Year Ender 2022 : ಹಿರಿಯೂರಿನ ವಾಣಿ ವಿಲಾಸ ಜಲಾಶಯದಲ್ಲಿ ನೀರಿನ ಸಂಗ್ರಹದ ದಾಖಲೆಗಳು, ಇಲ್ಲಿದೆ ವಿವರ
ಚಿತ್ರದುರ್ಗ, ಡಿಸೆಂಬರ್, 26: ಮಧ್ಯ ಕರ್ನಾಟಕದ ಬಯಲು ಸೀಮೆಯ ಏಕೈಕ ಜೀವನಾಡಿಯಾಗಿರುವ ಕೋಟೆ ನಾಡು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ವಾಣಿ ವಿಲಾಸ ಜಲಾಶಯ 89 ವರ್ಷಗಳ ಬಳಿಕ ಕೋಡಿ ಬಿದ್ದು ಇತಿಹಾಸ ಸೃಷ್ಟಿಸಿತ್ತು. ಮತ್ತೊಂದೆಡೆ ಜಿಲ್ಲೆಯ ಐತಿಹಾಸಿಕ ಧರ್ಮಪುರ ಹಾಗೂ ರಾಣಿಕೆರೆ ಮೈದುಂಬಿ ಹರಿದಿರುವುದು ಈ ವರ್ಷದ ವಿಶೇಷವಾಗಿದೆ. ವಾಣಿ ವಿಲಾಸ ಜಲಾಶಯ 130 ಅಡಿಗೆ ತಲುಪಿ ಕೋಡಿ ಬಿದ್ದಿದ್ದು, 135 ಅಡಿ ಗರಿಷ್ಠ ಮಟ್ಟವನ್ನು ತಲುಪಿತ್ತು. ಇದೀಗ ಪ್ರಸ್ತುತ ಜಲಾಶಯದ ನೀರಿನ ಮಟ್ಟ 130 ಅಡಿ ಇದೆ.
2021ರಲ್ಲಿ 125.15 ಅಡಿ ನೀರು ಸಂಗ್ರಹವಾಗಿತ್ತು. ಈ ವರ್ಷದಲ್ಲಿ ಸುಮಾರು 15 ಟಿಎಂಸಿ ನೀರು ಜಲಾಶಯಕ್ಕೆ ಹರಿದು ಬಂದಿದೆ. ಅಲ್ಲದೆ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದರಿಂದ ಐತಿಹಾಸಿಕ ಧರ್ಮಪುರ ಕೆರೆ ಹಾಗೂ ಚಳ್ಳಕೆರೆ ತಾಲೂಕಿನ ರಾಣಿಕೆರೆ ಸೇರಿದಂತೆ ಇನ್ನಿತರ ಕೆರೆಗಳು ತುಂಬಿ ಕೋಡಿ ಬಿದ್ದಿದೆ. ಇದು 2022ರ ವಿಶೇಷವಾಗಿದೆ. ಹೆಚ್ಚು ಮಳೆ ಬೀಳದೆ ಬರದ ಭೂಮಿಯಾಗಿ ಬಯಲು ಸೀಮೆಯಾಗಿದ್ದ ಹಿರಿಯೂರು ತಾಲೂಕಿನ ಅಚ್ಚುಕಟ್ಟು ಪ್ರದೇಶದ ರೈತರಿಗೆ ಅನುಕೂಲವಾಗುವಂತೆ ಮೈಸೂರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ವಾಣಿವಿಲಾಸ ಸಾಗರ ಜಲಾಶಯವನ್ನು ನಿರ್ಮಾಣ ಮಾಡಿದ್ದಾರೆ. ವಾಣಿ ವಿಲಾಸಪುರ ಗ್ರಾಮದ ಬಳಿ ವೇದಾವತಿ ನದಿಗೆ ಅಡ್ಡಲಾಗಿ ವಾಣಿವಿಲಾಸ ಸಾಗರ ಜಲಾಶಯವನ್ನು ನಿರ್ಮಾಣ ಮಾಡಿದ್ದಾರೆ. ಈ ವರ್ಷದಲ್ಲಿ ಜಲಾಶಯಕ್ಕೆ ಭದ್ರಾ ಮೇಲ್ದಂಡೆ ನೀರು ಹರಿದು ಬಂದಿಲ್ಲ. ಇತ್ತೀಚೆಗಷ್ಟೇ ಸುರಿದ ಅಬ್ಬರ ಮಳೆಯಿಂದ ಜಲಾಶಯಕ್ಕೆ ದಾಖಲೆ ಮಟ್ಟದಲ್ಲಿ ಹರಿದು ಬಂದಿದೆ. ಇದರಿಂದ ಜಲಾಶಯದ ಕೋಡಿ ಬೀಳಲು ಸಾಧ್ಯವಾಗಿದೆ.
