ಬಾಗಲಕೋಟೆಯಲ್ಲಿ ಇವತ್ತು
ಬಾಗಲಕೋಟೆ: 68ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣಿಕೆಯಾಗಿ ಬಾಗಲಕೋಟೆಯಲ್ಲಿ ಕನ್ನಡ ಸಂಸ್ಕೃತಿ ಭವನವನ್ನು ಕೇಂದ್ರಸರ್ಕಾರ ನಿರ್ಮಿಸುವುದೆಂದು ಕೇಂದ್ರ ಪ್ರವಾಸೋದ್ಯಮ ಸಚಿವ ಅನಂತಕುಮಾರ್ ಭರವಸೆ ನೀಡಿದ್ದಾರೆ.
ಸಂಸ್ಕೃತಿ ಭವನ ನಿರ್ಮಾಣಕ್ಕೆ ಜಾಗೆಯನ್ನು ಗೊತ್ತುಪಡಿಸಿದರೆ, ಒಂದೆರಡು ತಿಂಗಳಲ್ಲೇ ಹಣ ಬಿಡುಗಡೆ ಮಾಡಿ ಶಿಲಾನ್ಯಾಸ ಮಾಡಲಾಗುವುದು ಎಂದು ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅನಂತಕುಮಾರ್ ಹೇಳಿದರು. ಸಂಸ್ಕೃತಿ ಭವನದ ನಿರ್ಮಾಣ ಪರಿಷತ್ತು ಅಥವಾ ರಾಜ್ಯ ಸರ್ಕಾರದ ಕೆಲಸ ಮಾತ್ರವಲ್ಲ , ಕೇಂದ್ರ ಸರ್ಕಾರದ ಕರ್ತವ್ಯವೂ ಆಗಿದೆ ಎಂದರು.
ಆಡಳಿತದಲ್ಲಿ ಕಡ್ಡಾಯ ಕನ್ನಡ ಶಾಸನಕ್ಕೆ ಒತ್ತಾಯ : ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಲ್ಲಾ ಉನ್ನತ ಅಧಿಕಾರಿಗಳು ಕನ್ನಡದಲ್ಲೇ ಕಡ್ಡಾಯವಾಗಿ ವ್ಯವಹರಿಸುವ ಶಾಸನವನ್ನು ರಾಜ್ಯ ಸರ್ಕಾರ ಜಾರಿಗೆ ತರಬೇಕೆಂದು ಅನಂತಕುಮಾರ್ ಒತ್ತಾಯಿಸಿದರು. ಹೈಕೋರ್ಟ್ ಪೀಠ, ಆಲಮಟ್ಟಿ ಅಣೆಕಟ್ಟೆ ಮುಂತಾದ ರಾಜ್ಯದ ಹಿತಾಸಕ್ತಿಯ ವಿಷಯಗಳಲ್ಲಿ ಪಕ್ಷಭೇದ ಎನ್ನುವುದಿಲ್ಲ . ಈ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ನಾವೆಲ್ಲಾ ರಾಜ್ಯಸರ್ಕಾರದ ಬೆನ್ನಿಗಿದ್ದೇವೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಪ್ರಾಂತ್ಯದ ಯೋಜನೆಗಳಿಗೆ ಸರ್ಕಾರ ವಿಶೇಷ ಒತ್ತು ನೀಡುವ ಮೂಲಕ ಪ್ರಾದೇಶಿಕ ಅಸಮಾನತೆಯನ್ನು ಅಳಿಸಬೇಕು ಎಂದು ಮತ್ತೊಬ್ಬ ಅತಿಥಿ, ವಿಧಾನಸಭೆ ವಿರೋಧಪಕ್ಷದ ನಾಯಕ ಜಗದೀಶ್ ಶೆಟ್ಟರ್ ಸರ್ಕಾರಕ್ಕೆ ಮನವಿ ಮಾಡಿಕೊಂಡರು. ವಿಧಾನಪರಿಷತ್ತಿನ ವಿರೋಧಿ ನಾಯಕ ಕೆ.ಎಚ್. ಶ್ರೀನಿವಾಸ್ ಕೂಡ ಅನಂತಕುಮಾರ್ ಹಾಗೂ ಶೆಟ್ಟರ್ ಅವರ ಮಾತುಗಳಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.
ಶಾಂತಾದೇವಿಗೆ ಸನ್ಮಾನ : ಸಮ್ಮೇಳನಾಧ್ಯಕ್ಷೆ ಶಾಂತಾದೇವಿ ಮಾಳವಾಡ ಅವರಿಗೆ ಶಾಲು ಹೊದಿಸಿ, ನೆನಪಿನ ಕಾಣಿಕೆಯಾಂದಿಗೆ ಒಂದು ಲಕ್ಷ ರುಪಾಯಿ ಮೊತ್ತವನ್ನು ಪರಿಷತ್ತಿನ ಪರವಾಗಿ ಅನಂತಕುಮಾರ್ ಅರ್ಪಿಸಿ ಸಮ್ಮೇಳನಾಧ್ಯಕ್ಷೆಗೆ ಗೌರವ ಸೂಚಿಸಿದರು. ಲಕ್ಷ ರುಪಾಯಿ ಗೌರವಧನವನ್ನು ಪರಿಷತ್ತಿನ ವಿವಿಧ ಯೋಜನೆಗಳಿಗೆ ಒದಗಿಸುವುದಾಗಿ ಶಾಂತಾದೇವಿ ಆಶ್ವಾಸನೆ ನೀಡಿದರು.