Get Updates
Get notified of breaking news, exclusive insights, and must-see stories!

ಕಲ್ಯಾಣ್ ಸಿಂಗ್ ಪರಿಚಯ; ಶಿಕ್ಷಕ, ಕುಸ್ತಿಪಟು ಬಳಿಕ ಸಿಎಂ

ಲಕ್ನೋ, ಆಗಸ್ಟ್ 22; ಬಿಜೆಪಿಯ ಹಿರಿಯ ನಾಯಕ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ವಿಧಿವಶರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಹಲವು ದಿನಗಳಿಂದ ವೆಂಟಿಲೇಟರ್ ವ್ಯವಸ್ಥೆಯಲ್ಲಿದ್ದರು. ಶನಿವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

89 ವರ್ಷದ ಕಲ್ಯಾಣ್ ಸಿಂಗ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ, ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿ ಕಾರ್ಯ ನಿರ್ವಹಣೆ ಮಾಡಿದ್ದರು. "ಕಲ್ಯಾಣ್ ಸಿಂಗ್ ನಿಧನ ಬಿಜೆಪಿ ಪಾಲಿಗೆ ತುಂಬಲಾರದ ನಷ್ಟ" ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಬಾಬರಿ ಮಸೀದಿ ಧ್ವಂಸ ಪ್ರಕರಣ ಭಾರತದಲ್ಲಿ ಸದಾ ಚರ್ಚೆಯ ವಿಷಯ. ಬಿಜೆಪಿ ರಾಜಕೀಯವಾಗಿ ಬೆಳೆಯಲು ಈ ಘಟನೆ ಹೇಗೆ ಕಾರಣವಾಯಿತು? ಎಂಬುದು ಎಲ್ಲರಿಗೂ ತಿಳಿದ ವಿಚಾರ. 1992ರ ಡಿಸೆಂಬರ್ 6ರಂದು ಬಾಬರಿ ಮಸೀದಿ ಧ್ವಂಸ ಸಮಯದಲ್ಲಿ ಕಲ್ಯಾಣ್ ಸಿಂಗ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಮಸೀದಿ ಧ್ವಂಸ ಪ್ರಕರಣದ ಬಳಿಕ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು.

1991ರಲ್ಲಿ ಕಲ್ಯಾಣ್ ಸಿಂಗ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದರು. ಅದಕ್ಕೂ ಮೊದಲು ಅವರು ಅಲಿಘಡ್‌ನಲ್ಲಿ ಕುಸ್ತಿಪಟುವಾಗಿದ್ದರು. ರಾಜ್ಯದಲ್ಲಿ ಅವರು ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದ್ದರು. ರಾಜಕೀಯಕ್ಕೆ ಪಾದಾರ್ಪಣೆ ಮಾಡುವ ಮೊದಲು ಕಲ್ಯಾಣ್ ಸಿಂಗ್ ಅಲಿಘಡ್‌ನಲ್ಲಿ ಆರ್‌ಎಸ್‌ಎಸ್ ಸ್ವಯಂ ಸೇವಕರಾಗಿದ್ದರು.

1932ರ ಜನವರಿ 5ರಂದು ಜನಿಸಿದ ಕಲ್ಯಾಣ್ ಸಿಂಗ್ 1967ರಲ್ಲಿ ಮೊದಲ ಬಾರಿಗೆ ಶಾಸಕರಾದರು. ಬಿಜೆಪಿಯಲ್ಲಿ ಪ್ರಮುಖ ಹುದ್ದೆಗಳನ್ನು ನಿಭಾಯಿಸಿದರು. 1999ರಲ್ಲಿ ಬಿಜೆಪಿ ತೊರೆದು 2004ರಲ್ಲಿ ಮತ್ತೆ ವಾಪಸ್ ಆದರು. 2009ರಲ್ಲಿ ಪಕ್ಷ ತೊರೆದು ಪುನಃ ಸೇರ್ಪಡೆಗೊಂಡರು.

