ಆಪರೇಷನ್ ಕಮಲ ಮಾಡಲು ಬಿಎಸ್ವೈಗೆ ಹೈಕಮಾಂಡ್ ಗ್ರೀನ್ ಸಿಗ್ನಲ್!
Recommended Video

ಪಂಚರಾಜ್ಯಗಳ ಚುನಾವಣೆಯ ನಂತರ ಕರ್ನಾಟಕದ ರಾಜಕಾರಣದಲ್ಲಿ ಕೈ ಹಾಕಲು ಹಿಂದೇಟು ಹೊಡೆಯುತ್ತಿರುವ ಬಿಜೆಪಿ ಹೈಕಮಾಂಡ್ ವರಿಷ್ಠರು, ಆಪರೇಷನ್ ಕಮಲ ಕಾರ್ಯಾಚರಣೆ ಮಾಡಿ ಅಧಿಕಾರಕ್ಕೆ ಬರುವ ಯಡಿಯೂರಪ್ಪ ಕನಸಿಗೆ ಈಗ ಅನಿವಾರ್ಯವಾಗಿ ಇಂಬು ನೀಡಿದ್ದಾರೆ.
ಮುಂಚೆಲ್ಲ, ನೀವು ಆಪರೇಷನ್ ಕಮಲ ಕಾರ್ಯಾಚರಣೆ ಮಾಡಿದರೆ ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯ ಇಮೇಜ್ ಗೆ ಧಕ್ಕೆಯಾಗುತ್ತದೆ. ಲೋಕಸಭಾ ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಯಡಿಯೂರಪ್ಪ ಅವರಿಗೆ ಕತೆ ಹೇಳುತ್ತಿದ್ದ ಮೋದಿ ಮತ್ತು ಅಮಿತ್ ಶಾ ಅವರಿಗೆ ಈಗ ಪರಿಸ್ಥಿತಿಯನ್ನು ಕಂಟ್ರೋಲಿಗೆ ತೆಗೆದುಕೊಳ್ಳುವುದು ಕಷ್ಟವಾಗುತ್ತಿದೆ.
ಇದಕ್ಕೆ ಹಲವು ಕಾರಣಗಳಿವೆ. ಮೊದಲನೆಯದಾಗಿ ದೇಶದ ಹೃದಯ ಭಾಗದಲ್ಲೇ ಕಮಲ ಮುದುಡಿರುವಾಗ ಕರ್ನಾಟಕದಲ್ಲಿ ಯಡಿಯೂರಪ್ಪ ಅವರನ್ನು ಸೈಡ್ ಲೈನಿಗೆ ಸರಿಸಿ ರಾಜಕೀಯ ಮಾಡಲು ಹೋದರೆ ಲೋಕಸಭಾ ಚುನಾವಣೆಯಲ್ಲಿ ಬಂಪರ್ ಹೊಡೆತ ತಿನ್ನಬೇಕಾಗುತ್ತದೆ ಎಂಬುದು ಅದರ ಆತಂಕ.
ಅರ್ಥಾತ್, ಕರ್ನಾಟಕದ ರಾಜಕಾರಣದಲ್ಲಿ ಯಡಿಯೂರಪ್ಪ ನಿಶ್ಚಿತವಾಗಿ ಪಕ್ಷದ ಪವರ್ ಫುಲ್ ಲೀಡರು. ಹಾಗಿಲ್ಲದೆ ಹೋಗಿದ್ದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೂರಾ ನಾಲ್ಕು ಸೀಟುಗಳನ್ನು ಗೆಲ್ಲಲು ಬಿಜೆಪಿಗೆ ಸಾಧ್ಯವೇ ಇರಲಿಲ್ಲ.
