ಮೋದಿಯನ್ನು ಐಎಸ್‌ಐ ಏಜೆಂಟ್ ಎಂದಿದ್ದ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಯಾರು?

ಪೌರತ್ವ ತಿದ್ದುಪಡಿ ಕಾಯ್ದೆಯ ಪ್ರತಿಭಟನೆ ಈಶಾನ್ಯ ದೆಹಲಿಯಲ್ಲಿ ಹಿಂಸಾಚಾರಕ್ಕೆ ತಿರುಗಿ ಅನೇಕರನ್ನು ಬಲಿತೆಗೆದುಕೊಂಡಿದೆ. ಈ ನಡುವೆ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಬೇಡವಾದ ಕಾರಣಕ್ಕೆ ಎಲ್ಲರ ಗಮನ ಸೆಳೆದಿದ್ದಾರೆ.

Recommended Video

      Sachin Tendulkar Gets Ultimate Praise From Former Pakistan Skipper Inzamam-Ul-Haq | Cricket

      'ಭಾರತ ಭೇಟಿಯಲ್ಲಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೆಹಲಿಯಲ್ಲಿ ಇರುವವರೆಗೂ ನಾವು ಶಾಂತಿ ಕಾಪಾಡಿಕೊಳ್ಳುತ್ತೇವೆ. ಜಾಫ್ರಾಬಾದ್ ಮತ್ತು ಚಾಂದ್ ಬಾಗ್ ರಸ್ತೆಗಳನ್ನು ತೆರವುಗೊಳಿಸಲು ದೆಹಲಿ ಪೊಲೀಸರಿಗೆ ಮೂರು ದಿನಗಳ ಗಡುವು ನೀಡುತ್ತೇನೆ. ಇದರ ಬಳಿಕ ನಮ್ಮೊಂದಿಗೆ ಯಾವ ಚರ್ಚೆಗೂ ಅವಕಾಶವಿರುವುದಿಲ್ಲ. ಏಕೆಂದರೆ ನಾನು ಅದರ ಬಗ್ಗೆ ಗಮನಕೊಡುವುದಿಲ್ಲ' ಎಂದು ಅವರು ಹೇಳಿಕೆ ನೀಡಿದ್ದರು.

      ಈಶಾನ್ಯ ದೆಹಲಿಯ ಜಾಫ್ರಾಬಾದ್‌ನಲ್ಲಿ ಭಾನುವಾರ ಸಿಎಎ ಪರ ಜಾಥಾ ಆಯೋಜಿಸಲು ಅವರು ನಿರ್ಧರಿಸಿದ್ದರು. ಅಲ್ಲಿಂದ ಆರಂಭವಾದ ಹಿಂಸಾಚಾರ ರಾಷ್ಟ್ರದ ರಾಜಧಾನಿಯನ್ನು ಬೆಚ್ಚಿಬೀಳುವಂತೆ ಮಾಡಿದೆ. ಮಿಶ್ರಾ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಿಂಸಾಚಾರ ಭುಗಿಲೇಳಲು ಮಿಶ್ರಾ ಅವರೇ ಕಾರಣ ಎಂದು ಆರೋಪಿಸಲಾಗಿದೆ.

      ಭಾರತ-ಪಾಕಿಸ್ತಾನ ಕದನ

      ಭಾರತ-ಪಾಕಿಸ್ತಾನ ಕದನ

      ಅಂದಹಾಗೆ ಕಪಿಲ್ ಮಿಶ್ರಾ, ವಿವಾದ ಸೃಷ್ಟಿಸುತ್ತಿರುವುದು ಇದು ಮೊದಲ ಸಲವೇನಲ್ಲ. ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಅವರು, ಫೆ.8ರಂದು ನಡೆಯಲಿರುವ ಚುನಾವಣೆ ಭಾರತ ಮತ್ತು ಪಾಕಿಸ್ತಾನ ನಡುವಿನ ಸೆಣಸಾಟವಾಗಿದೆ. ದೆಹಲಿಯ ರಸ್ತೆಯಲ್ಲಿ ಪಾಕಿಸ್ತಾನ ಸ್ಪರ್ಧಿಸಲಿದೆ ಎಂದು ವಿವಾದಾತ್ಮಕ ಟ್ವೀಟ್ ಮಾಡಿದ್ದರು. ಈ ಚುನಾವಣೆಯಲ್ಲಿ ಅವರು ಸೋಲು ಅನುಭವಿಸಿದ್ದರು.

