ಅರ್ನಬ್ ಗೋಸ್ವಾಮಿ ಬಂಧನವಾಗಿರುವುದು ಯಾವ ಪ್ರಕರಣದಲ್ಲಿ?: ಇಲ್ಲಿದೆ ವಿವರ
ಮುಂಬೈ, ನವೆಂಬರ್ 4: ರಿಪಬ್ಲಿಕ್ ಟಿವಿಯ ಮುಖ್ಯಸ್ಥ, ಪತ್ರಕರ್ತ ಅರ್ನಬ್ ಗೋಸ್ವಾಮಿ ಅವರನ್ನು ಮುಂಬೈ ಪೊಲೀಸರು ಬುಧವಾರ ಅವರ ನಿವಾಸದಲ್ಲಿ ಬಂಧಿಸಿದ್ದಾರೆ. ಈ ಘಟನೆ ತೀವ್ರ ವಿವಾದ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.
ಮುಂಬೈ ಪೊಲೀಸರ ವಿರುದ್ಧ ವರದಿಗಳನ್ನು ಮಾಡಿ ಅವರಿಗೆ ಅವಮಾನಿಸಿರುವುದು, ನಕಲಿ ಟಿಆರ್ಪಿ ಹಗರಣ, ಬಾಲಿವುಡ್ ಮಂದಿಯ ಅವಹೇಳನೆ ಸೇರಿದಂತೆ ಅನೇಕ ಪ್ರಕರಣಗಳು ಇತ್ತೀಚೆಗೆ ಅರ್ನಬ್ ಗೋಸ್ವಾಮಿ ವಿರುದ್ಧ ದಾಖಲಾಗಿದ್ದವು. ಅವುಗಳಲ್ಲಿ ಕೆಲವು ಪ್ರಕರಣಗಳು ಈಗ ನ್ಯಾಯಾಲಯದಲ್ಲಿದೆ. ಆದರೆ ಅರ್ನಬ್ ಅವರನ್ನು ಈ ಯಾವ ಪ್ರಕರಣಗಳಲ್ಲಿಯೂ ಬಂಧಿಸಿಲ್ಲ. ಬದಲಾಗಿ ಅವರ ಬಂಧನವಾಗಿರುವುದು ಎರಡು ವರ್ಷಗಳ ಹಿಂದೆ ಪೊಲೀಸರೇ ಕಡತವನ್ನು ಮುಚ್ಚಿದ್ದ ಪ್ರಕರಣದಲ್ಲಿ.
2018ರಲ್ಲಿ ನಡೆದಿದ್ದ ಪ್ರಕರಣವನ್ನು ಮುಂಬೈ ಪೊಲೀಸರು ಪುನಃ ತೆರೆದಿದ್ದಾರೆ. 2018ರಲ್ಲಿ ಅರ್ನಬ್ ಗೋಸ್ವಾಮಿ ಮತ್ತು ಇತರೆ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಈ ಸಂಬಂಧ ಮಹಾರಾಷ್ಟ್ರ ಸಿಐಡಿ ಪೊಲೀಸರು ಅರ್ನಬ್ ಗೋಸ್ವಾಮಿ ಅವರ ಮನೆಗೆ ತೆರಳಿ ಬಂಧಿಸಿದ್ದಾರೆ.
ಈ ಪ್ರಕರಣವನ್ನು ಸಿಐಡಿ ಪೊಲೀಸರು ಮರು ವಿಚಾರಣೆ ನಡೆಸಲಿದ್ದಾರೆ ಎಂದು ಮೇ ತಿಂಗಳಲ್ಲಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ತಿಳಿಸಿದ್ದರು. ರಾಯಗಡ ಪೊಲೀಸರು ಕಳೆದ ವರ್ಷ ಈ ಪ್ರಕರಣವನ್ನು ಅಂತ್ಯಗೊಳಿಸಿದ್ದರು. ಮುಂದೆ ಓದಿ.

