RAPID ಮೂಲಕ ವಿಧವೆಯರ ಬದುಕಿಗೆ ಬೆಳಕಾದ ಧಾರವಾಡದ ವಾಣಿ ಪುರೋಹಿತ್
ಕುಟುಂಬದ
ಜವಾಬ್ದಾರಿಯನ್ನು
ಹೆಗಲಮೇಲಿರಿಸಿಕೊಂಡೇ
ಮಹತ್ತರವಾದುದನ್ನು
ಸಾಧಿಸಿದವವಳು
ಹೆಣ್ಣು.
ಅಂಥ
ಅಸಾಮಾನ್ಯ
ಮಾನಿನಿಯರ
ಸಾಹಸಗಾಥೆಯನ್ನು
ಪರಿಚಯಿಸುವ
ಪುಟ್ಟ
ಪ್ರಯತ್ನವನ್ನು
'ಮಹಿಳಾ
ಸಾಧಕಿಯರು'
ಅಂಕಣದ
ಮೂಲಕ
'ಒನ್
ಇಂಡಿಯಾ'
ಮಾಡುತ್ತಿದೆ.
ಪ್ರತಿ
ಶನಿವಾರ
ಪ್ರಕಟವಾಗುವ
ಈ
ಅಂಕಣದ
ಈ
ವಾರದ
ಭಾಗವಾಗಿ,
ವಿಧವೆಯರ
ಸಬಲೀಕರಣಕ್ಕಾಗಿ
ಶ್ರಮಿಸುತ್ತಿರುವ
ಧಾರವಾಡದ
'ವಾಣಿ
ಪುರೋಹಿತ್'
ಅವರ
ಪರಿಚಯ
ಇಲ್ಲಿದೆ.
***
ವಿಧವೆಯರು, ವಿಚ್ಛೇದನಕ್ಕೊಳಗಾದ ಮಹಿಳೆಯರು, ಪರಿತ್ಯಕ್ತರು, ಅಶಕ್ತ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಿ, ಅವರಲ್ಲಿ ಬದುಕಿನ ಬಗ್ಗೆ ಧನಾತ್ಮಕ ಮನೋಭಾವವನ್ನು ಬಿತ್ತುವ ಕೆಲಸವನ್ನು ಧಾರವಾಡದ RAPID (Rehabilitative Assistance for People in Distress) ಎಂಬ ಸಂಸ್ಥೆ 2001 ರಿಂದ ಸದ್ದಿಲ್ಲದೆ ಮಾಡಿಕೊಂಡು ಬರುತ್ತಿದೆ.
ಪ್ರತಿವರ್ಷ ಕನಿಷ್ಠ 200 ಮಹಿಳೆಯರಿಗೆ ಔದ್ಯೋಗಿಕ ತರಬೇತಿ, ಆಪ್ತಸಲಹೆ ನೀಡುವ ಮೂಲಕ ಖಿನ್ನಯತೆಗೊಳಗಾದ ಅವರಲ್ಲಿ ಹೊಸ ಚೈತನ್ಯ ಬಿತ್ತುವ ಕೆಲಸ ಮಾಡಲಾಗುತ್ತಿದೆ.
ಕೊಳಗೇರಿ ಮಕ್ಕಳ ಬದುಕಿಗೆ ಹೊಸ 'ದಿಕ್ಕು': ನರ್ಮದಾ ಕುರ್ತಕೋಟಿ ಸಂದರ್ಶನ
2005 ರಿಂದ ಈ ಸಂಸ್ಥೆಯೊಂದಿಗೆ ಕೈಜೋಡಿಸಿ, ಈ ಮಹಿಳೆಯರ ಜೀವನ ಮಟ್ಟ ಸುಧಾರಿಸುವುದನ್ನೇ ತಮ್ಮ ಬದುಕಿನ ಗುರಿ ಎಂದುಕೊಂಡಿರುವ ಧಾರವಾಡದ ವಾಣಿ ಪುರೋಹಿತ್ ಈ ಎನ್ ಜಿಒ ಜೊತೆಗಿನ ತಮ್ಮ ಒಡನಾಟವನ್ನು ಒನ್ ಇಂಡಿಯಾದೊಂದಿಗೆ ಹಂಚಿಕೊಂಡಿದ್ದಾರೆ.
