ನಿತ್ಯ ಬೀದಿ ನಾಯಿಗಳಿಗೆ ಅನ್ನ ಬೇಯಿಸುವ ತಾಯಿ...
ಅಮ್ಮಾ..... ನೀನು ನನ್ನನ್ನು ಹುಟ್ಟಿಸಲಿಲ್ಲ. ನನ್ನನ್ನು ಬೆಳಸಲಿಲ್ಲ. ಆದರೂ ನನಗಾಗಿ ನೀನು ಅನ್ನ ಬೇಯುಸುತ್ತೀಯ. ಪ್ರೀತಿಯಿಂದ ಅದನ್ನು ಉಣಬಡಿಸುತ್ತೀಯ. ನಾನು ಹುಷಾರು ತಪ್ಪಿದರೆ ನನಗೆ ಔಷಧಿ ಕೊಡುತ್ತಿಯಾ, ಗಾಯವಾದರೆ ಮೊಲಾಮು ಹಚ್ಚುತಿಯಾ. ಚಳಿಯಾದರೆ ಹೊದಿಕೆ ಹೊದಿಸುತ್ತಿಯಾ. ಮಳೆ ಬಂದರೆ ನನಗೊಂದು ಗೂಡು ಕಟ್ಟುತ್ತೀಯಾ. ಯಾರೂ ನನ್ನನ್ನು ಈ ಹಿಂದೆ ನಿನ್ನಷ್ಟು ಪ್ರೀತಿ ಮಾಡಿರಲಿಲ್ಲ. ನಿನ್ನಷ್ಟು ಅಕ್ಕರೆ ತೋರಿರಲಿಲ್ಲ. ನಿನ್ನಷ್ಟು ಕಾಳಜಿ ವಹಿಸಿರಲಿಲ್ಲ. ಯಾರೂ ಇಲ್ಲದ ನಮ್ಮಂಥ ಅನಾಥರ ಮೇಲೆ ನಿನಗ್ಯಾಕೆ ಇಷ್ಟು ಪ್ರೀತಿ ಅಮ್ಮಾ..... ನಿನ್ನ ಈ ನಿಶ್ವಾರ್ಥ ಪ್ರೀತಿಗೆ ಪ್ರತಿಯಾಗಿ ನಾನೇನು ಕೊಡಲಿ. ಮುಂದಿನ ಜನ್ಮ ಇದ್ದರೆ ನಿಮ್ಮ ಮಗನಾಗಿ ಹುಟ್ಟಿ ನಿಮ್ಮ ಋಣ ತೀರಿಸುತ್ತೇನೆ ಇಂತಿ ನಿಮ್ಮ ಪ್ರೀತಿಯ ಶ್ವಾನ (ಚಿನ್ನು ಅಥವಾ ಚಿನ್ನಾರಿ).
ಹೀಗೆ ಮನದಲ್ಲೊಂದು ಪತ್ರ ಬರೆದು ಕಳೆದ ಕೆಲ ವರ್ಷಗಳ ಹಿಂದೆ ಸಾವನ್ನಪ್ಪಿತು ಆ ಒಂದು ಶ್ವಾನ. ಇದು ಒಂದು ಶ್ವಾನ ಮಾತ್ರವಲ್ಲ ಈ ಬೀದಿಯಲ್ಲಿರುವ ಬಹುತೇಕ ಅನಾಥ ನಾಯಿಗಳಿಗೆ ಈ ಮಹಿಳೆಯೇ ತಾಯಿ.