ಇಷ್ಟು ಪ್ರಮಾಣದಲ್ಲಿ ಸೀಟುಗಳನ್ನು ಗೆದ್ದ ನಂತರವೂ ಇದು ಮೋದಿ ಅಲೆಯ ಪರಿಣಾಮ ಎಂದು ಯಡಿಯೂರಪ್ಪ ಹೇಳಿದರಾದರೂ, ವಾಸ್ತವದಲ್ಲಿ ಇದು ಅವರದೇ ಶಕ್ತಿಯ ಪರಿಣಾಮವಾಗಿತ್ತು. ಮೋದಿ ಅಲೆಯನ್ನೇ ನೆಚ್ಚಿಕೊಂಡಿದ್ದರೆ ಬಿಜೆಪಿ ಈ ಲೆವೆಲ್ಲಿನಲ್ಲಿ ಸೀಟುಗಳನ್ನು ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ.
ಒಂದು ವೇಳೆ ಮೋದಿ ಅಲೆ ವರ್ಕ್ ಔಟ್ ಆಗುವ ಲಕ್ಷಣ ಕಂಡಿದ್ದರೆ ಯಾರೂ ದೊಡ್ಡ ಮಟ್ಟದ ಬಂಡವಾಳ ಹೂಡಿ ಚುನಾವಣೆಯನ್ನು ಗೆಲ್ಲುವ ಅಗತ್ಯವೇ ಇರಲಿಲ್ಲ. ಬಂಡವಾಳ ಒಂದು ಮಟ್ಟದಲ್ಲಿ ಬೇಕಿತ್ತಾದರೂ, ಮೋದಿ ಅಲೆ ಇದ್ದಿದ್ದರೆ ಆಗುವ ಖರ್ಚಿನಲ್ಲಿ ಅರ್ಧಕ್ಕರ್ಧ ಬಂಡವಾಳ ಉಳಿಯುತ್ತಿತ್ತು.
ಹೀಗಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ಅವರು ಕರ್ನಾಟಕದಿಂದ ದೊಡ್ಡ ಸಂಖ್ಯೆಯ ಸೀಟುಗಳನ್ನು ಗೆಲ್ಲಿಸದೆ ಹೋದರೆ ರಾಷ್ಟ್ರ ಮಟ್ಟದಲ್ಲಿ ಎದುರಿಸಬೇಕಾದ ಕಷ್ಟದ ಸ್ವರೂಪ ಹೆಚ್ಚುತ್ತದೆ ಎಂಬುದು ವರಿಷ್ಠರ ಸದ್ಯದ ಯೋಚನೆ.

ಯಡಿಯೂರಪ್ಪಗೆ ಅಮಿತ್ ಶಾ ಹೇಳಿರುವುದೇನು?
ಹೀಗಾಗಿ ಕರ್ನಾಟಕದಲ್ಲಿರುವ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಬೀಳಿಸುವ ದುಸ್ಸಾಹಸಕ್ಕೆ ಕೈ ಹಾಕುವುದು ಬೇಡ ಎನ್ನುತ್ತಿದ್ದ ವರಿಷ್ಠರು ಈಗ ಕೆಲ ಪ್ರಶ್ನೆಗಳಿಗೆ ಕ್ಲಾರಿಫಿಕೇಷನ್ ಬಯಸಿ, ಇದನ್ನು ನಿಚ್ಚಳಗೊಳಿಸಿದರೆ ನೀವು ಆಪರೇಷನ್ ಕಮಲ ಕಾರ್ಯಾಚರಣೆ ಮಾಡಿ ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರಲು ನಮ್ಮದೇನೂ ಅಭ್ಯಂತರವಿಲ್ಲ ಎಂದು ಅಮಿತ್ ಶಾ ನೇರವಾಗಿಯೇ ಯಡಿಯೂರಪ್ಪ ಅವರಿಗೆ ಹೇಳಿದ್ದಾರೆ.
