ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರುಗಳ ಪರಿಚಯ
ಎನ್.ಎಸ್. ಸುಬ್ಬರಾವ್ ( 1885- 1943) ಬಹುಭಾಷಾ ಕೋವಿದರು, ಅರ್ಥಶಾಸ್ತ್ರ ವಿದ್ವಾಂಸರು, ಶಿಕ್ಷಣ ತಜ್ಞರು. ಕೇಂಬ್ರಿಡ್ಜ್ನಲ್ಲಿ ಕಲಿತು ಮೈಸೂರು ವಿವಿಯಲ್ಲಿ ಪ್ರಾಧ್ಯಾಪಕರಾಗಿ, ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ರಾಜಕಾರ್ಯ ಪ್ರವೀಣ ಬಿರುದು ಪಡೆದಿದ್ದರು. 1935ರ ಮುಂಬಯಿ ಸಮ್ಮೇಳನದ ಅಧ್ಯಕ್ಷರು. ಬೆಳ್ಳಾವೆ ವೆಂಕಟನಾರಣಪ್ಪ ( 1872- 1943) ವೃತ್ತಿಯಿಂದ ಭೌತಶಾಸ್ತ್ರ ಪ್ರಾಧ್ಯಾಪಕರು. ಪರಿಷತ್ತಿನ ಕಾರ್ಯದರ್ಶಿಯಾಗಿ, ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಜೀವವಿಜ್ಞಾನ ಅವರ ಜನಪ್ರಿಯ ಕೃತಿ. ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲೀಷ್- ಕನ್ನಡ ನಿಘಂಟಿನ ಮುಖ್ಯ ಸಂಪಾದಕರು. 1937 ರ ಜಮಖಂಡಿ ಸಮ್ಮೇಳನದ ಅಧ್ಯಕ್ಷರು. ರಂಗರಾವ್ ದಿವಾಕರ (1894- 1990) ಪದವೀಧರರು. ಗಾಂಧೀಜಿ ಕರೆಗೆ ಓಗೊಟ್ಟು ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು. ಕೇಂದ್ರ ಸರ್ಕಾರದ ಮಂತ್ರಿಗಳಾಗಿ, ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಕರ್ಮವೀರ, ಸಂಯುಕ್ತ ಕರ್ನಾಟಕ, ಕಸ್ತೂರಿ ಸಂಸ್ಥಾಪಕರು ಇವರೇ. ಕರ್ಣಾಟಕ ವಿವಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಬಳ್ಳಾರಿ ( 1938) ಸಮ್ಮೇಳನಾಧ್ಯಕ್ಷರು. ಮುದುವೀಡು ಕೃಷ್ಣರಾವ್ ( 1874- 1947) ಲೋಕಮಾನ್ಯ ತಿಲಕರಿಂದ ಪ್ರಭಾವಿತರಾಗಿ ಸಾರ್ವಜನಿಕ ಸೇವಾಕ್ಷೇತ್ರ ಪ್ರವೇಶಿಸಿದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ , ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಭಾಗಿಗಳು . ಕನ್ನಡ, ಹಿಂದಿ, ಮರಾಠಿಯಲ್ಲಿ ವಾಗ್ಮಿಗಳು. 