ದೀದಿಯನ್ನು ಹಣಿಯಲು ಮೋದಿ ಕೈ ಬಲಪಡಿಸುತ್ತಿದೆಯೇ ಎಡ ಪಕ್ಷ?
ಕೋಲ್ಕತ್ತಾ (ಪಶ್ಚಿಮ ಬಂಗಾಲ), ಮೇ 9: ಶತ್ರುವಿನ ಶತ್ರು ಮಿತ್ರ ಎಂಬುದು ರಾಜಕಾರಣದ ಟೆಕ್ಸ್ತ್ ಬುಕ್ ನ ಹಳೇ ಪಾಠ. ಪಶ್ಚಿಮ ಬಂಗಾಲದಲ್ಲಿ ಈಗ ಇದು ಅಕ್ಷರಶಃ ಜಾರಿಗೆ ಬರುತ್ತಿದೆ. ತನ್ನ ಬೇರನ್ನು ಹರಡಿ, ಹಬ್ಬಿ ಬೆಳೆಯಲು ಯತ್ನಿಸುತ್ತಿರುವ ಬಿಜೆಪಿಗೆ ತಳ ಮಟ್ಟದಲ್ಲಿ ಸದ್ದಿಲ್ಲದೆ ಸಿಪಿಎಂ ನೆರವಾಗುತ್ತಿದೆ ಎಂಬುದು ರಾಜಕೀಯ ತಜ್ಞರ ಅಭಿಪ್ರಾಯ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಸೈದ್ಧಾಂತಿಕವಾಗಿ ಉತ್ತರ ಧ್ರುವ- ದಕ್ಷಿಣ ಧ್ರುವ ಎಂಬಂತಿರುವ ಬಿಜೆಪಿ ಹಾಗೂ ಸಿಪಿಎಂ ಎರಡಕ್ಕೂ ಇರುವ ಸಮಾನ ಶತ್ರು ಅಂದರೆ ಅದು ತೃಣಮೂಲ ಕಾಂಗ್ರೆಸ್- ಮಮತಾ ಬ್ಯಾನರ್ಜಿ. ಪಶ್ಚಿಮ ಬಂಗಾಲದಲ್ಲಿ ಬಿಜೆಪಿಗೆ ಅಷ್ಟೇನೂ ಸಂಘಟನಾ ಶಕ್ತಿ ಇಲ್ಲ. ಟಿಎಂಸಿ, ಕಾಂಗ್ರೆಸ್ ಅಥವಾ ಎಡ ಪಕ್ಷಗಳಿಗೆ ಹೋಲಿಸಿದರೆ ಬಿಜೆಪಿಯ ಬಲ ತೀರಾ ಕಡಿಮೆ.
ವಿಚಿತ್ರ ಏನು ಗೊತ್ತಾ? ಬಿಜೆಪಿಯಿಂದ ಚುನಾವಣೆಯ ಜವಾಬ್ದಾರಿ ಹೊತ್ತಿದ್ದವರು ಹೇಳುವ ಪ್ರಕಾರ ಅನಿರೀಕ್ಷಿತವಾದ ನೆರವು ಒದಗಿ ಬಂದಿದೆ. ಅದು ಸಿಪಿಎಂ ತಳ ಮಟ್ಟದ ಕಾರ್ಯಕರ್ತರು. ಈ ಕಾರ್ಯಕರ್ತರು ಮಮತಾ ಬ್ಯಾನರ್ಜಿ ಆಡಳಿತಾವಧಿಯಲ್ಲಿ ಹಿಂಸೆ ಅನುಭವಿಸುತ್ತಿರುವವರು. ಅವರ ಗುರಿ ಇರುವುದು ಮಮತಾ ಬ್ಯಾನರ್ಜಿಗೆ ಒಂದು ಸರಿಯಾದ ಹೊಡೆತ ನೀಡಬೇಕು ಎನ್ನುವುದು. ಅದಕ್ಕಾಗಿ ಪ.ಬಂಗಾಲದಲ್ಲಿ ವ್ಯಾಪಿಸುತ್ತಿರುವ ಕೇಸರಿಗೆ ಬೆಂಬಲ ನೀಡಲು ಸಿದ್ಧವಾಗಿದೆ.
