ಆಂಧ್ರ ದಿಗ್ವಿಜಯದ ನಂತರ ಜಗನ್ ಕಣ್ಣು ತೆಲಂಗಾಣದ ಮೇಲೆ!
ಒಂದು ರಾಜ್ಯವನ್ನು ಗೆದ್ದ ಮಾತ್ರಕ್ಕೆ ರಾಜಕೀಯದ ಆಟ ನಿಲ್ಲುವುದಿಲ್ಲ, ಅದು ನಿರಂತರ ಹೋರಾಟ. ಆಂಧ್ರಪ್ರದೇಶದಲ್ಲಿ ಅಭೂತಪೂರ್ವ ಜಯಗಳಿಸಿದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ವೈ ಎಸ್ ಆರ್ ಕಾಂಗ್ರೆಸ್ ಆಂಧ್ರಪ್ರದೇಶಕ್ಕಷ್ಟಕ್ಕೇ ತನ್ನ ವ್ಯಾಪ್ತಿಯನ್ನು ಸೀಮಿತಗೊಳಿಸಿಕೊಂಡು ಬಿಡುತ್ತದೆಯೇ? ಸಾಧ್ಯವೇ ಇಲ್ಲ.
ಏಕೆಂದರೆ ಈಗಾಗಲೇ ಜಗನ್ ರೆಡ್ಡಿಗಾರು ಕಣ್ಣು ತೆಲಂಗಾಣದ ಮೇಲೆ ಬಿದ್ದಿದೆ! 2023 ರ ವಿಧಾನಸಭೆ ಚುನಾವಣೆಯಲ್ಲಿ ತನಗೆ ಎದುರಾಳಿಯೇ ಇರುವುದಿಲ್ಲ ಎಂದು ಬೀಗುತ್ತಿದ್ದ ತೆಲಂಗಾಣ ರಾಷ್ಟ್ರ ಸಮಿತಿಗೆ ಜಗನ್ ದುಃಸ್ವಪ್ನವಾಗಿ ಕಾಡುವ ಎಲ್ಲಾ ಸೂಚನೆ ಲಭ್ಯವಾಗಿದೆ!
ಜಗನ್ ರೆಡ್ಡಿಯಿಂದ ಐತಿಹಾಸಿಕ ನಿರ್ಣಯ, ಆಂಧ್ರಕ್ಕೆ 5 ಡಿಸಿಎಂಗಳು
ಈಗಾಗಲೇ ತೆಲಂಗಾಣದಲ್ಲಿ ಕಾಂಗ್ರೆಸ್ ನ ಯುಗಾಂತ್ಯವಾಗಿದೆ. ಕಾಂಗ್ರೆಸ್ ನ 18 ಶಾಸಕರಲ್ಲಿ 12 ಶಾಸಕರು ಟಿಆರ್ ಎಸ್ ಸೇರಿದ್ದಾರೆ. ಇನ್ನು ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷದ ಬಗ್ಗೆಯೂ ಇಲ್ಲಿನ ಜನರಲ್ಲಿ ಉತ್ತಮ ಅಭಿಪ್ರಾಯವಿಲ್ಲ. ತನ್ನ ವಿರೋಧಿಗಳನ್ನೆಲ್ಲ ತನ್ನತ್ತ ಸೆಳೆಯುವ, ಇಲ್ಲವೇ ಹೊಸಕಿ ಹಾಕುವ ಮೂಲಕ ರಾಜ್ಯದಲ್ಲಿ ಟಿಆರ್ ಎಸ್ ಗೆ ಸ್ಪರ್ಧೆ ನೀಡುವ ಪಕ್ಷವೇ ಇಲ್ಲ ಎಂಬಂಥ ಪರಿಸ್ಥಿತಿ ನಿರ್ಮಿಸುವುದು ಕೆ ಚಂದ್ರಶೇಖರ್ ರಾವ್ ಕನಸು... ಆ ಕನಸಿನ ಕೊನೆಯ ಘಟ್ಟದಲ್ಲಿ ಜಗನ್ ಮೋಹನ್ ರೆಡ್ಡಿ ಎಂಬ ವಿರೋಧಿಯೊಬ್ಬ ಹುಟ್ಟಿಕೊಳ್ಳುತ್ತಾರೆಂಬ ಯಾವ ನಿರೀಕ್ಷೆಯನ್ನು ಕೆಸಿಆರ್ ಮಾಡಿರಲಿಲ್ಲ!
ಟಾರ್ಗೆಟ್ 2023!
