ಯಾರಿಗೆ ಮೊದಲು ಲಸಿಕೆ ನೀಡಿದರೆ ಕೊರೊನಾ ರೂಪಾಂತರ ತಡೆಯಬಹುದು?; ತಜ್ಞರ ಉತ್ತರ...
ನವದೆಹಲಿ, ಆಗಸ್ಟ್ 06: ದೇಶದಲ್ಲಿ ಮತ್ತೆ ಕೊರೊನಾ ಪ್ರಕರಣಗಳ ಸಂಖ್ಯೆ ಏರುತ್ತಲಿದ್ದು, ಸೋಂಕು ನಿಯಂತ್ರಣಕ್ಕೆ ತರಲು ತ್ವರಿತ ಗತಿಯಲ್ಲಿ ಕೊರೊನಾ ಲಸಿಕೆ ನೀಡುವ ಕೆಲಸ ನಡೆಯುತ್ತಿದೆ. ಆದರೆ ಸೋಂಕಿನ ರೂಪಾಂತರಗಳ ಸೃಷ್ಟಿ ಆತಂಕಕ್ಕೆ ಮತ್ತೆ ನೀರೆರೆಯುತ್ತಿದೆ.
ಬೆಟಾ, ಕಪ್ಪಾ, ಆಲ್ಫಾ, ಡೆಲ್ಟಾ, ಡೆಲ್ಟಾ ಪ್ಲಸ್ ಹೀಗೆ ಭಿನ್ನ ಭಿನ್ನ ರೂಪಾಂತರಗಳೊಂದಿಗೆ ಸೋಂಕು ಇನ್ನಷ್ಟು ವೇಗಿಯಾಗಿ, ಮಾರಕವಾಗಿ ಹರಡುತ್ತಿರುವುದು ಆತಂಕ ಮೂಡಿಸಿದೆ. ಕೊರೊನಾ ಸೋಂಕಿನ ನಿಯಂತ್ರಣದೊಂದಿಗೆ, ಸೋಂಕು ರೂಪಾಂತರಗೊಳ್ಳುವುದನ್ನು ತಡೆಯಲು ಸಾಧ್ಯವಿದೆಯೇ ಎಂಬ ಕುರಿತು ವೈದ್ಯಕೀಯ ವಲಯದಲ್ಲಿ ಚರ್ಚೆ, ಸಂಶೋಧನೆಗಳು ಸಾಗುತ್ತಿವೆ. ಈ ಮಧ್ಯೆ ಸೋಂಕು ರೂಪಾಂತರಗೊಳ್ಳುವುದನ್ನು ತಡೆಯಲು ಹೊಸ ಸಾಧ್ಯತೆಯನ್ನು ತಜ್ಞರು ವಿವರಿಸಿದ್ದಾರೆ. ಯಾರಿಗೆ ರೋಗನಿರೋಧಕ ಶಕ್ತಿ ಕಡಿಮೆಯಿರುತ್ತದೆಯೋ ಅವರಿಗೆ ಮೊದಲು ಲಸಿಕೆಯನ್ನು ನೀಡಿದರೆ ಸೋಂಕು ರೂಪಾಂತರಗೊಳ್ಳುವುದನ್ನು ತಡೆಯಬಹುದಾಗಿದೆ ಎಂದು ಸಲಹೆ ನೀಡಿದ್ದಾರೆ.
ಕೊರೊನಾ ಲಸಿಕೆ ಹೆಚ್ಚು ಕಾಲ ರಕ್ಷಣೆ ನೀಡುತ್ತದೆಯೇ? ಅಧ್ಯಯನ ಹೇಳುವುದಿದು...
"ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್" ನಿಯತಕಾಲಿಕೆಯಲ್ಲಿ ಈ ಕುರಿತು ಲೇಖನವೊಂದನ್ನು ಪ್ರಕಟಿಸಲಾಗಿದೆ. ರೋಗನಿರೋಧಕ ಶಕ್ತಿ ಕಡಿಮೆ ಇರುವ, ಇತರೆ ಆರೋಗ್ಯ ಸಮಸ್ಯೆಗಳಿರುವ ರೋಗಿಗಳಲ್ಲಿ ಸೋಂಕಿನ ರೂಪಾಂತರಗಳು ಸೃಷ್ಟಿಯಾಗುವ ಸಾಧ್ಯತೆ ಹೆಚ್ಚಿದ್ದು, ಅವರನ್ನು ಲಸಿಕೆ ನೀಡುವ ವಿಷಯದಲ್ಲಿ ಮೊದಲು ಆದ್ಯತೆಯಾಗಿಟ್ಟುಕೊಳ್ಳಬೇಕು ಎಂದು ಅಮೆರಿಕದ ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ.. ಸೋಂಕಿನ ರೂಪಾಂತರ ತಡೆಗೆ ಹಲವು ಸಲಹೆಗಳನ್ನು ಅವರು ನೀಡಿದ್ದಾರೆ. ಮುಂದೆ ಓದಿ...