ತಾಯಿ... ಅಮ್ಮಾ... ಆಯಿ... ಇದೆಲ್ಲವನ್ನ ಕರೆದು ಆಕೆ ನನಗೆ ತಾಯಿ ಎಂದು ನಾವು ಗುರುತಿಸುತ್ತೇವೆ. ಆದರೆ ಮಾತೇ ಬಾರದ ಈ ಮೂಕ ಪ್ರಾಣಿಗಳೂ ಕೂಡ ಅಮ್ಮಾ ಅಂತ ಕರೆಯುತ್ತವೆ. ಅದ್ಯಾಕೆ ಗೊತ್ತಾ ಈ ತಾಯಿ ತೋರುವ ಮಮಕಾರಕ್ಕೆ. ಮಕ್ಕಳಂತೆ ಕಾಣುವ ಆಕೆಯ ಸ್ವಭಾವಕ್ಕೆ. ಹೀಗಾಗಿ ಇಲ್ಲಿರುವ ಶ್ವಾನಗಳು ಈಕೆ ಬರುವುದನ್ನೇ ಕಾಯುತ್ತವೆ. ಈಕೆ ನೀಡುವ ಕೈತುತ್ತನ್ನು ತಿನ್ನಲು ಹಾತೊರಿಯುತ್ತಿರುತ್ತೆ. ಈಕೆ ಕೊಡುವ ಮಾತ್ರೆಗಳನ್ನು ಔಷಧಿಗಳನ್ನು ತೆಗೆದುಕೊಳ್ಳಲು ದಾರಿಯತ್ತ ಕಣ್ಣು ಹಾಯಿಸುತ್ತಿರುತ್ತೆ. ಅಷ್ಟಕ್ಕು ಯಾರು ಈ ತಾಯಿ. ಈ ನಾಯಿಗಳ ಪಾಲಿಗೆ ನೆಚ್ಚಿನ ತಾಯಿಯಾದ ಈ ಮಹಾತಾಯಿ ಯಾರು?
ಬೀದಿ ನಾಯಿಗಳಿಗೆ ನೆರವಾದ ತಾಯಿ
ಇದು ವಿಜಯನಗರದ ಗೋವಿಂದರಾಜನಗರದ ಐದನೇ ಅಡ್ಡರಸ್ತೆ. ಇಲ್ಲೊಂದು ಅಪಾರ್ಟ್ ಇದೆ. ಈ ಅಪಾರ್ಟ್ಮೆಂಟ್ ಹಾಗೂ ರಸ್ತೆಯ ನಡುವಿನ ಅಂತರದಲ್ಲಿ ಬದುಕುವ ಹತ್ತಾರು ಶ್ವಾನಗಳ ಪಾಲಿಗೆ ಈಕೆಯೇ ತಾಯಿ. ಈ ತಾಯಿಯ ಹೆಸರು ವರಮಹಾಲಕ್ಷ್ಮಿ(ಮುಖ ತೋರಿಸಲು ಇಚ್ಚಿಸದ). 52 ವರ್ಷ ವಯಸ್ಸು. ಇಬ್ಬರು ಗಂಡು ಮಕ್ಕಳು ಇದ್ದಾರೆ. ಜೊತೆಗೆ ಮೊಮ್ಮಕ್ಕಳೂ ಇದ್ದಾರೆ. 2003-4ರಿಂದ ಇವರು ಇಲ್ಲಿರುವ ಬೀದಿ ನಾಯಿಗಳಿಗೆ ಅನ್ನದಾತೆ. ಒಂದು ರೂಪಾಯಿ ಕೊಡಲು ಹಿಂದೆ ಮುಂದೆ ನೋಡುವ ಈಗಿನ ಕಾಲದಲ್ಲಿ ಇವರು ಪ್ರತಿನಿತ್ಯ ಇಲ್ಲಿರುವ ಹತ್ತಾರು ಬೀದಿ ನಾಯಿಗಳಿಗೆ ಅನ್ನ ಬೇಯಿಸುತ್ತಾರೆ. ಹಾಲು ಅಥವಾ ಮೊಸರು ಜೊತೆಗೆ ಅನ್ನ, ಒಮ್ಮೊಮ್ಮೆ ಚಪಾತಿ ಕೂಡ ನೀಡುತ್ತಾರೆ.
