Get Updates
Get notified of breaking news, exclusive insights, and must-see stories!

ಗಣೇಶ ಚತುರ್ಥಿ 2022: ಯಾವ ಸಮಯ, ನಕ್ಷತ್ರದಂದು ಮನೆಗೆ ಗಣಪತಿ ತರಬೇಕು?

ನಾಡಿನೆಲ್ಲೆಡೆ ಗೌರಿ ಗಣೇಶ ಹಬ್ಬದ ಸಂಭ್ರಮ. ಆಗಸ್ಟ್ 30ರಂದು ಗೌರಿ ಹಬ್ಬವಾದರೆ 31ರಂದು ಗಣೇಶನ ಉತ್ಸವ. ಬಹುತೇಕ ಎಲ್ಲಾ ಬೀದಿಗಳಲ್ಲಿ ಗಣೇಶನನ್ನು ಕೂರಿ ವಿಜೃಂಭಣೆಯಿಂದ ಆಚರಿಸುತ್ತಾರೆ.

ಮನೆಮನೆಗಳಲ್ಲಿ ಎಲ್ಲರೂ ಗೌರಿ ಗಣೇಶನ ಪ್ರತಿಷ್ಠಾಪನೆ ಮಾಡದೇ ಹೋದರೂ ಬಹಳ ಮನೆಗಳಲ್ಲಿ ಪ್ರತೀ ವರ್ಷ ಗೌರಿ ಗಣೇಶ ಕೂರಿಸುವ ಪರಿಪಾಠ ಬೆಳೆಸಿಕೊಂಡಿದ್ದಾರೆ.

ಶಕ ಸಂವತ 1944, ವಿಕ್ರಮ ಶಕೆ 2079ರ ಭಾದ್ರಪದ ಮಾಸ ಶುಕ್ಲ ಪಕ್ಷದ ಚತುರ್ಥಿಯಂದು ವಿಘ್ನವಿನಾಯಕನ ಜನ್ಮದಿನ. ಈ ದಿನದಂದು ಗಣೇಶ ಚತುರ್ಥಿ ಉಪವಾಸ ಮಾಡಲಾಗುತ್ತದೆ.

ಈ ದಿನ ಚಿತ್ರ ನಕ್ಷತ್ರ, ವಿಶಕುಂಭ ಮತ್ತು ಬವಕರಣ ಯೋಗದ ಪ್ರಭಾವ ಇರುತ್ತದೆ. ಕನ್ಯಾ ಮತ್ತು ತುಲಾ ರಾಶಿಯ ಪ್ರಭಾವವೂ ಇರುತ್ತದೆ. ಪಂಚಾಂಗದ ಪ್ರಕಾರ ಬುಧ ಗ್ರಹ ತನ್ನ ಮೂಲ ರೂಪದಲ್ಲಿ ಇರುತ್ತದೆ.

ಗಣಪತಿಯ ವಿಗ್ರಹ ಯಾವ ಸಮಯದಲ್ಲಿ ಪ್ರತಿಷ್ಠಾಪಿಸಬೇಕು, ಹೇಗೆ ಮಾಡಬೇಕು, ಪೂಜಾ ವಿಧಾನ ಹೇಗಿರಬೇಕು ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಗಣೇಶನ ಯಾವ ಸಮಯದಲ್ಲಿ ತರಬೇಕು?

ಗಣೇಶನ ಯಾವ ಸಮಯದಲ್ಲಿ ತರಬೇಕು?

ಈ ವರ್ಷದ ಗಣೇಶ ಚತುರ್ಥಿಯಂದು ಸೂರ್ಯ ಭದ್ರ ಯೋಗ, ಹಂಸ ಯೋಗ ಮತ್ತು ಶಶ ಯೋಗದ ಸಹಯೋಗದಲ್ಲಿ ಆಚರಿಸಲಾಗುತ್ತದೆ. ಸೂರ್ಯ, ಬುಧ, ಗುರು ಮತ್ತು ಶನಿ ಗ್ರಹಗಳು ತಮ್ಮ ರಾಶಿ ಚಿಹ್ನೆಯಲ್ಲೇ ಇರುವುದು ವಿಶೇಷ. ಭದ್ರ ಯೋಗ ಆಗಸ್ಟ್ 31, ಮಧ್ಯಾಹ್ನ 3:22ರವರೆಗೂ ಇರುತ್ತದೆ. ಈ ಸಮಯ ದಾಟಿದ ಬಳಿಕ ಗಣೇಶನ ಮೂರ್ತಿ ಪ್ರತಿಷ್ಠಾಪಿಸಬೇಕು ಎಂದು ಜ್ಯೋತಿಷಿಗಳು ಹೇಳುತ್ತಾರೆ.