      ಮೋದಿ ಐಎಸ್‌ಐ ಏಜೆಂಟ್

      ಮೋದಿ ಐಎಸ್‌ಐ ಏಜೆಂಟ್

      ಇದೇ ಕಪಿಲ್ ಮಿಶ್ರಾ ಒಂದು ಕಾಲದಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡರಾಗಿದ್ದರು. ಅರವಿಂದ್ ಕೇಜ್ರಿಬಾಲ್ ಸರ್ಕಾರದಲ್ಲಿ ಜಲ ಸಂಪನ್ಮೂಲ ಖಾತೆ ಸಚಿವರೂ ಆಗಿದ್ದರು. ಆಗ ಬಿಜೆಪಿಯ ಕಟ್ಟಾ ವಿರೋಧಿಯಾಗಿದ್ದ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಐಎಸ್‌ಐ ಏಜೆಂಟ್ ಎಂದು ಕರೆದಿದ್ದರು.

      ಅಣ್ಣಾ ಹಜಾರೆ ಹೋರಾಟದಲ್ಲಿ ಕಪಿಲ್

      ಅಣ್ಣಾ ಹಜಾರೆ ಹೋರಾಟದಲ್ಲಿ ಕಪಿಲ್

      ದೆಹಲಿಯ ಸಾಮಾಜಿಕ ಕಾರ್ಯ ಶಾಲೆಯ ಪದವೀಧರರಾದ ಅವರು, ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ನಡೆಸಿದ್ದ ಭ್ರಷ್ಟಾಚಾರ ವಿರೋಧಿ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದರು. ಶಹೀನ್ ಬಾಗ್‌ ಪ್ರತಿಭಟನೆಯ ವಿರುದ್ಧ ನಡೆದಿದ್ದ ಸಿಎಎ ಪರ ಪ್ರಚಾರದಲ್ಲಿ ದೇಶದ್ರೋಹಿಗಳು ಎಂದು ಪ್ರತಿಭಟನಾಕಾರರನ್ನು ಕರೆದಿದ್ದರು.

      ಅರವಿಂದ್ ಕೇಜ್ರಿವಾಲ್ ಸರ್ಕಾರದಲ್ಲಿ ಸಚಿವರಾಗಿದ್ದ ಅವರು ಭ್ರಷ್ಟಾಚಾರದ ಆರೋಪ ಪ್ರಕರಣದಲ್ಲಿ ಕೇಜ್ರಿವಾಲ್ ಜತೆ ಕಿತ್ತಾಡಿಕೊಂಡಿದ್ದರು. ಹೀಗಾಗಿ ಅವರನ್ನು ಎಎಪಿ ಸರ್ಕಾರದಿಂದ ವಜಾಗೊಳಿಸಲಾಗಿತ್ತು. ನಂತರ ಎರಡು ವರ್ಷಗಳಲ್ಲಿಯೇ ಮಿಶ್ರಾ ಬಿಜೆಪಿಗೆ ಜಿಗಿದಿದ್ದರು. ಫೆಬ್ರವರಿಯಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು.

