ತ ಹೊರಳಿದ್ದಾರೆ. ಲಂಡನ್ನ ನೆಹರು ಸೆಂಟರ್ನಲ್ಲಿ ಭಗವದ್ಗೀತೆಯ ಬಗ್ಗೆ ಡಾಕ್ಯುಮೆಂಟರಿ ತಯಾರಿಸುವಲ್ಲಿ ವ್ಯಸ್ತರಾಗಿದ್ದಾರೆ. ಶೂಟಿಂಗ್ಗೋಸ್ಕರವೇ ಭಾರತಕ್ಕೆ ಬರುತ್ತಿದ್ದಾರೆ, ಬೆಂಗಳೂರಿಗೂ ಬರಬಹುದು.
ಮಾರ್ಚ್ ಆರಂಭವಾಗುತ್ತಿದ್ದಂತೆಯೇ ಭಗವದ್ಗೀತೆಯ ಸಾಕ್ಷ್ಯಚಿತ್ರಕ್ಕೆ ಶೂಟಿಂಗ್ ಆರಂಭವಾಗುತ್ತದೆ. ಬಿಬಿಸಿ 2 ಮತ್ತು ರಂಗನಿರ್ದೇಶಕ ಜೇಮ್ಸ್ ಎರ್ಸ್ಕಿನ್ ಭಗವದ್ಗೀತೆಯ ಸಾಕ್ಷ್ಯಚಿತ್ರಕ್ಕೆ ಹೆಗಲು ನೀಡಿದ್ದಾರೆ.
ವಿಶ್ವಸತ್ಯಗಳ ಬಿಂಬಿಸುವ, ಕರ್ಮ ಧರ್ಮಗಳ ವಿವರಿಸುವ ಗೀತೆ- ಕೃಷ್ಣೋಕ್ತಿ ಮಾಲೆ. ಶಂಕರಾಚಾರ್ಯರು, ರಾಮಾನುಜಾಚಾರ್ಯರು, ಮಧ್ವಾಚಾರ್ಯರು ಗೀತೆಯ ಮೇಲೆ ಬರೆದ ಟಿಪ್ಪಣಿಗಳೇ ಇನ್ನಷ್ಟು ಗ್ರಂಥಗಳನ್ನು ಹುಟ್ಟು ಹಾಕಿವೆ. 19ನೇ ಶತಮಾನದಲ್ಲಿ ತಿಲಕ್ ಕೂಡ ಭಗವದ್ಗೀತೆಗೆ ಕ್ರಾಂತಿಯ ಆಯಾಮ ಕೊಟ್ಟು ವಿವಾದವೆಬ್ಬಿಸಿದ್ದರು.
ಯುದ್ಧ ಮಾಡುವುದು ಸರಿ ಎಂದು ಸಮರ್ಥಿಸುವ ಕೃಷ್ಣ, ಅರ್ಜುನನಿಗೆ ಸ್ಫೂರ್ತಿಯಾಗುತ್ತಾನೆ. ಈ ಪ್ರಕರಣವನ್ನೇ ಉದಾಹರಿಸಿ ತಿಲಕರು ಸ್ವಾತಂತ್ರ್ಯಕ್ಕಾಗಿ ಯುದ್ಧ ಮಾಡಿ ಎಂದು ಯುವಕರಿಗೆ ಕರೆ ಕೊಡುತ್ತಿದ್ದರು. ಅಹಿಂಸೆಯನ್ನು ಅನುಸರಿಸುತ್ತಿದ್ದ ಗಾಂಧೀಜಿ ಕೂಡ ಗೀತೆಯನ್ನು ಆಗಾಗ ಉದಾಹರಿಸುತ್ತಿದ್ದರು.