ಅಂದ ಹಾಗೆ ಅವರು ಕೇಳಿರುವ ಕ್ಲಾರಿಫಿಕೇಷ್ ಗಳೂ ಕುತೂಹಲಕಾರಿಯಾಗಿವೆ. ಮೊದಲನೆಯದಾಗಿ, ನೀವು ಆಪರೇಷನ್ ಕಮಲ ಕಾರ್ಯಾಚರಣೆ ಮಾಡಲು ಯಾರನ್ನು ಪಕ್ಕದಲ್ಲಿಟ್ಟುಕೊಂಡಿದ್ದೀರೋ? ವಾಸ್ತವದಲ್ಲಿ ಅವರು ಸಿಎಂ ಕುಮಾರಸ್ವಾಮಿಯವರ ವಿರುದ್ದ ದೊಡ್ಡ ಮಟ್ಟದಲ್ಲಿ ಹೋರಾಡುವ ಶಕ್ತಿ ಉಳ್ಳವರಲ್ಲ.
ಗಣಿರೆಡ್ಡಿಗಳಾದರೆ ಹಠಕ್ಕೆ ಬಿದ್ದು ಆಪರೇಷನ್ ಕಮಲ ಕಾರ್ಯಾಚರಣೆ ಮಾಡುತ್ತಿದ್ದುದಕ್ಕೆ ಕಾರಣಗಳಿವೆ. ಯಾಕೆಂದರೆ ಅವರಿಗೆ ಕುಮಾರಸ್ವಾಮಿ ಅವರ ಜತೆ ದ್ವೇಷವಿದೆ. ಮತ್ತು ಹೇಗಾದರೂ ಮಾಡಿ ಅವರನ್ನು ಪದಚ್ಯುತಗೊಳಿಸಿ ಬಿಜೆಪಿ ಯುಗ ಆರಂಭವಾಗುವಂತೆ ಮಾಡಬೇಕೆಂಬ ಹಠವಿದೆ.

ಎಚ್ಡಿಕೆಯನ್ನು ಕೆಡವಲು ರೆಡ್ಡಿಯೇ ಬೇಕು
ಕುಮಾರಸ್ವಾಮಿಯನ್ನು ಪದಚ್ಯುತಿಗೊಳಿಸಲು ರೆಡ್ಡಿ ಬ್ರದರ್ಸ್ ಯತ್ನಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ತಪ್ಪು? ಎಂಬುದು ಬೇರೆ ವಿಷಯ. ಆದರೆ ಕುಮಾರಸ್ವಾಮಿ ಸರ್ಕಾರ ಬೀಳಿಸುವ ವಿಷಯದಲ್ಲಿ ಅವರು ಪ್ರಾಮಾಣಿಕವಾಗಿ ದುಡಿಯಬಲ್ಲರು. ಆದರೆ ನೀವು ಅವರನ್ನು ದೂರವಿಟ್ಟು, ಯಾರನ್ನು ಇದಕ್ಕಾಗಿ ನೆಚ್ಚಿಕೊಂಡಿದ್ದೀರೋ? ಇವರೆಲ್ಲ ವಿಧಾನಸೌಧದ ಸಮೀಪದಲ್ಲೇ ಇರುವ ಪ್ರತಿಷ್ಠಿತ ಕ್ಲಬ್ ಒಂದರಲ್ಲಿ ಕುಳಿತು ಆಪರೇಷನ್ ಕಮಲದ ಸ್ಕೆಚ್ ಹಾಕುತ್ತಾರೆ.
ಹೀಗೆ ಇವರು ಸ್ಕೆಚ್ ಹಾಕುವಾಗ ಕುಮಾರಸ್ವಾಮಿ ಸರ್ಕಾರದ ಇಂಟಲಿಜೆನ್ಸ್ ಅಧಿಕಾರಿಗಳು ಅದೇ ಕ್ಲಬ್ಬಿನಲ್ಲಿರುತ್ತಾರೆ. ಅದರರ್ಥ, ಈ ಸರ್ಕಾರವನ್ನು ಬೀಳಿಸಲು ನೀವು ಯಾರನ್ನು ನೆಚ್ಚಿಕೊಂಡಿದ್ದೀರೋ? ಅವರು ಕುಮಾರಸ್ವಾಮಿಯವರ ಶತ್ರುಗಳಲ್ಲ. ಬದಲಿಗೆ ಕುಮಾರಸ್ವಾಮಿ ಅವರಿಗೇ ಏಜೆಂಟರು.