ಕುಸ್ತಿಪಟು, ಶಿಕ್ಷಕರಾಗಿ ಸೇವೆ

ಕುಸ್ತಿಪಟು, ಶಿಕ್ಷಕರಾಗಿ ಸೇವೆ

ಶಿಕ್ಷಣ ಪೂರ್ಣಗೊಳಿಸಿದ ನಂತರ ಕಲ್ಯಾಣ್ ಸಿಂಗ್ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಅಲಿಘಡ್‌ನಲ್ಲಿ ಅವರು ಮೊದಲು ಕುಸ್ತಿಪಟುವಾಗಿದ್ದರು. ರಾಜಕೀಯದಲ್ಲಿಯೂ ಕುಸ್ತಿಪಟು ಮನಸ್ಥಿತಿಯನ್ನು ಮುಂದುವರೆಸಿದರು. ಹಿಂದುತ್ವದ ಪೋಸ್ಟರ್ ಬಾಯ್ ಆದರು. ಲೋಧ ಸಮುದಾಯದ ಪ್ರಮುಖ ನಾಯಕರಾದರು. ಉತ್ತರ ಪ್ರದೇಶದಲ್ಲಿ ಶೇ 4-5ರಷ್ಟು ಲೋಧ ಸಮುದಾಯದ ಜನರಿದ್ದಾರೆ. ಮಧ್ಯಪ್ರದೇಶದಲ್ಲಿ ಸಹ ಈ ಸಮುದಾಯ ಬಹಳ ಪ್ರಭಾವಿಯಾಗಿದೆ.

ತುರ್ತು ಪರಿಸ್ಥಿತಿ ಹೇರಿದ ಸಂದರ್ಭದಲ್ಲಿ ಕಲ್ಯಾಣ್ ಸಿಂಗ್ ಬಂಧನವಾಗಿತ್ತು. 21 ತಿಂಗಳ ಕಾಲ ಅವರು ಜೈಲಿನಲ್ಲಿದ್ದರು. ಬಿಡುಗಡೆ ಬಳಿಕ ಅವರ ವರ್ಚಸ್ಸು ವೃದ್ಧಿಗೊಂಡಿತು. 1977ರಲ್ಲಿ ಜನತಾ ಪಕ್ಷದ ಮೈತ್ರಿ ಸರ್ಕಾರ ಹಲವು ರಾಜ್ಯಗಳಲ್ಲಿ ಅಸ್ತಿತ್ವಕ್ಕೆ ಬಂದಿತು. ಆಗ ಉತ್ತರ ಪ್ರದೇಶದಲ್ಲಿ ಕಲ್ಯಾಣ್ ಸಿಂಗ್ ಆರೋಗ್ಯ ಸಚಿವರಾಗಿದ್ದರು.

ಕಲ್ಯಾಣ್ ಸಿಂಗ್ ರಾಜ್ಯಾಧ್ಯಕ್ಷರಾಗಿದ್ದರು

ಕಲ್ಯಾಣ್ ಸಿಂಗ್ ರಾಜ್ಯಾಧ್ಯಕ್ಷರಾಗಿದ್ದರು

ಕಲ್ಯಾಣ್ ಸಿಂಗ್ ಭಾರತೀಯ ಜನಸಂಘದ ರಾಜ್ಯಾಧ್ಯಕ್ಷರಾಗಿದ್ದರು. ಜನತಾ ಪಕ್ಷದ ಭಾರತೀಯ ಜನಸಂಘ ಪ್ರಯೋಗ ವಿಫಲವಾಯಿತು ಮತ್ತು ಬಿಜೆಎಸ್ 1980ರಲ್ಲಿ ಬಿಜೆಪಿಯಾಗಿ ಪರಿವರ್ತನೆಗೊಂಡಿತು. ಬಿಜೆಪಿ ವಿಶ್ವಹಿಂದೂ ಪರಿಷತ್ ಘೋಷಣೆಯಾದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವನ್ನು ಪ್ರಮುಖ ಧ್ಯೇಯವಾಗಿ ಇಟ್ಟುಕೊಂಡಿತು. ಅಯೋಧ್ಯೆ ರಾಮಮಂದಿರ ನಿರ್ಮಾಣ ಅಭಿಯಾನಕ್ಕೆ ಎಲ್‌. ಕೆ. ಅಡ್ವಾಣಿ ಪಕ್ಷದ ಪ್ರಮುಖ ನಾಯಕರಾದರು.

