ವ್ಯಕ್ತಿಚಿತ್ರ: ಸಿಬಿಐ ನೂತನ ನಿರ್ದೇಶಕ ಸುಬೋಧ್ ಕುಮಾರ್ ಜೈಸ್ವಾಲ್
ನವ ದೆಹಲಿ, ಮೇ 26: ಹಿರಿಯ ಐಪಿಎಸ್ ಅಧಿಕಾರಿ, ಮಹಾರಾಷ್ಟ್ರದ ಮಾಜಿ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಸುಬೋಧ್ ಕುಮಾರ್ ಜೈಸ್ವಾಲ್, ಸಿಬಿಐ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಸಚಿವಾಲಯ ಮಂಗಳವಾರ ಹೊರಡಿಸಿರುವ ಈ ಆದೇಶದ ಪ್ರಕಾರ ಸುಬೋಧ್ ಕುಮಾರ್ ಜೈಸ್ವಾಲ್ ಅಧಿಕಾರ ಅವಧಿ ಎರಡು ವರ್ಷಗಳವರೆಗೆ ಇರಲಿದೆ. ಯಾರು ಈ ಸುಬೋಧ್ ಕುಮಾರ್ ಜೈಸ್ವಾಲ್ ಇಲ್ಲಿದೆ ಸಂಕ್ಷಿಪ್ತ ವಿವರ..
ಮಹಾರಾಷ್ಟ್ರ ಕೇಡರ್ನ 1985 ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿರುವ ಜೈಸ್ವಾಲ್, ಪ್ರಸ್ತುತ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಮಹಾನಿರ್ದೇಶಕರಾಗಿದ್ದಾರೆ. ಮಹಾರಾಷ್ಟ್ರದ ಪೊಲೀಸ್ ಮಹಾನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಫೆಬ್ರವರಿ 3 ರಂದು ರಿಷಿ ಕುಮಾರ್ ಶುಕ್ಲಾ ತಮ್ಮ ಎರಡು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ನಂತರ ಮೂರು ತಿಂಗಳ ಕಾಲ ಕೇಂದ್ರೀಯ ತನಿಖಾ ದಳವು ಯಾವುದೇ ನಿರ್ದೇಶಕರಿಲ್ಲದೆ ಕಾರ್ಯ ನಿರ್ವಹಿಸುತ್ತಿತ್ತು. ಸಿಬಿಐ ಹೆಚ್ಚುವರಿ ನಿರ್ದೇಶಕ ಗುಜರಾತ್ ಕೇಡರ್ನ 1988 ಬ್ಯಾಚ್ ಐಪಿಎಸ್ ಅಧಿಕಾರಿ ಪ್ರವೀಣ್ ಸಿನ್ಹಾರನ್ನು ಕಾರ್ಯಕಾರಿ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. ಆ ಬಳಿಕ ಇದೀಗ ಸುಬೋಧ್ ಕುಮಾರ್ ಜೈಸ್ವಾಲ್ರನ್ನು ಸಿಬಿಐ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೂವರು ಸದಸ್ಯರ ಆಯ್ಕೆ ಸಮಿತಿಯು ಜೈಸ್ವಾಲ್ ಹೆಸರನ್ನು ಸಿಬಿಐ ನಿರ್ದೇಶಕ ಹುದ್ದೆಗೆ ಸೋಮವಾರ ಅಂತಿಮಗೊಳಿಸಿತ್ತು. ಭಾರತದ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಮತ್ತು ಲೋಕಸಭೆಯ ಪ್ರತಿಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಈ ಸಮಿತಿಯ ಇತರ ಇಬ್ಬರು ಸದಸ್ಯರಾಗಿದ್ದರು.
ಸಭೆಯಲ್ಲಿ ಲೋಕಸಭೆಯ ಪ್ರತಿಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಸಿಬಿಐ ನಿರ್ದೇಶಕರ ಹುದ್ದೆಗೆ ಅಧಿಕಾರಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಆಕ್ಷೇಪಿಸಿದ್ದರು.
"ಕಾರ್ಯವಿಧಾನವನ್ನು ಅನುಸರಿಸಿದ ರೀತಿ, ಸಮಿತಿಯ ಆದೇಶಕ್ಕೆ ವಿರುದ್ಧವಾಗಿತ್ತು. ಮೇ 11 ರಂದು ನನಗೆ 109 ಹೆಸರುಗಳನ್ನು ನೀಡಲಾಯಿತು. ಇಂದು (ಸೋಮವಾರ) ಮಧ್ಯಾಹ್ನ 1 ಗಂಟೆಯ ಹೊತ್ತಿಗೆ 10 ಹೆಸರುಗಳನ್ನು ಶಾರ್ಟ್ ಲೀಸ್ಟ್ ಮಾಡಲಾಗಿದೆ. ಈ ವಿಧಾನವು ಸರಿಯಲ್ಲ" ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಿಬಿಐ ನಿರ್ದೇಶಕರ ವಿಳಂಬದ ಬಗ್ಗೆ ಕಾಮನ್ ಕಾಸ್ ಎಂಬ ಎನ್ಜಿಒ ಈಗಾಗಲೇ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು ಇದರ ವಿಚಾರಣೆಯ ನಡುವೆ ಸಿಬಿಐ ನಿರ್ದೇಶಕರ ಹುದ್ದೆಗೆ ನೇಮಕಾತಿ ಮಾಡಲಾಗಿರುವುದು ಮಹತ್ವವನ್ನು ಪಡೆದಿದೆ.











Click it and Unblock the Notifications