      ಯೌನದಲ್ಲಿಯೇ ರಾಜಕೀಯದ ನಂಟು

      ಯೌನದಲ್ಲಿಯೇ ರಾಜಕೀಯದ ನಂಟು

      39 ವರ್ಷದ ಕಪಿಲ್ ಮಿಶ್ರಾ, ಯೌವನದಲ್ಲಿಯೇ ರಾಜಕೀಯ ರಂಗವನ್ನು ಕಂಡವರು. ಬಿಜೆಪಿಯ ನಾಯಕಿಯಾಗಿದ್ದ ಮಾಜಿ ಮೇಯರ್, ತಾಯಿ ಅನ್ನಪೂರ್ಣ ಮಿಶ್ರಾ ಅವರೊಂದಿಗೆ ಈಶಾನ್ಯ ದೆಹಲಿಯ ಕಾರವಲ್ ನಗರದಲ್ಲಿ ರಾಜಕೀಯ ಚಟುವಟಿಕೆಗಳಿಂದ ಗುರುತಿಸಿಕೊಂಡಿದ್ದರು.

      ಅಂತಾರಾಷ್ಟ್ರೀಯ ಲಾಭ ರಹಿತ ಸಂಸ್ಥೆಗಳಾದ ಗ್ರೀನ್ ಪೀಸ್ ಮತ್ತು ಆಮ್ನೆಸ್ಟಿಗಳ ಜತೆಗೆ ಸಾರ್ವಜನಿಕ ನೀತಿ ಪ್ರಚಾರಗಳಲ್ಲಿ ಕಪಿಲ್ ಮಿಶ್ರಾ ಕೆಲಸ ಮಾಡಿದ್ದರು. ದೆಹಲಿ ಮೂಲಕ 'ಯೂತ್ ಫಾರ್ ಜಸ್ಟೀಸ್‌'ನ ಸಹ ಸಂಸ್ಥಾಪಕರಲ್ಲಿ ಅವರೂ ಒಬ್ಬರು.

      ಭ್ರಷ್ಟಾಚಾರ ವಿರುದ್ಧ ಭಾರತ ಹೋರಾಟ

      ಭ್ರಷ್ಟಾಚಾರ ವಿರುದ್ಧ ಭಾರತ ಹೋರಾಟ

      ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ನಡೆದ ಇಂಡಿಯಾ ಅಗೈನ್ಸ್ಟ್ ಕರಪ್ಷನ್ (ಐಎಸಿ) ಚಳವಳಿಯಲ್ಲಿ ಕಪಿಲ್ ಮಿಶ್ರಾ ಗುರುತಿಸಿಕೊಂಡರು. ಈ ಆಂದೋಲನದ ವೇಳೆ ಅವರು 2010ರ ಕಾಮನ್‌ವೆಲ್ತ್ ಗೇಮ್ಸ್‌ನ ಪರಿಸರ ಸಂಬಂಧಿ ಸಂಗತಿಗಳು ಹಾಗೂ ಕಾರ್ಮಿಕ ಕಾನೂನುಗಳ ಉಲ್ಲಂಘನೆಯ ಕುರಿತು 'ಕಾಮನ್ ವರ್ಸಸ್ ವೆಲ್ತ್' ಎಂಬ ಕರಪತ್ರದಲ್ಲಿ ಉಲ್ಲೇಖಿಸುವ ಮೂಲಕ ಗಮನ ಸೆಳೆದಿದ್ದರು.

      ಐಎಸಿಯಿಂದಾಗಿ ರೂಪುಗೊಂಡ ಅಮ್ ಆದ್ಮಿ ಪಕ್ಷದಲ್ಲಿ ಕಪಿಲ್ ಮಿಶ್ರಾ ಸೇರಿಕೊಂಡರು. ಪಕ್ಷದ ಆಶಯಕ್ಕೆ ಅವರು ಸೂಕ್ತವಾಗಿಯೂ ಇದ್ದರು. ಯುವಕ, ವಿಚಾರಗಳನ್ನು ಸ್ಪಷ್ಟವಾಗಿ ಹೇಳುವ ತಾಕತ್ತು, ಹೋರಾಟದ ಆರಂಭದಿಂದಲೂ ಜತೆಗಿದ್ದು ಎಲ್ಲರೊಂದಿಗೂ ಒಡನಾಟ ಹೊಂದಿದ್ದು, ಸಾಮಾಜಿಕ ಕಾರ್ಯಕರ್ತ, ಸಾಮಾಜಿಕ ಮಾಧ್ಯಮಗಳಲ್ಲಿಯೂ ಸಕ್ರಿಯನಾಗಿದ್ದು ಮುಂತಾದವು ಅವರಿಗೆ ಪಕ್ಷ ಸ್ಥಾನಮಾನ ನೀಡಲು ಕಾರಣವಾಯಿತು.

