ಇಂದಿಗೂ ನಿಲ್ಲದ ಮರ್ಯಾದಾ ಹತ್ಯೆಗಳು: ಇದರಿಂದ ಪೋಷಕರು ಸಾಧಿಸಿದ್ದಾದರೂ ಏನು?
ಇವತ್ತಿಗೂ ಮರ್ಯಾದಾ ಹತ್ಯೆಗಳು ನಿಂತಿಲ್ಲ. ಇಂತಹ ಪ್ರಕರಣಗಳಿಗೆ ನಮ್ಮ ರಾಜ್ಯವೂ ಹಲವು ಬಾರಿ ಸಾಕ್ಷಿಯಾಗಿದೆ. ನಾವೆಲ್ಲರೂ ಜಾತ್ಯಾತೀತತೆ ಬಗ್ಗೆ ಮಾರುದ್ಧ ಮಾತನಾಡುತ್ತೇವೆ. ಆದರೆ ಒಳಗೊಳಗೆ ಜಾತೀಯತೆಯನ್ನು ಆರಾಧಿಸುತ್ತೇವೆ. ಈ ಇಬ್ಬಂದಿ ತನ ಬಹಳಷ್ಟು ಸಲ ಜೀವನಕ್ಕೆ ಉರುಳಾಗಿ ಪರಿಣಮಿಸುತ್ತಿದ್ದು, ಅದುವೇ ಕೆಲವೊಮ್ಮೆ ಮರ್ಯಾದಾ ಹತ್ಯೆಯಂತಹ ಅಮಾನವೀಯ ಕೃತ್ಯಕ್ಕೆ ದಾರಿ ಮಾಡಿಕೊಡುತ್ತಿದೆ.
ನಾವೀಗ ಆಧುನಿಕ ಬದುಕಿನ ಘಟ್ಟದಲ್ಲಿದ್ದೇವೆ ಇನ್ನೆಷ್ಟು ದಿನ ಇದೇ ರೀತಿ ಜಾತಿ ಧರ್ಮವೆಂದು ಜೋತು ಬೀಳುತ್ತಾ ಬದುಕು ಸವೆಸುತ್ತೇವೆಯೋ ಗೊತ್ತಿಲ್ಲ. ಒಂದಷ್ಟು ಮಂದಿ ಜಾತಿ ಸಂಕೋಲೆಯಿಂದ ಹೊರಬಂದು ತಮ್ಮದೇ ಆದ ಬದುಕನ್ನು ಕಟ್ಟಿಕೊಂಡು ನೆಮ್ಮದಿಯಾಗಿದ್ದಾರೆ. ಆದರೆ ಇನ್ನೊಂದಷ್ಟು ಮಂದಿ ಜಾತಿ ಸಂಕೋಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ಅವರು ಅದರ ಪರಿಧಿ ದಾಟಿ ಬಾರದೆ ದಾಟಿ ಹೋದವರನ್ನು ಕೊಲ್ಲಲು ಹೇಸುತ್ತಿಲ್ಲ. ಹೀಗಾಗಿಯೇ ಅಲ್ಲಲ್ಲಿ ಮರ್ಯಾದಾ ಹತ್ಯೆಗಳು ನಡೆಯುವಂತಾಗಿದೆ.

