ಯಡಿಯೂರಪ್ಪಗೆ ಉನ್ನತ ಹುದ್ದೆ: ಇಬ್ಬರಿಗೆ ಶುರುವಾಯಿತೇ ನಡುಕ?
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಬಿಜೆಪಿಯ ಕೇಂದ್ರೀಯ ಸಂಸದೀಯ ಮಂಡಳಿಗೆ ಆಯ್ಕೆ ಮಾಡಿದ ನಂತರ ರಾಜ್ಯ ಬಿಜೆಪಿಯ ಲೆಕ್ಕಾಚಾರ ಬದಲಾಗುವುದಾ? ಬಿಜೆಪಿಯುಲ್ಲಿನ ಬಿಎಸ್ವೈ ಟೀಕಾಕಾರರಿಗೆ ನಡುಕ ಶುರುವಾಗಿದೆಯಾ?
ಈ ರೀತಿಯ ಪ್ರಶ್ನೆ ರಾಜ್ಯ ಬಿಜೆಪಿ ಪಡಶಾಲೆಯಲ್ಲಿ ಆರಂಭವಾಗಿದೆ. ರಾಜ್ಯ ರಾಜಕಾರಣದಲ್ಲಿ ಯಡಿಯೂರಪ್ಪನವರನ್ನು ಮೂಲೆಗುಂಪು ಮಾಡಲು ಒಂದು ವರ್ಗ ಪ್ರಯತ್ನಿಸುತ್ತಿದ್ದದ್ದು ಗೌಪ್ಯವಾಗಿಯೇನೂ ಉಳಿದಿಲ್ಲ.
ಈಗ, ಇದಕ್ಕೆಲ್ಲಾ ಉತ್ತರ ಕೊಡಲು ಯಡಿಯೂರಪ್ಪನವರು ತಮಗೆ ಸಿಕ್ಕಿದ ಹೊಸ ಹುದ್ದೆಯನ್ನು ಬಳಸಿಕೊಳ್ಳಲಿದ್ದಾರಾ ಎನ್ನುವ ಮಾತು ಬಿಜೆಪಿಯಲ್ಲಿ ಆರಂಭವಾಗಿದೆ. ಹೊಸ ಹುದ್ದೆಯಲ್ಲಿ ಯಡಿಯೂರಪ್ಪನವರಿಗೆ ಯಾವ ರೀತಿಯ ಅಧಿಕಾರವಿರಲಿದೆ ಎನ್ನುವುದು ಇನ್ನೂ ಸ್ಪಷ್ಟವಾಗಬೇಕಿದೆ.
ಆದರೆ, ಸಂಸದೀಯ ಮಂಡಳಿಯ ಜೊತೆಗೆ, ಚುನಾವಣಾ ಸಮಿತಿಯಲ್ಲೂ ಯಡಿಯೂರಪ್ಪ ಸ್ಥಾನ ಪಡೆದಿರುವುದರಿಂದ, ಮುಂದಿನ ಚುನಾವಣೆಯಲ್ಲಿ ಪಕ್ಷದ ಬಿಫಾರಂ ಸಿಕ್ಕಲು ಯಡಿಯೂರಪ್ಪನವರ ಪಾತ್ರ ನಿರ್ಣಾಯಕವಾಗಬಹುದು. ಬಿಎಸ್ವೈ ಆಯ್ಕೆಯ ನಂತರ ಇಬ್ಬರಿಗೆ ಮುಂದಿನ ದಿನಗಳಲ್ಲಿ ತೊಂದರೆಯಾಗಬಹುದೇ ಎನ್ನುವುದು ಈಗ ಚರ್ಚೆಯ ವಿಷಯವಾಗಿದೆ.

ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ವೇಳೆ ಮತ್ತು ಸಿಎಂ ಹುದ್ದೆಯಿಂದ ಕೆಳಗಿಳಿದ ನಂತರವೂ ವಿರೋಧ ಪಕ್ಷದವರೂ ನಾಚಿಸುವಂತೆ ಅವರ ವಿರುದ್ದ ಟೀಕಾ ಪ್ರಹಾರ ನಡೆಸುತ್ತಿದ್ದವರು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್. ಪಕ್ಷ ಅದೆಷ್ಟೋ ಬಾರಿ ಮುಜುಗರಕ್ಕೆ ಒಳಗಾಗುವಂತೆ ಯತ್ನಾಳ್ ಹೇಳಿಕೆಯನ್ನು ನೀಡಿದ್ದರು. ಬಿಎಸೈ ಮತ್ತವರ ಕುಟುಂಬದವರ ಉಗ್ರ ವಿರೋಧಿಯಾಗಿರುವ ಯತ್ನಾಳ್, ಮುಂದಿನ ದಿನಗಳಲ್ಲಿ ಟಾರ್ಗೆಟ್ ಆಗಬಹುದಾ ಎನ್ನುವ ಪ್ರಶ್ನೆ ಬಿಜೆಪಿ ಪಾಳಯದಲ್ಲಿ ಆರಂಭವಾಗಿದೆ. ನನ್ನನ್ನು ಸಿಎಂ ಮಾಡಿದರೆ ಬಿಜೆಪಿ ಸುಲಭವಾಗಿ 150 ಸ್ಥಾನ ಗಳಿಸಲಿದೆ ಎಂದು ಯತ್ನಾಳ್ ಇತ್ತೀಚೆಗೆ ನೀಡಿರುವ ಹೇಳಿಕೆ ಇಲ್ಲಿ ಸ್ಮರಿಸಬಹುದು.

ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರು ಅಕ್ರಮ ನಡೆಸಿದ್ದಾರೆ
ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರು ಅಕ್ರಮ ನಡೆಸಿದ್ದಾರೆ ಎಂದು ಬಹಿರಂಗವಾಗಿಯೇ ಹೇಳಿಕೆಯನ್ನು ನೀಡಿದ್ದ ಯತ್ನಾಳ್, ಸ್ವಲ್ಪ ದಿನದಲ್ಲೇ ಬಿಎಸ್ವೈ ಜೈಲಿಗೆ ಹೋಗುತ್ತಾರೆ ಎಂದು ಹೇಳಿಕೆಯನ್ನು ನೀಡಿದ್ದರು. ದುಬೈ ಮತ್ತು ಮಾರಿಶಸ್ ದೇಶಕ್ಕೆ ಆವಾಗಾವಾಗ ಯಾಕೆ ವಿಜಯೇಂದ್ರ ಹೋಗುತ್ತಾರೆ, ಅಲ್ಲಿ ಎಷ್ಟು ಆಸ್ತಿ ಮಾಡಿದ್ದಾರೆ ಎನ್ನುವುದು ನನಗೆ ಗೊತ್ತಿದೆ ಎಂದು ಯತ್ನಾಳ್ ಹೇಳಿ ಪಕ್ಷಕ್ಕೆ ಮುಜುಗರವನ್ನು ತಂದಿದ್ದರು. ಪಕ್ಷ ಅವರಿಗೆ ಮೌಖಿಕ ಎಚ್ಚರಿಕೆಯನ್ನು ನೀಡಿದ್ದರೂ, ಯತ್ನಾಳ್ ಅವರ ಬಿಎಸ್ವೈ ವಿರುದ್ದದ ಟೀಕಾ ಪ್ರಹಾರ ಮುಂದುವರಿಯುತ್ತಲೇ ಇದೆ.