ಬೆಂಗಳೂರಿಗರೆ ಗಮನಿಸಿ: ಡಿ.26 ರಂದು ಯಾವ ಭಾಗದಲ್ಲಿ ನೀರು ವ್ಯತ್ಯಯ ಎಂದು ತಿಳಿಯಿರಿ
ಜಲಾಶಯದಲ್ಲಿ ಸಂಗ್ರಹವಾದ ನೀರಿನ ಪ್ರಮಾಣ
1933ರಲ್ಲಿ ಜಲಾಶಯಕ್ಕೆ 135.25 ಅಡಿ ನೀರು ಸಂಗ್ರಹವಾಗಿ ಮೊದಲ ಬಾರಿಗೆ ಕೋಡಿ ಬಿದ್ದಿತ್ತು. ಅಲ್ಲಿಂದ ಇಲ್ಲಿಯವರೆಗೆ ಯಾವುದೇ ಕೋಡಿ ಮಟ್ಟಕ್ಕೆ ನೀರು ಸಂಗ್ರಹವಾಗಿರಲಿಲ್ಲ. ಇದೀಗ 89 ವರ್ಷಗಳ ಬಳಿಕ ಭರ್ತಿಯಾಗಿ, ಕೋಡಿ ಬಿದ್ದು ಇತಿಹಾಸ ಸೃಷ್ಟಿಸಿದೆ. 1956ರಲ್ಲಿ 125 ಅಡಿ, 1957ರಲ್ಲಿ 125.05 ಅಡಿ, 1958ರಲ್ಲಿ 124.50 ಅಡಿ ನೀರು ಸಂಗ್ರಹವಾಗಿತ್ತು. ತದನಂತರ 2000ರಲ್ಲಿ 122.50 ಅಡಿ ನೀರು ಜಲಾಶಯಕ್ಕೆ ಹರಿದು ಬಂದಿತ್ತು. ಇದೀಗ 89 ವರ್ಷಗಳ ಬಳಿಕ ಜಲಾಶಯದಲ್ಲಿ ದಾಖಲೆ ಪ್ರಮಾಣದಲ್ಲಿ ನೀರು ಸಂಗ್ರಹವಾಗಿತ್ತು. 89 ವರ್ಷಗಳ ನಂತರ ಜಲಾಶಯ ಕೋಡಿ ಬೀಳುವುದನ್ನು ನೋಡಲು ಜನತೆ ಕಾತರದಿಂದ ಕಾದು ಕುಳಿತಿದ್ದರು. ಜಲಾಶಯದ ಕೋಡಿ ಬೀಳುವ ಸುದ್ದಿ ಕೇಳಿದ ತಕ್ಷಣ ಜಿಲ್ಲೆಯ ಜನತೆ ತಂಡೋಪತಂಡವಾಗಿ ಜಮಾಯಿಸಿದ್ದರು.
ಭದ್ರಾ ಜಲಾಶಯದಿಂದ ನೀರಿನ ಹರಿವು
2021ರಲ್ಲಿ ವಿವಿ ಸಾಗರ ಜಲಾಶಯಕ್ಕೆ ಮಳೆ ನೀರು ಹಾಗೂ ಭದ್ರಾ ನೀರು ಸೇರಿದಂತೆ 16.77 ಟಿಎಂಸಿ ನೀರು ಹರಿದು ಬಂದಿತ್ತು. ಭದ್ರಾ ಜಲಾಶಯದಿಂದ 6.82 ಅಡಿ ನೀರು, ಮಳೆಯಿಂದ 9.95 ಟಿಎಂಸಿ ನೀರು ಜಲಾಶಯಕ್ಕೆ ಬಂದಿದೆ. ಈ ವರ್ಷದಲ್ಲಿ ಸುಮಾರು 15 ಟಿಎಂಸಿ ನೀರು ಸಂಗ್ರಹವಾಗಿತ್ತು. ಎರಡನೇ ಬಾರಿಗೆ ಕೋಡಿ ಬಿದ್ದಿದ್ದ ವಾಣಿ ವಿಲಾಸ ಜಲಾಶಯಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನವೆಂಬರ್ 22ರಂದು ಗಂಗಾ ಪೂಜೆ ನೇರವೇರಿಸಿ ಬಾಗಿನ ಅರ್ಪಿಸಿದರು. ಇನ್ನು ಜಲಾಶಯಕ್ಕೆ ಬಾಗಿನ ಅರ್ಪಿಸಿದ ಮೊದಲ ಸಿಎಂ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಅಲ್ಲದೆ ಚಳ್ಳಕೆರೆ ತಾಲೂಕಿನ ರಾಣಿಕೆರೆಗೂ ಸಹ ಬಸವರಾಜ ಬೊಮ್ಮಾಯಿ ಅವರು ಬಾಗಿನ ಅರ್ಪಿಸಿದರು.
