KPSC recruitment; ಶೀಘ್ರವೇ 700 ಹುದ್ದೆ ಭರ್ತಿಗೆ ಅಧಿಸೂಚನೆ
ಬೆಂಗಳೂರು, ನವೆಂಬರ್ 14; ಸರ್ಕಾರಿ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿರುವವರಿಗೆ ಸಿಹಿಸುದ್ದಿ. ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಶೀಘ್ರದಲ್ಲಿಯೇ ಸುಮಾರು 700 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಿದೆ.
ಕೆಪಿಎಸ್ಸಿಯ ಕಾರ್ಯದರ್ಶಿ ವಿಕಾಸ್ ಕಿಶೋರ್ ಸುರಳ್ಕರ್ ಅಭ್ಯರ್ಥಿಗಳ ಜೊತೆ ಸಂವಾದ ನಡೆಸುವ ಸಂದರ್ಭದಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ. ಸುಮಾರು 11 ಇಲಾಖೆಗಳ ಖಾಲಿ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಅಭ್ಯರ್ಥಿಗಳು ಟ್ವಿಟರ್ನಲ್ಲಿ ನೇಮಕಾತಿಗಳ ಕುರಿತಾಗಿ ಪ್ರಶ್ನಿಸಿದ್ದರು. ಈ ಪ್ರಶ್ನೆಗೆ ಕಾರ್ಯದರ್ಶಿಗಳು ಉತ್ತರ ನೀಡಿದ್ದಾರೆ. 700 ವಿವಿಧ ಹುದ್ದೆಗಳ ನೇಮಕಾತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರ ಒಪ್ಪಿಗೆ ನೀಡಿದರೆ ಪ್ರಕ್ರಿಯೆ ಆರಂಭವಾಗಲಿದೆ.

ಕರ್ನಾಟಕ ಸರ್ಕಾರ ಕೆಲವು ದಿನಗಳ ಹಿಂದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳ ಮೀಸಲಾತಿ ಬದಲಾವಣೆ ಮಾಡಿದೆ. ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಯ ವರದಿ ಅನ್ವಯ ಪರಿಶಿಷ್ಟ ಜಾತಿ ಮೀಸಲಾತಿಯನ್ನು ಶೇ.15 ರಿಂದ ಶೇ. 17ಕ್ಕೆ ಹಾಗೂ ಪರಿಶಿಷ್ಟ ಪಂಗಡ ಮೀಸಲಾತಿಯನ್ನು ಶೇ. 3 ರಿಂದ ಶೇ.7 ಕ್ಕೆ ಏರಿಕೆ ಮಾಡಲು ಅಧಿಸೂಚನೆ ಪ್ರಕಟಿಸಲಾಗಿದೆ.
ಈಗ ನೇಮಕಾತಿ ಅಧಿಸೂಚನೆ ಹೊರಡಿಸುವಾಗ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳ ಮೀಸಲಾತಿ ಬದಲಾವಣೆ ಮಾಡಬೇಕಿದೆ. ಆದ್ದರಿಂದ ಕೆಲವು ದಿನಗಳ ವಿಳಂಬವಾಗಲಿದೆ ಎಂದು ಅಂದಾಜಿಸಲಾಗಿದೆ.

ಯಾವ-ಯಾವ ಹುದ್ದೆಗಳು?; ಶ್ರೀಘ್ರಲಿಪಿಗಾರರು 222, ದತ್ತಾಂಶ ನಮೂದು ಸಹಾಯಕರು 88, ಸಹಾಯಕ ನಿರ್ದೇಶಕರು 3, ಮುಖ್ಯ ಗ್ರಂಧಾಲಯಧಿಕಾರಿ 18, ಸಹಾಯಕ ನಿರ್ದೇಶಕರು 12, ಸಹಕಾರ ಸಂಘಗಳ ನಿರೀಕ್ಷಕರು 53, ವಾಣಿಜ್ಯ ತೆರಿಗೆಗಳ ಪರಿವೀಕ್ಷಕರು 230, ಸಹಾಯಕ ಉದ್ಯೋಗಾಧಿಕಾರಿ 1, ಸಹಾಯಕ ಗ್ರಂಥಪಾಲಕರು 1, ಗ್ರಂಥಪಾಲಕರು 10 ಹುದ್ದೆಗಳಿಗೆ ಅಧಿಸೂಚನೆ ಪ್ರಕಟವಾಗಲಿದೆ.
ಕೆಪಿಎಸ್ಸಿ ಪ್ರಕಟಿಸಿರುವ ಅಧಿಸೂಚನೆಯಲ್ಲಿ 14 ಪರೀಕ್ಷೆಗಳನ್ನು ನಡೆಸಬೇಕಿದೆ. ಕೆಲವು ಪರೀಕ್ಷೆಗಳು 2023ರ ಮಾರ್ಚ್ವೊಳಗೆ ನಡೆಯಲಿವೆ. ಉಳಿದ ಪರೀಕ್ಷೆಗಳನ್ನು ಮಾರ್ಚ್ ಬಳಿಕ ನಡೆಸಲಾಗುತ್ತದೆ.
ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆನ್ಲೈನ್ ಮೂಲಕ ನಡೆಸುವ ಪ್ರಸ್ತಾವನೆ ಸದ್ಯಕ್ಕೆ ಇಲ್ಲ. ಆಫ್ಲೈನ್ ಮೂಲಕ ನಡೆಸಲು ತೀರ್ಮಾನಿಸಲಾಗಿದೆ.












Click it and Unblock the Notifications