ನವರಾತ್ರಿ 2021: ಪೂಜಾ ವಿಧಾನ, ಕಳಶ ಸ್ಥಾಪನೆ ಹಾಗೂ ಶುಭ ಮುಹೂರ್ತ
ನವರಾತ್ರಿ ಬಂದೇ ಬಿಟ್ಟಿದೆ, ನವರಾತ್ರಿಯ ದಿನಗಳಲ್ಲಿ ಪೂಜಿಸುವ ದುರ್ಗೆಯರ ರೂಪ ಮೂಲಮಂತ್ರ ಅಷ್ಟೋತ್ತರ ಶತನಾಮ ಪ್ರತ್ಯೇಕವಿದ್ದರೂ ಉಳಿದಂತೆ ಶೋಡಷೋಪಚಾರ ಪೂಜೆ, ಭೈರವ-ಯೋಗಿನೀ ಪೂಜೆ, ಆವರಣ ಪೂಜೆಯಲ್ಲಿ ಹೆಚ್ಚಿನ ವ್ಯತ್ಯಾಸ ಇರುವುದಿಲ್ಲ. ಆಯಾ ದಿನಗಳಲ್ಲಿ ವಿನಿಯೋಗ ಮಾಡುವ ಮೂಲಮಂತ್ರ ಅಷ್ಟೋತ್ತರ ಶತನಾಮ ಪ್ರತ್ಯೇಕವಾಗಿ ನೀಡಲಾಗುತ್ತದೆ.
ನವರಾತ್ರಿಯನ್ನು 9 ದಿನಗಳು ಹಬ್ಬ, ಉತ್ಸವ ಎಂದು ಆಚರಿಸುತ್ತೇವಾದರೂ ನವರಾತ್ರಿ ಎಂದರೆ ವೃತ. ಈ ಬಗ್ಗೆ ಭವಿಷ್ಯೋತ್ತರ ಪುರಾಣದಲ್ಲಿ ಆಶ್ವೀಜ ಮಾಸದಲ್ಲಿ ಬರುವ ವೃತದ ಬಗ್ಗೆ ಭಗವಂತನೇ ನಾರದರಿಗೆ ನವರಾತ್ರಿಯ ಮಹಾತ್ಮೆಯನ್ನು ಹೇಳಿದ್ದಾನೆ.
ಆಶ್ವೀಜ ಮಾಸದ ಶುದ್ಧ ಪ್ರತಿಪಾದದಿಂದ ಆರಂಭಿಸಿ ದಶಮಿಯವರೆಗಿನ ನವದಿನಗಳಲ್ಲಿ ನವದುರ್ಗೆಯ ರೂಪದಲ್ಲಿರುವ ಶ್ರೀ ಮಹಾಲಕ್ಷ್ಮಿಯನ್ನು ಆರಾಧಿಸಲು ಹಾಗೂ ಅನುಗ್ರಹ ಪಡೆಯಲು ಈ ವೃತವನ್ನು ಮಾಡಬೇಕು. ಶ್ರೀ ಮಹಾಲಕ್ಷ್ಮಿಯು ನವದಿನಗಳಲ್ಲಿ ಜಯಂತೀ, ಮಂಗಲಾ, ಕಾಳಿ, ಸ್ವಧಾ, ಸ್ವಾಹಾ, ಕಪಾಲಿನೀ, ದುರ್ಗಾ, ಕ್ಷಮಾ, ಶಿವಾ, ಧಾತ್ರಿ ಮುಂತಾದ ರೂಪಗಳಲ್ಲಿ ಭಕ್ತರ ಇಷ್ಟಾರ್ಥವನ್ನು ಪೂರೈಸುತ್ತಾಳೆ ಎಂಬ ನಂಬಿಕೆ ಮೊದಲಿನಿಂದಲೂ ಇದೆ.

ನವರಾತ್ರಿಯಲ್ಲಿ ಮಾಡಬೇಕಾದ ಧಾರ್ಮಿಕ ವಿಧಿ:
ನವರಾತ್ರಿಯಲ್ಲಿ ಮುಖ್ಯವಾಗಿ ಸಚ್ಚಾಸ್ತ್ರ ಪಾರಾಯಣ ಮಾಡಬೇಕು. ಅದರಲ್ಲೂ ಶ್ರೀ ವೆಂಕಟೇಶ ಮಹಾತ್ಮೆಯನ್ನು ಪಠಣ ಅಥವಾ ಶ್ರವಣ ಮಾಡಬೇಕು. ಒಂಭತ್ತು ದಿನಗಳಲ್ಲೂ ಜಪ, ತಪ, ದುರ್ಗಾಪೂಜೆಯನ್ನು ಮಾಡಬೇಕು.
