Government Jobs: ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್
Government Jobs: ಸರ್ಕಾರಿ ಹುದ್ದೆಗಳ ನೇರ ನೇಮಕಾತಿ ಭರ್ತಿ ವಿಚಾರದಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ. ಸರ್ಕಾರದ ಹಲವು ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳ ನೇಮಕ ಪ್ರಕ್ರಿಯೆಗಳನ್ನ ನಿರ್ದಿಷ್ಟ ಸಮಯದೊಳಗೆ ಪೂರ್ಣಗೊಳಿಸಲು ಅನುಕೂಲವಾಗುವಂತೆ ಕಳೆದ ಅಕ್ಟೋಬರ್ನಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಮಾಡಲಾಗಿತ್ತು.
ಕರ್ನಾಟಕ ರಾಜ್ಯದ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ವೊಂದು ಸಿಕ್ಕಿದ್ದು, ಇನ್ಮುಂದೆ ವೇಳಾಪಟ್ಟಿ ಪ್ರಕಾರ ಪ್ರತಿ ವರ್ಷ ಸರ್ಕಾರಿ ಹುದ್ದೆಗಳ ನೇಮಕ ಪ್ರಕ್ರಿಯೆಗಳನ್ನು ಮುಗಿಸಬೇಕೆಂದು ಸರ್ಕಾರ ಎಲ್ಲಾ ಪ್ರಾಧಿಕಾರಗಳಿಗೆ ಸೂಚನೆ ನೀಡಿದೆ.

ಈಗಿನ ನಿರ್ಧಾರದಂತೆ ಆಯ್ಕೆ ಪ್ರಾಧಿಕಾರ ಪ್ರತಿ ವರ್ಷ ಹುದ್ದೆಗಳನ್ನ ಬಿಡುಗಡೆ ಮಾಡುವ ಬಗ್ಗೆ ನೇಮಕ ಪ್ರಾಧಿಕಾರಗಳು ನೇಮಕ ಪ್ರಕ್ರಿಯೆ ಪೂರ್ಣಗೊಳಿಸಲು ಅನುಕೂಲ ಆಗುವಂತೆ ಅನುಸರಿಸಬೇಕಾದ ವಾರ್ಷಿಕ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ವರ್ಷವಾರು ಖಾಲಿ ಹುದ್ದೆ ಭರ್ತಿ ಮಾಡದ ಹಿನ್ನೆಲೆ ಖಾಲಿ ಹುದ್ದೆಗಳ ಸಂಖ್ಯೆ ಹೆಚ್ಚಾಗಿವೆ.
ಸರ್ಕಾರದ ಖಾಲಿ ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆಯ ಕಾಲಮಿತಿಯ ಶಿಸ್ತು ಇಲ್ಲದ ಹಿನ್ನೆಲೆ ವರ್ಷಪೂರ್ತಿ ಈ ಪ್ರಕ್ರಿಯೆಗಳು ನಡೆಯುತ್ತಿವೆ. ಈ ಹಿನ್ನೆಲೆ ನಿರುದ್ಯೋಗಿಗಳು ಆರ್ಥಿಕ ಸಮಸ್ಯೆಯಿಂದ ಬಾಡಿ ಬೆಂಡಾಗಿ, ನಿರುತ್ಸಾಹಗೊಂಡು ಯಾವ ಸರ್ಕಾರದ ಮೇಲೂ ಬರವಸೆ ಇಡಲು ಸಾಧ್ಯ ಆಗದ ಮಟ್ಟಕ್ಕೆ ತಲುಪಿದ್ದಾರೆ. ಈ ಹಿನ್ನೆಲೆ ಪ್ರತಿ ಹಂತವನ್ನು ನಿರ್ದಿಷ್ಟ ತಿಂಗಳಲ್ಲೇ ಕೈಗೊಳ್ಳಬೇಕು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ನೇರ ನೇಮಕ ಪರೀಕ್ಷೆಗಳ ವೇಳಾಪಟ್ಟಿಯನ್ನ ಆಯ್ಕೆ ಪ್ರಾಧಿಕಾರಗಳಾದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಕರ್ನಾಟಕ ಲೋಕಸೇವಾ ಆಯೋಗ, ಇತರೆ ಆಯ್ಕೆ ಪ್ರಾಧಿಕಾರಗಳು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸ್ಪಷ್ಟ ಸೂಚನೆಗಳನ್ನ ನೀಡಿದೆ ಹಾಗೂ ಇಲಾಖೆಗಳ ಅಪರ ಮುಖ್ಯಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಸೂಚನೆಯಂತೆ ಕ್ರಮವಹಿಸಲು ಹಾಗೂ ಅವರ ಆಡಳಿತ ವ್ಯಾಪ್ತಿಗೆ ಒಳಪಡುವ ಎಲ್ಲಾ ಇಲಾಖಾ ಮುಖ್ಯಸ್ಥರಿಗೆ ಸೂಚನೆ ನೀಡುವಂತೆ ಸುತ್ತೋಲೆ ಹೊರಡಿಸಲಾಗಿದೆ.