ತಮ್ಮಿಷ್ಟವನ್ನು ಮೀರಿ ಮಗಳು ತಮಗಿಂತ ಕೀಳು ಜಾತಿಯ ಅಥವಾ ಅನ್ಯ ಧರ್ಮದ ಯುವಕನ ಪ್ರೀತಿಸಿದಳು ಇಲ್ಲವೇ ಮದುವೆಯಾದಳು ಎಂಬ ಒಂದೇ ಒಂದು ಕಾರಣಕ್ಕೆ ಅವಳನ್ನು ಕೊಂದು ತಾವು ಜೈಲು ಸೇರಲು ತಯಾರಾಗುವುದೆಷ್ಟು ಸರಿ? ಇದರಿಂದ ಸಾಧಿಸಿದ್ದಾದರೂ ಏನು? ಯೋಚಿಸಿ ನೋಡಿದರೆ ಅದರಿಂದ ಯಾವುದೇ ಪ್ರಯೋಜನವಂತು ಇಲ್ಲವೇ ಇಲ್ಲ. ತಮ್ಮ ಸಮುದಾಯದ ಮುಂದೆ ಮಾನ ಹೋಯಿತೆಂದು ಭ್ರಮಿಸಿ ಈ ಕೃತ್ಯಗಳನ್ನು ಎಸಗುವ ಮುನ್ನ ಒಂದು ಕ್ಷಣ ಯೋಚಿಸಿದರೆ ಇಂತಹ ದುರಂತಗಳು ನಡೆಯಲಾರವು.
ಇಚ್ಛೆಗೆ ವಿರುದ್ಧದ ನಡೆಗೆ ಆಕ್ರೋಶ ಸಹಜ
ಇವತ್ತಿನ ಪರಿಸ್ಥಿತಿಯಲ್ಲಿ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿ ಅದನ್ನು ಬೆಳೆಸಿ ಓದಿಸಿ ಅದಕ್ಕೊಂದು ಬದುಕು ನೀಡುವ ಹೊತ್ತಿಗೆ ಹೆತ್ತವರು ಸುಸ್ತಾಗಿರುತ್ತಾರೆ. ಅಷ್ಟೇ ಅಲ್ಲದೆ ತಮ್ಮ ಬದುಕಿನ ಅವಿಭಾಜ್ಯ ಅಂಗದಂತೆ ಆಕೆಗಾಗಿ ಎಲ್ಲವನ್ನು ತ್ಯಾಗ ಮಾಡಿ ಸಾಕಿ ಬೆಳೆಸುವ ಹೆತ್ತವರು ಅವಳ ಮೇಲೆ ಹತ್ತು ಹಲವು ನಿರೀಕ್ಷೆಗಳನ್ನಿಟ್ಟುಕೊಂಡಿರುತ್ತಾರೆ. ಅವಳಿಗಾಗಿ ಎಲ್ಲವನ್ನೂ ಧಾರೆ ಎರೆದಿರುವಾಗ ಸೂಕ್ತ ವರನನ್ನು ಹುಡುಕಿ ಮದುವೆ ಮಾಡುವುದು ಹೆತ್ತವರಿಗೆ ಕಷ್ಟವೇನಲ್ಲ. ಆದರೆ ಆಕೆ ಹೆತ್ತವರನ್ನು ಬದಿಗೆ ಸರಿಸಿ ತಮ್ಮಿಷ್ಟದಂತೆ ಮದುವೆಯಾಗುತ್ತೇನೆ ಎಂದಾಗ ಹೆತ್ತವರಿಗೆ ಶಾಕ್ ಆಗುವುದು ಸಾಮಾನ್ಯ.

ಈ ಸಂದರ್ಭ ಕೆಲವರು ಇದೆಲ್ಲವನ್ನು ತುಂಬಾ ಸೂಕ್ಷ್ಮವಾಗಿ ನಿಭಾಯಿಸುತ್ತಾರೆ. ಕೆಲವರು ಮಗಳ ಇಷ್ಟಕ್ಕೆ ಒಪ್ಪಿಗೆ ನೀಡಿದರೆ ಇನ್ನು ಕೆಲವರು ಹತ್ಯೆ ಮಾಡಲು ಹೇಸುವುದಿಲ್ಲ. ಇಂತಹ ಸಂದರ್ಭದಲ್ಲಿ ಮಾನ ಮರ್ಯಾದೆಯನ್ನು ಮುಂದಿಟ್ಟುಕೊಂಡು ಕೊಲೆ ಮಾಡುವ ಮಟ್ಟಕ್ಕೆ ಇಳಿಯುವುದೆಷ್ಟು ಸರಿ? ಇದು ಎಲ್ಲರೂ ಕೇಳಿಕೊಳ್ಳಬೇಕಾದ ಪ್ರಶ್ನೆಯಾಗಿದೆ. ಇಲ್ಲಿ ತನ್ನ ಮಗಳು ಯಾರನ್ನು ಪ್ರೀತಿಸಿದ್ದಾಳೆ ಎನ್ನುವುದೇ ಮುಖ್ಯ ವಿಚಾರವಾಗುತ್ತದೆ.