ಗಣೇಶನ ಮೂರ್ತಿ ಪ್ರತಿಷ್ಠಾಪನೆಗೆ ಪ್ರಶಸ್ತಿ ಸಮಯ: ಆಗಸ್ಟ್ 31, ಮಧ್ಯಾಹ್ನ 3:22ರ ನಂತರ ಮೂರ್ತಿ ಪ್ರತಿಷ್ಠಾಪಿಸಿ.

ಪ್ರತಿಷ್ಠಾಪಿಸುವಾಗ ನಿಯಮಗಳು

ಪ್ರತಿಷ್ಠಾಪಿಸುವಾಗ ನಿಯಮಗಳು

ನೀವು ಗಣಪತಿಯನ್ನು ಕೂರಿಸುವ ಮುನ್ನ ಪೀಠ ಅಥವಾ ಹಲಗೆಯ ಮೇಲೆ ನೀರನ್ನು ಚಿಮುಕಿಸಿ ಶುದ್ಧಪಡಿಸಬೇಕು. ನಂತರ ಪೀಠದ ಮೇಲೆ ಕೆಂಪು ವಸ್ತ್ರವನ್ನು ಹರಡಿ, ಅದರ ಮೇಲೆ ಅಕ್ಷತೆ ಹಾಕಿ. ನಂತರ ಅದರ ಮೇಲೆ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ. ಗಣಪತಿ ಮೂರ್ತಿಯನ್ನು ಪೂರ್ವ ದಿಕ್ಕಿಗೆ ಇಡಬೇಕು. ಅಥವಾ ಪೂಜಿಸುವವರ ಮುಖ ದಕ್ಷಿಣ ದಿಕ್ಕಿಗೆ ಬರುವ ರೀತಿಯಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು.

ಗಣೇಶನ ಪ್ರತಿಷ್ಠಾಪನೆಯಾದ ಬಳಿಕ ವಿಗ್ರಹಕ್ಕೆ ನೀರಿನಿಂದ (ಗಂಗಾ ಜಲ) ಅಭಿಷೇಕ ಮಾಡಿ. ಗಣೇಶನಿಗೆ ರಿದ್ಧಿ ಮತ್ತು ಸಿದ್ಧಿ ಎಂದು ಇಬ್ಬರು ಪತ್ನಿಯರು. ಅವರಿಗೆ ಪ್ರತೀಕವಾಗಿ ಗಣೇಶನ ಎರಡೂ ಬದಿಯಲ್ಲಿ ವೀಳ್ಯದೆಲೆಯನ್ನು ಇರಿಸಬೇಕು. ಮೂರ್ತಿಯ ಬಲಭಾಗದಲ್ಲಿ ನೀರಿರುವ ಕಲಶ ಇಡಬೇಕು. ಕೈಯಲ್ಲಿ ಅಕ್ಷತೆ ಮತ್ತು ಹೂ ಹಿಡಿದು ದೇವರನ್ನು ಧ್ಯಾನಿಸುತ್ತಾ, "ಓ ಗಣಪತಯೇ ನಮಃ" ಎಂದು ಮಂತ್ರ ಪಠಿಸಿ.

ಮಂತ್ರಪಠನೆ

ಮಂತ್ರಪಠನೆ

ನೀವು ಮನೆಯಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸುವಾಗ ಈ ಕೆಳಗಿನ ಮಂತ್ರವನ್ನು ಪಠಿಸಿದರೆ ಉತ್ತಮ ಎಂದು ಹೇಳಲಾಗುತ್ತದೆ.