ಕ್ಯಾನ್ಸರ್, ಟಿಬಿ, ಏಡ್ಸ್ ರೋಗಿಗಳಿಗೆ ಮೊದಲು ಲಸಿಕೆ ನೀಡಬೇಕು
ಸೋಂಕಿನ ರೂಪಾಂತರ ಸೃಷ್ಟಿಯು ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಉದಾಹರಣೆಗೆ, ಕ್ಯಾನ್ಸರ್, ಟಿಬಿ, ಏಡ್ಸ್ ಮುಂತಾದ ಸಮಸ್ಯೆಗಳಿರುವವರಲ್ಲಿ ಸೋಂಕು ಕಾಣಿಸಿಕೊಂಡ ನಂತರ ರೂಪಾಂತರ ಸೃಷ್ಟಿಯಾಗುವ ಸಾಧ್ಯತೆ ಹೆಚ್ಚಿರುವುದಾಗಿ ತಿಳಿದುಬಂದಿದೆ. ಹೀಗಾಗಿ ಈ ರೀತಿ ಸಮಸ್ಯೆ ಹೊಂದಿರುವವರಿಗೆ ಮೊದಲು ಕೊರೊನಾ ಲಸಿಕೆ ನೀಡಬೇಕು. ಇದು ಅವರಿಗೆ ಕೊರೊನಾ ಸೋಂಕು ತಗುಲುವ ಸಾಧ್ಯತೆಯನ್ನು ಕಡಿಮೆ ಮಾಡುವುದಲ್ಲದೆ ರೂಪಾಂತರ ಸೃಷ್ಟಿಯಾಗುವುದನ್ನೂ ತಡೆಯುತ್ತದೆ. ಅಪಾಯವನ್ನು ಸ್ವಲ್ಪ ಮಟ್ಟಿಗಾದರೂ ತಗ್ಗಿಸಿದಂತಾಗುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಕುಟುಂಬದ ಸದಸ್ಯರು ಕಡ್ಡಾಯ ಲಸಿಕೆ ಪಡೆಯಬೇಕು
ರೋಗನಿರೋಧಕ ಶಕ್ತಿ ಕಡಿಮೆಯಿದ್ದು ಅಥವಾ ಇನ್ನಿತರ ಗಂಭೀರ ಆರೋಗ್ಯ ಸಮಸ್ಯೆಯಿದ್ದವರಿಗೆ ಕೊರೊನಾ ಲಸಿಕೆಯನ್ನು ಆದ್ಯತೆಯಲ್ಲಿ ನೀಡಬೇಕು. ಇದರೊಂದಿಗೆ, ಅವರಿಗೆ ಸೋಂಕು ತಗುಲಿದರೆ ಪ್ರತ್ಯೇಕವಾಗಿ ಇರಲೇಬೇಕಾದ ಅಗತ್ಯವನ್ನು ಮನವರಿಕೆ ಮಾಡಬೇಕು. ಈ ಸಮಸ್ಯೆ ಇರುವ ವ್ಯಕ್ತಿಯ ಕುಟುಂಬ ಕೂಡ ವಯಸ್ಸನ್ನು ಪರಿಗಣಿಸದೇ ಲಸಿಕೆ ಪಡೆದುಕೊಳ್ಳಬೇಕು. ಇವರಿಂದ ಇಡೀ ಸಮುದಾಯಕ್ಕೆ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಕುಟುಂಬದವರು ಆರೋಗ್ಯವಂತರಾಗಿದ್ದು, ಹೊರಗೆ ಇನ್ನಿತರ ಜನರಿಗೆ ಈ ಸೋಂಕನ್ನು ಸುಲಭವಾಗಿ ತಲುಪಿಸಬಹುದಾಗಿದೆ ಎಂದು ಫ್ರೆಡ್ ಹಚಿನ್ಸನ್ ಕ್ಯಾನ್ಸರ್ ರಿಸರ್ಚ್ ಸೆಂಟರ್ನ ಉನ್ನತ ಸಂಸ್ಥೆ, ಜಾನ್ಸನ್ ಹಾಪ್ಕಿನ್ಸ್ ಬ್ಲೂಂಬರ್ಗ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್, ವಾಲ್ಟರ್ ರೀಡ್ ಆರ್ಮಿ ಇನ್ಸ್ಟಿಟ್ಯೂಟ್ ಆಫ್ ರಿಸರ್ಚ್ ತಿಳಿಸಿವೆ.
