ಬೆಂಗಳೂರ ಜಾಗರಣೆಯ ಕಡಲಲಿ ನಗೆಯ ಅಲೆ
ಬೆಂಗಳೂರು : ನಗರದ ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ ಮಹಾಶಿವರಾತ್ರಿ ಜಾಗರಣೆ ಸೇರಿದ್ದವರು ತಪ್ಪಿಯೂ ತೂಕಡಿಸಲಿಲ್ಲ. ಆ.ರಾ ಮಿತ್ರ ಮತ್ತು ಮಾಸ್ಟರ್ ಹಿರಣ್ಣಯ್ಯ ಸಭಿಕರ ಗಮನವನ್ನೆಲ್ಲಾ ತಮ್ಮ ನಗೆ ಚಟಾಕಿಗಳಲ್ಲಿ ಹಿಡಿದಿಟ್ಟುಕೊಂಡಿದ್ದರು. ಅದು ಶಿವರಾತ್ರಿ ಪ್ರಯುಕ್ತ ಆಯೋಜಿಸಿದ್ದ ಜಾಣ-ಜಾಣೆಯರ ನಗೆ ಜಾಗರಣೆ ಕಾರ್ಯಕ್ರಮ.
ಈಶ್ವರನಿಗೆ ಹಾವು ಮಫ್ಲರ್ ಇದ್ದ ಹಾಗೆ. ತಲೆಮೇಲೆ ಒವರನ ಹೆಡ್ ಟ್ಯಾಂಕ್ ಇಟ್ಟುಕೊಂಡಿರುವುದುರಿಂದ ಚಳಿಯಾಗದ ಹಾಗೆ ಹಣೆಯಲ್ಲಿ ಅಗ್ಗಿಷ್ಟಿಕೆ ಇಟ್ಟುಕೊಂಡಿದ್ದಾನೆ ಎಂದು ಆ.ರಾ. ಮಿತ್ರರು ಎಸೆದ ಜೋಕು ಕೇಳಿ ನಕ್ಕು ಮುಗಿಸುತ್ತಲೇ ಇನ್ನೊಂದು ಜೋಕು ಸಭಿಕರ ಮುತ್ತಿಕೊಂಡಿತು. ಮಾಸ್ಟರ್ ಹಿರಣ್ಣಯ್ಯನವರು ದುಃಖಕ್ಕೆ ನಗುವೇ ಮೋಕ್ಷ ಎನ್ನುತ್ತಾ ತಮ್ಮ ಜೋಕುಗಳ ಸಾಲುಗಳನ್ನೂ ಸೇರಿಸಿದರು.
ತೊಗರಿ ಬೆಲೆ ಎಷ್ಟ್ರೀ ..., 40 ರೂಪಾಯಿ . ಅದು ಇವತ್ತು ಬೆಳಿಗ್ಗೆ ಇದ್ದ ಬೆಲೆ, ಈಗ ರೇಟೆಷ್ಟು ಅಂತ ಹೇಳ್ರೀ....
ನಲ್ವತ್ತು ಮೂವತ್ತರ ಸೈಟಿನಲ್ಲಿ ಐದು ಅಡಿ ಆಚೆ ಬಿಡು, ಐದು ಅಡಿ ಈಚೆ ಬಿಡು, ಉಳಿದುದರಲ್ಲಿ ಪ್ರಾಣ ಬಿಡು... ಹೀಗೆ ಬದಲಾಗುತ್ತಿರುವ ಬದುಕಿನ ಶೈಲಿಯಿಂದಾಗಿ ಮಂದಿ ಎದುರಿಸುತ್ತಿರುವ ಸಮಸ್ಯೆಗಳ ಬಗೆಗಿನ ಹಾರಿದ ನಗೆ ಚಟಾಕಿಗಳ ನಡುವೆ ರಾತ್ರಿ ಕಳೆದದ್ದೇ ಗೊತ್ತಾಗಲಿಲ್ಲ. ಕಾರ್ಯಕ್ರಮದಲ್ಲಿ ಬಿ.ಕೆ.ಎಸ್.ವರ್ಮಾ, ಶತಾವಧಾನಿ ಆರ್. ಗಣೇಶ್ ಭಾಗವಹಿಸಿದ್ದರು.
ಇತರೆಡೆಗಳಲ್ಲಿ ಶಿವರಾತ್ರಿ : ಅಲಸೂರಿನಲ್ಲಿರುವ ಸೋಮೇಶ್ವರ ದೇವಾಲಯದಲ್ಲಿ ವಿಶೇಷ ಶಿವ ಪೂಜೆ ನಡೆಯಿತು. ಇಲ್ಲಿರುವ ನಂದಿ ವಿಗ್ರಹದ ಕಿವಿಯಲ್ಲಿ ಕೇಳಿಕೊಳ್ಳುವ ಬೇಡಿಕೆಗಳು ಶಿವನಿಗೆ ತಲುಪುತ್ತದೆ ಎಂಬ ಪ್ರತೀತಿ ಇರುವುದರಿಂದ ಭಕ್ತರು ನಂದಿ ಕಿವಿಯಲ್ಲಿ ತಮ್ಮ ಬೇಡಿಕೆಗಳನ್ನು ಪಿಸುಗುಟ್ಟಿದರು.
ಮೈಸೂರು ಅರಮನೆ ಆವರಣದ ತ್ರಿನಯನೇಶ್ವರ ದೇವಸ್ಥಾನದಲ್ಲಿ ಶಿವನಿಗೆ ಚಿನ್ನದ ಕೊಳಗ ಧಾರಣೆ ಮಾಡಿ ಪೂಜೆ ಸಲ್ಲಿಸಲಾಯಿತು. ಬಳ್ಳಾರಿಯಲ್ಲಿ ಪ್ರಜಾಪಿತ ಈಶ್ವರಿ ವಿಶ್ವ ವಿದ್ಯಾಲಯದವರು 101 ಶಿವಲಿಂಗಗಳ ಮೆರವಣಿಗೆ ನಡೆಸಿದ್ದರು. ಸಿದ್ಧಗಂಗೆ ದೇವಸ್ಥಾನದಲ್ಲಿ ರಾಸುಗಳ ಓಟದ ಸ್ಪರ್ಧೆ ನಡೆಸಿ, ಬಹುಮಾನ ವಿತರಿಸಲಾಯಿತು.
ಶಿವರಾತ್ರಿ ಹಬ್ಬದ ಪ್ರಯುಕ್ತ ಬೆಂಗಳೂರಿನ ಹಾಲು ಒಕ್ಕೂಟದ ವತಿಯಿಂದ ಕೇಂದ್ರ ಕಾರಾಗೃಹದಲ್ಲಿ ಬುಧವಾರ ಕೈದಿಗಳಿಗೆ ಡಿಐಜಿ (ಕಾರಾಗೃಹ) ಜಯರಾಮಯ್ಯ ಹಾಲು ಮತ್ತು ಪೇಡ ವಿತರಿಸಿದರು. ಹೆಜಮಾಡಿಯ ಮಹಾಲಿಂಗೇಶ್ವರ ದೇವರಿಗೆ ರಜತ ಪಲ್ಲಕಿ ಅರ್ಪಿಸಲಾಯಿತು. ಶಿವರಾತ್ರಿ ದಿನ, ರಾಜ್ಯಾದ್ಯಂತ ಎಲ್ಲ ಶಿವಾಲಯಗಳಲ್ಲಿ ವಿಶೇಷ ಪೂಜೆ ನಡೆಸಲಾಗಿತ್ತು.
(ಇನ್ಫೋ ವಾರ್ತೆ)