"ಅಸ್ಯ ಪ್ರಾಣ ಪ್ರತಿಷ್ಠಾಂತು, ಅಸ್ಯ ಪ್ರಾಣಃ ಕ್ಷರಂತು ಚ
ಶ್ರೀ ಗಣಪತೇ ತ್ವಂ ಸುಪ್ರತಿಷ್ಠಾ ವರದೇ ಭವೇತಾಂ"

ಗಣೇಶನಿಗೆ ಪೂಜೆ ಪುನಸ್ಕಾರ ಬಹಳಷ್ಟು ಇಷ್ಟ. ನೀವು ಪೂಜೆಯಲ್ಲಿ ಆಕಸ್ಮಿಕವಾಗಿ ಯಾವುದಾದರೂ ಅಚಾತುರ್ಯ ನಡೆದಿದೆ ಎನಿಸಿದರೆ ಗಣೇಶನಲ್ಲಿ ಕ್ಷಮೆ ಕೇಳಬಹುದು. ಅದಕ್ಕಾಗಿ ಒಂದು ಮಂತ್ರವೂ ಇದೆ.

"ಗಣೇಶ ಪೂಜನೇ ಕರ್ಮ ಯತ್ ನ್ಯೂನಮಧಿಕಂ ಕೃತಂ
ತೇನ್ ಸರ್ವೇಣ ಸರ್ವಾತ್ಮಾ ಪ್ರಸನ್ನ ಅಸ್ತು ಗಣಪತಿ ಸದಾ ಮಮ"

ಗಣಪತಿ ಪೂಜಾ ವಿಧಾನ

ಗಣಪತಿ ಪೂಜಾ ವಿಧಾನ

ಗಣೇಶನ ಪ್ರತಿಷ್ಠಾಪನೆ ಮತ್ತು ಪೂಜೆಗೆ ಈ ಮುಂದಿನ ವಸ್ತುಗಳು ಸಿದ್ಧವಿರಲಿ: ಗಣೇಶನ ಮೂರ್ತಿ, ಕೆಂಪು ವಸ್ತ್ರ, ಜನೇವು ದಾರ, ಕಲಶ, ರೋಲಿ, ಪಂಚಾಮೃತ, ಮೌಲಿ, ಹೂವು, ಗಂಗಾಜಲ, ಹಣ್ಣು, ತೆಂಗಿನಕಾಯಿ, ಮೋದಕ, ಪಂಚಮೇವ.

ಗಣೇಶ ಚತುರ್ಥಿಯಂದು ಸಾಧ್ಯವಾದರೆ ಉಪವಾಸ ಇರುವುದು ಉತ್ತಮ. ಸ್ನಾನ ಮಾಡಿ ಶುಭ್ರವಾಗಿರಬೇಕು. ಸೂರ್ಯೋದಯಕ್ಕೆ ಮುಂಚೆಯೇ ಎದ್ದು ಸ್ನಾನ ಮಾಡಬೇಕು. ಎಳ್ಳನ್ನು ಅರೆದು ಹಾಲು ಅಥವಾ ಎಣ್ಣೆಯಲ್ಲಿ ಅದನ್ನು ಬೆರೆಸಿ ತಲೆಗೆ ಹಚ್ಚಿ ಸ್ನಾನ ಮಾಡಿದರೆ ಶ್ರೇಷ್ಠ.

ವ್ರತ ಮತ್ತು ಉಪವಾಸ ಇರುವವರು ಮೊದಲಿಗೆ ಗಣಪನ ಸ್ತೋತ್ರ ಮಾಡುತ್ತಾ ಮನಸಿನಲ್ಲಿ ತಮ್ಮ ಸಂಕಲ್ಪಗಳನ್ನು ತೋಡಿಕೊಳ್ಳಬೇಕು. ಉಪವಾಸ ಪರಿಪೂರ್ಣ ಇರಬೇಕು. ನೀರು ಮಾತ್ರ ಕುಡಿಯುತ್ತಾ ಉಪವಾಸ ಇರಬೇಕು. ಸಂಪೂರ್ಣ ಉಪವಾಸ ಕಷ್ಟವಾದರೆ ಹಾಲು ಮತ್ತು ಫಲಾಹಾರ ಸೇವನೆ ಮಾಡಬಹುದು.

