Get Updates
Get notified of breaking news, exclusive insights, and must-see stories!

Doctors Day 2024: ಜುಲೈ 1ರಂದು ವೈದ್ಯರ ದಿನಾಚರಣೆ ಯಾಕೆ? ಗುಲಾಬಿ ಹೂ ನೀಡುವುದೇಕೆ?

ವೈದ್ಯಕೀಯ ಒಂದು ವೃತ್ತಿಯಲ್ಲ, ಅದು ಅರಿವು, ಮಾನವೀಯತೆ, ಶ್ರದ್ಧೆ ಹಾಗೂ ಸೇವಾಮನೋಭಾವ ಮೇಳೈಸಿರುವ ಸೇವೆ. ವೈದ್ಯನಾದವನಿಗೆ ಹದ್ದಿನ ಕಣ್ಣುಗಳು, ಸಿಂಹದ ಹೃದಯ ಹಾಗೂ ಹೆಣ್ಣಿನ ಕೋಮಲ ಕರಗಳಿರಬೇಕಾಗುತ್ತದೆ. ಆಗ ಮಾತ್ರ ಅವನು ವೃತ್ತಿಗೆ ನ್ಯಾಯವನ್ನು ಒದಗಿಸಬಲ್ಲನು. ವೈದ್ಯನು ಸದಾ ಜಾಗೃತನಾಗಿರಬೇಕು. ಅವನು ಮಾಡಬಹುದಾದ ಒಂದು ಸಣ್ಣ ತಪ್ಪು ಒಂದು ಜೀವಕ್ಕೆ (ತನ್ಮೂಲಕ ಒಂದು ಕುಟುಂಬಕ್ಕೆ) ಕುತ್ತಾಗಬಹುದು. ಹೀಗಾಗಿ ಪ್ರತಿ ಕ್ಷಣದಲ್ಲಿಯೂ ಮೈಯೆಲ್ಲ ಕಣ್ಣಾಗಿಟ್ಟುಕೊಂಡಿರಬೇಕು.

ವೈದ್ಯನು ಸದಾ ಒತ್ತಡದಲ್ಲಿರುವುದು ಅನಿವಾರ್ಯ. ಆದರೂ ತಾನು ಎಷ್ಟೇ ಒತ್ತಡದಲ್ಲಿರಲಿ, ಅದನ್ನು ತೋರಿಸಿಕೊಳ್ಳುವ ಹಾಗಿಲ್ಲ. ರೋಗಿಗೆ ಚಿಕಿತ್ಸೆಯನ್ನು ಹಾಗೂ ನೋವಿನಲ್ಲಿ ಪಾಲ್ಗೊಂಡು ಸಾಂತ್ವಾನವನ್ನು ನೀಡಬೇಕಾಗುತ್ತದೆ. ಇದು ವೈದ್ಯರ ಕುರಿತಂತೆ ಡಾ.ನಾ.ಸೋಮೇಶ್ವರ್ ಹೇಳಿರುವ ಮಾತುಗಳಾಗಿವೆ. ಅವತ್ತಿಂದ ಇವತ್ತಿನವರೆಗೆ ವೈದ್ಯರು ರೋಗಿಗಳ ಪಾಲಿನ ದೇವರಾಗಿಯೇ ಉಳಿದಿದ್ದಾರೆ. ಆಧುನಿಕ ಬದುಕಿನಲ್ಲಿ ಹೊಸ ಹೊಸ ಕಾಯಿಲೆಗಳು ಹುಟ್ಟಿಕೊಳ್ಳುತ್ತಿದ್ದು ಅದಕ್ಕೆ ತಕ್ಕಂತೆ ಚಿಕಿತ್ಸೆ ನೀಡಿ ಗುಣಪಡಿಸುವುದು ವೈದ್ಯರಿಗೆ ಸವಾಲಾಗಿದೆ.