ಹೀಗೆ ಸಾಕಷ್ಟು ಪ್ರಶ್ನೆಗಳನ್ನೆಬ್ಬಿಸುವ, ಮತ್ತೆ ಜೀವನದ ದ್ವಂದ್ವಗಳಿಗೆ ಉತ್ತರಿಸುವ ಗೀತೆಯನ್ನು ಕಾರ್ನಾಡರು ಆಯ್ಕೆಮಾಡಿಕೊಂಡಿದ್ದಾರೆ. ಎಲ್ಲ ಜಿಜ್ಞಾಸೆಗಳನ್ನು ಚಿತ್ರಿಸುವ ಗೀತೆಯ ಶೂಟಿಂಗ್ ಕಾರ್ಯ ಮಾರ್ಚ್ 2ರಂದು ಆರಂಭವಾಗುತ್ತದೆ.
ಗೀತೆಯ ಸಾಕ್ಷ್ಯಚಿತ್ರವನ್ನು ಕೈಲಿ ಹಿಡಿದುಕೊಂಡ ಕಾರ್ನಾಡರನ್ನು ‘ನಾಟಕವನ್ನು ಮರೆತಿರಾ.. ’ ಎಂದು ಕೇಳಿದರೆ ‘ಹೇಗೆ ಮರೆಯಲಿ’ ಎನ್ನುತ್ತಾರೆ. ಅವರ ಹೊಸ ಆಂಗ್ಲ ನಾಟಕ ‘ಬಲಿ’ ಸಿದ್ಧವಾಗುತ್ತಿದೆ. 11 ನೇ ಶತಮಾನದ ಜೈನ ಮಹಾ ಕಾವ್ಯ ಯಶೋಧರ ಚರಿತ್ರೆಯನ್ನಾಧರಿಸಿದ ವಸ್ತು. ಹಿಂದೆ ಹಿಟ್ಟಿನ ಹುಂಜ ಎಂಬ ಏಕಾಂಕ ನಾಟಕದ ಅಪೂರ್ಣ ರೂಪ ಈಗ ಪೂರ್ಣ ರೂಪದಲ್ಲಿ ಆದರೆ ಇಂಗ್ಲಿಷ್ನಲ್ಲಿ ಲಭ್ಯವಾಗಲಿದೆ. ನಾಸಿರುದ್ದೀನ್ ಶಾ ರತ್ನಾ ಪಾಟಕ್ ಶಾ ಮತ್ತು ಇಬ್ಬರು ಇಂಗ್ಲಿಷ್ ನಟರು ನಾಟಕದಲ್ಲಿ ಭಾಗವಹಿಸುವರು. ಜೂನ್ 1ರಂದು ನಾಟಕ ರಂಗವೇರುವ ನಿರೀಕ್ಷೆಯಿದೆ.
ಕಾರ್ನಾಡ್, ನೆಹರು ಸೆಂಟರ್ನ ನಿರ್ದೇಶಕರಾಗಿಯೂ ಕೆಲಸ ಮಾಡಿದವರು. ‘ಲಂಡನ್ನಲ್ಲಿ ಕೆಲಸ ಮಾಡುವುದೇ ಒಂದು ಅದ್ಭುತ ಅನುಭವ . ಆದರೆ ಲಂಡನ್ನಲ್ಲಿನ ವಾಸ ಮುಗಿಯುತ್ತಾ ಬಂದು ಬಿಟ್ಟಿದೆ’ ಅಂತ ಕಾರ್ನಾಡ್ ಉದ್ಗರಿಸುತ್ತಾರೆ. ಪ್ರಸಿದ್ಧ ಭಾರತೀಯ ನಾಟಕಕಾರರ ಪಟ್ಟಿಯಲ್ಲಿರುವ ಕಾರ್ನಾಡರು ಹೋಮಿ ಭಾಭಾ ಫೆಲೋಶಿಪ್, ರ್ಹೋಡ್ಸ್ ಫೆಲೋಶಿಪ್ಗಳನ್ನು ಗಿಟ್ಟಿಸಿಕೊಂಡವರು ಹಾಗೂ ಜ್ಞಾನಪೀಠಿಗಳು.
ವಾರ್ತಾ
ಸಂಚಯ
ಮುಖಪುಟ
/
ಸಾಹಿತ್ಯ
ಸೊಗಡು