ದಾವಣಗೆರೆಯಲ್ಲಿ ಕೆಲಸ ಖಾಲಿ ಇದೆ; ಜೂನ್ 30ರೊಳಗೆ ಅರ್ಜಿ ಹಾಕಿ
ದಾವಣಗೆರೆ, ಜೂನ್ 20; ದಾವಣಗೆರೆ ಜಿಲ್ಲೆಯ ನೇರ್ಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೇರ್ಲಿಗೆ ತಾಂಡಾದಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ತಾಂಡಾ ರೋಜ್ಗಾರ್ ಮಿತ್ರ ಆಗಿ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ.
ಆಸಕ್ತ ಅಭ್ಯರ್ಥಿಗಳು ಜೂನ್ 30ರೊಳಗೆ ಅರ್ಜಿಗಳನ್ನು ಸಲ್ಲಿಸಬೇಕು. ತಾಂಡಾಗಳಲ್ಲಿನ ಪ್ರತಿ 250 ರಿಂದ 300 ಮನೆಗಳಿಗೆ ಒಬ್ಬರಂತೆ ತಾಂಡಾ ರೋಜ್ಗಾರ್ ಮಿತ್ರರನ್ನು ಆಯ್ಕೆ ಮಾಡಲಾಗುತ್ತದೆ.
ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಬೇಕು. ಮಹಿಳೆಯರಿಗೆ ಮೊದಲ ಆದ್ಯತೆ ನೀಡಲಾಗುವುದು. ಮಹಿಳೆಯರು ಲಭ್ಯವಿಲ್ಲದಿದ್ದಲ್ಲಿ ಪುರುಷರನ್ನು ಪರಿಗಣಿಸಲಾಗುವುದು.

ನರೇಗಾ ಕಾಮಗಾರಿಗಳಲ್ಲಿ ಕೆಲಸ ಮಾಡಿರುವವರಿಗೆ ಆದ್ಯತೆ ನೀಡಲಾಗುತ್ತದೆ. ವಯೋಮಿತಿ 45 ವರ್ಷ ಮೀರಿರಬಾರದು. ತಾಂಡಾ ನಿವಾಸಿ ಆಗಿರಬೇಕು. ಓದು ಮತ್ತು ಬರಹ ಚೆನ್ನಾಗಿ ತಿಳಿದಿರಬೇಕು. ಕನ್ನಡ ಮತ್ತು ಲಂಬಾಣಿ ಭಾಷೆ ತಿಳಿದಿರಬೇಕು.
ಅಭ್ಯರ್ಥಿಯು ಪರಿಣಾಮಕಾರಿ ಸಂವಹನ ಕೌಶಲ್ಯ, ಉತ್ತಮ ನಾಯಕತ್ವ ಗುಣ ಹಾಗೂ ಸಮುದಾಯದೊಂದಿಗೆ ಸ್ಪಂದಿಸುವ ಗುಣ ಲಕ್ಷಣಗಳನ್ನು ಹೊಂದಿರಬೇಕು. ತಾಂಡಾ ರೋಜ್ಗಾರ್ ಮಿತ್ರರು ಸಮುದಾಯ ಕಾರ್ಯನಿರ್ವಹಣೆ ಮಾಡಲು ನಿರ್ದಿಷ್ಟ ಸಮಯವನ್ನು ನೀಡಬೇಕಾಗಿದ್ದು. ಇದಕ್ಕೆ ತಾಂಡಾರೋಜ್ ಗಾರ್ ಮಿತ್ರರ ಕುಟುಂಬ ಮತ್ತು ಸಮಾಜ ಬೆಂಬಲವಾಗಿರಬೇಕು.
ಆಯ್ಕೆಯಾದ ಅಭ್ಯರ್ಥಿಗಳಿಗೆ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದಿಂದ ಮಾಸಿಕ 3000 ರೂ. ಹಾಗೂ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 3000 ರೂ. ವರೆಗೂ ಪ್ರೋತ್ಸಾಹ ಧನ ನೀಡಲಾಗುವುದು.
ಆಯ್ಕೆಯಾದವರನ್ನು ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಐ. ಇ. ಸಿ ಚಟುವಟಿಕೆಯ ಭಾಗವಾಗಿ 6 ತಿಂಗಳ ಅವಧಿಗೆ ಮಾತ್ರ ತೊಡಗಿಸಿಕೊಳ್ಳಲಾಗುತ್ತದೆ. ತಾಂಡಾ ರೋಜ್ಗಾರ್ ಮಿತ್ರರು ಸ್ವಯಂ ಪ್ರೇರಿತ ಕಾರ್ಯಕರ್ತರು ಮಾತ್ರ ಆಗಿದ್ದು, ಗ್ರಾಮ ಪಂಚಾಯಿತಿಯ ಖಾಯಂ ಅಥವಾ ತಾತ್ಕಾಲಿಕ ನೌಕರರಾಗಿರುವುದಿಲ್ಲ.
ಅರ್ಹ ಅಭ್ಯರ್ಥಿಗಳು ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿಯಲ್ಲಿ ಅರ್ಜಿ ಸಲ್ಲಿಸಬೇಕು. ಜೂನ್ 30ರ ಬಳಿಕ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗೆ ನೇರ್ಲಿಗೆ ಗ್ರಾಮ ಪಂಚಾಯಿತಿ ಕಚೇರಿ ಸಂಪರ್ಕಿಸಬಹುದು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.











Click it and Unblock the Notifications