ಕ್ಲೀನಿಕಲ್ ಸೈಕಾಲಜಿ ಓದಿ, ಯಾವುದಾದರೂ ಕೌನ್ಸಲಿಂಗ್ ಸೆಂಟರ್ ನಲ್ಲಿ ಕೆಲಸ ಮಾಡುತ್ತೇನೆ ಎಂದುಕೊಂಡಿದ್ದ ಅವರ ಬದುಕು, ಸಾಮಾಜಿಕ ಸೇವೆಯತ್ತ ಮುಖ ಮಾಡಿದ್ದು ಹೇಗೆ ಎಂಬುನ್ನು ಅವರ ಮಾತಲ್ಲೇ ಕೇಳಿ. ಮೂಲತಃ ಧಾರವಾಡದವರಾದ ವಾಣಿ ಪುರೋಹಿತ್ ನಮ್ಮ ಈ ವಾರದ ಸಾಧಕಿ.
Rapid ನೊಂದಿಗೆ ಶುರುವಾಯ್ತು ನಂಟು
ಧಾರವಾಡದಲ್ಲಿ ಹಲವು ಸಾಮಾಜಿಕ ಸೇವಾ ಕಾರ್ಯಗಳಿಗೆ ಮುನ್ನುಡಿ ಬರೆದ ವಿಜಯ ಕುಲಕರ್ಣಿ ಎಂಬುವವರ ಕನಸು ಈ RAPID. 2005 ರಲ್ಲಿ ನಾನು ಈ ಸಂಸ್ಥೆಗೆ ಸೇರುವವರೆಗೂ, ಯಾವುದಾದರೂ ಆಪ್ತಸಲಹಾ ಕೇಂದ್ರದಲ್ಲಿ ಕೆಲಸ ಮಾಡಬೇಕೆಂದೇ ಅಂದುಕೊಂಡಿದ್ದೆ. ಆದರೆ ಅಶಕ್ತ ಮಹಿಳೆಯರಿಗೆ ಆಪ್ತಸಲಹೆ ನೀಡುವ ಹೊಸ ಜವಾಬ್ದಾರಿಯನ್ನು ಹೊತ್ತುಕೊಳ್ಳುವಂತೆ ಹಲವೆಡೆಯಿಂದ ಒತ್ತಾಯ ಆರಂಭವಾಯ್ತು. ನಾನು ಓದಿದ್ದೂ ಕ್ಲೀನಿಕಲ್ ಸೈಕಾಲಜಿ ಆದ್ದರಿಂದ ಒಪ್ಪಿಕೊಂಡೆ. ಅಲ್ಲಿಂದ ಶುರುವಾಯ್ತು RAPID ಜೊತೆಗಿನ ನನ್ನ ಪಯಣ.
ಆಗಲೇ ಅರಿವಾಗಿದ್ದು ಮಹಿಳೆಯರ ಕಷ್ಟ
ಮೊದಲು ಧಾರವಾಡ ಮತ್ತು ಹುಬ್ಬಳ್ಳಿಯ ಸುತ್ತ ಮುತ್ತಲ ಪ್ರದೇಶದಲ್ಲಿರುವ ವಿಧವೆಯರು, ಅಶಕ್ತ ಮಹಿಳೆಯರು, ವಿಚ್ಛೇದಿತ ಮಹಿಳೆಯರನ್ನು ಸಂಸ್ಥೆಗೆ ಕರೆತಂದು ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದಕ್ಕೆ ಆರಂಭಿಸಿದೆವು. ಆದರೆ ಅದು ಸುಲಭದ ಕೆಲಸವಾಗಿರಲಿಲ್ಲ. ಎಷ್ಟೋ ಮಹಿಳೆಯರು ಮನೆಯಿಂದ ಆಚೆ ಬರುವುದಕ್ಕೇ ಸಿದ್ಧವಿರಲಿಲ್ಲ. ಎಷ್ಟೋ ಮಹಿಳೆಯರು ಆರ್ಥಿಕವಾಗಿ ತೀರಾ ಸಂಕಷ್ಟದ ಸ್ಥಿತಿಯಲ್ಲಿದ್ದರು. ಅಲ್ಲಿರುವ ಪ್ರತಿಯೊಬ್ಬ ಮಹಿಳೆಗೂ ಮೊದಲು ಅಗತ್ಯವಿದ್ದುದು ಆಪ್ತಸಲಹೆ.
ಅವರನ್ನೆಲ್ಲ ಕರೆಸಿ, ಒಬ್ಬೊಬ್ಬರನ್ನೇ ಪ್ರತ್ಯೇಕವಾಗಿ ಕೂರಿಸಿಕೊಂಡು, ಸಮಸ್ಯೆಗಳನ್ನೆಲ್ಲ ಆಲಿಸಿದೆವು. ಒಬ್ಬೊಬ್ಬರ ಕತೆ ಒಂದೊಂದು ಥರದ್ದು. ಆದರೆ ವಿಧವೆಯಾದ ನಂತರ ಮಹಿಳೆಯನ್ನು ಆಕೆಯ ತವರು ಮನೆಯವರಾಗಲಿ, ಗಂಡನ ಮನೆಯವರಾಗಲಿ ಮೊದಲು ನೋಡುವುದು ಆರ್ಥಿಕ ಹೊರೆ ಎಂದೇ ಎಂಬ ಕಹಿ ಅನುಭವ ಹಲವು ಸಂದರ್ಭಗಳಲ್ಲಿ ಆಯಿತು. ಆದ್ದರಿಂದಲೇ ಅವರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವುದು ತೀರಾ ಅಗತ್ಯವೆನ್ನಿಸಿತ್ತು.