Why is Doctors Day Celebrated On July 1 Why Give Roses Today

ಎಲ್ಲ ಕ್ಷೇತ್ರಗಳು ವಾಣಿಜ್ಯಕರಣವಾಗುತ್ತಿದ್ದು ಅದರಂತೆ ಆರೋಗ್ಯ ಕ್ಷೇತ್ರವೂ ಬಂಡವಾಳ ಹಾಕಿ ಆದಾಯ ತೆಗೆಯುವ ಉದ್ಯಮವಾಗುತ್ತಿದೆ. ಹೆಚ್ಚಿನ ಆದಾಯ ತರುವ ಕ್ಷೇತ್ರವಾಗಿ ಗುರುತಿಸಿಕೊಳ್ಳುತ್ತಿರುವ ಕಾರಣದಿಂದಾಗಿ ಉದ್ಯಮಿಗಳು ಆರೋಗ್ಯ ಕ್ಷೇತ್ರದ ಮೇಲೆ ಬಂಡವಾಳ ಹೂಡುತ್ತಿರುವುದು ಗಮನಾರ್ಹವಾಗಿದೆ. ಇನ್ನೊಂದೆಡೆ ವೃತ್ತಿ ನಿರತ ವೈದ್ಯರು ಕೂಡ ಸಣ್ಣಪುಟ್ಟ ಕ್ಲಿನಿಕ್, ಆಸ್ಪತ್ರೆಗಳನ್ನು ನಿರ್ಮಿಸಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಇದೆಲ್ಲದರ ನಡುವೆಯೂ ತಮ್ಮ ವೃತ್ತಿಯನ್ನು ಸೇವೆಯಂತೆ ಪರಿಗಣಿಸಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು ಬಹಳಷ್ಟು ಮಂದಿಯಿದ್ದಾರೆ.

ವೈದ್ಯ ವೃತ್ತಿಗೆ ನ್ಯಾಯ ಒದಗಿಸಬೇಕು

ಸರ್ಕಾರಿ ಆಸ್ಪತ್ರೆಯಿರಲಿ, ಖಾಸಗಿ ಆಸ್ಪತ್ರೆಯಿರಲಿ ವೈದ್ಯ ಎಲ್ಲಿಯೇ ಕೆಲಸ ಮಾಡುತ್ತಿರಲಿ ಆತ ಸಮಾಜದಲ್ಲಿ ತಮ್ಮ ಸ್ಥಾನವನ್ನು ಅರಿತುಕೊಳ್ಳಬೇಕು. ಜತೆಗೆ ಸೇವೆಯ ಪ್ರತಿಜ್ಞೆ ಸ್ವೀಕರಿಸಿರುವುದನ್ನು ನೆನಪಿಸಿಕೊಂಡು ವೃತ್ತಿಗೆ ನ್ಯಾಯವನ್ನು ಒದಗಿಸಬೇಕಾಗುತ್ತದೆ. ಹೀಗೆ ಮಾಡುವ ವೈದ್ಯ ಬರೀ ವೈದ್ಯನಾಗಿ ಉಳಿಯದೆ ರೋಗಿಗಳ ಪಾಲಿನ ದೇವರಾಗಿ ಬಿಡುತ್ತಾನೆ. ಇವತ್ತು ನಮ್ಮ ನಿಮ್ಮ ನಡುವೆ ಲಕ್ಷಾಂತರ ಮಂದಿ ವೈದ್ಯರಿದ್ದರೂ ಕೆಲವೇ ಕೆಲವರು ಮಾತ್ರ ಸಾರ್ವಜನಿಕವಾಗಿ ಗುರುತಿಸಿಕೊಳ್ಳುತ್ತಿದ್ದಾರೆ ಎಂದರೆ ಅದಕ್ಕೆ ಅವರು ವೃತ್ತಿಯನ್ನು ವೃತ್ತಿಯಾಗಿ ಸ್ವೀಕರಿಸದೆ ಸೇವೆಯಾಗಿ ಪರಿಗಣಿಸಿದ್ದೇ ಕಾರಣ ಎಂದರೆ ತಪ್ಪಾಗಲಾರದು.

ಪ್ರತಿ ವೈದ್ಯನಿಗೂ ತನ್ನದೇ ಗೌರವ, ಘನತೆ ಇದ್ದೇ ಇರುತ್ತೆ ಅದನ್ನು ಮನಗಂಡು ವೈದ್ಯರು ಕಾರ್ಯನಿರ್ವಹಿಸಬೇಕಾಗುತ್ತದೆ ಆಗ 'ವೈದ್ಯೋ ನಾರಾಯಣೋ ಹರಿಃ' ಮಾತಿಗೆ ಅರ್ಥಬರುತ್ತದೆ. ಇವತ್ತು ಭಾರತದಲ್ಲಿ ಜುಲೈ 1ನ್ನು ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತಿದೆ ಎನ್ನುವುದಾದರೆ ಅದಕ್ಕೆ ಕಾರಣವಾಗಿರುವುದು ಒಬ್ಬ ವೈದ್ಯರೇ... ಅವರು ಬೇರೆ ಯಾರು ಅಲ್ಲ ಭಾರತರತ್ನ ಡಾ.ಬಿದನ್ ಚಂದ್ರ ರಾಯ್. ಇವರ ಜಯಂತಿಯಾದ ಜುಲೈ1ನ್ನು ಭಾರತದಲ್ಲಿ ವೈದ್ಯರ ದಿನಾಚರಣೆಯನ್ನಾಗಿ ಆಚರಿಸುತ್ತಾ ಬರಲಾಗುತ್ತಿದೆ.

ವೈದ್ಯರಿಗೆ ಗುಲಾಬಿ ಹೂ ನೀಡುವುದೇಕೆ?

ವೈದ್ಯ ವೃತ್ತಿ ಎನ್ನುವುದು ಪವಿತ್ರವಾದ ವೃತ್ತಿ. ಅದಕ್ಕೆ ತನ್ನದೇ ಆದ ಗೌರವ, ಜವಬ್ದಾರಿ ಎಲ್ಲವೂ ಇದೆ. ಹೀಗಾಗಿ ವೈದ್ಯರು ಒಂದು ಕ್ಷಣ ಎಚ್ಚರ ತಪ್ಪಿದರೂ ಅದರಿಂದ ಭಾರೀ ಅನಾಹುತ ಸಂಭವಿಸಿ ಬಿಡುತ್ತದೆ. ಹೀಗಾಗಿ ಪವಿತ್ರ ವೃತ್ತಿಯಾಗಿರುವ ವೈದ್ಯ ವೃತ್ತಿಯನ್ನು ಮಾಡುವ ಎಲ್ಲಾ ವೈದ್ಯರು ಒಂದೆಡೆ ಕಲೆತು ವೈದ್ಯರ ದಿನಾಚರಣೆ ಸಂದರ್ಭ ಮನನ ಮಾಡಿಕೊಳ್ಳಲು ವೈದ್ಯರ ದಿನದ ಆಚರಣೆಯಿಂದ ಅವಕಾಶ ದೊರೆತಂತಾಗಿದೆ.

Why is Doctors Day Celebrated On July 1 Why Give Roses Today

ವೈದ್ಯರ ದಿನಾಚರಣೆಯನ್ನು ಭಾರತದಲ್ಲಿ ಜುಲೈ 1ರಂದು ಆಚರಿಸಿದರೆ, ಅಮೆರಿಕದಲ್ಲಿ ಮಾರ್ಚ್ 30ರಂದು ಆಚರಿಸುತ್ತಾರೆ. ಏಕೆಂದರೆ ಮಾರ್ಚ್, 30-1842 ರಂದು ಡಾ.ಕ್ರಾಫರ್ಡ್ ಡಬ್ಲ್ಯು ಲಾಂಗ್ ಎನ್ನುವವರು ಮೊದಲ ಬಾರಿಗೆ ಅರಿವಳಿಕೆಯನ್ನು (ಅನಸ್ತೇಸಿಯಾ) ಪರಿಣಾಮಕಾರಿಯಾಗಿ ಬಳಸಿ ಒಂದು ಶಸ್ತ್ರಚಿಕಿತ್ಸೆಯನ್ನು ಮಾಡಿದರಂತೆ. ಈ ಮಹತ್ವದ ದಿನವನ್ನು ಅವರು ರಾಷ್ಟ್ರೀಯ ವೈದ್ಯ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದಾರೆ. ಅಂದು ಅಲ್ಲಿ ರೋಗಿಗಳು ಮತ್ತು ಸಾರ್ವಜನಿಕರು ವೈದ್ಯರಿಗೆ ಕೆಂಪು ಗುಲಾಬಿ ಹೂವು ನೀಡಿ ಶುಭಾಶಯ ಹೇಳುತ್ತಾರಂತೆ ಕಾರಣ ಕೆಂಪು ಗುಲಾಬಿ ಪ್ರೀತಿ, ತ್ಯಾಗ, ಧೈರ್ಯ, ಸಾಹಸ ಹಾಗೂ ಸೇವೆಯ ಪ್ರತೀಕವಂತೆ.

ಜು.1ರಂದು ವೈದ್ಯರ ದಿನಾಚರಣೆ ಏಕೆ?

ಭಾರತೀರಯರಾದ ನಾವು ಜುಲೈ1ನ್ನು ವೈದ್ಯರ ದಿನಾಚರಣೆಯನ್ನಾಗಿ ಆಚರಿಸುವುದರ ಹಿಂದೆ ಹಲವು ಮಹತ್ವದ ಸಂಗತಿಗಳಿವೆ. ಅದು ಮೇಲ್ನೋಟಕ್ಕೆ ಡಾ.ಬಿದನ್ ಚಂದ್ರ ರಾಯ್ ಅವರ ಜನ್ಮದಿನವಾದರೂ ಆ ದಿನವನ್ನು ಆಯ್ಕೆ ಮಾಡಿಕೊಳ್ಳಲು ಹಲವು ಕಾರಣಗಳಿವೆ. ಡಾ.ಬಿದನ್ ಚಂದ್ರ ರಾಯ್ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಮಾಹಾತ್ಮ ಗಾಂಧೀಜಿಯವರ ಖಾಸಗಿ ವೈದ್ಯರಾಗಿದ್ದವರು. ಅವರು ಲಂಡನ್ ನಿಂದ ಎಫ್.ಆರ್.ಸಿ.ಎಸ್ ಹಾಗೂ ಎಂ.ಆರ್.ಸಿ.ಪಿ ಪದವಿಗಳೆರಡನ್ನೂ ಪಡೆದ ತಜ್ಞವೈದ್ಯ, ಶಸ್ತ್ರಚಿಕಿತ್ಸಕರಾಗಿದ್ದರು.