1989ರಲ್ಲಿ ಬಿಜೆಪಿ ಬೆಂಬಲದಿಂದ ಪ್ರಧಾನಮಂತ್ರಿಯಾದ ವಿಶ್ವನಾಥ್ ಪ್ರತಾಪ್ ಸಿಂಗ್ ಕಲ್ಯಾಣ್ ಸಿಂಗ್ ರಾಜಕೀಯ ಜೀವನದಲ್ಲಿ ಮತ್ತೊಂದು ತಿರುವು ನೀಡಿದರು. ಕಲ್ಯಾಣ್ ಸಿಂಗ್‌ರ ಲೋಧ ಸಮುದಾಯದ ನಾಯಕನ ಪ್ರಭಾವ ಅವರನ್ನು ಬಿಜೆಪಿ ಮುಖವಾಣಿಯಾಗಿ ಬಳಕೆ ಮಾಡಲು ಸಹಕಾರಿಯಾಯಿತು.

ಅಭಿಯಾನಕ್ಕೆ ತಕ್ಕ ನಾಯಕ ಕಲ್ಯಾಣ್ ಸಿಂಗ್

ಅಭಿಯಾನಕ್ಕೆ ತಕ್ಕ ನಾಯಕ ಕಲ್ಯಾಣ್ ಸಿಂಗ್

ಸರಿಯಾದ ಸಮಯದಲ್ಲಿ ಸರಿಯಾದ ವ್ಯಕ್ತಿಯಾಗಿ ಬಿಜೆಪಿಗೆ ಕಲ್ಯಾಣ್ ಸಿಂಗ್ ಸಿಕ್ಕಿದರು. ಅಯೋಧ್ಯೆ ರಾಮಮಂದಿರ ನಿರ್ಮಾಣ ಅಭಿಯಾನಕ್ಕೆ ಅವರು ರಾಜ್ಯದಲ್ಲಿ ಬಲ ತುಂಬಿದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್‌ರನ್ನು ಕಟುವಾಗಿ ವಿರೋಧಿಸಿದರು. ಉತ್ತರ ಪ್ರದೇಶದಲ್ಲಿ ಬಿಜೆಪಿ ತನ್ನ ಸಂಘಟನಾ ಶಕ್ತಿಯನ್ನು ಹೆಚ್ಚು ವಿಸ್ತರಿಸಲು, ಗಟ್ಟಿಗೊಳಿಸಲು ಕಲ್ಯಾಣ್ ಸಿಂಗ್ ನೆರವಾದರು. ಬಿಜೆಪಿ ಕಲ್ಯಾಣ್ ಸಿಂಗ್ ನೇತೃತ್ವದಲ್ಲಿ ದೇಶಾದ್ಯಂತ ಯಾತ್ರೆಗಳನ್ನು ಆಯೋಜನೆ ಮಾಡಿತು. ತಾವೊಬ್ಬ ಚಾಣಾಕ್ಯ ಪ್ರಚಾರಕ ಎಂದು ಕಲ್ಯಾಣ್ ಸಿಂಗ್ ಯಾತ್ರೆಯ ಮೂಲಕ ಸಾಬೀತು ಮಾಡಿದರು. ಕೋಲ್ಕತ್ತಾದಲ್ಲಿ ಹಿಂದೆ ಎಂದೂ ಸೇರಿರದಷ್ಟು ಜನರು ಯಾತ್ರೆಗೆ ಸೇರಿದ್ದರು.