ಹೀಗವರು ಮುಖ್ಯಮಂತ್ರಿಗಳ ಏಜೆಂಟ್ ಆಗದೆ ಇದ್ದರೆ, ಅವರ ವಿರುದ್ಧದ ಹಲವು ಕೇಸುಗಳನ್ನು ಮೇಲಕ್ಕೆತ್ತಿ ಕುಮಾರಸ್ವಾಮಿ ಏನಾದರೊಂದು ತನಿಖೆ ನಡೆಸಿ ಹಿಂಸೆ ಕೊಡುತ್ತಾರೆ. ಇದು ಆಪರೇಷನ್ ಕಮಲ ಕಾರ್ಯಾಚರಣೆಗಾಗಿ ನೀವು ನೆಚ್ಚಿಕೊಂಡ ಯೋಧರ ಸದ್ಯದ ಶಕ್ತಿ.

ಕತ್ತಿ, ಬೊಮ್ಮಾಯಿ, ರೆಡ್ಡಿಯೊಂದಿಗೆ ಆಪರೇಷನ್
ಹೀಗಾಗಿ ಮುಂದಿನ ದಿನಗಳಲ್ಲಿ ಇವರನ್ನೇ ನೆಚ್ಚಿಕೊಂಡು ನೀವು ಆಪರೇಷನ್ ಕಮಲ ಕಾರ್ಯಾಚರಣೆ ಮಾಡುತ್ತೀರಿ ಎಂದರೆ ಅದು ಸಕ್ಸಸ್ ಆಗುವುದಿಲ್ಲ. ಹೈಕಮಾಂಡ್ ತರಿಸಿದ ವರದಿಯ ಪ್ರಕಾರ, ನೀವು ಮಾಡುವ ಆಪರೇಷನ್ ಕಮಲ ಕಾರ್ಯಾಚರಣೆಗೆ ವರವಾಗಿ ದಕ್ಕಬಲ್ಲವರು ಉತ್ತರ ಕರ್ನಾಟಕದ ಶಾಸಕರು.
ಹೀಗಿರುವಾಗ ನೀವು ಉಮೇಶ್ ಕತ್ತಿ, ಬಸವರಾಜ ಬೊಮ್ಮಯಿ, ಗಣಿರೆಡ್ಡಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಫೀಲ್ಡಿಗಿಳಿಯಬೇಕೇ ಹೊರತು, ದಕ್ಷಿಣ ಕರ್ನಾಟಕ ಭಾಗದವರನ್ನಲ್ಲ. ಯಾಕೆಂದರೆ, ಇವರ್ಯಾರಿಗೂ ಆಪರೇಷನ್ ಕಮಲ ಕಾರ್ಯಾಚರಣೆ ನಡಸಿದ ಅನುಭವವಿಲ್ಲ. ಹೆಚ್ಚೆಂದರೆ ಒಂದಿಬ್ಬರಿಗೆ ಹಿಂದೆ ಆಪರೇಷನ್ ಕಮಲ ಕಾರ್ಯಾಚರಣೆಯ ಲಾಭವಾಗಿರಬಹುದೇ ಹೊರತು, ಇವರೇ ಆಪರೇಟರ್ಸ್ ಅಲ್ಲ.
ಪರಿಣಾಮ? ಇವರೆಲ್ಲ ತಮ್ಮ ಲಿಂಕಿರುವ ಜನರನ್ನು ಹಿಡಿದುಕೊಂಡು ಆಪರೇಷನ್ ಮಾಡಲು ಹೋಗುತ್ತಾರೆ. ಆದರೆ ಆಪರೇಷನ್ ನ ವಿವರ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಮುಂಚೆಯೇ ಗೊತ್ತಾಗುತ್ತದೆ. ಹೀಗಾಗಿ ಈ ಕಾರ್ಯಾಚರಣೆಯನ್ನು ವಿಫಲಗೊಳಿಸಲು ಅವರೇನು ಮಾಡಬೇಕೋ? ಅದನ್ನು ಮಾಡುತ್ತಾರೆ.

