ಸಿಯಾಟಲ್ ಕನ್ನಡ ಸಂಘದ ಯುಗಾದಿ ಗಮ್ಮತ್ತು
ಏಪ್ರಿಲ್ 30ರಂದು ಸಿಯಾಟಲ್ ಕನ್ನಡಿಗರಿಗೆ ಖುಷಿಯೋ ಖುಷಿ! ಅದೊಂದು ಮರೆಯಲಾಗದ ದಿನ. ಇಲ್ಲಿನ ಸಹ್ಯಾದ್ರಿ ಕನ್ನಡ ಸಂಘ ಆಯೋಜಿಸಿದ್ದ ಯುಗಾದಿ ಕಾರ್ಯಕ್ರಮ ಎಲ್ಲರ ಮನಸ್ಸನ್ನು ಸೂರೆ ಮಾಡಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ನಟಿ ಶ್ರೀಮತಿ ಸುಮನ್ ನಗರಕರ್ ವಿಶೇಷ ಮೆರಗುತಂದರು.
ಕನ್ನಡ ಚಿತ್ರಜಗತ್ತಿನಲ್ಲಿ ‘ಬೆಳದಿಂಗಳ ಬಾಲೆ’ಯೆಂದೇ ಗುರ್ತಿಸಲ್ಪಡುವ ಸುಮನ್ನಗರಕರ್ ಸಿಯಾಟಲ್ನ ಮನೆಯ ಮಗಳೇನೊ ಅನ್ನುವ ರೀತಿಯಲ್ಲಿ ಎಲ್ಲರೊಂದಿಗೆ ಬಹಳ ಆತ್ಮೀಯವಾಗಿ ಬೆರೆತು ಹಬ್ಬದ ಸಂಭ್ರಮವನ್ನು ಹೆಚ್ಚಿಸಿದರು.
ವಸುಸುಂದರ್ರಾಜ್ ಅವರ ಪುಟ್ಟ ಶಿಷ್ಯರು ಗಣೇಶ ಸ್ತುತಿಯಾಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮನ್ನಗರಕರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಹ್ಯಾದ್ರಿ ಕನ್ನಡ ಸಂಘದ ಅಧ್ಯಕ್ಷ ಹರ್ಷ ರಾಂ ಅವರು ತಮ್ಮ ಸ್ವಾಗತ ಭಾಷಣದಲ್ಲಿ ಸಂಘ ನಡೆದು ಬಂದ ಹಾದಿ ಮತ್ತು ಸಾಗಬೇಕಾದ ಹಾದಿಯ ಬಗ್ಗೆ ಮಾತನಾಡಿದರು.
ಕನ್ನಡ ಶಾಲೆಯನ್ನು ಪ್ರಾರಂಭ ಮಾಡುವುದು ಸೇರಿದಂತೆ ಕರ್ನಾಟಕದ ಯಾವುದಾದರೊಂದು ಕುಗ್ರಾಮವನ್ನು ದತ್ತು ತೆಗೆದುಕೊಂಡು ಅದರ ಉನ್ನತಿಗೆ ಪ್ರಯತ್ನಿಸುವ ಗುರಿಯನ್ನು ಸಂಘ ಹೊಂದಿದೆ. ಇದಕ್ಕೆ ಸದಸ್ಯರ ಪ್ರೋತ್ಸಾಹ ಅತ್ಯಗತ್ಯ ಎಂದು ಹರ್ಷ ರಾಂ ಅಭಿಪ್ರಾಯಪಟ್ಟರು. ತಮ್ಮ ಸಹಕಾರವನ್ನು ಮುಂದುವರೆಸುವುದಾಗಿ ಸಂಘದ ಸದಸ್ಯರು ಚಪ್ಪಾಳೆ ಮೂಲಕ ಪ್ರದರ್ಶಿಸಿದರು.
ಸಹ್ಯಾದ್ರಿ ಕನ್ನಡ ಸಂಘದ 17ಜನರ ಪಲ್ಲವಿ ಸಂಗೀತ ವೃಂದ ‘ಹೊಸವರುಷದ ಮೊದಲದಿನದ...’ ಎಂಬ ಹಾಡನ್ನು ಅರ್ಥಪೂರ್ಣವಾಗಿ ಹಾಡಿದರು. ಪುಟಾಣಿಗಳು ಕರ್ನಾಟಕದ ವಿವಿಧ ಭಾಗಗಳ ವಸ್ತ್ರಗಳನ್ನು ಧರಿಸಿ, ವಸ್ತ್ರಗಳ ಪ್ರದರ್ಶನದಲ್ಲಿ ಮಿಂಚಿದ್ದು ಮತ್ತೊಂದು ವಿಶೇಷ.
ಬಳ್ಳಾರಿ ಹುಡುಗರ ಪ್ರೇಮ ಕತೆ, ಚೈತ್ರನ ಚಿತ್ತಾರ, ಲವ್ ರಿಮಿಕ್ಸ್, ಭರತನಾಟ್ಯ ಮುಂತಾದ ನೃತ್ಯರೂಪಕಗಳು ಆಕರ್ಷಕವಾಗಿ ಮೂಡಿ, ಪ್ರೇಕ್ಷಕರ ಮೋಡಿ ಮಾಡಿದವು. ಸಂದೀಪ್ ಹಾಡಿದ‘ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು’ ಗೀತೆ ಎಲ್ಲರ ಮೆಚ್ಚುಗೆ ಗಳಿಸಿತು.