1939 ರ ಬೆಳಗಾವಿ ಸಮ್ಮೇಳನಾಧ್ಯಕ್ಷರಾಗಿದ್ದರು. ವೈ. ಚಂದ್ರಶೇಖರ ಶಾಸ್ತ್ರಿ ( 1893- 1997) ಪ್ರಕಾಂಡ ಪಂಡಿತರು. ಸಂಸ್ಕೃತ ಕಾಲೇಜಿನ ಪ್ರಾಂಶುಪಾಲರಾಗಿದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ ಗೌರವಾನ್ವಿತರು. ಧಾರವಾಡ (1940) ಸಮ್ಮೇಳನಾಧ್ಯಕ್ಷರು. ವ್ಯಾಕರಣ ತೀರ್ಥ, ಸಾಹಿತ್ಯಾಚಾರ, ವಿದ್ಯಾಲಂಕಾರ ಪದವಿ ಭೂಷಣರು. ಎ.ಆರ್. ಕೃಷ್ಣ ಶಾಸ್ತ್ರಿ ( 1890- 1968) ಬಹುಭಾಷಾ ಪಂಡಿತರು, ಕನ್ನಡ ಪ್ರಾಧ್ಯಾಪಕರು. ಪ್ರಬುದ್ಧ ಕರ್ನಾಟಕ ಪತ್ರಿಕೆಯ ಸಂಸ್ಥಾಪಕರು. ಮೈಸೂರು ವಿವಿ ಡಿ.ಲಿಟ್ ಪದವಿ ಪಡೆದಿದ್ದರು. ಅಭಿನಂದನೆ- ಗೌರವ ಗ್ರಂಥ ಇವರಿಗೆ ಸಮರ್ಪಿತವಾಗಿದೆ. ವಚನ ಭಾರತ, ಕಥಾಮೃತ ಇವರ ಗಮನಾರ್ಹ ಕೃತಿಗಳು. ಹೈದರಾಬಾದ್(1941) ಸಮ್ಮೇಳನಾಧ್ಯಕ್ಷರು. ದ.ರಾ. ಬೇಂದ್ರೆ (1896- 1981) ಹೈಸ್ಕೂಲು ಮಾಸ್ತರಿಕೆ, ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ. ಬಹುಭಾಷಾ ಕೋವಿದರು. ಸ್ವಧರ್ಮ, ಜಯಕರ್ನಾಟಕ ಪತ್ರಿಕೆಗಳ ಸಂಪಾದಕರಾಗಿದ್ದರು. ಶಬ್ದ ಗಾರುಡಿಗರೆಂದೆ ಪ್ರಸಿದ್ಧರು. ಕರ್ನಾಟಕದ ವರಕವಿಯೂ ಹೌದು. ಜ್ಞಾನಪೀಠ ಭಾಜನರು. ಪದ್ಮಶ್ರೀ ಪ್ರಶಸ್ತಿ ವಿಜೇತರು.
ಮೈಸೂರು ವಿವಿ ಡಾಕ್ಟರೇಟ್ ಪದವಿ ನೀಡಿದೆ. 1943ರ ಶಿವಮೊಗ್ಗ ಸಮ್ಮೇಳನ ಅಧ್ಯಕ್ಷರಾಗಿದ್ದರು. ಶಿ.ಶಿ. ಬಸವನಾಳ ( 1893- 1951) ಕೆಎಲ್ಇ ವಿದ್ಯಾಸಂಸ್ಥೆ ಸ್ಥಾಪಕರು. ಪ್ರಾಧ್ಯಾಪಕರಾಗಿ, ಪ್ರಿನ್ಸಿಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಬೋಧ ಪತ್ರಿಕೆ ಸಂಪಾದಕರು. 1944- ರಬಕವಿ ಸಮ್ಮೇಳನಾಧ್ಯಕ್ಷರು. ಟಿ.ಪಿ.