ಯಂತ್ರದ ತೆಕ್ಕೆಯೊಳಗೆ ಸಿಕ್ಕ ಬದುಕೆಂಬ ಬಸ್ಸು
ದಿನಗಳು ಉರುಳಿದಂತೆ ನಮ್ಮ ಆಯುಷ್ಯವೂ ಕ್ಷೀಣಿಸುತ್ತಾ ಹೋಗುತ್ತಿವೆ. ವಿಪರ್ಯಾಸವೊ ಎಂಬಂತೆ ಕಡಿಮೆಯಾಗುವ ಆಯುಷ್ಯದೊಂದಿಗೆ ಆಸೆಗಳು ಮಾತ್ರ ಹೆಚ್ಚುತ್ತಿವೆ. ಒಂದರ ಹಿಂದೆ ಮತ್ತೊಂದರಂತೆ ಮಿತಿಯಿಲ್ಲದೆ ಬೆಳೆಯುವ ಆಸೆಗಳ ಪಟ್ಟಿಯನ್ನು ಪೂರೈಸಿಕೊಳ್ಳುದರಲ್ಲಿಯೇ ಬದುಕು ಮುಗಿಯುದೆನೋ ಎಂದು ಭಾಸವಾಗುತ್ತಿದೆ. ಆ ನಡುವೊಂದಿಷ್ಟು ಸಾಧನೆ, ಸಹವಾಸ, ಹೆಸರಿಲ್ಲದ ನೂರಾರು ಕಾರ್ಯಗಳು ಇವೆಲ್ಲಾ ಬದುಕು ಇಷ್ಟೇ ಅಲ್ಲಎಂಬುದನ್ನು ಸಾರಿ ಹೇಳುತ್ತವೆ.
ಪ್ರಪಂಚ ಆಧುನಿಕತೆಯನ್ನು ತುಂಬಿಕೊಂಡು ಬೀಗುತ್ತಿದೆ. ಒಂದೆಡೆ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಯಂತ್ರಮಾನವನನ್ನು ಮಂಗಳಗ್ರಹಕ್ಕೆ ಕಳುಹಿಸಿ ನಗು ಬೀರುತ್ತಿದ್ದರೆ; ಮತ್ತೊಂದೆಡೆ ಸಮಾಜದ ಮೂಢನಂಬಿಕೆಗಳು ಹೊಸ ಹೊಸ ರೂಪದಲ್ಲಿ ಮತ್ತೆ ನಮ್ಮೊಡನೆ ತಳುಕು ಹಾಕಿಕೊಳ್ಳುತ್ತಿವೆ. ನಾಗರಿಕ ಸಮಾಜದಲ್ಲಿ ಬದುಕುತ್ತಿದ್ದೇವೆ ಎಂದು ಹೇಳುವ ಇನ್ನೊಂದು ಮಗ್ಗಲಲ್ಲೇ ಅನಾಗರಿಕತೆ ತಾಂಡವವಾಡುತ್ತಿದೆ.
ಜೀವನ ಮೌಲ್ಯಗಳೆಂಬುದು ಉಪನ್ಯಾಸದ ವಿಷಯಗಳಾಗಿವೆಯೇ ಹೊರತು ಬದುಕಿನ ಭಾಗವಾಗಿಲ್ಲ. ನಾವು ಆದರ್ಶಪ್ರಾಯರನ್ನು ಹುಡುಕಿ ಹೊರಟಿದ್ದೇವೆಯೇ ಹೊರತು ನಮ್ಮಲ್ಲೊಂದು ಆದರ್ಶವನ್ನು ಗಟ್ಟಿಗೊಳಿಸಿಕೊಂಡಿಲ್ಲ. ಯಂತ್ರದ ತೆಕ್ಕೆಯೊಳಗೆ ಸಿಕ್ಕ ಬದುಕೆಂಬ ಬಸ್ಸು ವೇಗದ ಬೆನ್ನೇರಿ ಅದ್ಯಾವುದೊ ಮರಕ್ಕೆ ಢಿಕ್ಕಿಯಾಗಿ ತನ್ನ ಪರಿಸರವನ್ನು ನಾಶ ಮಾಡಿಕೊಳ್ಳುತ್ತಿದೆ ಎಂದು ಅನ್ನಿಸುವುದಿಲ್ಲವೆ? ಇನ್ನಾದರೂ ಚಿಂತಿಸುವ, ಚಿಂತಿಸಿದನ್ನು ಒರೆಗೆ ಹಚ್ಚುವ ಅಗತ್ಯವಿದೆಯಲ್ಲವೆ?
ಹೊಸ ವರ್ಷದ ನೆವದಲ್ಲಾದರೂ ನೆಮ್ಮದಿಯ ನೆಲೆಗಾಗಿ, ಸ್ವಸ್ಥ ಸಮಾಜಕ್ಕಾಗಿ ಚಿಂತಿಸೋಣ. ನಮ್ಮ ಚಿಂತನೆಗಳು ಪ್ಲಾಸ್ಟಿಕ್ ನಿಷೇಧಿಸಿ ಎಂದು ಡಿಜಿಟಲ್ ಬ್ಯಾನರ್ ಹಿಡಿದು ಹೋರಾಡಿದಂತೆ, ದಿಕ್ಕು ತಪ್ಪಿಸುವ ರಾಜಕಾರಣಿಗಳ ಆಶ್ವಾಸನೆಗಳಂತೆ ಆಗದಿರಲಿ. ಯಾಕಂದ್ರೆ ನಮ್ಗ್ಇಪ್ಪುದ್ಒಂದೇ ಬದ್ಕ್ಅಲ್ದೆ!