ಮೊದಲು ಇದೇ ಸ್ಥಳದಲ್ಲಿ ವಾಸವಾಗಿದ್ದ ವರಮಹಾಲಕ್ಷ್ಮಿ ಅವರು ಸದ್ಯ ನಾಗರಬಾಯಿಯಲ್ಲಿ ನೆಲೆಸಿದ್ದಾರೆ. ಎಂಥ ಮಳೆ, ಚಳಿ ಏನೇ ಇದ್ದರೂ ಇವರು ಮಾತ್ರ ಗೋವಿಂದರಾಜನಗರ ಐದನೇ ಅಡ್ಡರಸ್ತೆ ಅಪಾರ್ಟ್ಮೆಂಟ್ ಬಳಿ ಇರುವ ನಾಯಿಗಳಿಗೆ ಊಟ ಹಾಕುವುದನ್ನು ತಪ್ಪಿಸುವುದಿಲ್ಲ. ಕೆಲವೊಮ್ಮೆ ಆಟೋ, ಬಸ್ ಅಥವಾ ಕಾಲ್ನಡಿಗೆಯಲ್ಲಾದರೂ ಬಂದು ನಾಯಿಗಳಿಗೆ ಊಟ ಹಾಕುತ್ತಾರೆ.
ಕೆಲ ಬೀದಿನಾಯಿಗಳಿಗೆ ಮನೆಯಲ್ಲೇ ಸ್ಥಳ
ಸಾಮಾನ್ಯವಾಗಿ ಬಹುತೇಕ ಜನ ಅಂದದ ಚಂದದ ನಾಯಿಗಳನ್ನು ಖರೀದಿ ಮಾಡಿ ಅವುಗಳನ್ನು ಸಾಕುತ್ತಾರೆ. ಆದರೆ ವರಮಹಾಲಕ್ಷ್ಮಿ ಅವರ ಮನೆಯಲ್ಲಿ ಇರುವುದು ಬೀದಿಯಲ್ಲಿ ಸಿಕ್ಕ ನಾಯಿಗಳು. ಅವುಗಳನ್ನೇ ಇವರು ಪ್ರೀತಿಯಿಂದ ಸಾಕಿದ್ದಾರೆ. ಮನೆಯ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಬೀದಿ ನಾಯಿಗಳಿಗೆ ಚಿಂಟು ಮತ್ತು ಚರಿ ಎಂದು ಹೆಸರಿಟ್ಟು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಇವರ ಮನೆಯಲ್ಲಿದ್ದ ಚಿನ್ನು ಅಥವಾ ಚಿನ್ನಾರಿ ಎಂಬ ಬೀದಿ ನಾಯಿ ಕೂಡ ಇತ್ತೀಚೆಗೆ ಸಾವನ್ನಪ್ಪಿತ್ತು. ಅದನ್ನೂ ಕೂಡ ಇವರು ಅಕ್ಕರೆಯಿಂದ ಸಾಕಿದ್ದರು.
ಇವರಿಗೆ ನಾಯಿ ಮೇಲೆ ಅದೆಷ್ಟು ಪ್ರೀತಿ ಇದೆ ಅನ್ನೋದಕ್ಕೆ ಇದೊಂದು ಘಟನೆ ಸಾಕ್ಷಿ. ಕೊರೊನಾ ಸಂದರ್ಭದಲ್ಲೂ ಇವರ ನಾಯಿ ಮೇಲಿನ ಪ್ರೀತಿ ಕಡಿಮೆ ಆಗಿರಲಿಲ್ಲ. ಜಗತ್ತೇ ಮನೆ ಬಾಗಿಲು ಹಾಕಿಕೊಂಡರೂ ಬೀದಿ ನಾಯಿಗಳಿಗಾಗಿ ಇವರ ಮನೆ ಬಾಗಿಲು ಸದಾ ತೆರೆದಿರುತ್ತಿತ್ತು. ಕೊರೊನಾ ಬರುತ್ತದೆ ಎನ್ನುವ ಭಯದಲ್ಲೇ ಜೀವನ ನಡೆಸುತ್ತಿದ್ದ ಜನ ಮನೆಯಿಂದ ಹೊರಬರುವುದಿರಲಿ. ಕಿಟಕಿಗಳನ್ನ ತೆರೆಯುವುದಕ್ಕೂ ಹಿಂದು ಮುಂದು ನೋಡುವ ಸಂದರ್ಭದಲ್ಲಿ ಈ ಮಹಿಳೆ ನಾಯಿಗಳನ್ನು ನೋಡಿಕೊಂಡರು. ತಮಗೆ ಕೊರೊನಾ ಬರಬಹುದು ಎನ್ನುವ ಕಿಂತಿತ್ತು ಭಯವಿಲ್ಲದೆ ನಾಯಿಗಳಿಗೆ ಉಣ ಬಡಿಸಿದರು. ಕೊರೊನಾ ಕಾಲದಲ್ಲೂ ಈ ತಾಯಿ ನಾಯಿಗಳನ್ನ ಅಷ್ಟೇ ಚೆನ್ನಾಗಿ ನೋಡಿಕೊಂಡರು. ತಮಗೆ ಅನಾರೋಗ್ಯದ ವೇಳೆ ತಮ್ಮ ಮಕ್ಕಳಿಂದ ಅನ್ನ ಬಡಿಸಿದ ಅನ್ನದಾತೆ ಇವರು.
ಪ್ರಕೃತಿಯಲ್ಲಿ ಪ್ರಾಣಿಗಳೂ ಇವೆ
ಅವರ ಮಾತು: ಪ್ರಕೃತಿಯನ್ನು ಪ್ರೀತಿಸಿ. ಗಿಡ ಮರ ಮಾತ್ರ ಪ್ರಕೃತಿ ಅಲ್ಲ. ಪ್ರಾಣಿಗಳು ಕೂಡ ಪ್ರಕೃತಿಯ ಒಂದು ಭಾಗ. ಮನಷ್ಯರಿಗೆ ಬಾಯಿ ಇದೆ. ಆದರೆ ಪ್ರಾಣಿಗಳಿಗೆ ಬಾಯಿ ಇಲ್ಲ. ಅವುಗಳಿಗೆ ಮಾತನಾಡಲು ತಮ್ಮ ಹಸಿವಿನ ಬಗ್ಗೆ ಹೇಳಲು ಆಗಲ್ಲ. ನನ್ನಂತೆ ಬೀದಿ ನಾಯಿಗಳನ್ನು ಸಾಕಿ ಅಂತ ನಾನು ಯಾರಿಗೂ ಹೇಳುವುದಿಲ್ಲ. ಆದರೆ ಮನೆಯಲ್ಲಿ ಮಿಕ್ಕ ಊಟವನ್ನು ಹಾಕಿ ಸಾಕು. ನಾನು ಓಡಾಡೋ ದಾರಿಯಲ್ಲಿ ಮರಿ ಕಂಡರೂ ಅದಕ್ಕೆ ಕೇರ್ ತೆಗೆದುಕೊಳ್ಳುತ್ತೇನೆ. ನಾನು ಯಾವುದೇ ನಿರೀಕ್ಷೆಯನ್ನು ಇಟ್ಟುಕೊಂಡು ಇದನ್ನೆಲ್ಲ ಮಾಡುವುದಿಲ್ಲ. ಯಾರೂ ಕೂಡ ಹಸಿವಿನಿಂದ ಇರುವುದು ನನಗೆ ಇಷ್ಟವಿಲ್ಲ. ನನಗೆ ಇದರಿಂದ ತೃಪ್ತಿ ಇದೆ ಅಂತಾರೆ ವರಮಹಾಲಕ್ಷ್ಮಿ ಅವರು.