ಮರ್ಯಾದಾ ಹತ್ಯೆಗೆ ಜಾತಿಪದ್ಧತಿ ಕಾರಣ
ಮೇಲ್ವರ್ಗದ ಯುವತಿ ಕೆಳ ಜಾತಿಯ ಯುವಕನನ್ನು ಪ್ರೀತಿಸಿದರೆ ಮಗಳಿಗೆ ಅದನ್ನು ತಿರಸ್ಕರಿಸುವಂತೆ ಒತ್ತಡ ಹೇರುತ್ತಾರೆ. ಆಕೆ ಒಪ್ಪದೆ ತಾನು ಆತನನ್ನೇ ಮದುವೆಯಾಗುವುದಾಗಿ ಹಠ ಹಿಡಿದರೆ ಆಗ ಸ್ವಂತ ಮಗಳು ಎಂಬುದನ್ನು ನೋಡದೆ ವಿಷ ಹಾಕಿಯೋ? ನೇಣು ಬಿಗಿದೋ ಒಟ್ಟಾರೆ ಹತ್ಯೆ ಮಾಡಿ ನಮಗಂಟಿದ ಕಳಂಕ ಹೋಯಿತೆಂದು ತಿಳಿದುಕೊಳ್ಳುತ್ತಾರೆ. ಈ ಘಟನೆಗಳು ನಡೆದಾಗ ಮಾತ್ರ ಸುದ್ದಿಯಾಗುತ್ತದೆ ಜನ ಈ ಬಗ್ಗೆ ಮಾತನಾಡುತ್ತಾರೆ. ಆದರೆ ಅಂತಹ ಮನಸ್ಥಿತಿಯವರನ್ನು ಬದಲಾಯಿಸುವ ಕೆಲಸ ಮಾಡುವುದೇ ಇಲ್ಲ.

ಇಂತಹ ಕೃತ್ಯಗಳಿಗೆ ಕಠಿಣ ಶಿಕ್ಷೆಯಾಗದ ಹೊರತು ಕೆಲವೊಮ್ಮೆ ಅದರ ಬಗ್ಗೆ ಭಯ ಹುಟ್ಟುವುದೇ ಇಲ್ಲ. ಈ ಕೃತ್ಯಗಳಲ್ಲಿ ಸಾಕ್ಷಿಯ ಕೊರತೆಗಳು ಆರೋಪಿಗಳು ಕಠಿಣ ಶಿಕ್ಷೆಯಿಂದ ತಪ್ಪಿಸಿಕೊಳ್ಳುವಂತೆ ಮಾಡುತ್ತವೆ. ಇಂತಹ ಮಾರ್ಯಾದಾ ಹತ್ಯೆಗಳು ನಡೆಯಲು ನಮ್ಮಲ್ಲಿರುವ ಜಾತಿಪದ್ಧತಿ ಕಾರಣ ಎಂಬುದನ್ನು ಯಾರೂ ತಳ್ಳಿಹಾಕಲಾಗದು.
ಯುಎನ್ಪಿಎಫ್ ಹೇಳುವುದೇನು ಗೊತ್ತಾ?
