ಅಂಬಾರಿ ಹೊತ್ತ ಬಲರಾಮ ಸಂಗಡಿಗರೊಂದಿಗೆ ಅಂಗಳಕ್ಕಿಳಿದಿದ್ದಾನೆ
ಮೈಸೂರು :ರಾಜ್ ಅಪಹರಣದ ಹಿನ್ನಲೆಯಲ್ಲಿ ದಸರೆಯ ಜಂಬೂ ಸವಾರಿ ಕೇವಲ ಸಾಂಪ್ರದಾಯಿಕ ಪೂಜೆಗೆ ಸೀಮಿತವಾಗಿರಬೇಕೆಂಬ ಬೆದರಿಕೆ ನಡುವೆ ವಿಶ್ವವಿಖ್ಯಾತ ಜಂಬೂಸವಾರಿಗೆ ವೇದಿಕೆ ಸಿದ್ಧವಾಗಿದೆ.
ಭಾನುವಾರ ಮಧ್ಯಾಹ್ನ 2.30ಕ್ಕೆ ಮುಖ್ಯಮಂತ್ರಿ ಕೃಷ್ಣ ಅವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ದಸರಾ ಮೆರವಣಿಗೆ ಉದ್ಘಾಟಿಸುವರು. ಸುಮಾರು 750 ಕೆಜಿ ತೂಕವಿರುವ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ವಿಗ್ರಹ ಕೂಡಿಸಲಾಗುವುದು. ಪುಶ್ಪಾರ್ಚನೆ ನಂತರ 21 ಕುಶಾಲುತೋಪುಗಳನ್ನು ಸಿಡಿಸಿ, ರಾಷ್ಟ್ರಗೀತೆ ನುಡಿಸಿದ ನಂತರ ಮೆರವಣಿಗೆ ಚಾಲನೆಗೊಳ್ಳಲಿದೆ.
ವಂದನೆ ಸ್ವೀಕಾರ: ಮೂರನೇ ಬಾರಿಗೆ ಅಂಬಾರಿ ಹೊರುವ ಬಲರಾಮ ಸೇರಿದಂತೆ ಭರತ, ಕವಿತ, ಕಾಂತಿ, ಕೋಕಿಲ, ಗಜೇಂದ್ರ, ಶ್ರೀರಾಮ, ಅಭಿಮನ್ಯು, ಬಿಳಿಗಿರಿರಂಗ, ವರಲಕ್ಷಿ ಹಾಗೂ ಶೋಭಾ ಎಂಬ ಆನೆಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಮೆರವಣಿಗೆಯ ಮುಂಚೂಣಿಯಲ್ಲಿ ನಂದಿಧ್ವಜ ಇದ್ದು, ನಂತರ ನಾದಸ್ವರ, ನಿಷಾನೆ ಹೊತ್ತ ಆನೆಗಳು ಫಿರಂಗಿ ಗಾಡಿಗಳು, ವಿವಿಧ ಜಾನಪದ ತಂಡಗಳು, ಸೇವಾದಳ, ರೈಲ್ವೇ ರಕ್ಷಣಾದಳ, ವಾದ್ಯಮೇಳ, ಎನ್ಸಿಸಿ, ಸ್ಕೌಟ್ ಹಾಗೂ ಗೈಡ್ಸ್, ಗೃಹ ಮತ್ತು ಅಗ್ನಿಶಾಮಕ ದಳಗಳು ಭಾಗವಹಿಸಲಿವೆ.
ಮೆರವಣಿಗೆಯಲ್ಲಿ ವಿವಿಧ ಇಲಾಖೆ ಹಾಗೂ ಸಂಘಸಂಸ್ಥೆಗಳ ಸ್ತಬ್ಧಚಿತ್ರಗಳ ಪ್ರದರ್ಶನವಿದ್ದು, ಕೆ. ಆರ್. ವೃತ್ತ, ಸಯ್ಯಾಜಿರಾವ್ ರಸ್ತೆ ಮೂಲಕ ಬನ್ನಿಮಂಟಪ ತಲುಪಲಿದೆ. ಬನ್ನಿಮಂಟಪದ ಹತ್ತಿರ ಸಂಜೆ ನಡೆಯುವ ಪಂಚಿನ ಕವಾಯಿತು ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ರಮಾದೇವಿ ವಂದನೆ ಸ್ವೀಕರಿಸುವರು.
ಅಭಿಮಾನಿಗಳಿಗೆ ಮನವಿ : ಚಾಮುಂಡೇಶ್ವರಿ ಪೂಜೆಗೆ ಅಡ್ಡಿಪಡಿಸುವುದು ಬೇಡ ಎಂದು ರಾಜ್ ಈ ಹಿಂದೆ ಮಾಡಿಕೊಂಡ ಮನವಿಯ ಜೊತೆಗೆ ರಾಜ್ ಪತ್ನಿ ಪಾರ್ವತಮ್ಮ ಕೂಡಾ ಜಂಬೂಸವಾರಿ ಸೇರಿದಂತೆ ದಸರೆಯ ಯಾವುದೇ ಕಾರ್ಯಕ್ರಮಗಳಿಗೆ ಅಡ್ಡಿ ಬೇಡ ಎಂದು ರಾಜ್ ಅಭಿಮಾನಿಗಳಲ್ಲಿ ಮನವಿಮಾಡಿದ್ದಾರೆ.
ಉತ್ಸವಕ್ಕೆ ಅಡ್ಡಿಪಡಿಸುವುದಾಗಿ ಹೇಳಿದ್ದ ನಗರಪಾಲಿಕೆ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಪಿ. ದೇವರಾಜ್ ನಿಲವು ಬದಲಿಸಿ ಸಹಕರಿಸಲು ಒಪ್ಪಿರುವುದಾಗಿ ಸಚಿವ ವಿಶ್ವನಾಥ್ ತಿಳಿಸಿದ್ದಾರೆ. ಉದ್ಘಾಟನೆಗೆ ಚಾಲನೆ ನೀಡಲು ಮುಖ್ಯಮಂತ್ರಿ ಕೃಷ್ಣ ಮೈಸೂರು ತಲುಪಿದ್ದಾರೆ.