ಇವರು ಅನೇಕ ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸುವುದರೊಂದಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳಾಗಿ ಜನಸೇವೆಯೊಂದಿಗೆ ಪ್ರತಿ ದಿನ ಸುಮಾರು 2 ಗಂಟೆಗಳ ಕಾಲ ರೋಗಿಗಳಿಗೆ ಉಚಿತ ಚಿಕಿತ್ಸೆಯನ್ನು ನೀಡುತ್ತಿದ್ದರು ಎನ್ನುವುದನ್ನು ಗಮನಿಸಿದರೆ ಅವರು ವೃತ್ತಿಯನ್ನು ಎಷ್ಟು ಪ್ರೀತಿಸುತ್ತಿದ್ದರು ಮತ್ತು ಆ ಮೂಲಕ ಆರೋಗ್ಯ ಸೇವೆಯನ್ನು ಉಸಿರಾಗಿಸಿಕೊಂಡಿದ್ದರು ಎನ್ನುವುದು ಗೊತ್ತಾಗುತ್ತಿದೆ. ಅವರು ಜುಲೈ 1, 1882ರಲ್ಲಿ ಜನಿಸಿ ಜುಲೈ 1, 1962ರಂದು ವಿಧಿವಶರಾದರು. ಆದರೆ ಅವರು ಹುಟ್ಟಿದ ತಾರೀಕಿನಂದೇ ಇಹಲೋಕ ತ್ಯಜಿಸಿದ್ದು ವಿಶೇಷ. ಅವರ ನೆನಪು ಚಿರವಾಗಿರಲೆಂದೇ ವೈದ್ಯರ ದಿನಾಚರಣೆಯನ್ನು ಭಾರತದಲ್ಲಿ ಆಚರಿಸಲಾಗುತ್ತಿದೆ.

ವೃತ್ತಿಧರ್ಮ ಪಾಲಿಸುತ್ತಿರುವ ವೈದ್ಯರಿಗೆ ನಮನ

ಇವತ್ತು ವೈದ್ಯಲೋಕ ಅಗಾಧವಾಗಿ ಬೆಳೆದಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕಾಣಸಿಗುವ ಆರೋಗ್ಯ ಕೇಂದ್ರದಿಂದ ಆರಂಭವಾಗಿ ಸೂಪರ್ ಸ್ಪೆಷಾಲಿಟಿ, ಹೈಟೆಕ್ ಆಸ್ಪತ್ರೆಗಳು ನಮ್ಮ ದೇಶದಲ್ಲಿವೆ. ವೈದ್ಯಕೀಯ ಕಾಲೇಜುಗಳು ಪ್ರತಿವರ್ಷ ಲಕ್ಷಾಂತರ ವೈದ್ಯರನ್ನು ತಯಾರು ಮಾಡಿ ಕಳುಹಿಸುತ್ತಿದೆ. ಹೀಗಾಗಿ ವೈದ್ಯಕೀಯ ಕ್ಷೇತ್ರ ವಿಶಾಲವಾಗುತ್ತಿದೆ. ಇದೆಲ್ಲದರ ನಡುವೆ ಬಡವರ ಸೇವೆ ಮಾಡುತ್ತಾ ತಮ್ಮ ವೃತ್ತಿಧರ್ಮ ಪಾಲಿಸುತ್ತಿರುವ ವೈದ್ಯರು ಬಡ, ಅನಾಥ, ವೃದ್ಧಾಶ್ರಮಗಳಿಗೆ ತೆರಳಿ ಚಿಕಿತ್ಸೆ ನೀಡುತ್ತಾ ಇನ್ನೊಂದೆಡೆ ಬಡ ರೋಗಿಗಳಿಗೆ ಹೊರೆಯಾಗದಂತೆ ಆರೋಗ್ಯ ಸೇವೆ ನೀಡುವ ವೈದ್ಯರೂ ಇದ್ದಾರೆ. ಇವರೆಲ್ಲರಿಗೂ ನಮನವನ್ನು ಸಲ್ಲಿಸಬೇಕಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+