ಲಾಠಿ ಬೀಸಿ ಯುವಕರನ್ನು ಹೊರದೂಡಿದರು.
ಬಾಗಲಕೋಟೆ : ಹೈಕೋರ್ಟ್ ಪೀಠ ಸ್ಥಾಪನೆ ಹಾಗೂ ನೈಋತ್ಯ ವಲಯ ರೈಲ್ವೆ ಕಚೇರಿಗಾಗಿ ಒತ್ತಾಯಿಸಿ ನಡೆಯುತ್ತಿರುವ ಚಳವಳಿಯ ಬಿಸಿ ಸಾಹಿತ್ಯ ಸಮ್ಮೇಳನಕ್ಕೆ ಅಷ್ಟಾಗಿ ತಟ್ಟಲಿಲ್ಲ. ಚಳವಳಿಯ ಕಾರಣ ಮತ್ತೆ ಮುಂದಕ್ಕೆ ಹೋಗಬಹುದು, ಅಕಸ್ಮಾತ್ ಸಮ್ಮೇಳನ ನಡೆದರೆ, ಮುಖ್ಯಮಂತ್ರಿಗಳು ಬಂದರೆ ಭಾರಿ ಪ್ರಮಾಣದಲ್ಲಿ ಗಲಭೆ ನಡೆಯ ಬಹುದು ಎಂಬ ಶಂಕೆ ಸುಳ್ಳಾಯಿತು. ಶಾಂತಿ ಪ್ರಿಯರಾದ ಕನ್ನಡಿಗರು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಯಾವುದೇ ರೀತಿಯ ಅಡ್ಡಿ ಆತಂಕಗಳನ್ನು ಒಡ್ಡಲಿಲ್ಲ. ಆದರೆ ಪೂರ್ಣ ಚಂದ್ರನಲ್ಲೂ ಕಳಂಕ ಇರುವಂತೆ, ಸಮ್ಮೇಳನದಲ್ಲಿ ಸಣ್ಣ ಗುಂಪೊಂದು ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರಿಗೆ ಕಪ್ಪು ಬಾವುಟ ತೋರಿಸಿ, ಬೇಡಿಕೆ ಈಡೇರಿಸುವಂತೆ ಆಗ್ರಹ ಪಡಿಸಿ, ಪೊಲೀಸರ ಬೆತ್ತಕ್ಕೆ ಆಹಾರವಾಯಿತು.
ಶನಿವಾರ (ಜೂನ್ 24) 68ನೇ ಸಾಹಿತ್ಯ ಸಮ್ಮೇಳನದಲ್ಲಿ ಉದ್ಘಾಟನಾ ಭಾಷಣ ಮಾಡಲು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಮುಂದಾದಾಗ ಸುಮಾರು 15 ಜನರಿದ್ದ ಯುವಕರ ಗುಂಪು ಕಪ್ಪು ಬಾವುಟ ಹಿಡಿದು ಹೈಕೋರ್ಟ್ ಪೀಠಕ್ಕೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು. ತತ್ಕ್ಷಣವೇ ಕಾರ್ಯ ಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ಧಾವಿಸಿ, ಲಾಠಿ ಬೀಸಿ ಯುವಕರನ್ನು ಹೊರದೂಡಿದರು. ನಂತರ ಕೃಷ್ಣ ನಿರಾತಂಕವಾಗಿ ಭಾಷಣ ಮಾಡಿದರು.