ಆಂಧ್ರದ ಅಮ್ಮಾಯಿ ಸರಸ್ವತಿ ಗೋರಾಗೆ ಬಸವ ಪುರಸ್ಕಾರ
ಬೆಂಗಳೂರು : ಬಸವ ತತ್ವಗಳನ್ನು ಪ್ರತಿಷ್ಠಾಪಿಸುವಲ್ಲಿ ಮಹತ್ತರ ಪಾತ್ರವಹಿಸಿದ ಆಂಧ್ರಪ್ರದೇಶದ 80ರ ಹರೆಯದ ಅಮ್ಮಾಯಿ ಸರಸ್ವತಿ ಗೋರಾ ಅವರನ್ನು ಕರ್ನಾಟಕ ಸರ್ಕಾರ ‘ಬಸವ ಪುರಸ್ಕಾರ’ ರಾಷ್ಟ್ರೀಯ ಪ್ರಶಸ್ತಿಗೆ ಆಯ್ದಿದೆ.
ಪ್ರಶಸ್ತಿ 1.5 ಲಕ್ಷ ರುಪಾಯಿ ಹಾಗೂ ಒಂದು ಕಂಚಿನ ಪ್ರತಿಮೆ ಹಾಗೂ ಗೌರವ ಪತ್ರವನ್ನು ಒಳಗೊಂಡಿರುತ್ತದೆ. ಏಪ್ರಿಲ್ 26, ಬಸವ ಜಯಂತಿಯ ದಿನ ಗೋರಾ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ರಾಣಿ ಸತೀಶ್ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.
ಸ್ವಾತಂತ್ರ್ಯ ಹೋರಾಟಗಾರ್ತಿಯೂ ಆಗಿದ್ದ ಗೋರಾ, 1940ರಲ್ಲಿ ವಿಜಯವಾಡದಲ್ಲಿ ಕೇಂದ್ರವೊಂದನ್ನು ಸ್ಥಾಪಿಸಿದರು. ಈ ಕೇಂದ್ರ ಇವತ್ತಿಗೂ ಬಸವ ತತ್ವಗಳನ್ನು ಪ್ರತಿಪಾದಿಸುತ್ತಿದೆ. ಅಷ್ಟೇ ಅಲ್ಲದೆ ಸಾಮಾಜಿಕ ಸಮಸ್ಯೆಗಳಿಂದ ನೊಂದು-ಬೆಂದ ಹೆಂಗಸರಿಗೆ ಇದು ನೆಲೆಯನ್ನೂ ಕಲ್ಪಿಸುತ್ತಿದೆ.
ಸಾಹಿತಿ ಜಿ.ಎಸ್.ಶಿವರುದ್ರಪ್ಪ ನೇತೃತ್ವದ ಆರು ಮಂದಿಯ ಸಮಿತಿ ಬಸವ ಪುರಸ್ಕಾರಕ್ಕೆ ಸರಸ್ವತಿ ಗೋರಾ ಅವರನ್ನು ಆರಿಸಿದೆ. ಗೋರಾ ಅವರು ನಿಸ್ಪೃಹ ಸೇವೆಯಿಂದ ಗುರ್ತಿಸಿಕೊಂಡವರು. ಸಾಮಾಜಿಕ ಹಾಗೂ ರಾಜಕೀಯ ಸುಧಾರಣೆಗಳನ್ನೂ ಮಾಡಿರುವ ಅವರು, 2000ನೇ ಸಾಲಿನ ಜಿ.ಡಿ. ಬಿರ್ಲಾ ಅಂತರರಾಷ್ಟ್ರೀಯ ಮಾನವೀಯತಾ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳು ಸಂದಿವೆ.
ಕುಪ್ಪಳ್ಳಿಗೊಂದು ಕುವೆಂಪು ಪ್ರತಿಷ್ಠಾನ : ರಾಷ್ಟ್ರಕವಿ ಕುವೆಂಪು ಅವರ ಹುಟ್ಟುಹಬ್ಬದ ದಿನ (ಏಪ್ರಿಲ್ 7) , ಅವರ ಹುಟ್ಟೂರಾದ ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿಯಲ್ಲಿ ಕುವೆಂಪು ಪ್ರತಿಷ್ಠಾನವನ್ನು ಉದ್ಘಾಟಿಸಲಾಗುವುದು. ಈ ಕಟ್ಟಡದ ನಿರ್ಮಾಣಕ್ಕೆ ಸರ್ಕಾರ 40 ಲಕ್ಷ ರುಪಾಯಿ ಧನ ಸಹಾಯ ಮಾಡಿದೆ ಎಂದು ರಾಣಿ ಸತೀಶ್ ಹೇಳಿದರು.
ಮಹಾವೀರ ಜಯಂತಿಗೆ 50 ಲಕ್ಷ : ಬೆಂಗಳೂರಿನಲ್ಲಿ ವರ್ಷ ಕಾಲ ನಡೆಯಲಿರುವ ಮಹಾವೀರ ಜಯಂತಿ ಆಚರಣೆಯನ್ನು ಏಪ್ರಿಲ್ 6ರಂದು ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಉದ್ಘಾಟಿಸಲಿದ್ದಾರೆ. ಇದಕ್ಕಾಗಿ ಸರ್ಕಾರ ಮೂರು ಕಂತುಗಳಲ್ಲಿ 50 ಲಕ್ಷ ರುಪಾಯಿ ಬಿಡುಗಡೆ ಮಾಡಲಿದೆ. ಇದಲ್ಲದೆ ಜ್ಞಾನಭಾರತಿ ಆವರಣದಲ್ಲಿ ಕಲಾಗ್ರಾಮ ಸ್ಥಾಪಿಸುವ ಬಗೆಗೂ ಇಲಾಖೆ ಯೋಚಿಸುತ್ತಿದೆ ಎಂದು ಸಚಿವರು ತಿಳಿಸಿದರು.
(ಯುಎನ್ಐ)