ಕೋವಿಶೀಲ್ಡ್ ಡೋಸ್ಗಳ ನಡುವಿನ ಅಂತರ ಮತ್ತೆ ಕಡಿಮೆಯಾಗುವುದೇ?
ಹಲವು ಬಾರಿ ಸೋಂಕಿಗೆ ಒಳಗಾಗುವ ಪ್ರಕರಣಗಳು ಹೆಚ್ಚಾಗಿವೆ
ಕೊರೊನಾ ಸೋಂಕಿನ ಡೆಲ್ಟಾ ರೂಪಾಂತರ ಅತಿ ವೇಗವಾಗಿ ವಿಶ್ವವನ್ನೇ ವ್ಯಾಪಿಸುತ್ತಿದ್ದು, ಭಾರತಕ್ಕೆ ಕೊರೊನಾ ಮೂರನೇ ಅಲೆ ಆತಂಕ ವ್ಯಕ್ತವಾಗಿರುವ ಬೆನ್ನಲ್ಲೇ ಈ ಎಚ್ಚರಿಕೆಯನ್ನು ರವಾನಿಸಲಾಗಿದೆ. ರೋಗನಿರೋಧಕ ಶಕ್ತಿ ಕಡಿಮೆಯಿರುವ ಮಂದಿಯಲ್ಲಿ ಕೊರೊನಾ ರೂಪಾಂತರ ಸೃಷ್ಟಿ ಖಾತ್ರಿಪಡಿಸುವ ಸಂಬಂಧ ಭಾರತದಲ್ಲಿ ಕೆಲವು ಅಧ್ಯಯನಗಳು ಸಾಗುತ್ತಿವೆ. ಇದರೊಂದಿಗೆ, ಒಂದೇ ವ್ಯಕ್ತಿ ಹಲವು ಬಾರಿ ಸೋಂಕಿಗೆ ತುತ್ತಾಗುತ್ತಿರುವ ಪ್ರಕರಣಗಳೂ ಹೆಚ್ಚಾಗಿವೆ ಎಂದು ಏಮ್ಸ್ ಹಾಗೂ ಲೋಕನಾಯಕ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಪದೇ ಪದೇ ಸೋಂಕು
ರೋಗನಿರೋಧಕ ಶಕ್ತಿ ಕಡಿಮೆ ಇರುವ ರೋಗಿಗಳಲ್ಲಿ ಪದೇ ಪದೇ ಸೋಂಕು ಕಾಣಿಸಿಕೊಳ್ಳುತ್ತಿದೆ. ಏಡ್ಸ್ ಹಾಗೂ ಟಿಬಿ ರೋಗ, ಕ್ಯಾನ್ಸರ್ ಇರುವವರಿಗೆ ಒಮ್ಮೆ ಸೋಂಕು ತಗುಲಿದರೆ, ಗುಣಮುಖರಾದ ಕೆಲವೇ ದಿನಗಳಲ್ಲಿ ಸೋಂಕು ಮರುಕಳಿಸುತ್ತಿದೆ. ಕೆಲವರು ಎರಡು ತಿಂಗಳು ನಿರಂತರವಾಗಿ ಸೋಂಕಿಗೆ ತುತ್ತಾಗುತ್ತಿದ್ದಾರೆ. ಹೀಗಾಗಿ ಅಂಥವರಿಗೆ ಆದ್ಯತೆಯಲ್ಲಿ ಲಸಿಕೆ ನೀಡುವುದು ಈಗಿನ ತುರ್ತಾಗಿದೆ ಎಂದು ಲೋಕನಾಯಕ ಆಸ್ಪತ್ರೆಯ ಡಾ. ಸುರೇಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಕಿಡ್ನಿ ಸಮಸ್ಯೆಯಿರುವವರಿಗೆ ಕೊರೊನಾ ದೀರ್ಘಕಾಲ ಕಾಡುತ್ತಿದೆ. ಶ್ವಾಸಕೋಶ ಸಮಸ್ಯೆಯಿರುವವರು ಪದೇ ಪದೇ ಸೋಂಕಿಗೆ ತುತ್ತಾಗುತ್ತಿದ್ದಾರೆ. ಮೊದಲು ಈ ರೀತಿಯ ರೋಗಿಗಳಿಗೆ ಮೊನೋಕ್ಲೋನಲ್ ಆಂಟಿಬಾಡಿ ಥೆರಪಿ ನೀಡಬೇಕು ಎಂದು ಏಮ್ಸ್ ಟ್ರೌಮಾ ಸೆಂಟರ್ನ ಮುಖ್ಯಸ್ಥ ಸಲಹೆ ನೀಡಿದ್ದಾರೆ.