ಕೈಲಾಸಂ ( 1884- 1946) ಕರ್ನಾಟಕ ನಾಟಕ ಪ್ರಹಸನ ಪಿತಾಮಹರೆಂದೇ ಜನಜನಿತರು. ಕನ್ನಡ ರಂಗಭೂಮಿಯಲ್ಲಿ ದೊಡ್ಡ ಹೆಸರು ಇವರದು. 1945ರಲ್ಲಿ ತಮಿಳುನಾಡಿನಲ್ಲಿ ನಡೆದ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಟೊಳ್ಳುಗಟ್ಟಿ , ಬಂಡ್ವಾಳಿಲ್ಲದ ಬಡಾಯಿ, ಪೋಲಿಕಿಟ್ಟಿ ಇವರ ಕೆಲವು ಜನಪ್ರಿಯ ನಾಟಕಗಳು. ಸಿ.ಕೆ. ವೆಂಕಟರಾಮಯ್ಯ ( 1896- 1973) ಪ್ರಚಂಡ ವಾಗ್ಮಿ . ಕನ್ನಡ, ಇಂಗ್ಲೀಷ್, ಸಂಸ್ಕೃತಗಳಲ್ಲಿ ವಿದ್ವಾಂಸರು. ಸಂಸ್ಕೃತಿ ಇಲಾಖೆ ನಿರ್ದೇಶಕರಾಗಿ, ಪರಿಷತ್ತಿನ ಕಾರ್ಯದರ್ಶಿಯಾಗಿ, ವಕೀಲರಾಗಿ ಸೇವೆ. ಅಕಾಡೆಮಿ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿಗಳೊಂದಿಗೆ ರಾಜಸೇವಾಸಕ್ತ ಬಿರುದು ಹೊಂದಿದ್ದರು. 1947ರ ಹರಪನಹಳ್ಳಿ ಸಮ್ಮೇಳನದ ಅಧ್ಯಕ್ಷರು. ತಿ.ತಾ. ಶರ್ಮ ( 1896- 1973) ಭಾರತ ಸಂಶೋಧನಾ ಇಲಾಖೆಯಲ್ಲಿ ಅಧಿಕಾರಿಯಾಗಿದ್ದರು.
ಗಾಂಧೀಜಿ ಅಸಹಕಾರ ಚಳವಳಿಗೆ ಓಗೊಟ್ಟರು. ವಿಶ್ವಕರ್ನಾಟಕ ಪತ್ರಿಕೆಯಲ್ಲಿ ದುಡಿದಿದ್ದಾರೆ. ಪರಿಷತ್ತಿನ ಅಧ್ಯಕ್ಷತೆ, ಬೆಂಗಳೂರು ಮುನ್ಸಿಪಲ್ ಕೌನ್ಸಿಲ್ ಸದಸ್ಯರು. 1948- ಕಾಸರಗೋಡು ಸಮ್ಮೇಳನದ ಅಧ್ಯಕ್ಷರು. ಉತ್ತಂಗಿ ಚನ್ನಪ್ಪ ( 1881- 1962) ಬಾಸೆಲ್ ಮಿಷನ್ನಿನ ಪಾದ್ರಿಯಾಗಿದ್ದರು. ವಿದ್ವಾಂಸರು. ಸರ್ವಜ್ಞ ಕವಿಯಿಂದ ಪ್ರಭಾವಿತರಾಗಿ ಕವಿಯ ಬಗ್ಗೆ ವಿಶೇಷ ಅಧ್ಯಯನ ನಡೆಸಿದರು. ಗುಲ್ಬರ್ಗಾ( 1949) ಸಮ್ಮೇಳನದ ಅಧ್ಯಕ್ಷರು. ಎಂ.ಆರ್. ಶ್ರೀನಿವಾಸ ಮೂರ್ತಿ (1892- 1953) ಕಲಿತದ್ದು ವಿಜ್ಞಾನ, ಆಸಕ್ತಿ ಸಾಹಿತ್ಯದಲ್ಲಿ . ಕನ್ನಡ ನುಡಿ, ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ, ಪ್ರಬುದ್ಧ ಕರ್ನಾಟಕಗಳ ಸಂಪಾದಕ. ಇಂಗ್ಲೀಷ್- ಕನ್ನಡ ನಿಘಂಟಿನ ಸಂಪಾದನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. 