ಸಕಲಕಲಾವಲ್ಲಭ ಶ್ರೀಕೃಷ್ಣನ ಹುಟ್ಟುಹಬ್ಬ!
ಶ್ರಾವಣ ಕೃಷ್ಣ ಪಕ್ಷದ ಅಷ್ಟಮಿಯಂದು (ಆಗಸ್ಟ್ 13) ಆಚರಿಸಲಾಗುವ ಹಬ್ಬವೇ ಗೋಕುಲಾಷ್ಟಮಿ ಅಥವಾ ಶ್ರೀಕೃಷ್ಣಜನ್ಮಾಷ್ಟಮಿ. ಮಥುರಾ ನಗರದ ಅರಸ ಕಂಸಮಹಾರಾಜನಿಗೆ ತನ್ನ ತಂಗಿ ದೇವಕಿಯಿಂದ ಹುಟ್ಟುವ ಮಕ್ಕಳಿಂದ ಮರಣ ನಿಶ್ಚಿತ ಎನ್ನುವ ಸುದ್ದಿ ಅಶರೀರವಾಣಿಯಿಂದ ತಿಳಿಯುತ್ತದೆ. ಇದರಿಂದ ಚಿಂತಾಕ್ರಾಂತನಾಗುವ ಕಂಸ ತನ್ನ ತಂಗಿ ದೇವಕಿ ಮತ್ತು ಭಾವ ವಸುದೇವನನ್ನು ಬಂಧಿಸಿ ಅವರಿಗೆ ಹುಟ್ಟುವ ಮಕ್ಕಳನ್ನು ಹತ್ಯೆ ಮಾಡುತ್ತಾ ಬರುತ್ತಾನೆ. ಶ್ರಾವಣ ಮಾಸದಲ್ಲಿ ಚಂದ್ರೋದಯದ ನಂತರ ಮಧ್ಯರಾತ್ರಿ ದೇವತಾನುಗ್ರಹದಿಂದ ದೇವಕಿ ಎಂಟನೆ ಮಗುವಿಗೆ ಜನ್ಮನೀಡುತ್ತಾಳೆ. ಈತನೇ ಬಾಲಕೃಷ್ಣ. ಮತ್ತೆ ಕಂಸನಿಂದ ಈ ಮಗುವಿಗೆ ತೊಂದರೆ ತಪ್ಪಿದ್ದಲ್ಲ ಎಂದು ತಿಳಿದ ವಸುದೇವ ಮಗುವನ್ನು ರಕ್ಷಿಸುವಂತೆ ಯಾದವ ಕುಲದ ಯಶೋಧಾಳಿಗೆ ಒಪ್ಪಿಸುತ್ತಾನೆ.
ಯಶೋಧಾಳ ಲಾಲನೆ ಪಾಲನೆಯಲ್ಲಿ ಬೆಳೆಯುವ ಶ್ರೀಕೃಷ್ಣ ತನ್ನ ತುಂಟತನದ ಆಟ ಪಾಠಗಳಿಂದ ಎಲ್ಲರ ಪ್ರೀತಿಗೆ ಪಾತ್ರನಾಗುತ್ತಾನೆ. ಮಣ್ಣು ತಿಂದು ತನ್ನ ಸಾಕು ತಾಯಿಗೆ ಬ್ರಹ್ಮಾಂಡವನ್ನು ತನ್ನ ಬಾಯಿಯಲ್ಲಿ ತೋರಿಸಿ ಮುಂದೆ ಅನೇಕ ಲೋಕ ಕಲ್ಯಾಣವನ್ನು ಮಾಡಿ ಮಹಾನ್ ಪುರುಷ ಎನಿಸಿಕೊಳ್ಳುವುದು ಶ್ರೀಕೃಷ್ಣನ ಬಗ್ಗೆ ಇರುವ ಪೌರಾಣಿಕ ಹಿನ್ನಲೆ. ಗೀತೋಪದೇಶಿ, ಮಹಾಭಾರತದ ಸೂತ್ರಧಾರನೂ ಅವನೇ ತಾನೆ! ಸಂಭವಾಮಿ ಯುಗೇಯುಗೇ.
ಮಥುರಾ ನಗರ, ನಂದಗೋಕುಲ, ದ್ವಾರಕಾ, ಪಂಡರಾಪುರ ಮತ್ತು ಬೆಂಗಳೂರಿನ ಇಸ್ಕಾನ್ ದೇವಾಲಯಗಳಲ್ಲದೆ ಹಿಂದೂ ಧರ್ಮೀಯರ ಮನೆಮನೆಗಳಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಪ್ರಮುಖ ಕೃಷ್ಣ ದೇವಾಲಯವಾದ ಉಡುಪಿಯಲ್ಲಿ ಶ್ರೀ ಕೃಷ್ಣಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಉತ್ಸವ ಸೆಪ್ಟೆಂಬರ್ 11 ಮತ್ತು 12ರಂದು ನಡೆಯಲಿದೆ. ಅಮ್ಮಂದಿರು ತಮ್ಮ ಮಕ್ಕಳಿಗೆ ಕೃಷ್ಣನ ಉಡುಗೆ ತೊಡುಗೆ ವೇಷಹಾಕಿ ನೋಡಿ ಆನಂದಿಸುವುದು ಈ ಹಬ್ಬದ ದಿನದ ಸಾಂಸ್ಕೃತಿಕ ವೈಶಿಷ್ಟ್ಯಗಳಲ್ಲೊಂದು. ಅಯ್ಯಂಗಾರ್ ಪಂಗಡಕ್ಕೆ ಸೇರಿದ ಮನೆಗಳಲ್ಲಿ ಜನ್ಮಾಷ್ಟಮಿ ಸಂಭ್ರಮ ಹೆಚ್ಚು. ಕೃಷ್ಣ ವಿಗ್ರಹಕ್ಕೆ ಅಲಂಕಾರ, ಪೂಜೆ, ಕೋಡುಬಳೆ, ಚಕ್ಕುಲಿ, ತೇಂಗೋಳು, ಮುಚ್ಛೋರೆ, ಶಂಕರಪೋಳಿ ಮುಂತಾದ ಕರಿದ ತಿಂಡಿಗಳ ಸಮಾರಾಧನೆ.
ದಟ್ಸ್ ಕನ್ನಡ ಓದುಗರಿಗೆ ಮತ್ತು ಜಾಹೀರಾತುದಾರರಿಗೆ ಜನ್ಮಾಷ್ಟಮಿ ಹಾರ್ಧಿಕ ಶುಭಾಶಯಗಳು.