ಮುಕ್ತ, ಜ್ಯೋತಿ, ದೀಪಕ್ಕುಮಾರ್ ಕಾರ್ಯಕ್ರಮವನ್ನು ಬಹಳ ಸೊಗಸಾಗಿ ನಿರೂಪಿಸಿದರು. ವಿಕ್ರಂ ಕುಲಕರ್ಣಿಯವರು ಸಂಯೋಜಿಸಿದ್ದ ರಾಜ್ಕುಮಾರ್ರ ‘ಜೇನಿನ ಹೊಳೆಯೋ.. ಹಾಲಿನ ಮಳೆಯೋ..’ ಗೀತೆಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂತು.
ಈ ಎಲ್ಲದರ ಮಧ್ಯೆ ಶ್ಯಾಂ ರೂಪಿಸಿದ ‘ ಸುಮನ್ ಜೊತೆ ಸಂವಾದ’ ಎಂಬ ಕಾರ್ಯಕ್ರಮದಲ್ಲಿ ಸುಮನ್ ನಗರಕರ್ ಮನಬಿಚ್ಚಿ ಮಾತನಾಡಿದರು. ತೆರೆಯ ಹಿಂದಿನ ಕೆಲಸಗಳನ್ನು ಕಲಿಯುತ್ತಿರುವುದರ ಬಗ್ಗೆ ಹೇಳಿದ ಅವರು, ನಗರಕರ್ ಎಂಬ ಹೆಸರು ತಮ್ಮೊಂದಿಗೆ ಸೇರಿದ ಬಗೆಯನ್ನು ಹಂಚಿಕೊಂಡರು.
ಪಲ್ಲವಿ ಸಂಗೀತ ವೃಂದದ ‘ಜೈ ಭಾರತ ಜನನಿಯ ತನುಜಾತೆ’ ಗೀತೆಗಳ ಸಮೂಹ ಗಾಯನ ಕಾರ್ಯಕ್ರಮ ಕನ್ನಡ ಪ್ರೀತಿಯನ್ನು ದುಪ್ಪಟ್ಟುಗೊಳ್ಳುವಂತೆ ಮಾಡಿತು. ರಸಮಂಜರಿ ಕಾರ್ಯಕ್ರಮದಲ್ಲಿ ಅಭಿಜಿತ್, ಹರ್ಷ, ಗುರುಪೂರ್ಣ, ರಮ್ಯ ಸುಂದರ ಚಿತ್ರಗೀತೆಗಳನ್ನು ಹಾಡಿ ರಂಜಿಸಿದರು. ಸುಮನ್ನಗರ್ಕರ್ ಎರಡು ಹಾಡುಗಳನ್ನು ಹಾಡಿ ಒನ್ಸ್ಮೋರ್ ಗಿಟ್ಟಿಸಿಕೊಂಡರು.
ಮಹಿಳೆಯರ ಕೋಲಾಟ ಸೊಗಸಾಗಿತ್ತು. ಕಾರ್ಯಕ್ರಮಗಳ ನಡುವೆ ಮಿಂಚಿದ್ದು ಶ್ಯಾಂ ಪ್ರಸಾದ್ ನಿರ್ದೇಶನದ ಹಾಸ್ಯ ನಾಟಕ ‘ಸತ್ಯಮೇವ ಜಯತೆ’. ಬಡಪಾಯಿ ಸ್ಕೂಲ್ ಮಾಸ್ಟರ್ ಶೇಖರನ ಪಾತ್ರದಲ್ಲಿ ರಮೇಶ್ ಬೆಂಗಳೂರ್ ತಮ್ಮ ಸಂಭಾಷಣೆ ಶೈಲಿಯಿಂದ ಎಲ್ಲರ ಗಮನಸೆಳೆದರು. ಶ್ಯಾಂ, ಚಿತ್ರ, ರಮೇಶ್, ವಿದ್ಯಾ ಎಲ್ಲರೂ ತಮ್ಮತಮ್ಮ ಪಾತ್ರಕ್ಕೆ ಜೀವತುಂಬಿದ್ದರು.
ವೈವಿಧ್ಯಮಯ ಕಾರ್ಯಕ್ರಮಗಳಂತೆಯೇ ಊಟವೂ ಸಹಾ ವೈವಿಧ್ಯಮಯವಾಗಿತ್ತು. ಒಬ್ಬಟ್ಟು, ಬಿಸಿಬೆಳೆಭಾತ್, ಮೊಸರನ್ನ, ಅಂಬೊಡೆ, ಬೀನ್ಸ್ ಪಲ್ಯ, ಕ್ಯಾರೆಟ್ ಹಲ್ವಾ ಹೀಗೆ ಅನೇಕ ತರಾವರಿ ಪಾಕಗಳು ಭೋಜನದ ಮೌಲ್ಯ ಹೆಚ್ಚುವಂತೆ ಮಾಡಿದ್ದವು.
ಅಂತಿಮವಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಕಲರಿಗೂ ಸಂಘದ ಉಪಾಧ್ಯಕ್ಷ ಶರತ್ ವಂದಿಸಿದರು. ವೀಣಾ ಅನಿಲ್ಕುಮಾರ್, ಗಾಯತ್ರಿ ಸುಮನ್, ಶಶಿ, ಜಗದೀಶ್, ಶ್ರೀಕಾಂತ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.












Click it and Unblock the Notifications