40 ವರ್ಷಗಳ ಬಳಿಕ ತುಂಬಿದ ಕೆರೆ
ಹಿರಿಯೂರು ತಾಲೂಕಿನ ಧರ್ಮಪುರ ಗ್ರಾಮದ ಐತಿಹಾಸಿಕ ಕೆರೆ 40 ವರ್ಷಗಳ ಬಳಿಕ ಮೈದುಂಬಿ ಹರಿದಿದ್ದು, ಕೋಡಿ ಬಿದ್ದಿದೆ. ಈ ಕೋಡಿ ಬಿದ್ದ ದೃಶ್ಯವನ್ನು ನೋಡಲು ಜನರು ಕಿಕ್ಕಿರಿದು ನೆರೆದಿದ್ದರು. ಅಲ್ಲದೆ ಗ್ರಾಮಸ್ಥರು ಕೆರೆ ಬಳಿ ಡಿಜೆ ಹಾಕಿಕೊಂಡು ಸಂಭ್ರಸಿದನ್ನು ಗಮನಿಸಬಹುದಾಗಿದೆ. 1982ರಲ್ಲಿ ಧರ್ಮಪುರ ಕೋಡಿ ಬಿದ್ದಿತ್ತು. 40 ವರ್ಷಗಳ ಬಳಿಕ ಇದೀಗ ಮತ್ತೆ ಕೆರೆ ಕೋಡಿ ಬಿದ್ದಿದ್ದು, ಇಲ್ಲಿನ ರೈತರ ಮುಖದಲ್ಲಿ ಸಂತಸ ಮೂಡಿಸಿದೆ. ಕೆರೆ ಭರ್ತಿಯಾದ ಹಿನ್ನೆಲೆಯಲ್ಲಿ ಸುತ್ತ ಮುತ್ತಲಿನ ಬೋರ್ ವೆಲ್ಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಿದೆ.
ನೀರಿನ ಸಂಗ್ರಹ ಸಾಮರ್ಥ್ಯದ ವಿವರ
ಮುಂಗಾರು ಹಂಗಾಮಿನಲ್ಲಿ ಸುರಿದ ಭಾರಿ ಮಳೆಗೆ ಚಳ್ಳಕೆರೆ ತಾಲೂಕಿನ ಮೀರಾಸಾಬಿಹಳ್ಳಿ ಗ್ರಾಮದ ರಾಣಿಕೆರೆ ಮೈದುಂಬಿ ಹರಿದು ಕೋಡಿ ಬಿದ್ದಿತ್ತು. 2500 ಹೆಕ್ಟೇರ್ ಪ್ರದೇಶದ ವಿಸ್ತೀರ್ಣ ಹೊಂದಿರುವ ರಾಣಿಕೆರೆ 24 ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಈ ಕೆರೆಯಿಂದ ಸುಮಾರು 1900 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹಾಯಿಸಬಹುದಾಗಿದೆ. ಕೆರೆಯಲ್ಲಿ ಪ್ರಸ್ತುತವಾಗಿ 20ಕ್ಕೂ ಹೆಚ್ಚು ಅಡಿ ನೀರು ಸಂಗ್ರಹವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿತ್ತು. ಒಟ್ಟಾರೆಯಾಗಿ ಈ ಬಾರಿ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದು, ಜಿಲ್ಲೆಯ ಬಹುತೇಕ ಕೆರೆ ಕಟ್ಟೆಗಳು, ಹಳ್ಳ-ಕೊಳ್ಳಗಳು ಭರ್ತಿಯಾಗಿವೆ. ಇದರಿಂದ ಬತ್ತಿ ಹೋಗಿದ್ದ ಕೊಳವೆ ಬಾವಿಗಳು ಉಕ್ಕಿ ಹರಿಯುತ್ತಿದ್ದು, ಸದ್ಯಕ್ಕೆ ನೀರಿನ ದಾಹ ದೂರವಾದಂತಾಗಿದೆ.