ಆತ್ಮಹತ್ಯೆಗೆ ಬಾಕಿ ಹಣ ಕಾರಣ
ಒಳಾಂಗಣ ವಿನ್ಯಾಸಗಾರ ಅನ್ವಯ್ ನಾಯಕ್ ಮತ್ತು ಅವರ ತಾಯಿ ಕುಮುದ ನಾಯಕ್ ಅವರು 2018ರ ಮೇ ತಿಂಗಳಲ್ಲಿ ಅಲಿಬಾಗ್ನ ತಮ್ಮ ನಿವಾಸದಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ರಿಪಬ್ಲಿಕ್ ಟಿವಿ ತನ್ನ ಕೆಲಸಕ್ಕೆ ಹಣ ಪಾವತಿಸದೆ ಬಾಕಿ ಉಳಿಸಿಕೊಂಡಿದ್ದೇ ತಂದೆ ಹಾಗೂ ಅಜ್ಜಿಯ ಆತ್ಮಹತ್ಯೆಗೆ ಕಾರಣ ಎಂದು ಅನ್ವಯ್ ಅವರ ಮಗಳು ಆದ್ನ್ಯಾ ನಾಯಕ್ ಆರೋಪಿಸಿದ್ದರು.

ದುರುದ್ದೇಶದ ಪ್ರಚಾರ ಆರೋಪ
ಈ ಆರೋಪವನ್ನು ರಿಪಬ್ಲಿಕ್ ಟಿವಿ ನಿರಾಕರಿಸಿತ್ತು. ನಾಯಕ್ ಅವರ ಸಾವಿನ ದುರಂತ ಘಟನೆಯನ್ನು ಬಳಸಿಕೊಂಡು ಸುಳ್ಳು ಮತ್ತು ದುರುದ್ದೇಶದ ಹೇಳಿಕೆಗಳನ್ನು ನೀಡುವ ಮೂಲಕ ಕೆಲವು ಸ್ವ ಹಿತಾಸಕ್ತಿಕ ಗುಂಪುಗಳು ತನ್ನ ವಿರುದ್ಧ ಅಪಪ್ರಚಾರ ಮಾಡುತ್ತಿವೆ ಎಂದು ಅದು ಆರೋಪಿಸಿತ್ತು.

ಡೆತ್ ನೋಟ್ನಲ್ಲಿ ಬರೆದಿದ್ದ ಅನ್ವಯ್
ಅರ್ನಬ್ ಗೋಸ್ವಾಮಿ, ಫೆರೋಝ್ ಶೇಖ್ ಮತ್ತು ನಿತೀಶ್ ಸರ್ದಾ ಅವರು ತಮಗೆ ಬಾಕಿ ಉಳಿದಿದ್ದ 5.40 ಕೋಟಿ ರೂ. ಮೊತ್ತವನ್ನು ಪಾವತಿಸಿಲ್ಲ ಎಂದು ಕಾಂಕ್ರೋಡ್ ಡಿಸೈನ್ ಪ್ರೈ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಅನ್ವಯ್ ನಾಯಕ್ ಆತ್ಮಹತ್ಯಾ ಪತ್ರದಲ್ಲಿ ಬರೆದಿದ್ದರು. ಅರ್ನಬ್ ಅವರ ಎಆರ್ಜಿ ಔಟ್ಲಿಯರ್ ಕಂಪೆನಿ 83 ಲಕ್ಷ ಮೊತ್ತ ಬಾಕಿ ಉಳಿಸಿಕೊಂಡಿದೆ ಎಂದು ಆರೋಪಿಸಿದ್ದರು. ಡೆತ್ ನೋಟ್ನಲ್ಲಿ ಅನ್ವಯ್ ಅವರ ಸಹಿ ಇತ್ತು.

ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ
ಅನ್ವಯ್ ಅವರ ಪತ್ನಿ ಅಕ್ಷತಾ ಕೂಡ ಅರ್ನಬ್ ಮತ್ತು ಸ್ಕೈಮೀಡಿಯಾದ ಫೆರೋಜ್ ಖಾನ್ ಹಾಗೂ ಸ್ಮಾರ್ಟ್ ವರ್ಕ್ಸ್ ಕಂಪೆನಿಯ ನಿತೀಶ್ ಸರ್ದಾ ವಿರುದ್ಧ ದೂರು ಸಲ್ಲಿಸಿದ್ದರು. ಈ ಸಂಬಂಧ ಅರ್ನಬ್ ಮತ್ತು ಮೂವರ ವಿರುದ್ಧ ಐಪಿಸಿ ಸೆಕ್ಷನ್ 306ರ ಅಡಿ (ಆತ್ಮಹತ್ಯೆಗೆ ಕುಮ್ಮಕ್ಕು) ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಸಾಲದಲ್ಲಿ ಮುಳುಗಿದ್ದ ಕುಟುಂಬ
ಅನ್ವಯ್ ಮತ್ತು ಕುಮುದ ನಾಯಕ್ ಅವರು ಸಹ ನಿರ್ದೇಶಕರಾಗಿರುವ ಕಾಂಕ್ರೋಡ್ ಡಿಸೈನ್ಸ್ ಕಂಪೆನಿಯು ಪೀಠೋಪಕರಣ ತಯಾರಿಕೆ ಮಾಡುತ್ತಿತ್ತು. ಇದು 2016-17ರಲ್ಲಿ 4.45 ಕೋಟಿ ರೂ ನಷ್ಟ ಎದುರಿಸಿತ್ತು. ಜತೆಗೆ ವಿವಿಧ ಸಾಲಗಾರರಿಂದ 19.6ಕೋಟಿ ಸಾಲ ಪಡೆದಿದ್ದು, ತಮ್ಮ ಬ್ಯಾಂಕ್ ಖಾತೆಗಳಿಂದ 10 ಕೋಟಿ ರೂಗಳಿಗೂ ಅಧಿಕ ಓವರ್ ಡ್ರಾಫ್ಟ್ ತೆಗೆದುಕೊಂಡಿದ್ದರು ಎಂದು ಕಂಪೆನಿ ನೋಂದಣಿ ದಾಖಲೆಗಳು ತಿಳಿಸಿದ್ದವು.

ಪ್ರಕರಣ ಮುಕ್ತಾಯಗೊಳಿಸಿದ್ದ ಪೊಲೀಸರು
ಅನ್ವಯ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಅದಕ್ಕೂ ಮೊದಲು ತಮ್ಮ ತಾಯಿ ಕುಮುದ ಅವರ ಕತ್ತು ಹಿಸುಕಿ ಸಾಯಿಸಿದ್ದರು ಎಂದು ತನಿಖೆ ನಡೆಸಿದ ಪೊಲೀಸರು ಶಂಕಿಸಿದ್ದರು. ಆದರೆ ರಾಯಗಡ ಪೊಲೀಸರು ಈ ಪ್ರಕರಣವನ್ನು 2019ರ ಏಪ್ರಿಲ್ನಲ್ಲಿ ಅಂತ್ಯಗೊಳಿಸಿ ಅಲಿಬಾಗ್ನ ರಾಯಗಡದ ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ಅಂತಿಮ ವರದಿ ಸಲ್ಲಿಸಿದ್ದರು.

ಮರು ತನಿಖೆಗೆ ಕೋರಿದ್ದ ಮಗಳು
2020ರ ಮೇ ತಿಂಗಳಿನಲ್ಲಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಅವರನ್ನು ಭೇಟಿಮಾಡಿದ್ದ ಅನ್ವಯ್ ಮಗಳು ಆದ್ನ್ಯಾ, ಪ್ರಕರಣವನ್ನು ಮರು ತನಿಖೆ ನಡೆಸುವಂತೆ ಕೋರಿದ್ದರು. ಅಲಿಬಾಗ್ ಪೊಲೀಸರು ಸರಿಯಾಗಿ ತನಿಖೆ ನಡೆಸಿಲ್ಲ ಎಂದು ಅವರು ಆರೋಪಿಸಿದ್ದರು. ಹೀಗಾಗಿ ಈ ಪ್ರಕರಣವನ್ನು ಪುನಃ ತೆರೆದು ಮಹಾರಾಷ್ಟ್ರ ಸಿಐಡಿಗೆ ಒಪ್ಪಿಸಲಾಗಿತ್ತು.












Click it and Unblock the Notifications