      ಜಲಸಂಪನ್ಮೂಲ ಸಚಿವ

      ಜಲಸಂಪನ್ಮೂಲ ಸಚಿವ

      2013ರ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಎಎಪಿಯಿಂದ ಸ್ಪರ್ಧಿಸಿದ್ದ ಅವರು ಸೋಲು ಅನುಭವಿಸಿದ್ದರು. 2015ರ ಚುನಾವಣೆಯಲ್ಲಿ ಮತ್ತೆ ಎಎಪಿ ಟಿಕೆಟ್ ಪಡೆದು ಕಾರವಲ್ ನಗರದಲ್ಲಿ ಸ್ಪರ್ಧಿಸಿದ ಅವರು 44,000ಕ್ಕೂ ಅಧಿಕ ಮತಗಳಿಂದ ಜಯಗಳಿಸಿದರು.

      ಎಎಪಿ ದೆಹಲಿಯಲ್ಲಿ ಸರ್ಕಾರ ರಚಿಸಿದ ಸಂದರ್ಭದಲ್ಲಿ ಕಪಿಲ್ ಮಿಶ್ರಾ ಅವರಿಗೆ ಜಲ ಸಂಪನ್ಮೂಲದಂತಹ ಪ್ರಮುಖ ಖಾತೆ ದೊರಕಿತು. ರಾಜ್ಯ ವಿಧಾನಸಭೆಯಲ್ಲಿ ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ಕೆಲವರಲ್ಲಿ ಕಪಿಲ್ ಮಿಶ್ರಾ ಒಬ್ಬರು.

      ಕೇಜ್ರಿವಾಲ್ ವಿರುದ್ಧವೇ ಆರೋಪ

      ಕೇಜ್ರಿವಾಲ್ ವಿರುದ್ಧವೇ ಆರೋಪ

      ತಮ್ಮ ಅಧಿಕಾರಾವಧಿಯ ಆರಂಭದಲ್ಲಿ ಯುಮುನಾ ನದಿಯನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಅವರು ಮಹತ್ವ ನೀಡಿದರು. ಜತೆಗೆ ವಾಟರ್ ಟ್ಯಾಂಕರ್ ಹಗರಣದ ವಿಚಾರವಾಗಿ ದೆಹಲಿಯ ಹಿಂದಿನ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕಿ ಶೀಲಾ ದೀಕ್ಷಿತ್ ವಿರುದ್ಧ ವರದಿಯೊಂದನ್ನು ಸಹ ಸಿದ್ಧಪಡಿಸಿದ್ದರು.

      2017ರಲ್ಲಿ ಅವರ ಮತ್ತು ಕೇಜ್ರಿವಾಲ್ ಸಂಬಂಧ ಹಳಸತೊಡಗಿತು. ಮುಖ್ಯಮಂತ್ರಿ ಕೇಜ್ರಿವಾಲ್ 2 ಕೋಟಿ ರೂ ಲಂಚ ಪಡೆದಿದ್ದಾರೆ ಮತ್ತು 400 ಕೋಟಿ ರೂ.ನ ವಾಟರ್ ಟ್ಯಾಂಕರ್ ಹಗರಣದ ತನಿಖೆಯನ್ನು ಉದ್ದೇಶಪೂರ್ವಕವಾಗಿಯೇ ವಿಳಂಬ ಮಾಡುತ್ತಿದ್ದಾರೆ ಎಂದು ಬಹಿರಂಗವಾಗಿ ಆರೋಪಿಸಿದರು. ಲಂಚ ಪ್ರಕರಣದಲ್ಲಿ ಸಿಬಿಐ ಹಾಗೂ ಲೋಕಾಯುಕ್ತ ಸಂಸ್ಥೆಗಳು ಕೇಜ್ರಿವಾಲ್ ಅವರಿಗೆ ಕ್ಲೀನ್ ಚಿಟ್ ನೀಡಿತ್ತು.