ಬಿಎಸ್ವೈ, ಈಶ್ವರಪ್ಪನವರ ರಾಜಕೀಯ ಕರ್ಮಭೂಮಿ ಶಿವಮೊಗ್ಗ
ಯಡಿಯೂರಪ್ಪ ಮತ್ತು ಕೆ.ಎಸ್.ಈಶ್ವರಪ್ಪನವರ ರಾಜಕೀಯ ಕರ್ಮಭೂಮಿ ಶಿವಮೊಗ್ಗ. ಇಬ್ಬರೂ ಸ್ನೇಹಿತರಂತೆ ಇದ್ದರೂ, ಒಬ್ಬರು ಇನ್ನೊಬ್ಬರ ಮೇಲೆ ರಾಜಕೀಯ ಮೇಲಾಟ ನಡೆಸಿದ ಉದಾಹರಣೆಗಳು ನಡೆಯುತ್ತಲೇ ಇರುತ್ತದೆ. ಉದಾಹರಣೆಗೆ, 2009ರ ಲೋಕಸಭಾ ಚುನಾವಣೆ, ಬಿಎಸ್ವೈ ಕರ್ನಾಟಕ ಜನತಾ ಪಕ್ಷ(ಕೆಜೆಪಿ) ಕಟ್ಟಿದ ನಂತರ ಈಶ್ವರಪ್ಪ ನಡೆಸಿದ್ದ ವಾಗ್ದಾಳಿ, ಈಶ್ವರಪ್ಪನವರ ಪಿಎ ನೇರವಾಗಿ ನನಗೆ ಬಿಎಸ್ವೈ ಕಡೆಯಿಂದ ಬೆದರಿಕೆ ಇದೆ ಎಂದು ದೂರು ನೀಡಿದ್ದು, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತರಾಜ್ ಸಚಿವರಾಗಿದ್ದಾಗ ಈಶ್ವರಪ್ಪ ರಾಜ್ಯಪಾಲರಿಗೆ ದೂರು ನೀಡಿದ್ದು ಇತ್ಯಾದಿ ಎಲ್ಲವೂ ಈ ಸಂದರ್ಭ ಸ್ಮರಿಸಬಹುದಾದ ಅಂಶಗಳಾಗಿವೆ.

ಯಡಿಯೂರಪ್ಪನವರ ಜೊತೆಗಿನ ಈಶ್ವರಪ್ಪನವರ ಮುನಿಸು
ಯಡಿಯೂರಪ್ಪನವರ ಜೊತೆಗಿನ ಈಶ್ವರಪ್ಪನವರ ಮುನಿಸು ಇನ್ನೊಂದು ಮಜಲನ್ನು ಪಡೆದದ್ದು ಅವರು ರಾಜ್ಯಪಾಲರಿಗೆ ಈ ಹಿಂದೆ ಬರೆದಿದ್ದ ಪತ್ರ. 'ನನ್ನ ಇಲಾಖೆಯಲ್ಲಿ ಅನಗತ್ಯವಾಗಿ ಸಿಎಂ ಯಡಿಯೂರಪ್ಪ ಹಸ್ತಕ್ಷೇಪ ಮಾಡುತ್ತಿದ್ದಾರೆ' ಎಂದು ಈಶ್ವರಪ್ಪ ಪತ್ರವನ್ನು ಬರೆದದ್ದು ಮತ್ತದರ ಪ್ರತಿಯನ್ನು ವರಿಷ್ಠರಿಗೆ ಕಳುಹಿಸಿದ್ದು, ನೆನಪಿರಬಹುದು. ಈಗ, ಯಡಿಯೂರಪ್ಪನವರಿಗೆ ಉನ್ನತ ಹುದ್ದೆ ಲಭಿಸಿರುವುದರಿಂದ ಈಶ್ವರಪ್ಪನವರ ಮುಂದಿನ ರಾಜಕೀಯಕ್ಕೆ ತೊಂದರೆಯಾಗಬಹುದೇ ಎನ್ನುವ ಪ್ರಶ್ನೆ ಬಿಜೆಪಿ ವಲಯದಲ್ಲಿ ಕಾಡುತ್ತಿದೆ.












Click it and Unblock the Notifications