ಇನ್ನು ಮರ್ಯಾದಾ ಹತ್ಯೆಯನ್ನು ಕೂಡ ಸಮರ್ಥಿಸಿಕೊಳ್ಳುವ ಮನಸ್ಥಿತಿ ಆ ಕುಟುಂಬದಾಗಿರುತ್ತದೆ. ಇಲ್ಲಿ ನಮ್ಮ ಹೆಣ್ಣು ಮಕ್ಕಳು ನಮ್ಮ ಅಂಕೆಯಲ್ಲಿರಬೇಕು. ತಾವು ಹೇಳುವವರನ್ನೇ ಮದುವೆಯಾಗಬೇಕು. ಆಕೆ ನಮಗಿಂತ ಕೀಳು ಯುವಕನನ್ನು ಪ್ರೀತಿಸಿದ್ದಾಳೆ ಇದು ನಮ್ಮ ಜಾತಿಗೆ, ಸಮುದಾಯಕ್ಕೆ ತಲೆತಗ್ಗಿಸುವ ವಿಚಾರ ಎಂದು ಸಮರ್ಥನೆ ಮಾಡಿಕೊಳ್ಳುತ್ತಾರೆ. ಪುರುಷ ಪ್ರಧಾನ ಸಮಾಜದಲ್ಲಿ ಹಿಂದಿನಿಂದಲೂ ಮಹಿಳೆಯರು ತಾವು ಅಂದುಕೊಂಡಂತೆ ನಡೆದುಕೊಳ್ಳಬೇಕೆಂಬ ಮನೋಸ್ಥಿತಿ ದೂರವಾಗಿಲ್ಲ.
ಯುನೈಟೆಡ್ ನೇಷನ್ಸ್ ಪಾಪ್ಯುಲೇಶನ್ ಫಂಡ್ ಪ್ರಕಾರ ಗೌರವದ ಕಾರಣಗಳಿಗಾಗಿ ವಾರ್ಷಿಕವಾಗಿ ಜಗತ್ತಿನಲ್ಲಿ ಐದು ಸಾವಿರಕ್ಕೂ ಮಹಿಳೆಯರು ಕೊಲ್ಲಲ್ಪಡುತ್ತಾರಂತೆ. ಈ ಕೊಲೆಗಳು ಒಂದು ನಿರ್ದಿಷ್ಟ ಧರ್ಮ ಅಥವಾ ನಂಬಿಕೆಗೆ ಸೀಮಿತವಾಗಿಲ್ಲ. ಆದಾಗ್ಯೂ, ಮಧ್ಯಪ್ರಾಚ್ಯ ಮತ್ತು ದಕ್ಷಿಣ ಏಷ್ಯಾದ ವಿವಿಧ ಭಾಗಗಳಲ್ಲಿ ಅವು ನಡೆಯುತ್ತಲೇ ಬಂದಿದೆ. ಹೆಚ್ಚಿನ ಪ್ರಕರಣಗಳು ಭಾರತ ಮತ್ತು ಪಾಕಿಸ್ತಾನದಲ್ಲಿ ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ.
21ನೇ ಶತಮಾನದಲ್ಲಿ ಜಾಗೃತಿ ಆರಂಭ
ಮೊದಲೆಲ್ಲ ಇಂತಹ ಘಟನೆಗಳು ನಡೆದಾಗ ಅವು ಬೆಳಕಿಗೆ ಬಾರದೆ ಮುಚ್ಚಿ ಹೋಗುತ್ತಿದ್ದವು. ಆದರೆ ಮರ್ಯಾದಾ ಹತ್ಯೆಯ ಬಗ್ಗೆ 21ನೇ ಶತಮಾನದಲ್ಲಿ ಅಂತರರಾಷ್ಟ್ರೀಯ ಜಾಗೃತಿಯು ಹೆಚ್ಚಾಯಿತು, ಆದಾಗ್ಯೂ, ಕೆಲವು ದೇಶಗಳು ಅದನ್ನು ಪರಿಣಾಮಕಾರಿಯಾಗಿ ಅಪರಾಧೀಕರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಇಷ್ಟವಿರಲಿಲ್ಲ. ಆದರೆ ಈಗ ಈ ಕುರಿತಂತೆ ಸಮಾಜ ಜಾಗೃತವಾಗುತ್ತಿದೆ. ಜತೆಗೆ ಅಂತಹ ಘಟನೆಗಳು ನಡೆದಾಗ ಮುಚ್ಚಿ ಹೋಗದೆ ಬೆಳಕಿಗೆ ಬರುತ್ತಿವೆ.