ಟಿಎಂಸಿ ಕಾರ್ಯಕರ್ತರಿಂದ ಆತಂಕ
ಮೂವತ್ನಾಲ್ಕು ವರ್ಷಗಳ ಕಾಲ ಪಶ್ಚಿಮ ಬಂಗಾಲದಲ್ಲಿ ಎಡ ಪಕ್ಷಗಳ ಆಡಳಿತ ಇತ್ತು. ಆದರೆ ಈಗ ಬೂತ್ ಮತ್ತು ವಾರ್ಡ್ ಮಟ್ಟದಲ್ಲಿ ಟಿಎಂಸಿ ಕಾರ್ಯಕರ್ತರಿಗೆ ಸಿಪಿಎಂನವರು ಆತಂಕ ಎದುರಿಸುವಂತಾಗಿದೆ. ಆ ಕಾರಣಕ್ಕೆ ಬಿಜೆಪಿಗೆ ಮತದಾನ ಕೇಂದ್ರದಲ್ಲಿ ಸಹಾಯ ಮಾಡಲು ಸಿಪಿಎಂ ಕಾರ್ಯಕರ್ತರು ಮುಂದಾಗಿದ್ದಾರೆ. ವಾರ್ಡ್ ಮಟ್ಟದಲ್ಲಿ ಈಗಲೂ ಎಲ್ಲೆಲ್ಲಿ ಎಡ ಪಕ್ಷಗಳ ಹಿಡಿತ ಇದೆಯೋ ಅಲ್ಲೆಲ್ಲ ಸದ್ದಿಲ್ಲದೆ ಸಹಕರಿಸುತ್ತಿದೆ ಸಿಪಿಎಂ. ಕೋಲ್ಕತ್ತಾ ಉತ್ತರ ಕ್ಷೇತ್ರದಲ್ಲಿ ಟಿಎಂಸಿಯ ಸಂಸದರಾದ ಸುದೀಪ್ ಬಂಡೋಪಾಧ್ಯಾಯ್ ಅವರನ್ನು ಸೋಲಿಸಲು ಸಿಪಿಎಂನಿಂದ ನೆರವು ನೀಡುವ ಪ್ರಸ್ತಾವ ಇಟ್ಟಿದ್ದನ್ನು ಬಿಜೆಪಿ ಸಹ ಒಪ್ಪಿತು. ಇದೀಗ ಒಟ್ಟಾಗಿ ಮನೆಮನೆ ಸುತ್ತಾಡಿ ಪ್ರಚಾರ ಮಾಡಲಾಗಿದೆ. ಎಲ್ಲೆಲ್ಲಿ ಬೂತ್ ಮಟ್ಟದ ಕಾರ್ಯಕರ್ತರು ಬಿಜೆಪಿಗೆ ಇಲ್ಲವೋ ಅಲ್ಲೆಲ್ಲ ಸಿಪಿಎಂ ನೆರವು ನೀಡಿದೆ. ಇಲ್ಲಿ ಬಂಡೋಪಾಧ್ಯಾಯ ವಿರುದ್ಧ ರಾಹುಲ್ ಸಿನ್ಹಾ ಬಿಜೆಪಿಯ ಅಭ್ಯರ್ಥಿಯಾಗಿದ್ದಾರೆ.