ಆಪರೇಷನ್ ಕಮಲ ಏಕೆ ಯಶಸ್ವಿಯಾಗುತ್ತಿಲ್ಲ?
ನಾವು ಈ ಹಿಂದೆ ನಿಮಗೆ ಆಪರೇಷನ್ ಕಮಲ ಕಾರ್ಯಾಚರಣೆ ಬೇಡವೆಂದಿದ್ದು ನಿಜ. ಅದೇ ರೀತಿ ನಾವು ಹೇಳಿದರೂ ನೀವು ಆಪರೇಷನ್ ಕಮಲ ಕಾರ್ಯಾರಣೆ ಮಾಡಿದ್ದೂ ನಿಜ. ಆದರೂ ಕಳೆದ ಆರು ತಿಂಗಳಿನಿಂದ ಅದು ಏಕೆ ಯಶಸ್ವಿಯಾಗುತ್ತಿಲ್ಲ?
ನೀವು ನಿಜಕ್ಕೂ ಪವರ್ ಫುಲ್ ಯೋಧರನ್ನು, ನಿಷ್ಠಾವಂತ ಯೋಧರನ್ನು ಪಕ್ಕದಲ್ಲಿಟ್ಟುಕೊಂಡು ಕಾರ್ಯಾಚರಣೆ ನಡೆಸಿದ್ದರೆ ಇಷ್ಟೊತ್ತಿಗಾಗಲೇ ಕುಮಾರಸ್ವಾಮಿ ಸರ್ಕಾರ ಉರುಳಿ, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿತ್ತು.
ಹೀಗಾಗಿ ಈಗಲೂ ನಿಮಗೆ ನಾವು ಹೇಳುತ್ತಿದ್ದೇವೆ. ಆಪರೇಷನ್ ಕಮಲ ಕಾರ್ಯಾಚರಣೆಯನ್ನು ನೀವು ಮಾಡಲು ನಮ್ಮ ಬೆಂಬಲವಿದೆ. ಯಾಕೆಂದರೆ ಮುಂದಿನ ಲೋಕಸಭಾ ಚುನಾವಣೆಯ ವೇಳೆಗೆ ಕರ್ನಾಟಕವೂ ಬಿಜೆಪಿ ಪಾಲಿಗೆ ಒಂದು ಸೇನಾ ನೆಲೆಯಾಗಿ ದಕ್ಕಬೇಕು.

ಗೆರಿಲ್ಲಾ ವಾರ್ ಗೆ ಉತ್ತರ ಕರ್ನಾಟಕದ ನಾಯಕರು
ಇತ್ತೀಚೆಗೆ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ಪಕ್ಷ ಮೂರು ಪ್ರಮುಖ ಸೇನಾ ನೆಲೆಗಳನ್ನು ಕಳೆದುಕೊಂಡಿದೆ. ಹೀಗಾಗಿ ಮುಂದಿನ ಲೋಕಸಭಾ ಚುನಾವಣೆಯ ವೇಳೆಗೆ ಕರ್ನಾಟಕ ನಮಗೆ ಒಂದು ಸೇನಾನೆಲೆಯಾಗಿ ದಕ್ಕಿದರೆ ಸಂತೋಷ.