1991ರ ಉತ್ತರ ಪ್ರದೇಶ ಚುನಾವಣೆ

1991ರ ಉತ್ತರ ಪ್ರದೇಶ ಚುನಾವಣೆ

1991ರಲ್ಲಿ ಉತ್ತರ ಪ್ರದೇಶ ರಾಜ್ಯ ವಿಧಾನಸಭೆ ಚುನಾವಣೆ ಎದುರಿಸಿತು. 425 ಸದಸ್ಯ ಬಲದ ವಿಧಾನಸಭೆಯಲ್ಲಿ 221 ಸ್ಥಾನಗಳನ್ನು ಗೆಲ್ಲುವು ಮೂಲಕ ಬಿಜೆಪಿ ಅಧಿಕಾರಕ್ಕೆ ಬಂದಿತು. ಆಗ ಇನ್ನೂ ಉತ್ತರಾಖಂಡ ಪ್ರತ್ಯೇಕರಾಜ್ಯವಾಗಿರಲಿಲ್ಲ. ಕಲ್ಯಾಣ್ ಸಿಂಗ್ ಮುಖ್ಯಮಂತ್ರಿಯಾದರು. 1991ರ ಜೂನ್‌ನಲ್ಲಿ ಕಲ್ಯಾಣ್ ಸಿಂಗ್ ಅಯೋಧ್ಯೆಗೆ ಭೇಟಿ ನೀಡಿದರು ಮತ್ತು ರಾಮ ಮಂದಿರ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದರು. ಅಧಿಕಾರಕ್ಕೆ ಬಂದ ಆರು ತಿಂಗಳಿನಲ್ಲಿಯೇ ಕಲ್ಯಾಣ್ ಸಿಂಗ್ ಸರ್ಕಾರ ರಾಮ ಮಂದಿರ ನಿರ್ಮಾಣಕ್ಕಾಗಿ ಬಾಬರಿ ಮಸೀದಿ ಕಾಂಪ್ಲೆಕ್ಸ್ ಸುತ್ತಲಿನ 2.77 ಎಕರೆ ಭೂಮಿಯನ್ನು ವಶಕ್ಕೆ ಪಡೆಯುವುದಾಗಿ ಅಧಿಸೂಚನೆ ಹೊರಡಿಸಿತು. 2019ರ ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಇದೇ ಜಾಗವನ್ನು ರಾಮ ಮಂದಿರ ಟ್ರಸ್ಟ್‌ಗೆ ಹಸ್ತಾಂತರ ಮಾಡಲಾಯಿತು. ಕರ ಸೇವಕರಿಂದ ರಾಮ ಮಂದಿರ ನಿರ್ಮಾಣದ ಕಾಮಗಾರಿ ಆರಂಭವಾಯಿತು. ಬಿಜೆಪಿ ಮತ್ತು ಶಿವಸೇನೆ ಕಾರ್ಯಕರ್ತರು ಸಹ ಕರ ಸೇವಕರಾದರು.

ಬಾಬರಿ ಮಸೀದಿ ಧ್ವಂಸ ಪ್ರಕರಣ

ಬಾಬರಿ ಮಸೀದಿ ಧ್ವಂಸ ಪ್ರಕರಣ

ರಾಮ ಮಂದಿರ ನಿರ್ಮಾಣ ಕಾಮಗಾರಿ ಆರಂಭವಾಗುತ್ತಿದ್ದಂತೆ ಬಾಬರಿ ಮಸೀದಿಗೆ ಹಾನಿಯಾಗಲಿದೆ ಎಂಬ ಮಾತುಗಳು ಕೇಳಿ ಬರಲಾರಂಭಿಸಿತು. ಕಲ್ಯಾಣ್ ಸಿಂಗ್ ಸರ್ಕಾರ ಕೇಂದ್ರ ಸರ್ಕಾರ ಮತ್ತು ಸುಪ್ರೀಂಕೋರ್ಟ್‌ಗೆ ಬಾಬರಿ ಮಸೀದಿಗೆ ಹಾನಿಯಾಗಲು ಬಿಡುವುದಿಲ್ಲ ಎಂದು ಹೇಳಿತು. ಡಿಸೆಂಬರ್ 6, 1992ರಲ್ಲಿ ಬಾಬರಿ ಮಸೀದಿ ಕೆಡವಲಾಯಿತು. ರಾಜ್ಯ ಸರ್ಕಾರ ಕರ ಸೇವಕರನ್ನು ತಡೆಯಲು ತನ್ನ ಪಡೆಗಳನ್ನು ಬಳಕೆ ಮಾಡಲಿಲ್ಲ. ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ನೈತಿಕ ಹೊಣೆ ಹೊತ್ತು ಕಲ್ಯಾಣ್ ಸಿಂಗ್ ರಾಜೀನಾಮೆ ನೀಡಿದರು. ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಕಲ್ಯಾಣ್ ಸಿಂಗ್ ಸಹ ಪ್ರಮುಖ ಆರೋಪಿ. ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಕಲ್ಯಾಣ್ ಸಿಂಗ್ ಬಾಬರಿ ಮಸೀದಿ ರಕ್ಷಣೆಗೆ ಮುಂದಾಗಿಲ್ಲ ಎಂದು ಸಿಬಿಐ ಹೇಳಿದೆ. 2017ರಲ್ಲಿ ಸುಪ್ರೀಂಕೋರ್ಟ್ ಕಲ್ಯಾಣ್ ಸಿಂಗ್ ವಿರುದ್ಧ ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಪ್ರಕರಣ ದಾಖಲು ಮಾಡಲು ಒಪ್ಪಿಗೆ ನೀಡಿತು.