1950- ಸೊಲ್ಲಾಪುರ ಸಮ್ಮೇಳನಾಧ್ಯಕ್ಷರು. ಎಂ. ಗೋವಿಂದ ಪೈ ( 1883- 1963) ಕನ್ನಡ ಅಧ್ಯಾಪಕರು. ಕೊಂಕಣಿ, ಇಂಗ್ಲೀಷ್, ಫ್ರೆಂಚ್, ಜರ್ಮನಿ, ಪರ್ಷಿಯನ್, ಸಂಸ್ಕೃತ, ಪ್ರಾಕೃತ ಭಾಷೆಗಳಲ್ಲಿ ಪರಿಶ್ರಮ. ಕನ್ನಡದ ಭೀಷ್ಮರೆಂದು ಪ್ರಸಿದ್ಧರು. ಸಂಶೋಧಕರೂ ಹೌದು. ಮದ್ರಾಸ್ ಸರ್ಕಾರದಿಂದ ರಾಷ್ಟ್ರಕವಿ ಗೌರವ ಪಡೆದಿದ್ದರು. 1951ರ ಮುಂಬಯಿ ಸಮ್ಮೇಳನ ಅಧ್ಯಕ್ಷರು. ಎಸ್. ಸಿ. ನಂದೀಮಠ (1900- 1975) ಅಧ್ಯಾಪಕರು, ಪ್ರಿನ್ಸಿಪಾಲರಾಗಿ ಸೇವೆ. ವಿದೇಶಗಳಲ್ಲಿ ಅಧ್ಯಯನ. ವಿದ್ವಾಂಸರು. ಬಹುಭಾಷಾ ಪಂಡಿತರು. ಬಾಗಲಕೋಟೆಯಲ್ಲಿ ಬಸವೇಶ್ವರ ಕಾಲೇಜು ಸ್ಥಾಪಿಸಿದರು.
ಗೌರವ ಡಿ.ಲಿಟ್ ಪದವಿ ಪುರಸ್ಕೃತರು. 1952- ಬೇಲೂರು ಸಮ್ಮೇಳನಾಧ್ಯಕ್ಷರು. ವಿ. ಸೀತಾರಾಮಯ್ಯ (1899-1983) ಮೈಸೂರು ವಿಶ್ವದ್ಯಾಲಯದಲ್ಲಿ ಮೇಷ್ಟ್ರಾಗಿದ್ದರು. ಆಕಾಶವಾಣಿ ನಿರ್ದೇಶಕರಾಗೂ ಕೆಲಸ ಮಾಡಿದರು. ಕವಿ, ವಿಮರ್ಶಕ, ಅರ್ಥಶಾಸ್ತ್ರಜ್ಞ. ಕನ್ನಡ, ಸಂಸ್ಕೃತ, ಇಂಗ್ಲಿಷ್ ಭಾಷೆಗಳಲ್ಲಿ ಪಾಂಡಿತ್ಯ. ಹಣ ಪ್ರಪಂಚ ಎಂಬ ಗ್ರಂಥ ಬರೆದಿದ್ದಾರೆ. ಪರಿಷತ್ತಿನೊಂದಿಗೆ ಒಡನಾಟ. ಕೋಶಾಧಿಕಾರಿಯಾಗಿದ್ದರು. ಕನ್ನಡ ನುಡಿ, ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆಗಳ ಸಂಪಾದಕರಾಗೂ ಕೆಲಸ ಮಾಡಿದರು. ಅಕಾಡೆಮಿ ಪ್ರಶಸ್ತಿ ಸಂದಿದೆ. 1953ರ ಕುಮಟಾ ಸಮ್ಮೇಳನದ ಅಧ್ಯಕ್ಷರು. ಕೆ. ಶಿವರಾಮ ಕಾರಂತ (1902-1997) ಕೈಯಾಡಿಸದ ಕ್ಷೇತ್ರವಿಲ್ಲ. ಸಾಹಿತಿ, ಚಿತ್ರಕಾರ, ಶಿಲ್ಪಿ, ನೃತ್ಯಗಾರ, ಯಕ್ಷಗಾನ ಪಟು. ಸಂಗೀತ ಕೂಡ ಗೊತ್ತಿತ್ತು. ನಿಷ್ಠುರವಾದಿ. ಸಿಕ್ಕಾಪಟ್ಟೆ ಪ್ರವಾಸ ಮಾಡಿದರು, ಬರೆದರು. ಮೂಕಜ್ಜಿಯ ಕನಸುಗಳು, ಬೆಟ್ಟದ ಜೀವ, ಮರಳಿ ಮಣ್ಣಿಗೆ ಇವರ ಪ್ರಸಿದ್ಧ ಕಾದಂಬರಿಗಳು. ಸಂಶೋಧಕ. ಗೌರವ ಡಾಕ್ಟರೇಟ್, ಪದ್ಮಭೂಷಣ ಹಾಗೂ ಜ್ಞಾನಪೀಠ ಸಿಕ್ಕಿವೆ. ಕಾರಂತಜ್ಜ, ಕಡಲ ತೀರದ ಭಾರ್ಗವ ಎಂಬ ಹೆಗ್ಗಳಿಕೆ. 