ಗಣೇಶನ ಪ್ರತಿಷ್ಠಾಪನೆಗೆ ಮುನ್ನ ಪೂಜಾ ಸ್ಥಳವನ್ನು ಮತ್ತೊಮ್ಮೆ ಸ್ವಚ್ಛಗೊಳಿಸಿ, ರಂಗೋಲಿ ಬಿಡಿಸಿ. ಅಷ್ಟದಳದ ಪದ್ಮ ರಂಗೋಲಿ ಬಿಡಿಸಿ, ಅರಿಶಿನ ಕುಂಕುಮ ಸಿಂಪಡಿಸಬೇಕು. ಅದರ ಮೇಲೆ ತಟ್ಟೆ ಇಟ್ಟು 5 ಹಿಡಿ ಅಕ್ಕಿಯನ್ನು ಮುಷ್ಟಿಯಿಂದ ತೆಗೆದು ಹಾಕಬೇಕು. ಕಲಶದ ಚೊಂಬಿಗೆ ಶುದ್ಧ ನೀರು ತುಂಬಿಸಬೇಕು. ಐದು ವೀಳ್ಯದೆಲೆ ಸುತ್ತಲಿಟ್ಟು, ಮಧ್ಯದಲ್ಲಿ ತೆಂಗಿನ ಕಾಯಿ ಇಡಬೇಕು. ಈ ಕಳಶವನ್ನು ಅಕ್ಕಿ ಇರುವ ತಟ್ಟೆ ಮೇಲೆ ಇಡಬೇಕು. ಇದು ಗಣೇಶನಿಗೆ ಇಡುವ ಕಲಶ.

ನಂತರ ಮೇಲೆ ಹೇಳಿದ ಮಂತ್ರಪಠಣಗಳನ್ನು ಮಾಡುತ್ತಾ ಪೂಜಿಸಬೇಕು. ಮಂತ್ರ ಬರದೇ ಹೋದಲ್ಲಿ ನಾಮಜಪ ಮಾಡಿದರೂ ಸಾಕು. ಪೂಜೆ ಮಾಡುವಾಗ ಗಣಪತಿಗೆ ನೀವು ಮಾನಸಿಕವಾಗಿ ಶರಣಾಗಬೇಕು. ಎಲ್ಲವೂ ನಿನ್ನಿಂದಲೇ, ನೀನೇ ಸರ್ವಸ್ವ ಎಂದು ಆತನನ್ನು ನಂಬಬೇಕು. ಪೂಜೆಯಲ್ಲಿ ಲೋಪವಾಗಿದ್ದರೆ ಮತ್ತು ವೈಯಕ್ತಿಕವಾಗಿ ತಪ್ಪಾಗಿದ್ದರೆ ಮನ್ನಿಸು ಎಂದು ಕೇಳಿಕೊಳ್ಳಬೇಕು.

ಯಾವಾಗ ವಿಸರ್ಜಿಸಬೇಕು?

ಯಾವಾಗ ವಿಸರ್ಜಿಸಬೇಕು?

ಗಣೇಶನ ಪ್ರತಿಷ್ಠಾಪನೆಯಾದ ದಿನವೇ ನೀವು ಮೂರ್ತಿಯನ್ನು ವಿಸರ್ಜಿಸಬಹುದು. ಅಥವಾ ಮೂರು ಅಥವಾ ಐದು ದಿನಗಳ ಕಾಲ ಇಟ್ಟುಕೊಂಡು ಪೂಜಿಸಿ ನಂತರ ವಿಸರ್ಜಿಸಬಹುದು.

ಹರಿಯುವ ನೀರಿನಲ್ಲಿ ಗಣಪನ ವಿಸರ್ಜನೆ ಆದರೆ ಒಳ್ಳೆಯದು ಎನ್ನಲಾಗುತ್ತದೆ. ಈಗಿನ ಕಾಲಘಟ್ಟದಲ್ಲಿ ಅದು ಅಸಾಧ್ಯ. ಕಾನೂನಿನಲ್ಲೂ ಅವಕಾಶ ಇಲ್ಲ. ನದಿಗಳಲ್ಲಿ ಗಣಪತಿ ವಿಸರ್ಜನೆಗೆ ನಿರ್ಬಂಧ ಇದೆ. ನಗರಗಳಲ್ಲಿ ಸರಕಾರವೇ ಅಲ್ಲಲ್ಲಿ ಗಣಪತಿ ವಿಸರ್ಜನೆಗೆ ಸ್ಥಳಾವಕಾಶದ ವ್ಯವಸ್ಥೆ ಮಾಡುತ್ತದೆ. ನೀವು ಮನೆಯಲ್ಲೇ ಬಕೆಟ್‌ನಲ್ಲಿ ಗಣೇಶನನ್ನು ವಿಸರ್ಜಿಸಬಹುದು.

(ಒನ್ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+