ತ್ರಿಪುರಾದಲ್ಲಿನ ಉದಾಹರಣೆಯನ್ನು ಗಮನಿಸಿ
ಇದು ಒಂದು ಪ್ರಕರಣವಲ್ಲ. ಬಿಜೆಪಿಯ ಹಿರಿಯ ಪದಾಧಿಕಾರಿಗಳ ಪ್ರಕಾರ, ತ್ರಿಪುರಾದಲ್ಲಿ ಮಾಣೆಕ್ ಸರ್ಕಾರ್ ನೇತೃತ್ವದ ಎಡ ಸರಕಾರವನ್ನು ಬಿಜೆಪಿ ಕೆಡವಿದ್ದು ಸಹ ಇಂಥದ್ದೇ ಕಾರ್ಯಾಚರಣೆ ಊಲಕ. ತಳಮಟ್ಟದಲ್ಲಿ ಆಗಿದ್ದೇನು ಎಂಬುದನ್ನು ಸ್ವತಃ ಸರ್ಕಾರ್ ಬಹಿರಂಗ ಪಡಿಸಿದ್ದಾರೆ. ಸಿಪಿಎಂ ಪಾಲಿಟ್ ಬ್ಯುರೋ ಈಗಾಗಲೇ ಸಂದೇಶ ರವಾನಿಸಿದೆ. ತೃಣಮೂಲ ಕಾಂಗ್ರೆಸ್ ಅನ್ನು ಹಣಿಯುವ ಸಲುವಾಗಿ ಬಿಜೆಪಿಯನ್ನು ಆರಿಸಿಕೊಳ್ಳುವ ತಪ್ಪು ಮಾಡಬೇಡಿ. ತ್ರಿಪುರಾ ಕಡೆ ನೋಡಿ. ಕೇವಲ ಹದಿನಾಲ್ಕು ತಿಂಗಳಲ್ಲಿ ತ್ರಿಪುರಾದಲ್ಲಿ ಅವರೇನು ಮಾಡಿದ್ದಾರೆ? ಅದು ಟಿಎಂಸಿಗಿಂತ ಭಯಾನಕವಾಗಿದೆ. ಅವರನ್ನು (ಬಿಜೆಪಿ) ಒಳ ಬಿಟ್ಟುಕೊಳ್ಳಬೇಡಿ. ಕ್ಷಮಿಸಲಾರದಂಥ, ಆತ್ಮಹತ್ಯಾಕಾರಿ ನಿರ್ಧಾರ ಇದಾಗಲಿದೆ ಎಂದು ತಿಳಿಸಲಾಗಿದೆ.
ಪದೇಪದೇ ಎಚ್ಚರಿಸುತ್ತಿರುವ ಮಮತಾ ಬ್ಯಾನರ್ಜಿ
ಸಿಪಿಎಂನಿಂದ ಬಿಜೆಪಿಗೆ ನೆರವು ಆಗುವುದನ್ನು ಗಮನಿಸಿರುವ ಬ್ಯಾನರ್ಜಿ, ಸಿಪಿಎಂ ಕಾರ್ಯಕರ್ತರು ಮತ್ತೆ ಅದನ್ನೇ ಮಾಡುತ್ತಿದ್ದಾರೆ. ಅವರು ನಮ್ಮ ವಿರೋಧಿಗಳಿಗೆ ನೆರವಾಗುತ್ತಿದ್ದಾರೆ. ಎಚ್ಚರವಾಗಿರಿ ಮತ್ತು ಹುಶಾರಾಗಿರಿ ಎಂದು ತಮ್ಮಾ ಚುನಾವಣಾ ಪ್ರಚಾರದಲ್ಲಿ ಮಮತಾ ಬ್ಯಾನರ್ಜಿ ಪದೇಪದೇ ಹೇಳಿದ್ದಾರೆ.
2019ರಲ್ಲಿ ಹಾಫ್, 2021ರಲ್ಲಿ ಸಾಫ್
ಈ ಬೆಳವಣಿಗೆಗಳು ಸಿಪಿಎಂಗಂತೂ ಕೆಟ್ಟ ಬೆಳವಣಿಗೆ. ಈಗಾಗಲೇ ಅ ಪಕ್ಷವು ತೀರಾ ಗಂಭೀರ ಸ್ಥಿತಿಯಲ್ಲಿದೆ. ಇರುವ ಅಲ್ಪಸ್ವಲ್ಪ ಮತ ಬ್ಯಾಂಕ್ ಅನ್ನು ಕೂಡ ಬಿಜೆಪಿಗೆ ಸಹಾಯ ಮಾಡುವ ಮೂಲಕ ಕಳೆದುಕೊಂಡು ಬಿಡಬಹುದು ಎಂಬ ಚಿಂತೆ ಅದು. ಸದ್ಯಕ್ಕಂತೂ ಸಿಪಿಎಂನಿಂದ ಹೊಸ ಘೋಷ ವಾಕ್ಯ ತಯಾರು ಮಾಡಲಾಗಿದೆ. 'ಉನಿಶೇ ಹಾಫ್, ಎಕುಶೇ ಸಾಫ್' (2019ರಲ್ಲಿ ಹಾಫ್, 2021ರಲ್ಲಿ ಸಾಫ್) ಎಂಬುದು ಆ ಘೋಷ ವಾಕ್ಯ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿಯನ್ನು ಪ.ಬಂಗಾಲದಲ್ಲಿ ಕೆಡವೋದು ಗೇಮ್ ಪ್ಲಾನ್.