ಆ ಮೂಲಕ ಉತ್ತರ ಭಾರತದಲ್ಲಿ ನಾವು ಕಳೆದುಕೊಳ್ಳಬಹುದಾದ ಶಕ್ತಿಯನ್ನು ದಕ್ಷಿಣ ಭಾರತದಲ್ಲಿ ಒಂದಷ್ಟು ಮಟ್ಟಿಗೆ ತುಂಬಿಕೊಳ್ಳಬಹುದು. ಆದರೆ ನಮಗಿರುವುದು ಇದಿಷ್ಟೇ ಅನುಮಾನ. ಹೀಗಾಗಿ ಮೊದಲು ಆಪರೇಷನ್ ಕಮಲ ಕಾರ್ಯಾಚರಣೆಗಾಗಿ ನೀವು ಯಾರನ್ನು ನೆಚ್ಚಿಕೊಂಡಿದ್ದೀರೋ? ಅವರನ್ನು ಕೈ ಬಿಡಿ.
ಅವರ ಬದಲು ಉತ್ತರ ಕರ್ನಾಟಕ ಭಾಗದ ನಾಯಕರನ್ನೇ ಈ ಗೆರಿಲ್ಲಾ ವಾರ್ ಗೆ ಬಳಸಿ, ಇಲ್ಲದಿದ್ದರೆ ನಿಮ್ಮ ಕಾರ್ಯಾಚರಣೆಯ ಪ್ರತಿಯೊಂದು ವಿವರಗಳು ನಿಮಗಿಂತ ಮುಂಚಿತವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಗೊತ್ತಾಗುತ್ತದೆ. ಆ ಮೂಲಕ ನೀವು ಮಾಡುವ ಪ್ರತಿಯೊಂದು ಯತ್ನವೂ ವಿಫಲವಾಗುತ್ತದೆ.

ಕಮಲದ ಪಾಳಯವೇ ವಿಲನ್ ಆಗುತ್ತಿದೆ
ಅಷ್ಟೇ ಅಲ್ಲ, ಸರ್ಕಾರವನ್ನು ಬೀಳಿಸಲು ನೀವೇನು ಮಾಡುತ್ತಿದ್ದೀರಿ? ಎಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಮುಂಚಿತವಾಗಿ ಕರ್ನಾಟಕದ ಜನತೆಯ ಮುಂದೆ ಹೇಳುತ್ತಾ ಕಮಲ ಪಾಳೆಯವನ್ನು ವಿಲನ್ ಮಾಡುತ್ತಿದ್ದಾರೆ.
ಅವರು ಹಾಗೆ ಮಾಡಲು ಸಾಧ್ಯವಾಗದ ರೀತಿಯಲ್ಲಿ ಕಾರ್ಯಾಚರಣೆ ಮಾಡಲು, ಸರ್ಕಾರವನ್ನು ತರಲು ಸಾಧ್ಯವೆಂದಾದರೆ ನಮಗೆ ಮುಂಚಿತವಾಗಿ ವಿವರ ಕೊಡಿ, ನಿಮಗೇನು ಸಪೋರ್ಟು ಬೇಕೋ? ನಾವು ಕೊಡುತ್ತೇವೆ ಎಂಬುದು ಯಡಿಯೂರಪ್ಪ ಅವರ ಮುಂದೆ ವರಿಷ್ಠರು ಹೇಳಿರುವ ಮಾತು.
ಈಗ ಯಡಿಯೂರಪ್ಪ ಹೈಕಮಾಂಡ್ ಕೇಳಿದ ಈ ಕ್ಲಾರಿಫಿಕೇಷನ್ ಗೆ ಉತ್ತರ ಕೊಡಬೇಕಿದೆ. ಉತ್ತರ ಕೊಡದಿದ್ದರೂ ಕರ್ನಾಟಕದ ಬಿಜೆಪಿ ಮಟ್ಟಿಗೆ ಅವರೇ ಪವರ್ ಫುಲ್ ಲೀಡರು. ಹಾಗಂತ ತಮಗಿರುವ ಪವರ್ ನ್ನೇ ನೆಚ್ಚಿಕೊಂಡು ಹೈಕಮಾಂಡ್ ಅನ್ನು ಹಂಡ್ರೆಡ್ ಪರ್ಸೆಂಟ್ ದೂರ ಇಡಲು ಸಾಧ್ಯವಿಲ್ಲ ಅಲ್ಲವೇ?
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications