ಮಹಾನಗರ ಪಾಲಿಕೆಯ 155 ಪೌರ ಕಾರ್ಮಿಕರ ಕೆಲಸ ಶೀಘ್ರವೇ ಖಾಯಂ
ಬೆಳಗಾವಿ, ನವೆಂಬರ್ 24; ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅರ್ಹ 155 ಪೌರಕಾರ್ಮಿಕರನ್ನು ಖಾಯಂಗೊಳಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದ್ದಾರೆ. ಈ ಕುರಿತು ಶೀಘ್ರವೇ ಆದೇಶ ಪ್ರಕಟವಾಗಲಿದೆ.
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನೇರ ನೇಮಕಾತಿಯಡಿ ಖಾಲಿ ಇರುವ ಒಟ್ಟು 155 ಪೌರಕಾರ್ಮಿಕರ ಹುದ್ದೆಗಳ ನೇಮಕಾತಿಗಾಗಿ ನೇಮಕಾತಿ ಅಧಿಸೂಚನೆ ಹೊರಡಿಸಿದ ದಿನಾಂಕದ ಪೂರ್ವದಲ್ಲಿ ನಿರಂತರವಾಗಿ ಕ್ಷೇಮಾಭಿವೃದ್ಧಿ/ ದಿನಗೂಲಿ/ ಗುತ್ತಿಗೆ/ ಸಮಾನ ಕೆಲಸಕ್ಕೆ ಸಮಾನ ವೇತನ/ ಹೊರಗುತ್ತಿಗೆ ಮೇರೆಗೆ ಕನಿಷ್ಠ 2 ವರ್ಷಗಳ ಸೇವೆ ಸಲ್ಲಿಸಿರುವ ಮತ್ತು ಹಾಲಿ ಕಾರ್ಯನಿರ್ವಹಿಸುತ್ತಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು.

ಒಟ್ಟು ಸ್ವೀಕೃತ ಅರ್ಜಿಗಳನ್ನು ಪರಿಶೀಲನಾ ಸಮಿತಿಯಿಂದ ಪರಿಶೀಲನೆಗೆ ಒಳಪಡಿಸಿ ಅಂತಿಮವಾಗಿ ಸಲ್ಲಿಕೆಯಾದ ಒಟ್ಟು 468 ಅರ್ಹ ಅಭ್ಯರ್ಥಿಗಳ ಪೈಕಿ ನೇರನೇಮಕಾತಿಯಡಿ ಖಾಲಿ ಇರುವ ಹಾಗೂ ಮೀಸಲಾತಿಗನುಗುಣವಾಗಿ 155 ಅಭ್ಯರ್ಥಿಗಳನ್ನು ಖಾಯಂಗೊಳಿಸಲು ದಿನಾಂಕ 18/11/2023ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಆಯ್ಕೆ ಸಮಿತಿ ಸಭೆ ಜರುಗಿಸಿ ಅಂತಿಮಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲಾ ಆಯ್ಕೆ ಸಮಿತಿ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಿದಂತೆ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಹೊರಗುತ್ತಿಗೆ ಆಧಾರದ ಮೇರೆಗೆ ಕಾರ್ಯನಿರ್ವಹಿಸುತ್ತಾ ಪ್ರಸ್ತುತ ನೇರವೇತನದಡಿ ಕೆಲಸ ನಿರ್ವಹಿಸುತ್ತಿರುವ 155 ಸದರಿ ಪೌರಕಾರ್ಮಿಕರನ್ನು ಖಾಯಂಗೊಳಿಸಲು ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಆಕ್ಷೇಪಣೆಗೆ ಆಹ್ವಾನ; ಈ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಬೆಳಗಾವಿ ಮಹಾನಗರ ಪಾಲಿಕೆಯ, ಸಂಬಂಧಿಸಿದ ಉಪವಿಭಾಗಾಧಿಕಾರಿಗಳ, ತಹಶೀಲ್ದಾರ್ ಕಾರ್ಯಾಲಯದ ಹಾಗೂ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ. ಪಾಲಿಕೆಯ/ ಡಿಯುಡಿಸಿ ವೆಬ್ ಸೈಟಿನಲ್ಲಿಯೂ ಹಾಕಲಾಗಿದೆ.
ತಾತ್ಕಾಲಿಕ ಆಯ್ಕೆಪಟ್ಟಿಗೆ 15 ದಿನಗಳೊಳಗಾಗಿ ಅಂದರೆ ದಿನಾಂಕ 04/12/2023ರ ಸಾಯಂಕಾಲ 4 ಗಂಟೆಯೊಳಗಾಗಿ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿರುತ್ತದೆ. ಆಕ್ಷೇಪಣೆಗಳನ್ನು ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು.
ಆಕ್ಷೇಪಣೆಗಳನ್ನು ಆಯುಕ್ತರು, ಬೆಳಗಾವಿ ಮಹಾನಗರ ಪಾಲಿಕೆ, ಬೆಳಗಾವಿ ಇವರಿಗೆ ಕಚೇರಿ ವೇಳೆಯಲ್ಲಿ ಸಲ್ಲಿಸಿ ಸ್ವೀಕೃತಿ ಪಡೆಯಬೇಕು ಎಂದು ತಿಳಿಸಲಾಗಿದೆ.
ಆದೇಶದ ಪ್ರತಿ ಸಿಕ್ಕಿಲ್ಲ; ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ 2008ರಿಂದ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರನ್ನು ಖಾಯಂಗೊಳಿಸಬೇಕು ಎಂದು ಸರ್ಕಾರವೇ ಆದೇಶ ಮಾಡಿದೆ. ಆದರೆ ಖಾಯಂಗೊಳಿಸಿರುವ ಆದೇಶ ನೌಕರರಿಗೆ ಇನ್ನೂ ಸಿಕ್ಕಿಲ್ಲ.
2016ರಲ್ಲಿ ರಾಜ್ಯ ಸರ್ಕಾರ ಪೌರ ಕಾರ್ಮಿಕರ ಖಾಯಂಗೊಳಿಸುವ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಆದೇಶ ನೀಡಿತ್ತು. ಆದರೆ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆಯ ಅಧಿಕಾರಿಗಳ ವಿಳಂಬದಿಂದ ಖಾಯಂಗೊಳಿಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿರಲಿಲ್ಲ.
ವಯಸ್ಸು, ದಾಖಲೆಗಳು ಮುಂತಾದ ನೆಪ ಹೇಳಿದ್ದ ಅಧಿಕಾರಿಗಳು ಪೌರ ಕಾರ್ಮಿಕರನ್ನು ಖಾಯಂಗೊಳಿಸುವ ಪ್ರಕ್ರಿಯೆ ಬಾಕಿ ಇಟ್ಟಿದ್ದರು. ಈಗ ಜಿಲ್ಲಾಡಳಿತವೇ ಸಭೆ ನಡೆಸಿ, ಪಟ್ಟಿಯನ್ನು ತಯಾರು ಮಾಡಿ, ಅರ್ಹರನ್ನು ಆಯ್ಕೆ ಮಾಡಿ ಆಯ್ಕೆಪಟ್ಟಿಯನ್ನು ಪ್ರಕಟಿಸಿದೆ.
15-20 ವರ್ಷಗಳಿಂದ ಬೆಳಗಾವಿ ನಗರವನ್ನು ಸ್ವಚ್ಛವಾಗಿಡಲು ಶ್ರಮಿಸಿದ ಪೌರ ಕಾರ್ಮಿಕರಿಗೆ ಕೊನೆಗೂ ತಮ್ಮ ಕೆಲಸ ಖಾಯಂ ಆಗುತ್ತದೆ ಎಂಬ ಭರವಸೆ ಮೂಡಿದೆ. ಅಧಿಕೃತ ಆದೇಶ ಯಾವಾಗ ಕೈ ಸೇರಲಿದೆ? ಎಂದು ಕಾದು ನೋಡಬೇಕಿದೆ.












Click it and Unblock the Notifications