ಕಲ್ಯಾಣ್ ಸಿಂಗ್ ರಾಜಕೀಯ ಜೀವನ

ಕಲ್ಯಾಣ್ ಸಿಂಗ್ ರಾಜಕೀಯ ಜೀವನ

ರಾಮಮಂದಿರ ನಿರ್ಮಾಣದ ವಿಚಾರದಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಭದ್ರ ಬುನಾದಿ ಸಿಕ್ಕಿದರೂ ಪಕ್ಷಕ್ಕೆ ಸೋಲಿನ ಅನುಭವವೂ ಆಯಿತು. 1993ರ ಚುನಾವಣೆಯಲ್ಲಿ ಪಕ್ಷ 176 ಸೀಟುಗಳನ್ನು ಪಡೆದು ಸೋಲು ಕಂಡಿತು. 1997ರಲ್ಲಿ 177 ಸೀಟುಗಳನ್ನು ಪಕ್ಷ ಪಡೆಯಿತು.

1997ರಲ್ಲಿ ಕಲ್ಯಾಣ್ ಸಿಂಗ್ 2ನೇ ಬಾರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದರು. ಆದರೆ ತಮ್ಮ ಅವಧಿ ಮುಗಿಯುತ್ತಿದ್ದಂತೆಯೇ ಬಿಎಸ್‌ಪಿ ನಾಯಕಿ ಮಾಯಾವತಿ ತಾವು ನೀಡಿದ್ದ ಬೆಂಬಲವನ್ನು ವಾಪಸ್ ಪಡೆದರು. 1999ರಲ್ಲಿ ಕಲ್ಯಾಣ್ ಸಿಂಗ್ ಬಿಜೆಪಿ ತೊರೆದು ಬೇರೆ ಪಕ್ಷ ಸ್ಥಾಪನೆ ಮಾಡಿದರು. 2004ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಮನವಿ ಬಳಿಕ ಪುನಃ ಪಕ್ಷ ಸೇರಿದರು. 2004ರಲ್ಲಿ ಸಂಸದರಾಗಿ ಆಯ್ಕೆಯಾದರು. 2009ರಲ್ಲಿ ಬಿಜೆಪಿ ಜೊತೆಗಿನ ಭಿನ್ನಾಭಿಪ್ರಾಯದ ಕಾರಣ ಸ್ವತಂತ್ರ ಅಭ್ಯರ್ಥಿಯಾಗಿ ಎತಾಹ್ ಕ್ಷೇತ್ರದಿಂದ ಚುನಾವಣೆಗೆ ನಿಂತು ಗೆದ್ದರು. 2009ರಲ್ಲಿ ಸಮಾಜವಾದಿ ಪಕ್ಷ ಸೇರಿದರು.

2013ರಲ್ಲಿ ಬಿಜೆಪಿಗೆ ವಾಪಸ್ ಆದರು. 2014ರಲ್ಲಿ ರಾಜಸ್ಥಾನದ ರಾಜ್ಯಪಾಲರಾದರು. ಎಂಟು ತಿಂಗಳ ಕಾಲ ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+