ನಾನು ಅವನಲ್ಲ ಅವಳು... ಆರ್ ಜೆ ಪ್ರಿಯಾಂಕ ಜೀವನ ಪಯಣ
ಸಬಲೀಕರಣದತ್ತ ಹೆಜ್ಜೆ
ಆಪ್ತ ಸಲಹೆಯ ನಂತರ ಮಹಿಳೆಯರಿಗೆ ಹೊಲಿಗೆ ತರಬೇತಿ, ಕಂಪ್ಯೂಟರ್ ತರಬೇತಿ, ಕರಕುಶಲ ವಸ್ತುಗಳ ತಯಾರಿಕೆಯ ತರಬೇತಿ, ಬ್ಯೂಟಿಶಿಯನ್ ತರಬೇತಿಗಳನ್ನು ನೀಡುವುದಕ್ಕೆ ತೊಡಗಿದೆವು. ಕ್ರಮೇಣ ಮಹಿಳೆಯರಿಗೂ ಬದುಕಿನ ಬಗ್ಗೆ ಹೊಸ ಭರವಸೆ ಹುಟ್ಟಿಕೊಳ್ಳತೊಡಗಿತ್ತು. ನನ್ನ ಕುಟುಂಬಕ್ಕೆ ನಾನು ಹೊರೆಯಾಗಿಬಿಟ್ಟಿದ್ದೀನಿ ಎಂಬ ಕೀಳರಿಮೆ ಹೋಗಿ, ತಾನೂ ದುಡಿಯಬಲ್ಲೆ, ಎಂಬ ಆತ್ಮವಿಶ್ವಾಸ ಬೆಳೆಯಿತು. ಸ್ವ ಉದ್ಯೋಗ ಮಾಡುವವರಿಗೆ ಸಾಲದ ಅಗತ್ಯವಿದ್ದುದರಿಂದ, ನಬಾರ್ಡ್ (National Bank for Agriculture and Rural Development) ಕಡೆಯಿಂದ ಬೆಂಬಲ ಕೇಳಿದೆವು. ನಬಾರ್ಡ್ ಒಪ್ಪಿಕೊಂಡಿತು. ಹೀಗೇ ಹಲವು ಮಹಿಳೆಯರು ಸ್ವಾವಲಂಬಿಗಳಾದರು. ಅಲ್ಲದೆ ವೈಯಕ್ತಿಕ ಕಾರಣಗಳಿಂದ ವಿಚ್ಛೇದನ ಪಡೆದು ಪತಿಯಿಂದ ದೂರವಿರುವ ಹಲವು ಮಹಿಳೆಯರಿಗೆ ಆಪ್ತ ಸಲಹೆ ನೀಡಿ, ಬುದ್ಧಿವಾದ ಹೇಳಿ ಸಂಬಂಧ ಜೋಡಿಸುವ ಕೆಲಸವನ್ನೂ RAPID ಮಾಡುತ್ತಿದೆ.
ವಿಧವಾ ಮರು ವಿವಾಹಕ್ಕೂ ಪ್ರೇರಣೆ
RAPID ವಿಧವೆಯರ ಮರುವಿವಾಹಕ್ಕೂ ಪ್ರೇರಣೆ ನೀಡುತ್ತಿದೆ. ಆದರೆ ವಿಧವೆಯರ ಬೇಡಿಕೆ ಎಂದರೆ ತಮ್ಮನ್ನು ಮದುವೆಯಾಗುವವರು ತಮ್ಮ ಮಕ್ಕಳನ್ನೂ ಒಪ್ಪಿಕೊಳ್ಳಬೇಕು, ತಾವು ಸ್ವಾವಲಂಬಿಯಾಗಿರುದಕ್ಕೆ ಯಾವುದೇ ಅಡ್ಡಿ ಮಾಡಬಾರದು ಎಂಬುದು. ಈ ಬೇಡಿಕೆಗೆ ಒಪ್ಪಿಕೊಳ್ಳಲು ಸಿದ್ಧವಿದ್ದರೆ ಅಂಥವರನ್ನು ಮದುವೆಯಾಗಲು ಇವರೂ ಸಿದ್ಧ. ಬದುಕು ಮುಗಿಯಿತು ಎಂದುಕೊಂದಿದ್ದ ಮಹಿಳೆಯರು ಇಷ್ಟೆಲ್ಲ ಮಾತನಾಡುವ ಮಟ್ಟಿಗೆ ಬದಲಾಗಿದ್ದಾರಲ್ಲ, ಅಲ್ಲಿಗೆ RAPID ಶ್ರಮ ಸಾರ್ಥಕವೆನ್ನಿಸುತ್ತದೆ.