ಭಾರತದಲ್ಲಿ ಉದಾಹರಣೆಗೆ, 1980 ರ ದಶಕದಲ್ಲಿ ಸರ್ಕಾರವು ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕಟ್ಟುನಿಟ್ಟಾದ ದಂಡವನ್ನು ಜಾರಿಗೊಳಿಸಿತು. ಆದಾಗ್ಯೂ, ಅಂತರ್ಜಾತಿ ಮತ್ತು ಅಂತರ್ ಧರ್ಮೀಯ ವಿವಾಹಗಳ ಆಧಾರದ ಮೇಲೆ ಮರ್ಯಾದಾ ಹತ್ಯೆಗಳು ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಲೇ ಇದ್ದವು, ಹಳ್ಳಿಯ ನಿವಾಸಿಗಳ ನೇರ ಅಥವಾ ಪರೋಕ್ಷ ಬೆಂಬಲದಿಂದಾಗಿ ಅವು ಹೆಚ್ಚಾಗಿ ಪೊಲೀಸರಿಗೆ ವರದಿಯಾಗಲಿಲ್ಲ. ಇಂತಹ ಕೊಲೆಗಳು ವರದಿಯಾದಾಗ ಅಪಘಾತಗಳೆಂದು ಪರಿಗಣಿಸಲ್ಪಟ್ಟಿವೆ. ಮಹಿಳೆಯನ್ನು ಹೊಡೆದು, ಸುಟ್ಟು, ಕತ್ತು ಹಿಸುಕಿ, ಗುಂಡು ಹಾರಿಸಿ ಅಥವಾ ಇರಿದು ಸಾಯಿಸಿದರೆ ಆತ್ಮಹತ್ಯೆ ಎಂದು ತಿರುಚುವ ಘಟನೆಗಳು ನಡೆದಿವೆ.
ಮಾರ್ಯಾದಾ ಹತ್ಯೆಗೆ ಧಿಕ್ಕಾರವಿರಲಿ
ಮರ್ಯಾದಾ ಹತ್ಯೆಗಳು ಭಾರತದಲ್ಲಿ ಮಾತ್ರ ನಡೆಯದೆ ವಿದೇಶಗಳಲ್ಲಿಯೂ ನಡೆಯುತ್ತಿವೆ. ಆದರೆ ನಮ್ಮ ದೇಶದಲ್ಲಿ ಇಂತಹ ಘಟನೆಗಳು ನಡೆಯದಂತೆ ನಾವು ನೋಡಿಕೊಳ್ಳಬೇಕಿದೆ. ಆಧುನಿಕ ಸಮಾಜದಲ್ಲಿ ಇಂತಹ ಕೃತ್ಯ ಎಸಗುವವರಿಗೆ ಕಠಿಣ ಶಿಕ್ಷೆ ನೀಡಬೇಕಿದೆ. ಹೆಣ್ಣು ಸಬಲೆಯಾಗಿದ್ದಾಳೆ. ಆಕೆಗೆ ತನ್ನ ಬದುಕನ್ನು ತನ್ನಿಷ್ಟದಂತೆ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿದೆ. ಅದು ಅವಳ ಬದುಕು ಅದಕ್ಕೆ ಗೌರವ ನೀಡಬೇಕಷ್ಟೆ. ಮಾರ್ಯಾದಾ ಹತ್ಯೆಗೆ ಧಿಕ್ಕಾರ ಹೇಳುವುದು ಎಲ್ಲರ ಕರ್ತವ್ಯವಾಗಿದೆ.
-
ಅವಳ ಮಾತಿನ ಭಯದಲ್ಲಿ ಬದುಕುವ ಗಂಡಸರು: ಹೇಳದಿರುವ ನೋವಿನ ಕಥೆಗಳು -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ












Click it and Unblock the Notifications