2.5 ಲಕ್ಷ ಸರ್ಕಾರಿ ಹುದ್ದೆ ಭರ್ತಿ; ಬಸವರಾಜ ಬೊಮ್ಮಾಯಿ ಘೋಷಣೆ
ಬೆಂಗಳೂರು, ನ. 01: "ರಾಜ್ಯದಲ್ಲಿ ಖಾಲಿ ಇರುವ 2.5 ಲಕ್ಷ ಸರ್ಕಾರಿ ಹುದ್ದೆಗಳನ್ನು ಮುಂದಿನ ಎರಡು ವರ್ಷಗಳಲ್ಲಿ ಭರ್ತಿ ಮಾಡಲಾಗುವುದು" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಘೋಷಿಸಿದರು.
"2.5 ಲಕ್ಷ ಹುದ್ದೆಗಳ್ಳಲ್ಲಿ ಒಂದು ಲಕ್ಷ ಸರ್ಕಾರಿ ಹುದ್ದೆಗಳನ್ನು ಮುಂದಿನ ವರ್ಷದಲ್ಲಿ ಭರ್ತಿ ಮಾಡಲಾಗುವುದು" ಎಂದು ಬಸವರಾಜ ಬೊಮ್ಮಾಯಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಿಳಿಸಿದರು.
ಆಸಿಡ್ ದಾಳಿ ಸಂತ್ರಸ್ತೆಗೆ ಸರ್ಕಾರಿ ಕೆಲಸ: ಸಿಎಂ ಬೊಮ್ಮಾಯಿ ಭರವಸೆ
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯೋಜಿಸಿದ್ದ 67ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, "ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬಲಾಗುವುದು" ಎಂದು ಹೇಳಿದರು.
"ಮುಂಬರುವ ಎರಡು ವರ್ಷಗಳಲ್ಲಿ ಸರ್ಕಾರಿ ವಲಯದಲ್ಲಿ ಖಾಲಿ ಇರುವ 2.5 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಿದ್ದೇವೆ. ಈ ವರ್ಷವೇ ಒಂದು ಲಕ್ಷ ಉದ್ಯೋಗ ನೀಡಲು ನಿರ್ಧರಿಸಿದ್ದೇವೆ. ಹುದ್ದೆಗಳು ತುಂಬಿ ಕನ್ನಡಿಗರ ಕೈಗಳಿಗೆ ಉದ್ಯೋಗ ದೊರೆತು ಅವರಿಗೆ ಆರ್ಥಿಕ ಬಲ ತುಂಬಿದಂತಾಗುತ್ತದೆ. ಹಾಗೆಯೇ ಶೈಕ್ಷಣಿಕ ಔದ್ಯೋಗಿಕ ಕ್ರಾಂತಿಯಾಗಲಿದೆ. ಇದು ನವ ಕರ್ನಾಟಕಕ್ಕೆ ಅಡಿಪಾಯವಾಗಲಿದೆ" ಎಂದರು.
ಅಧಿಕೃತ ಮಾಹಿತಿಯ ಪ್ರಕಾರ, 28 ಸರ್ಕಾರಿ ಇಲಾಖೆಗಳಲ್ಲಿ 2.5 ಲಕ್ಷ ಉದ್ಯೋಗಗಳು ಖಾಲಿ ಇವೆ. ಹಲವಾರು ಪ್ರಮುಖ ಇಲಾಖೆಗಳು ಶೇಕಡಾ ಅರ್ಧದಷ್ಟು ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ಇತ್ತೀಚೆಗಷ್ಟೇ ಸರ್ಕಾರಿ ನೌಕರರ ಸಂಘವು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತ್ತು.
"ಭಾಷೆಗೆ ಆದ್ಯತೆ ನೀಡುವ ಸಮಗ್ರ ಕನ್ನಡ ಭಾಷಾ ಅಭಿವೃದ್ಧಿ ಮಸೂದೆಯನ್ನು ಡಿಸೆಂಬರ್ನಲ್ಲಿ ನಡೆಯಲಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಅಂಗೀಕರಿಸಲಾಗುವುದು. ಅದರ ಮೂಲಕ ಕನ್ನಡಕ್ಕೆ ಕಾನೂನಾತ್ಮಕ ರಕ್ಷಣೆ ನೀಡಿದ ಮೊದಲ ಸರ್ಕಾರ ನಮ್ಮದಾಗಲಿದೆ, ಕನ್ನಡ ರಕ್ಷಣೆಗೆ ಕಾನೂನು ರೂಪಿಸಲು ಡಿಸೆಂಬರ್ ಅಧಿವೇಶನದಲ್ಲಿ ಮಸೂದೆ ಮಂಡಿಸಿ ಅಂಗೀಕರಿಸಲಾಗುವುದು" ಎಂದು ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದರು.
ಸೆಪ್ಟೆಂಬರ್ನಲ್ಲಿ ವಿಧಾನಸಭೆಯಲ್ಲಿ ಮಂಡಿಸಲಾದ ಮಸೂದೆ ಪ್ರಕಾರ ಉನ್ನತ, ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣ ಕೋರ್ಸ್ಗಳಲ್ಲಿ ಕನ್ನಡವನ್ನು ಕಲಿಸಲಾಗುತ್ತದೆ. ಅಲ್ಲದೆ 1 ರಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಲ್ಲಿ ಮೀಸಲಾತಿ ದೊರೆಯಲಿದೆ.
ರಾಜ್ಯದ ಕೈಗಾರಿಕಾ ನೀತಿ 2020-25 ರಿಂದ ಎರವಲು ಪಡೆದಿರುವ ಮಸೂದೆಯು ನಿಗದಿತ ಶೇಕಡಾವಾರು ಕನ್ನಡಿಗರನ್ನು ನೇಮಕ ಮಾಡಿಕೊಳ್ಳದ ಖಾಸಗಿ ಕಂಪನಿಗಳಿಗೆ ಭೂ ರಿಯಾಯಿತಿಗಳು, ತೆರಿಗೆ ರಿಯಾಯಿತಿಗಳು ಮತ್ತು ಇತರ ಸಾಪ್ಗಳನ್ನು ನಿರಾಕರಿಸಬೇಕು ಎಂಬುದನ್ನು ಪ್ರಸ್ತಾಪಿಸುತ್ತದೆ.
ಮಸೂದೆ ಕುರಿತು ಸಾರ್ವಜನಿಕ ಚರ್ಚೆಗೆ ಮುಂದಾಗುವಂತೆ ಸಿಎಂ ಅಧಿಕಾರಿಗಳಿಗೆ ಸೂಚಿಸಿದ್ದು, ಎಲ್ಲ ಸಲಹೆಗಳನ್ನು ಸ್ವೀಕರಿಸಲು ಸರ್ಕಾರ ಸಿದ್ಧವಿದೆ ಎಂದಿದ್ದಾರೆ.