      ಮುಖ್ಯಮಂತ್ರಿ ವಿರುದ್ಧ ಆರೋಪ ಮಾಡಿದ ಮಿಶ್ರಾ ಅವರನ್ನು ರಾಜ್ಯ ಸಂಪುಟದಿಂದ ಹಾಗೂ ಬಳಿಕ ಪಕ್ಷದ ಸದಸ್ಯತ್ವದಿಂದ ಕಿತ್ತು ಹಾಕಲಾಯಿತು.

      'ನನ್ನ ಪ್ರಧಾನಿ, ನನ್ನ ಹೆಮ್ಮೆ'

      'ನನ್ನ ಪ್ರಧಾನಿ, ನನ್ನ ಹೆಮ್ಮೆ'

      ಎಎಪಿಯಿಂದ ಹೊರಹಾಕಿದ ಬಳಿಕ ಕಪಿಲ್ ಮಿಶ್ರಾ ಬೇರೆ ರಾಜಕೀಯ ಪಕ್ಷ ಸೇರಿಕೊಂಡಿರಲಿಲ್ಲ. ಆದರೆ ಬಿಜೆಪಿಯ ಪರ ಒಲವು ಪ್ರದರ್ಶಿಸತೊಡಗಿದರು. ಎರಡು ವರ್ಷಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರನ್ನು 'ಐಎಸ್‌ಐ ಏಜೆಂಟ್' ಎಂದು ಟೀಕಿಸಿದ್ದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದ್ದ ಪ್ರಧಾನಿ ಮೋದಿ ವಿರುದ್ಧದ ನಕಾರಾತ್ಮಕ ಪ್ರಚಾರವನ್ನು ಎದುರಿಸಲು 'ನನ್ನ ಪ್ರಧಾನಿ, ನನ್ನ ಹೆಮ್ಮೆ' ಎಂಬ ಆಂದೋಲನ ಆರಂಭಿಸಿದರು.

      2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ನಡೆಸಿದ್ದಕ್ಕಾಗಿ ಅವರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಎಂಎಲ್‌ಎ ಸ್ಥಾನದಿಂದ ಅನರ್ಹಗೊಳಿಸಲಾಯಿತು. 2019ರ ಆಗಸ್ಟ್‌ನಲ್ಲಿ ಅವರು ಬಿಜೆಪಿ ಸೇರಿಕೊಂಡರು. ಅಲ್ಲಿಂದಲೂ ಅವರು ಸತತವಾಗಿ ವಿವಾದಾತ್ಮಕ ಹೇಳಿಕೆಗಳ ಮೂಲಕ ಸದಾ ಸುದ್ದಿಯಲ್ಲಿದ್ದಾರೆ.

      ದೇಶದ್ರೋಹಿಗಳಿಗೆ...

      ದೇಶದ್ರೋಹಿಗಳಿಗೆ...

      ಕಳೆದ ವರ್ಷದ ಡಿಸೆಂಬರ್‌ನಲ್ಲಿ ದೆಹಲಿಯಲ್ಲಿ ಸಿಎಎ ಪರ ಪ್ರಚಾರ ನಡೆಸಿದ ಅವರು, 'ದೇಶದ್ರೋಹಗಳಿಗೆ ಗುಂಡಿಕ್ಕಿ' ಎನ್ನುವ ಘೋಷಣೆ ಕೂಗಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ದೆಹಲಿ ಬಿಜೆಪಿ ಘಟಕ ಮಿಶ್ರಾ ಅವರ ಹೇಳಿಕೆಯಿಂದ ಅಂತರ ಕಾಪಾಡಿಕೊಂಡಿದ್ದರೂ, ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್, ದೆಹಲಿ ಚುನಾವಣಾ ಪ್ರಚಾರದ ವೇಳೆ ಈ ಘೋಷಣೆಯನ್ನು ಕೂಗಿದ್ದು ಮತ್ತಷ್ಟು ವಿವಾದಕ್ಕೆ ಕಾರಣವಾಗಿತ್ತು.

      ಜನವರಿ 25ರಂದು ದೆಹಲಿ ವಿಧಾನಸಭೆ ಚುನಾವಣೆಯ ಅಭ್ಯರ್ಥಿಯಾಗಿದ್ದ ಕಪಿಲ್ ಅವರನ್ನು ಕೋಮು ಗಲಭೆ ಪ್ರಚೋದನೆಯ ಕಾರಣಕ್ಕಾಗಿ ಚುನಾವಣಾ ಆಯೋಗ ಪ್ರಚಾರದಿಂದ 48 ಗಂಟೆಗಳ ಕಾಲ ನಿರ್ಬಂಧಿಸಿತ್ತು.

      'ಪಾಕಿಸ್ತಾನವು ಶಹೀನ್ ಬಾಗ್‌ಗೆ ಪ್ರವೇಶಿಸಿದೆ. ನಗರದಲ್ಲಿ ಕಿರು ಪಾಕಿಸ್ತಾನವನ್ನು ಸೃಷ್ಟಿಸಲಾಗುತ್ತಿದೆ. ಶಹೀನ್ ಬಾಗ್, ಚಾಂದ್ ಬಾಗ್ ಮತ್ತು ಇಂದ್ರಲೋಕ್‌ನಲ್ಲಿ ನೆಲದ ಕಾನೂನನ್ನು ಅನುಸರಿಸುತ್ತಿಲ್ಲ. ದೆಹಲಿ ರಸ್ತೆಗಳನ್ನು ಪಾಕಿಸ್ತಾನದ ದಂಗೆಕೋರರು ಆಕ್ರಮಿಸುತ್ತಿದ್ದಾರೆ' ಎಂದು ಕಪಿಲ್ ಟ್ವೀಟ್ ಮಾಡಿದ್ದರು.

      ಮುಸ್ಲಿಂ ಲೀಗ್ ಎಂದು ಬದಲಿಸಬೇಕು

      ಮುಸ್ಲಿಂ ಲೀಗ್ ಎಂದು ಬದಲಿಸಬೇಕು

      ಮತ್ತೊಂದು ಟ್ವೀಟ್‌ನಲ್ಲಿ ಅವರು, 'ಭಾರತ vs ಪಾಕಿಸ್ತಾನ. ಫೆ. 8ರಂದು ದೆಹಲಿ ರಸ್ತೆಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಸ್ಪರ್ಧೆ ನಡೆಯಲಿದೆ' ಎಂದು ಹೇಳಿದ್ದರು. ಈ ಹೇಳಿಕೆಗಾಗಿ ಅವರ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.

      ಚುನಾವಣೆ ಸಂದರ್ಭದಲ್ಲಿ ಎಎಪಿಯ ಹೆಸರನ್ನು ಮುಸ್ಲಿಂ ಲೀಗ್ ಎಂದು ಬದಲಿಸಬೇಕು ಎನ್ನುವ ಮೂಲಕ ಮತ್ತೊಂದು ವಿವಾದದ ಸೃಷ್ಟಿಸಿದ್ದರು. ಮಾಡೆಲ್ ಟೌನ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಫೆ. 8ರಂದು ನಡೆದ ಚುನಾವಣೆಯಲ್ಲಿ 11,000ಕ್ಕೂ ಅಧಿಕ ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು.

      ಬಿಜೆಪಿ ನಾಯಕರಿಂದಲೇ ವಿರೋಧ

      ಬಿಜೆಪಿ ನಾಯಕರಿಂದಲೇ ವಿರೋಧ

      ಕಪಿಲ್ ಮಿಶ್ರಾ ಅವರ ವಿವಾದಾತ್ಮಕ ಹೇಳಿಕೆಗಳು ಬಿಜೆಪಿಗೆ ಮುಜುಗರ ಉಂಟುಮಾಡುತ್ತಿವೆ. ಕಪಿಲ್ ಮಿಶ್ರಾ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂಬ ಒತ್ತಾಯಗಳು ಬಿಜೆಪಿ ಒಳಗಿನಿಂದಲೂ ಕೇಳಿಬಂದಿದೆ. ಹಿಂಸಾಚಾರಕ್ಕೆ ಕಾರಣವಾಗುವಂತೆ ಭಾವನೆಗಳನ್ನು ಕೆರಳಿಸುವ ಯಾವುದೇ ಪಕ್ಷದ ಮುಖಂಡರಾದರೂ ಕ್ರಮ ತೆಗೆದುಕೊಳ್ಳಬೇಕು ಎಂದು ಪೂರ್ವ ದೆಹಲಿ ಬಿಜೆಪಿ ಸಂಸದ ಗೌತಮ್ ಗಂಭೀರ್ ಮಂಗಳವಾರ ಹೇಳಿದ್ದಾರೆ.


      ದ್ವೇಷ ಹೇಳಿಕೆಗಳನ್ನು ನೀಡುವ ರಾಜಕಾರಣಿಗಳನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧ ಹೇರಬೇಕು ಎಂದು ದೆಹಲಿ ಬಿಜೆಪಿ ಘಟಕದ ಮುಖ್ಯಸ್ಥ ಮನೋಜ್ ತಿವಾರಿ ಕೂಡ ಹೇಳಿದ್ದಾರೆ.

      ಅವರನ್ನು ಉಗ್ರ ಎನ್ನದವರು ನನಗೆ ಹೇಳುತ್ತಾರೆ

      ಅವರನ್ನು ಉಗ್ರ ಎನ್ನದವರು ನನಗೆ ಹೇಳುತ್ತಾರೆ

      ಈ ನಡುವೆ ಹಿಂಸಾಚಾರಕ್ಕೆ ತಾವೇ ಕಾರಣ ಎಂಬ ಆರೋಪದ ವಿರುದ್ಧ ಮಿಶ್ರಾ ಮತ್ತೆ ಕಿಡಿಕಾರಿದ್ದಾರೆ. 'ಬುರ್ಹಾನ್ ವಾನಿ ಮತ್ತು ಅಫ್ಜಲ್ ಗುರುನನ್ನು ಭಯೋತ್ಪಾದಕ ಎಂದು ಪರಿಗಣಿಸದವರು ಕಪಿಲ್ ಮಿಶ್ರಾನನ್ನು ಭಯೋತ್ಪಾದಕ ಎಂದು ಕರೆಯುತ್ತಿದ್ದಾರೆ. ಯಾಕೂಬ್ ಮಲಿಕ್, ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್‌ನನ್ನು ಬಿಡುಗಡೆ ಮಾಡುವ ಸಲುವಾಗಿ ಕೋರ್ಟ್‌ಗೆ ಹೋದವರು ಕಪಿಲ್ ಮಿಶ್ರಾನ ಬಂಧನಕ್ಕೆ ಒತ್ತಾಯಿಸುತ್ತಿದ್ದಾರೆ. ಜೈ ಶ್ರೀರಾಮ್' ಎಂದು ಟ್ವೀಟ್ ಮಾಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+