ಅಶ್ವಯುಜ ಮಾಸದ ಪ್ರಾರಂಭದಲ್ಲಿ ಹತ್ತು ದಿನಗಳ ಕಾಲ ಆಚರಿಸುವ ಹಬ್ಬವೇ ನವರಾತ್ರಿ. ಚಾಂದ್ರಮಾನ ಪಂಚಾಂಗರೀತ್ಯ ಶರದ್ಋತುವಿನ ಮೊದಲ 9 ದಿನಗಳಲ್ಲಿ ಈ ಹಬ್ಬವನ್ನು ಆಚರಿಸುವುದರಿಂದ ಇದನ್ನು ಶರನ್ನವರಾತ್ರಿ ಎಂದೂ ಕರೆಯುತ್ತಾರೆ.
ನವರಾತ್ರಿ ಪೂಜಾ ಸಾಮಗ್ರಿಗಳು:
ದುರ್ಗಾಮಾತೆಯ ಫೋಟೋ ಅಥವಾ ಮೂರ್ತಿ
ಮೂರ್ತಿಯನ್ನಿಡಲು ಪೀಠ
ಕೆಂಪು ಬಣ್ಣದ ಬಟ್ಟೆ
ಮಾವಿನ ಎಲೆ
ಅಕ್ಷತೆ
ದುರ್ಗಾ ಸಪ್ತಶತಿ ಪುಸ್ತಕ
ಕೆಂಪು ಹಾಗೂ ಹಳದಿ ಮಿಶ್ರಿತ ದಾರ
ಗಂಗಾಜಲ
ಗಂಧ
ಅಡಿಕೆ
ವೀಳ್ಯದೆಲೆ
ಲವಂಗ
ಏಲಕ್ಕಿ
ತೆಂಗಿನ ಕಾಯಿ
ವಿವಿಧ ಧಾನ್ಯಗಳು
ಧಾನ್ಯವನ್ನು ಹಾಕಲು ಮಟ್ಟಸವಾದ ಮಣ್ಣಿನ ಮಡಿಕೆ
ಕುಂಕುಮ
ನವರಾತ್ರಿ ಪೂಜಾ ವಿಧಾನ:
*ಮುಂಜಾನೆ ಎದ್ದು ಶೂಚೀರ್ಭೂತರಾಗಿ, ಶುಚಿಯಾದ ವಸ್ತ್ರವನ್ನು ಧರಿಸಿ ಪೂಜೆಗೆ ಬೇಕಾಗಿರುವ ಸಾಮಾಗ್ರಿಯನ್ನು ಒಂದು ತಟ್ಟೆಯಲ್ಲಿ ಇಟ್ಟುಕೊಳ್ಳಬೇಕು.
*ದುರ್ಗಾ ಮಾತೆಯ ಫೋಟೋ ಅಥವಾ ಮೂರ್ತಿಯನ್ನು ಕೆಂಪು ಬಟ್ಟೆಯ ಮೇಲೆ ಇಡಬೇಕು. ಮಣ್ಣಿನ ಮಡಿಕೆಯಲ್ಲಿ ಧಾನ್ಯಗಳ ಬೀಜವನ್ನು ಹಾಕಿ, ನೀರನ್ನು ಚಿಮುಕಿಸಿ, ನವಮಿಯವರೆಗೂ ನೀರನ್ನು ಚಿಮುಕಿಸಬೇಕು.
*ಶುಭ ಮುಹೂರ್ತದಲ್ಲಿ ಘಟಸ್ಥಾಪನಾ ಪ್ರಕ್ರಿಯೆಯನ್ನು ಮಾಡಿ. ಒಂದು ಹೂಜಿ ಅಥವಾ ಸಣ್ಣ ಮಡಕೆಯಲ್ಲಿ ಗಂಗಾಜಲವನ್ನು ಹಾಕಿ, ಮಡಕೆಯ ಬಾಯಿಯ ಮೇಲೆ ಮಾವಿನ ಎಲೆಯನ್ನು ಇಡಬೇಕು. ಮಡಕೆಯ ಕುತ್ತಿಗೆಯ ಭಾಗಕ್ಕೆ ಪವಿತ್ರ ಕೆಂಪು ದಾರವನ್ನು ಕಟ್ಟಬೇಕು.
