ಪೌರ ಕಾರ್ಮಿಕರ ನೇಮಕಾತಿ; ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ಬೆಂಗಳೂರು, ಏಪ್ರಿಲ್ 28: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 11,307 ಪೌರ ಕಾರ್ಮಿಕರ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿತ್ತು. ಅರ್ಜಿಗಳನ್ನು ಸಲ್ಲಿಕೆ ಮಾಡಲು ಏಪ್ರಿಲ್ 15ರ ತನಕ ಅವಕಾಶ ನೀಡಲಾಗಿತ್ತು.
ಆದರೆ ಲೋಕಸಭಾ ಚುನಾವಣೆ 2024ರ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಅರ್ಜಿ ಸಲ್ಲಿಕೆ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಸದ್ಯ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮೇ 15ರ ತನಕ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದಾಗಿದೆ.

ಬಿಬಿಎಂಪಿ ಮಾರ್ಚ್ ತಿಂಗಳಿನಲ್ಲಿ ಒಟ್ಟು 11,307 ಪೌರ ಕಾರ್ಮಿಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿತ್ತು. ಇವುಗಳಲ್ಲಿ 905 ಹುದ್ದೆಗಳು ಕಲ್ಯಾಣ ಕರ್ನಾಟಕ ಭಾಗಕ್ಕೆ ಮೀಸಲಾಗಿದೆ.
ಷರತ್ತುಗಳು ಏನು?; ಪೌರ ಕಾರ್ಮಿಕ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದ್ದ ಬಿಬಿಎಂಪಿ ಆಸಕ್ತರು ಏಪ್ರಿಲ್ 15ರ ತನಕ ಅರ್ಜಿ ಸಲ್ಲಿಸಬಹುದು ಎಂದು ಹೇಳಿತ್ತು. ಆದರೆ ಈಗ ಲೋಕಸಭಾ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಆಡಳಿತಾತ್ಮಕ ಕಾರಣಗಳನ್ನು ನೀಡಿ ಮೇ 15ರ ತನಕ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ನೀಡಿದೆ.
ಕರ್ನಾಟಕ ಸರ್ಕಾರ ಬಿಬಿಎಂಪಿಯಲ್ಲಿ 14,980 ಗುತ್ತಿಗೆ ಪೌರ ಕಾರ್ಮಿಕರನ್ನು ಕಾಯಂಗೊಳಿಸುವುದಾಗಿ ಹೇಳಿತ್ತು. ಮೊದಲ ಹಂತದಲ್ಲಿ 3,673 ಪೌರ ಕಾರ್ಮಿಕರ ಪಟ್ಟಿಯನ್ನು ಅಂತಿಮಗೊಳಿಸಿತ್ತು.
ಆದರೆ ಪೌರ ಕಾರ್ಮಿಕ ಸಂಘಟನೆಗಳು 2ನೇ ಹಂತದ 11,307 ಪೌರ ಕಾರ್ಮಿಕ ನೇಮಕಾತಿಯನ್ನು ಪೂರ್ಣಗೊಳಿಸಿ ಎರಡೂ ಪಟ್ಟಿಯನ್ನು ಒಟ್ಟಿಗೆ ಬಿಡುಗಡೆ ಮಾಡಬೇಕು ಎಂದು ಬೇಡಿಕೆ ಸಲ್ಲಿಸಿದ್ದವು. ಈ ಹಂತದಲ್ಲಿ 11,307 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡುವ ಅವಧಿಯನ್ನು ಈಗ ವಿಸ್ತರಣೆ ಮಾಡಲಾಗಿದೆ.
ಪೌರ ಕಾರ್ಮಿಕ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಲು ಷರತ್ತುಗಳನ್ನು ಸಹ ಹಾಕಲಾಗಿದೆ. ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳು ಬಿಬಿಎಂಪಿಯಲ್ಲಿ ಕನಿಷ್ಠ ಎರಡು ವರ್ಷ ನೇರಪಾವತಿ, ದಿನಗೂಲಿ ಸೇರಿದಂತೆ ವಿವಿಧ ಆಧಾರದಲ್ಲಿ ಪೌರ ಕಾರ್ಮಿಕರಾಗಿ ಕೆಲಸ ನಿರ್ವಹಣೆ ಮಾಡಿರಬೇಕು.
ಭಾರತೀಯ ಪ್ರಜೆಯಾಗಿರಬೇಕು. 2023ರ ಮಾರ್ಚ್ 2ಕ್ಕೆ 55 ವರ್ಷ ಮೀರುವಂತಿಲ್ಲ. ಶೈಕ್ಷಣಿಕ ವಿದ್ಯಾರ್ಹತೆ ನಿಗದಿ ಪಡಿಸಿಲ್ಲ. ಆದರೆ ಅಭ್ಯರ್ಥಿ ಕನ್ನಡ ಕಡ್ಡಾಯವಾಗಿ ಮಾತನಾಡಲು ತಿಳಿದಿರಬೇಕು. ದೈಹಿಕ ದೃಢತೆ ಪ್ರಮಾಣ ಪತ್ರವನ್ನು ಸಲ್ಲಿಸಬೇಕು ಎಂದು ಷರತ್ತು ವಿಧಿಸಲಾಗಿದೆ.
ಪೌರ ಕಾರ್ಮಿಕ ನೇಮಕಾತಿ ಕುರಿತು ಮಾರ್ಚ್ 14, 2024ರಂದು ಅಧಿಸೂಚನೆ ಹೊರಡಿಸಿದ್ದ ಬಿಬಿಎಂಪಿ ಅಭ್ಯರ್ಥಿಗಳು 15/3/2024 ರಿಂದ 15/4/2024ರ ಸಂಜೆ 5.30ರ ತನಕ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು ಎಂದು ಹೇಳಿತ್ತು. ಈಗ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ.
ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡುವ ಮೊದಲು ಅಧಿಸೂಚನೆಯಲ್ಲಿನ ಸೂಚನೆಯನ್ನು ಕಡ್ಡಾಯವಾಗಿ ಓದಿಕೊಂಡು ಭರ್ತಿ ಮಾಡಬೇಕು. ಪಾಲಿಕೆಯ ಆಯಾ ವಾರ್ಡ್ನ ಸಂಬಂಧಿಸಿದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ (ಘನತ್ಯಾಜ್ಯ) ಅವರಿಂದ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ ಅವರಿಗೆ ಸಲ್ಲಿಸಬೇಕು. ಅರ್ಜಿ ಸ್ವೀಕರಿಸಿ, ಸ್ವೀಕೃತಿ ನೀಡಬೇಕು ಎಂದು ಅಧಿಸೂಚನೆ ತಿಳಿಸಿತ್ತು.
ನೇಮಕಾತಿಗೆ ಅರ್ಹವಾಗುವ ಅಭ್ಯರ್ಥಿಗಳ ಅರ್ಹತೆಗೆ ಅನುಗುಣವಾಗಿ ಅಂದರೆ ನೇರ ಪಾವತಿ/ ಕ್ಷೇಮಾಭಿವೃದ್ಧಿ/ ದಿನಗೂಲಿ ಆಧಾರದ ಮೇಲೆ ಸಲ್ಲಿಸಿದ ಸೇವಾವಧಿ ಪರಿಗಣಿಸಿ ಚಾಲ್ತಿಯಲ್ಲಿರುವ ಮೀಸಲಾತಿ ನೀತಿಗೊಳಪಟ್ಟು ಅರ್ಹತೆ ಪಟ್ಟಿಯನ್ನು ತಯಾರು ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಪೈಕಿ ಎರಡು ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅಭ್ಯರ್ಥಿಗಳ ಸೇವಾ ಅವಧಿ ಒಂದೇ ಇದ್ದ ಪಕ್ಷದಲ್ಲಿ ಅಂತಹ ಅಭ್ಯರ್ಥಿಗಳ ಜೇಷ್ಠತೆಯನ್ನು ಅವರ ವಯಸ್ಸಿಗೆ ಅನುಗುಣವಾಗಿ ಅಂದರೆ ಹೆಚ್ಚು ವಯಸ್ಕರನ್ನು ಕಡಿಮೆ ವಯಸ್ಕರಿಗಿಂತ ಮೇಲೆ ಪರಿಗಣಿಸಬೇಕು ಹಾಗೂ ಹುಟ್ಟಿದ ದಿನಾಂಕ ಹಾಗೂ ಸೇವಾ ಅವಧಿ ಒಂದೇ ಆಗಿದ್ದಲ್ಲಿ ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತದೆ.












Click it and Unblock the Notifications