ಸುದ್ದಿ ಮಾಡಲು ನಿರಾಕರಿಸಿದ್ದ ತಾಯಿ
ನನ್ನ ಮಾತು: ವೃತ್ತಿಯಲ್ಲಿ ವರದಿಗಾರಳಾಗಿರುವ ನಾನು ವರಮಹಾಲಕ್ಷ್ಮಿ ಅವರನ್ನು ಸುಮಾರು ವರ್ಷಗಳಿಂದ ನೋಡಿದ್ದೇನೆ. ಸಂಜೆ ಏಳು ಅಥವಾ ಎಂಟು ಗಂಟೆ ಸುಮಾರಿಗೆ ಇವರನ್ನು ನಾನು ನೋಡುತ್ತಿದ್ದೆ. ಕೆಲವೊಮ್ಮೆ ಇವರು ನೋಡಲು ಸಿಗುತ್ತಿದ್ದರು. ಕೆಲವೊಮ್ಮೆ ನಾನು ತಡವಾಗಿ ಹೋದರೆ ನಾಯಿಗಳಿಗೆ ಬಡಿಸಿದ ಊಟದ ಎಲೆ ಮಾತ್ರ ನೋಡಲು ಸಿಗುತ್ತಿತ್ತು. ನಿತ್ಯ ಇವರು ನಾಯಿಗಳಿಗೆ ಊಟ ಬಡಿಸುವುದನ್ನು ನೋಡುತ್ತಿದ್ದ ನನಗೆ ಅವರನ್ನು ಮಾತನಾಡಿಸುವ ಮನಸ್ಸಾಯಿತು. ಒಮ್ಮೆ ಅವರನ್ನು ನಾನು ಮಾತನಾಡಿಸಿದೆ. ಅವರು ನಾನು ವರದಿಗಾರಳು ಎಂದು ತಳಿದು ಮಾತನಾಡಲು ಹಿಂಜರಿದರು. 'ನನಗೆ ಯಾವುದೇ ಪ್ರಚಾರ ಇಷ್ಟವಿಲ್ಲ' ಎಂದು ಹೇಳಿ ಹೊರಟು ಹೋದರು. ಮೂರು ವರ್ಷದ ಹಿಂದೆ ಅವರನ್ನು ಮತ್ತೆ ನಾನು ಮಾತನಾಡಿಸಿದೆ. ಆಗಲೂ ಅವರು ನನ್ನೊಂದಿಗೆ ಮಾತನಾಡಲು ಹಿಂಜರಿದರು. ಹೀಗೆ ಮೂರು ವರ್ಷ ಕಳೆಯಿತು. ನಿತ್ಯ ರಾತ್ರಿ ಅವರು ಬೀದಿ ನಾಯಿಗಳಿಗೆ ಊಟ ಹಾಕುವುದನ್ನ ಮಾತ್ರ ನಿಲ್ಲಿಸಿರಲಿಲ್ಲ. ಕಳೆದ ಕೆಲ ದಿನಗಳ ಹಿಂದೆ ನಾನು ಅವರನ್ನು ಮಾತನಾಡಿಸಿದೆ. ಅವರ ಮನವೊಲಿಸಿದೆ. ಅವರ ಬಗ್ಗೆ ಸ್ಟೋರಿ ಮಾಡಲು ಅನುಮತಿ ಪಡೆದುಕೊಂಡೆ. ನಮಗೆ ಕಾಣದೇ ಇಂಥಹ ಹಲವಾರು ಜನ ನಿಸ್ವಾರ್ಥ ಸೇವೆಯನ್ನು ಮಾಡುತ್ತಾರೆ. ವರಮಹಾಲಕ್ಷ್ಮಿ ಅವರಂತವರು ನಿಜಕ್ಕೂ ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ. ಎಲ್ಲರನ್ನು ಪ್ರೀತಿಸಬೇಕು. ನಮ್ಮ ಕೈಲಾದ ಸಹಾಯ ಮಾಡಬೇಕು ಎನ್ನುವ ಪಾಠವನ್ನು ನಾವು ಇವರಂತ ನಿಷ್ಕಲ್ಮಶ ಹೃದಯದವರಿಂದ ಮಾತ್ರ ಕಲಿಯಲು ಸಾಧ್ಯ. ಇದಕ್ಕಾಗಿ ಅವರಿಗೊಂದು ಹಾಟ್ಸಾಪ್....