VD Satheesan: ಎನ್ಎಸ್ಯುಐಯಿಂದ ಕೇರಳಂ ಸಿಎಂವರೆಗೆ; ವಿಡಿ ಸತೀಶನ್ ರಾಜಕೀಯ ಪಯಣಕ್ಕೆ ಸಿದ್ದರಾಮಯ್ಯ ಮೆಚ್ಚುಗೆ
ಬೆಂಗಳೂರು: ಕೇರಳಂ ರಾಜ್ಯದಲ್ಲಿ ಪ್ರಚಂಡ ಬಹುಮತ ಬಳಿಕ ಸಿಎಂ ಯಾರಾಗಬೇಕು ಎಂಬುದಕ್ಕೆ ತೆರೆ ಬಿದ್ದಿದೆ. ಇಂದು ಗುರುವಾರ (ಮೇ 14) ಕಾಂಗ್ರೆಸ್ ಪಕ್ಷದಿಂದ ವಿ.ಡಿ.ಸತೀಶನ್ ಅವರನ್ನು ಕೇರಳಂ ಮುಖ್ಯಮಂತ್ರಿ ಆಗಿ ಆಯ್ಕೆ ಮಾಡಲಾಗಿದ್ದು, ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರು ಅಭಿನಂದನೆ ತಿಳಿಸಿದ್ದಾರೆ. ತೆಲಂಗಾಣ ಕಾಂಗ್ರೆಸ್, ಕರ್ನಾಟಕ ಕಾಂಗ್ರೆಸ್ ನಾಯಕರು ವಿಶ್ ಮಾಡಿದ್ದಾರೆ.
ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣ ಎಕ್ಸ್ ಪೋಸ್ಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ನೂತನ ಸಿಎಂ ವಿಡಿ ಸತೀಶನ್ ಅವರು ವಿದ್ಯಾರ್ಥಿಯಾಗಿರುವಾಗಲೇ ಎನ್ಎಸ್ಯುಐ ಮೂಲಕ ರಾಜಕೀಯ ರಂಗ ಪ್ರವೇಶಿಸಿ, ಬಳಿಕ 6 ಬಾರಿ ಶಾಸಕರಾಗಿ, 2021 ರಿಂದ 2026ರ ವರೆಗೆ ವಿರೋಧ ಪಕ್ಷದ ನಾಯಕರಾಗಿ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಿದ್ದ ಸತೀಶನ್ ಅವರ ರಾಜಕೀಯ ಅನುಭವ, ಸಂಘಟನಾಶೀಲತೆ, ಜನಸಾಮಾನ್ಯರ ಜೊತೆಗಿನ ಒಡನಾಟವು ಅವರನ್ನು ಇಲ್ಲಿಯವರೆಗೆ ಕೈಹಿಡಿದು ನಡೆಸಿದೆ ಎಂದು ಭಾವಿಸಿದ್ದೇನೆ.

ಸತೀಶನ್ ಅವರ ನಾಯಕತ್ವದಲ್ಲಿ ಕೇರಳಂನಲ್ಲಿ ನಮ್ಮ ಪಕ್ಷವು ಜಾತ್ಯತೀತ, ಸಾಮಾಜಿಕ ನ್ಯಾಯದ ಆಶಯಗಳಡಿ ಸರ್ವರನ್ನೂ ಒಳಗೊಂಡ ಸಮಗ್ರ ಅಭಿವೃದ್ಧಿಯ ಆಡಳಿತ ನೀಡಲಿದೆ ಎಂಬ ಪೂರ್ಣ ವಿಶ್ವಾಸವಿದೆ. ಒಕ್ಕೂಟ ತತ್ವದಡಿ ಎರಡೂ ರಾಜ್ಯಗಳ ಮತ್ತು ರಾಷ್ಟ್ರದ ಹಿತಕ್ಕಾಗಿ ಜೊತೆಸೇರಿ ಕೆಲಸ ಮಾಡೋಣ. ಕೇರಳಂನ ಜನತೆಗೆ ಹಾಗೂ ನೂತನ ಮುಖ್ಯಮಂತ್ರಿಗಳಿಗೆ ಅಭಿನಂದನೆಗಳು' ಎಂದು ಅವರು ತಿಳಿಸಿದ್ದಾರೆ.
ನಿಜವಾದ ಗಾಂಧಿವಾದಿ: ತೆಲಂಗಾಣ ಕಾಂಗ್ರೆಸ್
ತೆಲಂಗಾಣ ಕಾಂಗ್ರೆಸ್ ವತಿಯಿಂದ ನೂತನ ಕೇರಳಂ ಮುಖ್ಯಮಂತ್ರಿಗಳಿಗೆ ಅಭಿನಂದನೆ ತಿಳಿಸಿದೆ. ಆರು ಬಾರಿ ಶಾಸಕರಾಗಿ, ಪ್ರಮುಖ ನಾಯಕರಾಗಿ, ವಿಪಕ್ಷ ನಾಯಕ ಸ್ಥಾನ ತುಂಬಿದ್ದ ವಿಡಿ ಸತೀಶನ್ ಅವರು ಕೇರಳಂ ರಾಜ್ಯದಲ್ಲಿ ಆಡಳಿತ ಚುಕ್ಕಾಣೆ ಹಿಡಿದ್ದಾರೆ. ಇವರು'ನಿಜವಾದ ಗಾಂಧಿವಾದಿ' ಎಂದು ತಿಳಿಸಿದೆ.
ಪ್ರಜಾಪ್ರಭುತ್ವ ಮೌಲ್ಯಗಳ ಪ್ರತಿಬಿಂಬ
ಕರ್ನಾಟಕ ಸಚಿವ ಎಂಬಿ ಪಾಟೀಲ್ ಅವರು ಕೇರಳದ ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ವಿಡಿ ಸತೀಶನ್ ಅವರಿಗೆ ಹೃತ್ಪೂರ್ವಕ ಅಭಿನಂದನೆ ತಿಳಿಸಿದ್ದಾರೆ. ಶಾಸಕರಾಗಿ ಆರು ಬಾರಿ ಮತ್ತು ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿರುವ ಅವರು, NSUI ನಿಂದ ಈ ಅತ್ಯುನ್ನತ ನಾಯಕತ್ವದ ಪಾತ್ರಕ್ಕೆ ಬಂದಿರುವುದು ಸಾರ್ವಜನಿಕ ಸೇವೆ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳಿಗೆ ಅವರ ಆಳವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದರು.
ಅವರ ನಾಯಕತ್ವದಲ್ಲಿ ಕೇರಳ ಪ್ರಗತಿಪರ ಆಡಳಿತ, ಸಾಮಾಜಿಕ ನ್ಯಾಯ, ಸಮಗ್ರ ಬೆಳವಣಿಗೆ ಮತ್ತು ಕಲ್ಯಾಣದ ಹಾದಿಯಲ್ಲಿ ಮುಂದುವರಿಯುತ್ತದೆ ಎಂದು ನನಗೆ ವಿಶ್ವಾಸವಿದೆ ಎಂದು ಕೇರಳ ಜನರಿಗೆ, ನೂತನ ಸಿಎಂಗೆ ಶುಭಕೋರಿದ್ದಾರೆ.













Click it and Unblock the Notifications