ಕೆಲಸದಿಂದ ಕಿತ್ತು ಹಾಕಿದ್ದು, ವೇತನ ಕಡಿತ; 2 ಸಾವಿರ ದೂರು
ಬೆಂಗಳೂರು, ಮೇ 13 : ಕೊರೊನಾ ಲಾಕ್ ಡೌನ್ನಿಂದಾಗಿ ಎಲ್ಲಾ ವಲಯಗಳು ಸಂಕಷ್ಟಕ್ಕೆ ಸಿಲುಕಿವೆ. ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಉದ್ಯಮಗಳು ಕಾರ್ಮಿಕರನ್ನು ಕೆಲಸದಿಂದ ತೆಗೆಯುತ್ತಿವೆ. ವೇತನ ಕಡಿತ ಮಾಡುತ್ತಿವೆ. ಈ ಬಗ್ಗೆ ಕಾರ್ಮಿಕ ಇಲಾಖೆಗೆ 2 ಸಾವಿರಕ್ಕೂ ಅಧಿಕ ದೂರು ಬಂದಿವೆ.
ಲಾಕ್ ಡೌನ್ ಸಂದರ್ಭದಲ್ಲಿ ಕಾರ್ಮಿಕರ ಸಮಸ್ಯೆ ಆಲಿಸಲು ಕಾರ್ಮಿಕ ಇಲಾಖೆ ಸಹಾಯವಾಣಿಯನ್ನು ಆರಂಭಿಸಿದೆ. 155214 ನಂಬರ್ಗೆ ಕರೆ ಮಾಡಿ ಕಾರ್ಮಿಕರು ತಮ್ಮ ದೂರುಗಳನ್ನು ಸಲ್ಲಿಸಬಹುದಾಗಿದೆ. 20 ದಿನದಲ್ಲಿ 2 ಸಾವಿರ ಕರೆಗಳು ಸಹಾಯವಾಣಿಗೆ ಬಂದಿವೆ.
ಕೆಲಸದಿಂದ ಕಿತ್ತು ಹಾಕುವುದು ಮತ್ತು ವೇತನ ಕಡಿತಕ್ಕೆ ಸಂಬಂಧಿಸಿದಂತೆಯೇ ಬಹುತೇಕ ದೂರುಗಳು ದಾಖಲವಾಗಿವೆ. ಅಚ್ಚರಿಯ ಸಂಗತಿ ಎಂದರೆ ಬೆಂಗಳೂರು ನಗರದಿಂದಲೇ ಅತ್ಯಧಿಕ ದೂರುಗಳು ಬಂದಿವೆ.

ಸಹಾಯವಾಣಿಗೆ ಬಂದ ದೂರುಗಳನ್ನು ವ್ಯಾಪ್ತಿಗೆ ಒಳಪಡುವ ಕಾರ್ಮಿಕ ಇಲಾಖೆ ಇನ್ಸ್ಪೆಕ್ಟರ್ಗೆ ನೀಡಲಾಗುತ್ತದೆ. ಅವರು ದೂರು ನೀಡಿದ ಉದ್ಯೋಗಿಗಳನ್ನು ವಿಚಾರಣೆ ನಡೆಸಿ, ಹೆಚ್ಚಿನ ಮಾಹಿತಿಯನ್ನು ಸಂಗ್ರಹ ಮಾಡುತ್ತಿದ್ದಾರೆ.
ದೂರು ಬಂದ ಕಂಪನಿಗಳ ವಿರುದ್ಧ ಪ್ರಕರಣಗಳನ್ನು ದಾಖಲು ಮಾಡಲಾಗುತ್ತಿದೆ. ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಕ್ಯಾಪ್ಟನ್ ಮಣಿವಣ್ಣನ್ ವರ್ಗಾವಣೆಗೆ ಇದೇ ಪ್ರಮುಖ ಕಾರಣ ಎಂಬ ಆರೋಪಗಳು ಕೇಳಿ ಬರುತ್ತಿವೆ.
ನಾಲ್ಕು ವರ್ಷಗಳಿಂದ ಮಹಿಳೆಯೊಬ್ಬರು ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. 30 ಸಾವಿರ ರೂ. ವೇತನವನ್ನು ಅವರು ಪಡೆಯುತ್ತಿದ್ದಾರೆ. ಆದರೆ, ಈಗ ಕೆಲಸದಿಂದ ಯಾವುದೇ ಕಾರಣ ನೀಡದೆ ತೆಗೆದುಹಾಕಲಾಗಿದೆ. ಈ ಕುರಿತು ಮಹಿಳೆ ಕಾನೂನು ಹೋರಾಟವನ್ನು ಆರಂಭಿಸಿದ್ದಾರೆ.
ಕಾರ್ಮಿಕರನ್ನು ವಿಚಾರಣೆ ನಡೆಸುವ ಇಲಾಖೆಯ ಕಾರ್ಯ ವೈಖರಿಗೆ ಕರ್ನಾಟಕದ ಸಣ್ಣ ಉದ್ಯಮಗಳ ನೌಕರರ ಸಂಘ ಆಕ್ಷೇಪ ವ್ಯಕ್ತಪಡಿಸಿದೆ. ಕಾರ್ಮಿಕ ಇಲಾಖೆ ಅಧಿಕಾರಿಗಳು ಈ ದೂರನ್ನು ಇಟ್ಟುಕೊಂಡು ನೌಕರರನ್ನು ಬೆದರಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಕೆಲಸದಿಂದ ಕಿತ್ತು ಹಾಕಿದರೆ, ವೇತನ ಕಡಿತ ಮಾಡಿದರೆ ಕಾರ್ಮಿಕರು ವೆಬ್ ಸೈಟ್ ಮೂಲಕವೂ ದೂರು ಕೊಡಬಹುದು. ವಿಳಾಸಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ











Click it and Unblock the Notifications