*ತೆಂಗಿನ ಕಾಯಿಗೂ ಕೆಂಪು ದಾರವನ್ನು ಕಟ್ಟಿ ಮಡಿಕೆಯ ಬಾಯಿಯ ಭಾಗದಲ್ಲಿ ಮಾವಿನ ಎಲೆ ಜೋಡಿಸಿದ ಮಧ್ಯದಲ್ಲಿ ಇಡಬೇಕು. ಈ ಮಡಕೆಯನ್ನು ಧಾನ್ಯವಿಟ್ಟ ಮಡಕೆಯ ಪಕ್ಕದಲ್ಲೇ ಇಡಬೇಕು.
*ದೇವಿಗೆ ಹೂವು, ಕರ್ಪೂರ, ಗಂಧದ ಕಡ್ಡಿ, ದ್ರವ್ಯ ಹಾಗೂ ಭಕ್ಷ್ಯಗಳನ್ನು ಅರ್ಪಿಸಿ, ಪಂಚೋಪಚಾರ ಪೂಜೆಯನ್ನು ಮಾಡಬೇಕು
*ದುರ್ಗಾ ಮಂತ್ರವನ್ನು ಒಂಭತ್ತು ದಿನಗಳಲ್ಲೂ ಪಠಿಸಿ, ನಿಮ್ಮ ಕೋರಿಕೆಯನ್ನು ಸಲ್ಲಿಸಿ ಹಾಗೂ ದೇವಿಯನ್ನು ನಿಮ್ಮ ಮನೆಗೆ ಆಹ್ವಾನಿಸಿ, ಅವಳ ಉಪಸ್ಥಿತಿಯಲ್ಲಿ ಮನೆಯನ್ನು ಅನುಗ್ರಹಿಸುವಂತೆ ಬೇಡಿಕೊಳ್ಳಿ
*ನವರಾತ್ರಿಯ ಎಂಟನೇ ಅಥವಾ ಹತ್ತನೇ ದಿನ ಮನೆಗೆ ಒಂಭತ್ತು ಮಂದಿ ಹೆಣ್ಣು ಮಕ್ಕಳನ್ನು ಆಹ್ವಾನಿಸಿ, ನವದುರ್ಗೆಯರೆಂದು ಭಾವಿಸಿ, ಅವರ ಕಾಲು ತೊಳೆದು, ಕುಳ್ಳಿರಿಸಿ, ಆರತಿ ಮಾಡಿ, ಹಣೆಗೆ ಕುಂಕುಮ ಹಚ್ಚಿ, ಭೋಜನವನ್ನು ನೀಡಿ
*ನವರಾತ್ರಿಯ ಕೊನೆಯ ದಿನ ದುರ್ಗಾಪೂಜೆಯ ನಂತರ ಪ್ರಾರ್ಥನೆ ಮಾಡಿ, ಹೂವು ಹಾಗೂ ಅಕ್ಷತೆಯನ್ನು ದೇವತೆಗಳಿಗೆ ಅರ್ಪಿಸಿ, ನಂತರ ಘಟವನ್ನು ಪೀಠದಿಂದ ಸರಿಸಿ ಘಟ ವಿಸರ್ಜನೆಯನ್ನು ಮಾಡಿ.
ನವರಾತ್ರಿ ಪೂಜಾ ಮುಹೂರ್ತ:
ಶಾರದಿಯ ನವರಾತ್ರಿ ಆರಂಭ: ಅಕ್ಟೋಬರ್ 7
ಘಟಸ್ಥಾಪನೆಗೆ ಶುಭ ಮುಹೂರ್ತ: ಬೆಳಗ್ಗೆ 6.17 ರಿಂದ 7.07 ರವರೆಗೆ.
ಈ ಸಮಯದಲ್ಲಿ ಘಟಸ್ಥಾಪನೆ ಮಾಡುವುದರಿಂದ ನವರಾತ್ರಿ ಫಲಪ್ರದವಾಗುತ್ತದೆ. ಅಭಿಜಿನ್ ಮುಹೂರ್ತ ಕಳಶ ಸ್ಥಾಪಿಸಲು ಅತ್ಯುತ್ತಮವೆಂದು ಹೇಳಲಾಗಿದೆ.












Click it and Unblock the Notifications