ಜಗನ್ ಕಣ್ಣೀಗ 2023ರ ವಿಧಾನಸಭೆ ಚುನಾವಣೆಯ ಮೇಲಿದೆ. ಅದಕ್ಕಾಗಿ ಈಗಿನಿಂದಲೇ ಕಾರ್ಯತಂತ್ರ ರೂಪಿಸಲು ಜಗನ್ ಮುಂದಾಗಿದ್ದಾರೆ. ಈಗಾಗಲೇ ಅವರಿಗೆ ಜನ ಸಂಪರ್ಕವಿದೆ. ತಳಮಟ್ಟದಿಂದ ಪಕ್ಷವನ್ನು ಕಟ್ಟಿದ ಅನುಭವವಿದೆ. 'ಮಾಜಿ ಮುಖ್ಯಮಂತ್ರಿ(ವೈ ಎಸ್ ರಾಜಶೇಖರ ರೆಡ್ಡಿ)ಗಳ ಮಗನಾಗಿ ಪಕ್ಷವನ್ನು ಕಟ್ಟಿ, ಬೆಳೆಸಿ ಅಧಿಕಾರಕ್ಕೆ ತಂದ ಜಗನ್ ಗೆ ಸ್ವತಃ ಮುಖ್ಯಮಂತ್ರಿಯಾಗಿ ಮತ್ತೊಂದು ರಾಜ್ಯದಲ್ಲಿ ತನ್ನ ಪಕ್ಷವನ್ನು ಅಧಿಕಾರಕ್ಕೆ ತರುವುದು ತೀರಾ ಕಷ್ಟದ ಕೆಲಸವಾಗಲಾರದು. ಏಕೆಂದರೆ ತೆಲುಗು ಜನರ ನಾಡಿಮಿಡಿತವನ್ನು ಜಗನ್ ಚೆನ್ನಾಗಿಯೇ ಅರಿತಿದ್ದಾರೆ!
ಎರಡು ರಾಜ್ಯಕ್ಕೂ ಅನುಕೂಲ
ಆಂಧ್ರ ಪ್ರದೇಶ ಮತ್ತು ತೆಲಂಗಾಣ ಎರಡು ರಾಜ್ಯದಲ್ಲೂ ವೈ ಎಸ್ ಆರ್ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅದರಿಂದ ಎರಡು ರಾಜ್ಯಗಳಿಗೂ ಹಣಕಾಸಿನ ದೃಷ್ಟಿಯಿಂದಲೂ ನೆರವಾಗಲಿದೆ. ಜಗನ್ ರಾಜಕೀಯ ಬೆಳವಣಿಗೆಗೂ ಸಹಾಯವಾಗಲಿದೆ. ಆಂಧ್ರ ಪ್ರದೇಶದ ಎರಡು ರಾಜ್ಯವಾಗಿ ವಿಭಜನೆಯಾಗುವ ಮುನ್ನ ಆಡಳಿತ ಕೇಂದ್ರವಾಗಿದ್ದ ಹೈದರಾಬಾದ್, ರಾಜ್ಯ ವಿಭಜನೆಯ ನಂತರ ತೆಲಂಗಾಣಕ್ಕೆ ಸೇರಿತ್ತು. ಇದರಿಂದಾಗಿ ಆಂಧ್ರ ಪ್ರದೇಶ ತನ್ನ ರಾಜಧಾನಿ(ಅಮರಾವತಿ)ಯನ್ನೂ ಹೊಸದಾಗಿ ಕಟ್ಟಿಕೊಳ್ಳಬೇಕಾಯ್ತು. ಇದೇ ಕಾರಣಕ್ಕಾಗಿಯೇ ಆಂಧ್ರಪ್ರದೇಶ ಕೇಂದ್ರದ ಮೇಲೆ ವಿಶೇಷ ಸ್ಥಾನಮಾನದ ಬೇಡಿಕೆಯನ್ನೂ ಇಟ್ಟಿತ್ತು. ಎರಡು ರಾಜ್ಯಗಳಲ್ಲಿ ಬೇರೆ ಬೇರೆ ಪಕ್ಷಗಳು ಅಸರಲ್ಲೂ ರಾಜಕೀಯ ವಿರೋಧಿಗಳು (ಟಿಆರ್ ಎಸ್-ಟಿಡಿಪಿ) ಆಡಳಿತ ನಡೆಸುತ್ತಿದ್ದರಿಂದ ಸಮನ್ವಯ, ಸಹಕಾರ ಸಾಧ್ಯವಿರಲಿಲ್ಲ. ಆದರೆ ಎರಡು ರಾಜ್ಯಗಳಲ್ಲೂ ವೈಎಸ್ ಆರ್ ಪಿ ಅಧಿಕಾರಕ್ಕೆ ಬಂದರೆ ಆಗ ಉಭಯ ರಾಜ್ಯಗಳ ಅಭಿವೃದ್ಧಿಯೂ ಸುಲಭ ಎಂಬುದು ಜಗನ್ ಲೆಕ್ಕಾಚಾರ.
