ಒಡೆಯರ್ ಅವರ ಖಾಸಗಿ ದರ್ಬಾರ್
ಪ್ರಜಾಪ್ರಭುತ್ವ ಬಂದಿದೆ. ಅರಸೊತ್ತಿಗೆ ಹೋಗಿದೆ. ಹೀಗಿದ್ದರೂ ಪ್ರತಿವರ್ಷ ದಸರಾ ಮಹೋತ್ಸವದ ಸಂದರ್ಭದಲ್ಲಿ ಖಾಸಗಿ ದರ್ಬಾರ್ ನಡೆಸಲಾಗುತ್ತದೆ. ಖಾಸಗಿ ದರ್ಬಾರ್ ಹಾಗೂ ಧಾರ್ಮಿಕ ಸಂಪ್ರದಾಯಗಳು ಸುಮಾರು 300 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿವೆ. ರಾಜ ವಂಶಸ್ಥರು, ಅವರ ಕುಟುಂಬದ ಸದಸ್ಯರು ಸಂಬಂಧಿಕರು, ಸಡಗರ ಸಂಭ್ರಮಗಳಿಂದ ಉತ್ಸವಗಳಲ್ಲಿ ಪಾಲ್ಗೊಳ್ಳುತ್ತಾರೆ.
ಅರಮನೆಯ ಒಂದು ಭಾಗದಲ್ಲಿಯೇ ಒಡೆಯರ್ ವಾಸಿಸುತ್ತಾರೆ. ಹಾಲಿ ಕಾಂಗ್ರೆಸ್ ಪಕ್ಷದ ಲೋಕಸಭಾ ಸದಸ್ಯರೂ ಆಗಿರುವ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಯದುವಂಶದ ಕೊನೆಯ ಕುಡಿ. ಪತ್ನಿ ಪ್ರಮೋದಾದೇವಿ ಒಡೆಯರ್ ಅವರ ಜೊತೆ ಅರಮನೆಯಲ್ಲಿ ವಾಸವಾಗಿದ್ದಾರೆ. ದಸರಾ ಸಂದರ್ಭಗಳಲ್ಲಿ ಅಲ್ಲಿ ಬಂಧು-ಬಳಗ ಮೇಳೈಸುತ್ತದೆ. ರಾಜಪುರೋಹಿತರು ವೇದ-ಘೋಷ ಮೊಳಗಿಸುತ್ತರೆ. ಒಡೆಯರ್ ಅವರ ದೇಶ-ವಿದೇಶಿ ಸ್ನೇಹಿತರು ಖಾಸಗಿ ದರ್ಬಾ ರ್ ವೀಕ್ಷಿಸಲು ಆಗಮಿಸುತ್ತಾರೆ.
ಕಂಕಣದೊಂದಿಗೆ ದರ್ಬಾರ್ ಆರಂಭ : ಒಡೆಯರ್ ಅವರು ರತ್ನಖಚಿತ ಸಿಂಹಾಸನವನ್ನು ಅಲಂಕರಿಸುತ್ತಾರೆ. ರಾಜಪುರೋಹಿತರು ಪೂಜಾವಿಧಿಗಳನ್ನು ಆರಂಭಿಸಿದ ನಂತರ ಕಂಕಣ ಕಟ್ಟಿಕೊಂಡು ಒಡೆಯರ್ ಅವರು ಪೂಜೆ ಸಲ್ಲಿಸುತ್ತಾರೆ. ಅದರೊಂದಿಗೆ 9 ದಿನಗಳ ಖಾಸಗಿ ದರ್ಬಾರ್ ಆರಂಭವಾಗುತ್ತದೆ.
ಆರಮನೆಯ ಹೊರಗೆ ನಡೆಯುವುದು ನಾಡಹಬ್ಬದ ಹೆಸರಿನ ರಾಜಕಾರಣಿಗಳ, ಅಧಿಕಾರಿಗಳ ದರ್ಬಾರ್ ಆದರೆ ಇದಕ್ಕಿಂತ ಭಿನ್ನ. ಶ್ರೀಕಂಠದತ್ತರು ತಮ್ಮ ತಂದೆ ಧರಿಸುತ್ತಿದ್ದ ಚಿನ್ನಲೇಪಿತ ವಸ್ತ್ರ ಹಾಗೂ ಪೇಟ ಧರಿಸುತ್ತಾರೆ. ನವರಾತ್ರಿಯಲ್ಲಿ ಪ್ರತಿದಿನ ಸಂಜೆ 45 ನಿಮಿಷ ಸಿಂಹಾಸನದ ಮೇಲೆ ಆಸೀನರಾಗುತ್ತಾರೆ. ಖಾಸಗಿ ದರ್ಬಾರನ್ನು ನೂರಾರು ವರ್ಷಗಳಿಂದ ಶ್ರದ್ಧೆ, ನಿಷ್ಠೆ, ಪಾವಿತ್ರತೆಯಿಂದ ನಡೆಸಿಕೊಂಡು ಬರಲಾಗುತ್ತದೆ. ಆದರೆ ಜನಸಾಮಾನ್ಯರು ನೋಡಲು ಅವಕಾಶ ಇರುವುದಿಲ್ಲ.
