South Central Railway Recruitment: 4,232 ಹುದ್ದೆಗಳಿಗೆ ಅರ್ಜಿ ಆಹ್ವಾನ; ಮಾಹಿತಿ ಇಲ್ಲಿದೆ
South Central Railway Recruitment: ಭಾರತೀಯ ರೈಲ್ವೆಯು ಪ್ರಯಾಣಿಕರ ಅನೂಕೂಲಕ್ಕೆ ತಕ್ಕಂತೆ ವಿಶೇಷ ರೈಲುಗಳನ್ನು ಬಿಡುವುದಲ್ಲದೆ, ಆಗಾಗಾ ಉದ್ಯೋಗವಕಾಶಗಳನ್ನು ಸಹ ಕಲ್ಪಿಸುತ್ತದೆ. ಹಾಗೆಯೇ ಇದೀಗ ಇದರ ಭಾಗವಾದ ದಕ್ಷಿಣ ಮಧ್ಯ ರೈಲ್ವೆಯು ಖಾಲಿ ಇರುವ 4,232 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಹಾಗಾದರೆ ಅರ್ಜಿ ಸಲ್ಲಿಸುವ ದಿನಾಂಕ ಹಾಗೂ ಆಯ್ಕೆ ಪ್ರಕ್ರಿಯೆ ಹೇಗಿರಲಿದೆ ಎಂದು ಇಲ್ಲಿ ತಿಳಿಯಿರಿ.
ಮಧ್ಯಪ್ರದೇಶ, ತಮಿಳುನಾಡು, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಈ ಹುದ್ದೆಗಳ ಭರ್ತಿ ನಡೆಯಲಿದೆ. 3 ವರ್ಷಗಳ ಗುತ್ತಿಗೆ ಅವಧಿಗೆ ಮಾಸಿಕ ಗೌರವಧನದ ಆಧಾರದ ಮೇಲೆ ಈ ಹುದ್ದೆಗಳ ನೇಮಕಾತಿ ನಡೆಯಲಿದೆ. 4,232 ಎಲೆಕ್ಟ್ರಿಶಿಯನ್ ಮತ್ತು ಫಿಟ್ಟರ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಕರ್ನಾಟಕದಲ್ಲಿ ಬೆಳಗಾವಿ, ಕಲಬುರಗಿ, ಬೀದರ್, ಭಾಲ್ಕಿ, ರಾಯಚೂರು., ಯಾದಗಿರಿ ಮತ್ತು ಬಳ್ಳಾರಿಯಲ್ಲಿ ಈ ಹುದ್ದೆಗಳ ಭರ್ತಿ ನಡೆಯಲಿದೆ. ಅರ್ಜಿ ಸಲ್ಲಿಸಬಯಸುವವರು 10ನೇ ತರಗತಿ ಅಥವಾ ಐಟಿಐ ಪೂರ್ಣಗೊಳಿಸಿರಬೇಕು. ಇನ್ನು ಈ ಹುದ್ದೆಗೆ ಅರ್ಜಿ ಸಲ್ಲಿಸುವವರ ಕನಿಷ್ಠ ವಯೋಮಿತಿ 15 ವರ್ಷ ಗರಿಷ್ಠ ವಯೋಮಿತಿ 24 ವರ್ಷ ಆಗಿದೆ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇರಲಿದೆ.
ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಪ.ಜಾ, ಪ.ಪಂ ಮತ್ತು ಮಹಿಳಾ ಅಭ್ಯರ್ಥಿ, ವಿಕಲಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಇತರ ಅಭ್ಯರ್ಥಿಗಳು 100 ರೂಪಾಯಿ ಅರ್ಜಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಈ ಹುದ್ದೆಗಳಿಗೆ ಮೆರಿಟ್ ಆಧಾರದ ಮೇಲೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.
ಡಿಸೆಂಬರ್ 28ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಜನವರಿ 27, 2025 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಇನ್ನು ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ scr.indianrailways.gov.in ಭೇಟಿ ನೀಡಬಹುದಾಗಿದೆ.
ಶೀಘ್ರದಲ್ಲೇ 60,000 ಉದ್ಯೋಗ ನೇಮಕಾತಿ: ವಿ.ಸೋಮಣ್ಣ ಅವರು ಬರೀ ಕೇಂದ್ರ ಸಚಿರಾದಾಗಿನಿಂದಲೂ ರಾಜ್ಯ ರೈಲ್ವೆ ಅಭಿವೃದ್ಧಿ ಕಾಮಗಾರಿ ಅಲ್ಲದೆ, ಉದ್ಯೋಗವಕಾಶ ಕಲ್ಪಿಸಿಕೊಡುವಲ್ಲಿಯೂ ಗಮನ ಸೆಳೆಯುತ್ತಿದ್ದಾರೆ. ಇದೀಗ ಶೀಘ್ರದಲ್ಲೇ ಕೇಂದ್ರ ರೈಲ್ವೇ ಮತ್ತು ಜಲಶಕ್ತಿ ಇಲಾಖೆಯಲ್ಲಿ 60,000 ಉದ್ಯೋಗ ನೇಮಕಾತಿ ನಡೆಯಲಿದೆ. ಕನ್ನಡ ಭಾಷೆಯಲ್ಲೂ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ ಎಂದು ಹೇಳಿದ್ದಾರೆ.
ಕರ್ನಾಟಕದ ಯುವ ಸಮುದಾಯ ಈ ಅವಕಾಶಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಚಿವ ವಿ.ಸೋಮಣ್ಣ ಮನವಿ ಮಾಡಿದ್ದಾರೆ. ಬೆಂಗಳೂರು ಅರಮನೆ ಮೈದಾನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹಮ್ಮಿಕೊಂಡಿದ್ದ ಕರ್ನಾಟಕ ಸಂಭ್ರಮ-50 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ದೂರದೃಷ್ಟಿ ಯೋಜನೆ ರೂಪಿಸಿದ್ದಾರೆ. ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ರೈಲ್ವೇ ಮತ್ತು ಜಲಶಕ್ತಿ ಇಲಾಖೆಗೂ ಸಾವಿರಾರು ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ಈ ಮೂಲಕ ದೇಶದ ಶ್ರೇಯೋಭಿವೃದ್ಧಿಯ ವಿಚಾರದಲ್ಲಿ ದೊಡ್ಡ ಹೆಜ್ಜೆ ಇರಿಸಿದ್ದಾರೆ ಎಂದು ತಿಳಿಸಿದರು.












Click it and Unblock the Notifications