5 ವರ್ಷ ಜಗನ್ ಕುರ್ಚಿ ಮೇಲೆ ಕೂರಲು ಗ್ರಹಗತಿ ತೊಡಕು ; ಆಂಧ್ರದಲ್ಲಿ ರೆಸಾರ್ಟ್ ರಾಜಕೀಯ!
ತೆಲಂಗಾಣದಲ್ಲಿ ಮತದಾರರಿಗೆ ಆಯ್ಕೆಯಿಲ್ಲ!
ತೆಲಂಗಾಣ ರಾಜ್ಯದಲ್ಲಿ ತೀಆರ್ ಎಸ್ ಬಿಟ್ಟರೆ ಅದಕ್ಕೆ ಸ್ಪರ್ಧೆ ನೀಡುವಂಥ ಪಕ್ಷ ಯಾವುದೂ ಇಲ್ಲ. ಟಿಡಿಪಿ ಆಂಧ್ರ ಪ್ರದೇಶಕ್ಕಷ್ಟೇ ಹೆಚ್ಚು ಒತ್ತು ನೀಡಿದ್ದರಿಂದ ತೆಲಂಗಾಣದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡರೂ ಉತ್ತಮ ಪ್ರದರ್ಶನ ತೋರಲು ಸಾಧ್ಯವಾಗಿರಲಿಲ್ಲ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ತೆಲಂಗಾಣದಲ್ಲಿ ಬಿಜೆಪಿ 4 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೂ ಬಿಜೆಪಿ ಈ ರಾಜ್ಯಗಳಲ್ಲಿ ಸ್ವತಂತ್ರವಾಗಿ ತನ್ನ ನೆಲೆ ಕಂಡುಕೊಳ್ಳಲು ಸಮಯ ಬೇಕು. ಆದ್ದರಿಂದ ತೆಲಂಗಾಣದಲ್ಲಿ ಟಿಆರ್ ಎಸ್ ಗೆ ಪರ್ಯಾಯವಿಲ್ಲ ಎಂಬ ನಿರ್ವಾತವನ್ನು ತುಂಬಲು ಜಗನ್ ಮುಂದಾಗಿದ್ದಾರೆ.
ತಳಮಟ್ಟದಿಂದ ಪಕ್ಷ ಕಟ್ಟಲು ಜಗನ್ ಅಣಿ
ಪಕ್ಷ ಕಟ್ಟುವ ಅನುಭವ ಜಗನ್ ಗೆ ಹೊಸತಲ್ಲ. ಇಷ್ಟು ಕಾಲ ಕೇವಲ ಆಂಧ್ರ ಪ್ರದೇಶಕ್ಕಷ್ಟೇ ಗಮನ ನೀಡಿ, ತೆಲಂಗಾಣದಲ್ಲಿ ತನ್ನ ಅಭ್ಯರ್ಥಿಗಳನ್ನೇ ಕಣಕ್ಕಿಳಿಸದ ವೈ ಎಸ್ ಆರ್ ಕಾಂಗ್ರೆಸ್ ಇನ್ನು ಮುಂದೆ ತೆಲಂಗಾಣದ ಸ್ಥಳೀಯ ಸಂಸ್ಥೆ ಚುನಾವಣೆಯಿಂದ ಹಿಡಿದು ಎಲ್ಲಾ ಚುನಾವಣೆಗಳಲ್ಲೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದೆ.
ಜಗನ್ ರೆಡ್ಡಿ ಪಟ್ಟುಗಳಿಗೆ ಹಳೇ ಜಟ್ಟಿ ಚಂದ್ರಬಾಬು ಚಿತ್; ಇದು ಆಂಧ್ರ ಪಾಲಿಟಿಕ್ಸ್
ಪಕ್ಷ ಸೇರಲು ತುದಿಗಾಲಲ್ಲಿ ನಿಂತವರು!
ಈಗಾಗಲೇ ಜಗನ್, ರೆಡ್ಡಿ, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪ.ಪಂಗಡ, ಅಲ್ಪಸಂಖ್ಯಾತರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ಇದರಿಂದಾಗಿ ಈ ಎಲ್ಲಾ ಸಮುದಾಯವನ್ನು ಪ್ರತಿನಿಧಿಸುವ ನಾಯಕರು ರೆಡ್ಡಿ ಪಾಳಯವನ್ನು ಸೇರುವುದು ನಿಶ್ಚಿತ. ಈಗಾಗಲೇ ಆಂಧ್ರ ಜಗನ್ ಅವರಿಗೆ ಸಿಕ್ಕ ಯಶಸ್ಸಿನಿಂದಾಗಿ ಟಿಆರ್ ಎಸ್ ಮತ್ತು ಟಿಡಿಪಿ ಪಕ್ಷದ ಕೆಲವು ನಾಯಕರೇ ಜಗನ್ ಅವರತ್ತ ವಾಲಿದರೆ ಅಚ್ಚರಿಯಿಲ್ಲ!