ನವರಾತ್ರಿಯ ಪ್ರಾರಂಭದ ದಿನದಿಂದ ವಿಜಯದಶಮಿಯವರೆಗೆ ಪ್ರತಿದಿನ ದುರ್ಗೆಯ ನಾನಾ ಸ್ವರೂಪಗಳಾದ ಕುಮಾರಿ ತ್ರಿಮೂರ್ತಿ, ಕಲ್ಯಾಣಿ, ರೋಹಿಣಿ, ಕಾಳಿ, ಚಂದ್ರಿಕೆ, ಶಾಂಭವಿ, ದುರ್ಗಾ ಹಾಗೂ ಶಕ್ತಿ ದೇವತೆಗಳಿಗೆ ಶ್ರದ್ಧೆ, ಭಕ್ತಿಗಳಿಂದ ಪೂಜೆ ಸಲ್ಲಿಸಲಾಗುತ್ತದೆ ಎಂದು ಒಡೆಯರ್ ವಿವರಿಸುತ್ತಾರೆ.
ಮುತ್ತೆೈದೆಯರಿಂದ ಪಾದಪೂಜೆ : ಅಂಬಾವಿಲಾಸದಲ್ಲಿ ಇರುವ ಕಲ್ಯಾಣ ಮಂಟಪದ ಮೇಲ್ಬಾಗದಲ್ಲಿ ಪತ್ನಿ ಪ್ರಮೋದಾದೇವಿ ಸೇರಿದಂತೆ ಮುತ್ತೆೈದೆಯರು ಪಾದಪೂಜೆ ಮಾಡುತ್ತಾರೆ. ಚಂಡಿಕ, ಹೋಮ, ಬಲಿ, ಮಹಿಷಾವಧೆ ನಡೆಯುತ್ತದೆ. ಶಮೀಪೂಜೆ ಹಾಗೂ ದೇವಿ ಭಾಗವತವನ್ನು ಓದಿದಾಗ ಮಹಿಷಾವಧೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಒಡೆಯರ್ ಅವರು ನಾಡಿನಲ್ಲಿ ಉತ್ತಮ ಮಳೆ-ಬೆಳೆ ಆಗಲಿ, ಜನರು ಸುಖ-ಸಂತೋಷದಿಂದ ಇರಲಿ ಎಂದು ಪ್ರಾರ್ಥಿಸುತ್ತಾರೆ.
ಪ್ರತಿದಿನ ಸಂಜೆ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ ಆಸೀನರಾಗಬೇಕು, ಹರ್ಬಾರ್ ನಂತರ ಚಾಮುಂಡೇಶ್ವರಿ ಪೂಜೆ, ಮಂತ್ರಪುಷ್ಪ ಹಾಗೂ ಆರತಿ ನಡೆಯುತ್ತದೆ. ಮಾರ್ಕಾಂಡೇಯ ಪುರಾಣದಂತೆ ಖಾಸಗಿ ದರ್ಬಾರಿನಲ್ಲೂ ಪೂಜಾಕ್ರಮ ಇದೆ. ನವರಾತ್ರಿಯಲ್ಲಿ ಮಹಾರಾಜರು ಅರಮನೆಯ ಪೂಜಾಕ್ರಮಗಳ ನಿಯಮಗಳನ್ನು ಮೀರುವಂತಿಲ್ಲ. ಆಯುಧ ಪೂಜೆಯ ದಿನ ಆಯುಧಗಳನ್ನು ಸೋಮೇಶ್ವರ ದೇವರ ಸನ್ನಿಧಿಯಲ್ಲಿ ತೊಳೆದ ನಂತರ ಪೂಜೆ ಮಾಡಲಾಗುವುದು. ಒಟ್ಟಾರೆ ತಲತಲಾಂತರದಿಂದ ನಡೆದುಕೊಂಡು ಬಂದಿರುವ ಸತ್ಸಂಪ್ರದಾಯವನ್ನು ರಾಜವಂಶಸ್ಥರು, ಸಂಬಂಧಿಕರು ಒಟ್ಟಿಗೆ ಸೇರಿ ಶ್ರದ್ಧೆ, ಭಕ್ತಿಗಳಿಂದ ಆಚರಿಸುತ್ತಾರೆ.
ಮುಖಪುಟ / ಮೈಸೂರು ದಸರಾ











Click it and Unblock the Notifications