ಸಂಕ್ರಾಂತಿ ಹಬ್ಬದ ದಾನ ವೈಶಿಷ್ಟ್ಯ, ಪಿತೃ ದೋಷ ನಿವಾರಣೆಯ ದಾರಿ
Recommended Video

ಇಂದಿನ ಲೇಖನದಲ್ಲಿ ಸಂಕ್ರಾಂತಿ ಹಬ್ಬದ ವಿಶೇಷಗಳನ್ನು ತಿಳಿದುಕೊಳ್ಳೋಣ. ನವಗ್ರಹಗಳ ನಾಯಕ ಎಂದು ಕರೆಸಿಕೊಳ್ಳುವ ರವಿಯು ತನ್ನ ಪಥವನ್ನು ಬದಲಿಸಿಕೊಳ್ಳುವ, ಧನುಸ್ಸು ರಾಶಿಯಿಂದ ಮಕರಕ್ಕೆ ಪ್ರವೇಶ ಮಾಡುವ ಪರ್ವ-ಪುಣ್ಯ ಕಾಲವಿದು. ಜನವರಿ 15ನೇ ತಾರೀಕಿನ ಮಂಗಳವಾರ ಈ ಬಾರಿಯ ಸಂಕ್ರಾಂತಿ ಹಬ್ಬವಿದೆ.
ಉತ್ತರಾಯಣದ ಆರಂಭ ಕಾಲವಾದ ಸಂಕ್ರಾಂತಿ ಪರ್ವ ದಿನವು ಮುಂದಿನ ಆರು ತಿಂಗಳ ಹಲವು ಶುಭ ಕಾರ್ಯಗಳಿಗೆ ಮುನ್ನುಡಿ ಬರೆಯಲಿದೆ. ಅಷ್ಟೇ ಅಲ್ಲ, ಇದು ಸ್ವರ್ಗದ ಬಾಗಿಲು ತೆಗೆಯುವಂಥ ಸಮಯ ಎಂಬ ನಂಬಿಕೆ ಹಿಂದೂ ಧರ್ಮದಲ್ಲಿ ಇದೆ. ಇಷ್ಟೆಲ್ಲ ಮಹತ್ವ ಇರುವ ಹಬ್ಬವನ್ನು ಹಾಗೂ ದಿನವನ್ನು ನಾವು ಹೇಗೆ ಎದುರುಗೊಳ್ಳಬೇಕು ಎಂಬ ಪ್ರಶ್ನೆ ಇರುತ್ತದೆ.
ಅದೇ ರೀತಿ ಸಂಕ್ರಾಂತಿ ದಿನದ ಆಚರಣೆ ಹೇಗಿರಬೇಕು, ಅನುಸರಿಸಬೇಕಾದ ನಿಯಮಗಳೇನು ಎಂಬುದನ್ನು ತಿಳಿದುಕೊಳ್ಳುವ ಆಸೆ ಇರುತ್ತದೆ. ಹಬ್ಬದ ಆಚರಣೆ ಎಲ್ಲರೂ ಮಾಡುತ್ತೇವೆ. ಆದರೆ ಅದರ ಹಿನ್ನೆಲೆ, ಅರ್ಥ ತಿಳಿದು ಶ್ರದ್ಧಾ-ಭಕ್ತಿಪೂರ್ವಕವಾಗಿ ಆಚರಿಸಿದರೆ ದೊರೆಯುವ ಫಲವೇ ಅದ್ಭುತ.
ಸಂಕ್ರಾಂತಿ ಹಬ್ಬದ ಪ್ರಮುಖಾಂಶಗಳು ಹೀಗಿವೆ:

ಕಡ್ಡಾಯವಾಗಿ ನೂತನ ವಸ್ತ್ರ ಧಾರಣೆ ಮಾಡಬೇಕು
ಅಂದು ಸೂರ್ಯೋದಯಕ್ಕೂ ಮುಂಚಿತವಾಗಿ ಎದ್ದು, ತಲೆಗೆ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡಿ, ಕಡ್ಡಾಯವಾಗಿ ನೂತನ ವಸ್ತ್ರಧಾರಣೆ ಮಾಡಬೇಕು. ಅಂದಿನಿಂದ ಉತ್ತರಾಯಣ ಪುಣ್ಯಕಾಲ ಆರಂಭವಾಗುತ್ತದೆ. ವಿವಾಹ, ಗೃಹಪ್ರವೇಶ, ನಾಮಕರಣ, ಉಪನಯನ ಇಂಥ ಹಲವು ಶುಭ ಕಾರ್ಯಗಳಿಗೆ ಉತ್ತರಾಯಣ ಆರಂಭದ ಸಂಕ್ರಾಂತಿ ಶ್ರೇಷ್ಠ ಕಾಲ. ಅಲ್ಲಿಂದ ಆರಂಭವಾಗಿ ದಕ್ಷಿಣಾಯಣದ ಆರಂಭದವರೆಗೆ ಎಲ್ಲ ಶುಭ ಕಾರ್ಯಗಳಿಗೆ ಸೂಕ್ತವಾದ ಸಮಯ. ಅಂದ ಹಾಗೆ ಮೂರು ಸಂಕ್ರಾಂತಿಗಳ ವಿಶೇಷ ಪ್ರಾಶಸ್ತ್ಯ ಇದೆ. ಮೇಷ ಸಂಕ್ರಾಂತಿ, ಕರ್ಕಾಟಕ ಹಾಗೂ ಮಕರ ಸಂಕ್ರಾಂತಿ ಹೀಗೆ ಮೂರು ಸಂಕ್ರಮಣಗಳು ವಿಶಿಷ್ಟ. ಅದರಲ್ಲೂ ಮಕರ ಸಂಕ್ರಾಂತಿಗೆ ವಿಶೇಷದಲ್ಲಿ ವಿಶೇಷ ಮಹತ್ವ.

ದೇವಾಲಯಕ್ಕೆ ತೆರಳಿ ದೇವರ ದರ್ಶನ ಮಾಡಿ
ಬೇಗ ಎದ್ದು, ಸ್ನಾನ ನಂತರ ಮನೆಯಲ್ಲಿ ಪೂಜೆ-ಪುನಸ್ಕಾರ ಮಾಡಬೇಕು. ಆ ನಂತರ ಹಿರಿಯರಿಗೆ ನಮಸ್ಕಾರ ಮಾಡಬೇಕು. ಅದಕ್ಕೂ ಮುನ್ನ ಮನೆಯ ಮುಂದೆ ಗುಡಿಸಿ, ಗೋ ಮಯದಲ್ಲಿ (ಸಗಣಿ) ಸಾರಿಸಿ, ರಂಗೋಲಿ ಇಟ್ಟು ಸಿಂಗಾರ ಮಾಡಬೇಕು. ಆ ದಿನ ಕಡ್ಡಾಯವಾಗಿ ದೇವಾಲಯಕ್ಕೆ ತೆರಳಿ, ದರ್ಶನ ಮಾಡಲೇಬೇಕು. ಹಬ್ಬದ ಅಡುಗೆ ಮಾಡಬೇಕು. ಅದರಲ್ಲಿ ಸಿಹಿ ಪದಾರ್ಥಗಳು ಮಾಡಬೇಕು. ಮತ್ತು ಅಡುಗೆ ಪದಾರ್ಥಗಳನ್ನು ಮನೆಯಲ್ಲಿ ದೇವರ ಮನೆಯಿದ್ದರೆ ಅಲ್ಲಿ, ಇಲ್ಲದಿದ್ದರೆ ದೇವರ ಫೋಟೋ ಅಥವಾ ವಿಗ್ರಹದ ಎದುರಿಗೆ ಇಟ್ಟು ನೈವೇದ್ಯ ಮಾಡಿ, ಆ ನಂತರ ಸೇವಿಸಬೇಕು. ಆಹಾರ ಪದಾರ್ಥಗಳಲ್ಲಿ ಒಂದು ತುಳಸೀದಳವನ್ನಾದರೂ ಕಡ್ಡಾಯವಾಗಿ ಹಾಕಬೇಕು.

