ಅನಂತ ಸಂಪತ್ತಿನ ಸಮ್ಮುಖದಲ್ಲಿ ಪದ್ಮನಾಭಸ್ವಾಮಿ ವ್ರತ
ಅನಂತ ವ್ರತ, ಅನಂತ ವ್ರತಂ, ಅನಂತ ನೋಮುಲು, ನೋಂಪು ಅಥವಾ ಅನಂತಪದ್ಮನಾಭ ಸ್ವಾಮಿ ವ್ರತ ಎಂದು ಹೆಸರಿಸಿಕೊಳ್ಳುವ ಈ ವ್ರತವನ್ನು ದಂಪತಿಗಳು ತಮ್ಮ ವೈವಾಹಿಕ ಜೀವನದಲ್ಲಿ ಸುಖ-ಸಂತೋಷ ಅನಂತವಾಗಿರಲಿ ಎಂದು ಬಯಸಿ, ವಿಷ್ಣುವಿನ ವ್ರತದಲ್ಲಿ ತೊಡಗುತ್ತಾರೆ.
ಪೂಜೆಯ ನಂತರ ಮಹಿಳೆಯರು ಎಡಗೈಗೆ ಮತ್ತು ಪುರುಷರು ಬಲಗೈಗೆ ಅನಂತ ದಾರವನ್ನು ಕಟ್ಟಿಕೊಳ್ಳುತ್ತಾರೆ. ಸಾಮಾನ್ಯವಾಗಿ, ದಂಪತಿಗಳು ಮದುವೆಯಾದ ಹೊಸದರಲ್ಲಿ ಈ ವ್ರತವನ್ನು ಆಚರಿಸಲು ಆರಂಭಿಸುತ್ತಾರೆ. ನಿರಂತರವಾಗಿ 14 ವರ್ಷಗಳ ಕಾಲ ಆಚರಿಸುತ್ತಾ, ಪದ್ಮನಾಭಸ್ವಾಮಿ ಆಶೀರ್ವಾದ ಪಡೆಯುತ್ತಾರೆ.
ಭಾದ್ರಪದ ಮಾಸದ ಆಶ್ವಯುಜ ಶುಕ್ಲ ಪಕ್ಷದಲ್ಲಿ ನಾಲ್ಕನೆಯ ದಿನದಂದು (ಚತುರ್ದಶಿ ಅಥವಾ ಗೋವತ್ಸ ದ್ವಾದಶಿ) ವ್ರತಾಚರಣೆ ನಡೆಯುತ್ತದೆ. ಗಣೇಶನ ವಿಸರ್ಜನೆಯ ದಿನವನ್ನಾಗಿಯೂ ಆಚರಿಸಲಾಗುತ್ತದೆ. ಅಂದಹಾಗೆ, ಕೇರಳದಲ್ಲಿ ಓಣಂ ಆಚರಣೆಯ ಎರಡನೇ ದಿನದಂದು ಪದ್ಮನಾಭಸ್ವಾಮಿ ವ್ರತವನ್ನು ಆಚರಿಸುವ ಪದ್ಧತಿ ಇದೆ.
ಹಾಗೆ ನೋಡಿದರೆ ಕರ್ನಾಟಕದಲ್ಲಿ ಅನಂತಪದ್ಮನಾಭ ಸ್ವಾಮಿಯ ಭಕ್ತರು ಅಪಾರ ಸಂಖ್ಯೆಯಲ್ಲಿದ್ದಾರೆ. ಭಕ್ತರು ಕಠಿಣ ವ್ರತಾಚರಣೆ ಮಾಡುತ್ತಾರೆ. ಪದ್ಮನಾಭ ಸ್ವಾಮಿಯ ದೇವಸ್ಥಾನಗಳನ್ನು ಬಹುತೇಕ ಎಲ್ಲ ಊರುಗಳಲ್ಲೂ ಕಾಣಬಹುದು. ಆದರೆ ಈ ಬಾರಿ, ಕೇರಳದಲ್ಲಿ ಅನಂತ ಸಂಪತ್ತು ಪ್ರಕಟಗೊಂಡಿರುವುದರಿಂದ ಅನಂತಪದ್ಮನಾಭ ಸ್ವಾಮಿಯ ಬಗ್ಗೆ ನೇಮನಿಷ್ಠೆಗಳು ಎಲ್ಲೆಡೆ ಹೆಚ್ಚಾಗಿದೆ ಎಂದು ಹೇಳಬಹುದು.
ಈ ಮಧ್ಯೆ, ಪದ್ಮನಾಭ ದೇಗುಲ ನೆಲಮಾಳಿಗೆಯಲ್ಲಿ ದೊರೆತಿರುವ ಅಪಾರ ಸಂಪತ್ತಿನ ಬಗ್ಗೆ ಮತ್ತು 'ಬಿ" ಉಗ್ರಾಣ ದ್ವಾರ ತೆಗೆಯಬೇಕೆ, ಬೇಡವೇ ಎಂಬುದರ ಬಗ್ಗೆ ಸುಪ್ರೀಂ ಕೋರ್ಟ್ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಈ ಸಂಬಂಧ ರಾಜಮನೆತನದ ರಾಜಾ ಮಾರ್ತಾಂಡ ವರ್ಮಾ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಯುತ್ತಿದೆ.