ವಾರ್ಷಿಕ ವೇಳಾಪಟ್ಟಿ ಹೀಗಿದೆ
* ಪ್ರತಿ ವರ್ಷ ಮೇ ಅಂತ್ಯದೊಳಗೆ ಸಂಬಂಧಪಟ್ಟ ಇಲಾಖೆ ಖಾಲಿ ಹುದ್ದೆಗಳ ಮಾಹಿತಿ ಕ್ರೋಢೀಕರಿಸಬೇಕು.
* ಪ್ರತಿ ವರ್ಷ ಜೂನ್ ಅಂತ್ಯದೊಳಗೆ ಇಲಾಖೆಗಳು ಖಾಲಿ ಹುದ್ದೆ ಭರ್ತಿಗಾಗಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಕಳುಹಿಸಿ ಅನುಮೋದನೆ ಪಡೆಯಬೇಕು.
* ಪ್ರತಿ ವರ್ಷ ಜುಲೈ ಅಂತ್ಯದೊಳಗೆ ಇಲಾಖೆಗಳು ಆರ್ಥಿಕ ಇಲಾಖೆ ಅನುಮೋದಿಸುವ ಹುದ್ದೆ ನೇಮಕಾತಿಗಾಗಿ ಆಯ್ಕೆ ಪ್ರಾಧಿಕಾರಗಳಿಗೆ ಪ್ರಸ್ತಾವನೆ ಸಲ್ಲಿಸಬೇಕು.
* ಪ್ರತಿ ವರ್ಷ ಆಗಸ್ಟ್ ಅಂತ್ಯದೊಳಗೆ ಕೆಪಿಎಸ್ಸಿ, ಕೆಇಎ, ಇತರೆ ಪ್ರಾಧಿಕಾರಗಳಿಂದ ಪರೀಕ್ಷಾ ವೇಳಾಪಟ್ಟಿ ಬಿಡುಗಡೆಗೊಳಿಸಿ, ಸೆಪ್ಟೆಂಬರ್ ಅಂತ್ಯದೊಳಗೆ ಪರೀಕ್ಷೆ ನಡೆಸಬೇಕು.
* ಪ್ರತಿ ವರ್ಷ ನವೆಂಬರ್ ಅಂತ್ಯದೊಳಗೆ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸುವುದು.
ಇನ್ನು ಯುಪಿಎಸ್ಸಿ, ಎಸ್ಎಸ್ಸಿ, ಐಬಿಪಿಎಸ್ ಕೇಂದ್ರ ಸರ್ಕಾರಿ ಹುದ್ದೆಗಳು, ಬ್ಯಾಂಕ್ ಹುದ್ದೆಗಳಿಗೆ ನೇಮಕ ಪರೀಕ್ಷೆಗಳನ್ನು ನಡೆಸಲು ಪ್ರತಿವರ್ಷ ವಾರ್ಷಿಕ ಪರೀಕ್ಷೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡುತ್ತವೆ. ಅದೇ ರೀತಿ ರಾಜ್ಯ ಸರ್ಕಾರವು ಮೇಲಿನ ವೇಳಾಪಟ್ಟಿಯಂತೆ ನೇಮಕ ಪರೀಕ್ಷೆಗಳನ್ನ ನಡೆಸಿದರೆ, ರಾಜ್ಯದ ನಿರುದ್ಯೋಗಿ ಪ್ರಜೆಗಳು ನಿಟ್ಟುಸಿರು ಬಿಡಲು, ತಮ್ಮ ಉದ್ಯೋಗ, ಖಾಸಗಿ ಉದ್ಯೋಗ, ಇತರೆ ಅಧ್ಯಯನಗಳಿಗೆ ಉತ್ತಮ ಯೋಜನೆ ರೂಪಿಸಿಕೊಳ್ಳಲು ತುಂಬಾ ಅನುಕೂಲ ಆಗಲಿದೆ.












Click it and Unblock the Notifications