ವನವಾಸಿಗಳ ಬದುಕಲ್ಲಿ ಬೆಳಕು ತಂದ ದಾಂಡೇಲಿಯ ಕೌಸಲ್ಯ ರವೀಂದ್ರ
ಕುಟುಂಬದ ಪ್ರೋತ್ಸಾಹ
RAPID ನೊಂದಿಗೆ ಕೆಲಸ ಮಾಡುತ್ತ ದಶಕಗಳೇ ಕಳೆದಿವೆ. ಈ ಕೆಲಸ ಮಾಡುವುದಕ್ಕೆ ನನಗೆಂದಿಗೂ ಬೇಸರವೆನ್ನಿಸಿಲ್ಲ. ನನ್ನ ಕುಟುಂಬದಿಂದ ಅಂದರೆ ತಂದೆ-ತಾಯಿ, ಒಡಹುಟ್ಟಿದವರಿರಬಹುದು, ಪತಿ-ಅತ್ತೆ-ಮಾವ, ಮಕ್ಕಳು ಯಾರಿಂದಲೂ ತಕರಾರಿಲ್ಲ. ಪ್ರತಿ ಹೆಜ್ಜೆಗೂ ಅವರೆಲ್ಲರ ಪ್ರೋತ್ಸಾಹವಿದೆ. ಇದೇ ಪ್ರೋತ್ಸಾಹ RAPID ಗೆ ಬರುವ ಮಹಿಳೆಯರಿಗೂ ಸಿಕ್ಕರೆ ಅವರ ಬದುಕು ಬದಲಾಗುವುದು ಖಂಡಿತ.
ಒಂದೇ ಒಂದು ಕಪ್ ಚಹಾವನ್ನಾದರೂ ನಿಮಗೋಸ್ಕರ ಕುಡಿಯಿರಿ!
ಪ್ರತಿ ಮಹಿಳೆಗೂ ಸಾಮಾಜಿಕ ಬದುಕಿನಲ್ಲಿ ಪಾಲ್ಗೊಳ್ಳುವ ಮನಸ್ಸಿರಬಹುದು. ಆದರೆ ಆಕೆ ತನ್ನ ಬಗ್ಗೆ ಯೋಚಿಸುವುದಕ್ಕೆ ಸಮಯವನ್ನೇ ಕೊಡದಿರುವುದರಿಂದ ಅದು ಸಾಧ್ಯವಾಗದಿರನಬಹುದು. ಸೇವಾಕಾರ್ಯವಿರಬಹುದು, ಇನ್ಯಾವುದೇ ಉದ್ಯೋಗವಿರಬಹುದು. ಅದರಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕೆಂದರೆ ಮೊದಲು ನಮಗೆ ನಾವೇ ಹಾಕಿಕೊಂಡ ಬೇಲಿಗಳನ್ನು ಕಿತ್ತು ಹೊರಬರಬೇಕು. ವಿಶಾಲ ಪ್ರಪಂಚವನ್ನು ನೋಡಬೇಕು. ನಮಗೋಸ್ಕರ ಸಮಯ ಮೀಸಲಿಡಬೇಕು. ಆದರೆ ಪ್ರತಿ ನಿಮಿಷವನ್ನೂ ತನ್ನ ಕುಟುಂಬಕ್ಕಾಗಿ ಕಳೆವ ಮಹಿಳೆ ಕಡೇ ಪಕ್ಷ ಒಂದೇ ಒಂದು ಕಪ್ ಚಹಾವನ್ನಾದರೂ ತನಗೋಸ್ಕರ ಕುಡಿಯುತ್ತಾಳಾ? ಆ ಸಮಯದಲ್ಲಿ ಎಲ್ಲವನ್ನೂ ಮರೆತು ತನ್ನ ಬಗ್ಗೆ ಯೋಚಿಸುತ್ತಾಳಾ? ನಮಗೋಸ್ಕರ ಒಂದಷ್ಟು ಸಮಯವನ್ನಾದರೂ ನಾವು ಮೀಸಲಿಡುವುದಿಲ್ಲವಾದರೆ ಅದೆಂಥ ಬದುಕು?