1955ರ ಮೈಸೂರು ಸಮ್ಮೇಳನದ ಅಧ್ಯಕ್ಷರು. ಆದ್ಯ ರಂಗಾಚಾರ್ಯ (1904-1984) ಹೊರರಾಜ್ಯ, ಹೊರದೇಶದಲ್ಲಿ ಕಲಿತೂ ಕನ್ನಡತನವನ್ನು ಉಳಿಸಿಕೊಂಡವರು. ಪೂನಾ ಡೆಕ್ಕನ್ ಕಾಲೇಜಿನಲ್ಲಿ ಸಂಸ್ಕೃತ ಕಲಿತರು. ಇಂಗ್ಲೆಂಡಿನಲ್ಲಿ ಭಾಷಾಶಾಸ್ತ್ರ ಕಲಿತರು.
ಕರ್ನಾಟಕ ಕಾಲೇಜಿನಲ್ಲಿ ಪಾಠ ಮಾಡಿದರು. ಆಕಾಶವಾಣಿ ನಾಟಕ ವಿಭಾಗದ ನಿರ್ದೇಶಕ. ನಾಟಕಕಾರ, ಪ್ರಯೋಗಶೀಲ. ಅನೇಕ ಪ್ರಶಸ್ತಿ ಸಿಕ್ಕಿವೆ. ರಾಯಚೂರಿನಲ್ಲಿ 1955ರಲ್ಲಿ ನಡೆದ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಕುವೆಂಪು (1904-1994) ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಮೇಷ್ಟ್ರು, ಪ್ರಿನ್ಸಿಪಾಲರು, ಉಪ ಕುಲಪತಿಗಳಾಗಿ ಸೇವೆ. ರಸಋಷಿ ಎಂದೇ ಪ್ರಸಿದ್ಧರು, ರಾಷ್ಟ್ರಕವಿ ಎನಿಸಿಕೊಂಡ ಎರಡನೆಯವರು. ಜ್ಞಾನಪೀಠ, ಪಂಪ, ಕರ್ನಾಟಕ, ಪದ್ಮವಿಭೂಷಣ... ಪ್ರಶಸ್ತಿಗಳ ಪಟ್ಟಿ ದೊಡ್ಡದು.
1957- ಧಾರವಾಡ ಸಮ್ಮೇಳನಾಧ್ಯಕ್ಷರು. ವಿ.ಕೃ. ಗೋಕಾಕ ( 1909- 1992) ಆಕ್ಸ್ಫರ್ಡ್ ವಿವಿಯಲ್ಲಿ ಇಂಗ್ಲೀಷ್ ಎಂಎ ಪದವಿ ಪಡೆದ ಪ್ರಥಮ ಭಾರತೀಯ. ಇಂಗ್ಲೀಷ್ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ, ಬೆಂಗಳೂರು ವಿವಿ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಪದ್ಮಶ್ರೀ, ಜ್ಞಾನಪೀಠ ಪಡೆದಿದ್ದಾರೆ. ವಿನಾಯಕ ಕಾವ್ಯನಾಮದಿಂದ ಪ್ರಸಿದ್ಧರು. ಬಳ್ಳಾರಿ (1958) ಸಮ್ಮೇಳನಾಧ್ಯಕ್ಷರು. ಭಾರತ ಸಿಂಧೂರಶ್ಮಿ ಮತ್ತು ಸಮುದ್ರ ಗೀತೆಗಳು ಅವರ ಮುಖ್ಯ ಕೃತಿಗಳು.