ಪಿತೃ ದೋಷ ನಿವಾರಣೆಗಾಗಿ ಗೋ ಪೂಜೆಯನ್ನು ಮಾಡಿ
ದಾನಗಳಿಗೆ ಸಂಕ್ರಾಂತಿಯಲ್ಲಿ ವಿಶೇಷ ಮಹತ್ವ. ಎಳ್ಳು, ವಸ್ತ್ರ ದಾನ ಮಾಡುವುದು ಬಹಳ ಶ್ರೇಷ್ಠ. ನದಿ, ಸಂಗಮ ಅಥವಾ ಸಮುದ್ರ ಸ್ನಾನ ಬಹಳ ಶ್ರೇಷ್ಠ. ಒಂದು ವೇಳೆ ನದಿ-ಸಮುದ್ರ ಸ್ನಾನ ಮಾಡಲು ಸಾಧ್ಯವಾಗದಿದ್ದಲ್ಲಿ ಮನೆಯಲ್ಲೇ ಸ್ನಾನ ಮಾಡುವಾಗ ತೀರ್ಥ ಸಂಕಲ್ಪ ಮಾಡಿ. ಗಂಗೇಚ ಯಮುನೇಚೈವ... ಎಂದು ಹೇಳಿಕೊಂಡು ಸ್ನಾನ ಮಾಡಿ. ಗೋ ಪೂಜೆಗೆ ಈ ಸಂದರ್ಭದಲ್ಲಿ ತುಂಬ ವಿಶೇಷ ಫಲ ಇದೆ. ಗೋ ಪೂಜೆಯೊಂದ ಪಿತೃ ದೋಷ ನಿವಾರಣೆ ಆಗುತ್ತದೆ. ಇನ್ನು ಕೃಷಿ ಚಟುವಟಿಕೆಗಳಿಗೆ ಬಳಸುವ ಎತ್ತುಗಳಿಗೆ ಹಾಗೂ ಮನೆಯ ರಾಸುಗಳಿಗೆ ಪೂಜೆ ಮಾಡುವ ಸಂಪ್ರದಾಯ ಇದ್ದೇ ಇದೆ. ಗೋ ದರ್ಶನ, ಸ್ಪರ್ಶಣ, ನಮಸ್ಕಾರ ಮಾಡಿ, ಅವುಗಳಿಗೆ ಹಿಂಡಿ-ಬೂಸಾ, ಹುಲ್ಲು ಹೀಗೆ ಮೇವು ನೀಡಿ. ಇದರಿಂದ ಶುಭವಾಗುತ್ತದೆ.

ಖಾರ-ಸಿಹಿ ಪೊಂಗಲ್ ಅಡುಗೆ ಮಾಡಬೇಕು
ಕುಟುಂಬ ಸಮೇತರಾಗಿ ಊಟ ಮಾಡಿ, ಕುಟುಂಬ ಸಮೇತರಾಗಿ ದೇವಾಲಯಕ್ಕೆ ತೆರಳಬೇಕು. ಹಿರಿಯರಿಂದ ಆಶೀರ್ವಾದ ಪಡೆಯಲೇಬೇಕು. ಭೂಮಿಗೂ-ಕೃಷಿಗೂ ಹಾಗೂ ಮನುಷ್ಯರಿಗೂ ಬಿಡಿಸಲಾಗದ ನಂಟು. ಕೃಷಿಗೆ ನಾವು ಬಳಸುವ ರಾಸುಗಳು ಮನೆಯ ಮಕ್ಕಳಿದ್ದಂತೆ. ಅವುಗಳಿಗೆ ಸಿಂಗಾರ ಮಾಡಿ, ಕಿಚ್ಚು ಹಾಯಿಸಬೇಕು. ಇನ್ನು ಎಳ್ಳು-ಕೊಬ್ಬರಿ-ಕಡ್ಲೇಪಪ್ಪು-ಬೆಲ್ಲವನ್ನು ಬೆರೆಸಿ, ಆ ಮಿಶ್ರಣವನ್ನು ಮುತ್ತೈದೆಯರಿಗೆ, ವೀಳ್ಯದೆಲೆ- ಬಾಳೆ ಹಣ್ಣು, ದಕ್ಷಿಣೆ ಸಮೇತ ನೀಡಬೇಕು. ಮನೆಯಲ್ಲಿ ಪುಟ್ಟ ವಯಸ್ಸಿನ ಮಕ್ಕಳಿಗೆ ಆರತಿ ಮಾಡಬೇಕು. 'ಎಳ್ಳು-ಬೆಲ್ಲ'ವನ್ನು ಒಂದು ತಟ್ಟೆಯಲ್ಲಿಟ್ಟು ಅದನ್ನು ಮಕ್ಕಳಿಗೆ ನಿವಾಳಿಸಬೇಕು. ಸ್ವಲ್ಪ ಪ್ರಮಾಣದ 'ಎಳ್ಳು-ಬೆಲ್ಲ'ವನ್ನು ದೇವರ ಮುಂದಿಟ್ಟು ನೈವೇದ್ಯ ಮಾಡಬೇಕು. ಇಡೀ ಧನುರ್ಮಾಸದಲ್ಲಿ ಖಾರ ಹಾಗೂ ಸಿಹಿ ಪೊಂಗಲ್ ವಿಶೇಷ ಇರುತ್ತದೆ. ಆ ದಿನ ಅಂದರೆ ಸಂಕ್ರಾಂತಿ ಹಬ್ಬದ ದಿನ ಅಡುಗೆಯಲ್ಲಿ ಖಾರ-ಸಿಹಿ ಪೊಂಗಲ್ ಇರಬೇಕು.
ಗುರೂಜಿ ಹರೀಶ್ ಶಾಸ್ತ್ರಿ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಲು ಸಂಪರ್ಕ ಸಂಖ್ಯೆ 7996729783.










Click it and Unblock the Notifications