ಇಡೀ ಜಗತ್ತಿಗೆ ಭಾರತ ಹೇಳಿದ Non-Military pre-emptive action, ಹಾಗಂದರೇನು?
ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಮಂಗಳವಾರ ಮಾಧ್ಯಮದವರ ಜತೆ ಮಾತನಾಡುತ್ತಾ, ಭಾರತೀಯ ವಾಯು ಸೇನೆ ನಡೆಸಿರುವುದು Non-Military, pre-emptive action ಎಂದು ಹೇಳಿದ್ದಾರೆ. ಇಡೀ ಜಗತ್ತಿಗೆ ಭಾರತ ಹೇಳಲೇಬೇಕಿದ್ದ ವಿಚಾರವನ್ನು ಈ ಎರಡು ತಾಂತ್ರಿಕ ಪದಗಳನ್ನು ಬಳಸಿ, ಅವರು ಹೇಳಿ ಮುಗಿಸಿದ್ದಾರೆ.
ಇದರರ್ಥ ಏನು ಅಂದರೆ, ಮತ್ತೊಂದು ದೇಶದ ಸೇನೆಗೆ ಸಂಬಂಧಿಸಿದ ಯಾವುದೇ ನೆಲೆ, ಶಸ್ತ್ರಾಸ್ತ್ರ ಅಥವಾ ನಾಗರಿಕರಿಗೆ ಹಾನಿ ಮಾಡದೆ, ನಮ್ಮ ದೇಶಕ್ಕೆ ಅಪಾಯಕಾರಿ ಆಗಿದ್ದವರನ್ನು ಕೊಲ್ಲಲಾಗಿದೆ ಎಂದು ತಿಳಿಸುವುದಕ್ಕೆ ಇವೆರಡು ತಾಂತ್ರಿಕ ಪದಗಳನ್ನು ಬಳಸಲಾಗುತ್ತದೆ. ಈಗಿನ ದಾಳಿ ಮಾಡಿರುವುದು ಹಾಗೆಯೇ.
'ಮಸೂದ್ ಅಜರ್ ಭಾವಮೈದುನ ನಿಗಾದಲ್ಲಿದ್ದ ಜೈಶ್ ಕ್ಯಾಂಪ್ ಉಡೀಸ್'
ಬೆಟ್ಟ-ಗುಡ್ಡಗಳ ಪ್ರದೇಶಗಳಲ್ಲಿ, ದಟ್ಟ ಕಾಡಿನ ಮಧ್ಯೆ ನಡೆಯುತ್ತಿದ್ದ ಉಗ್ರಗಾಮಿಗಳ ತರಬೇತಿ ಶಿಬಿರಗಳ ಮೇಲೆ ವಾಯು ದಾಳಿ ನಡೆಸಲಾಗಿದೆ. ಈ ವೇಳೆ ಪಾಕಿಸ್ತಾನ ಸೇನೆಗೆ ಸಂಬಂಧಿಸಿದಂತೆ ಯಾವುದೇ ಹಾನಿ ಆಗಿಲ್ಲ. ಅಷ್ಟೇ ಅಲ್ಲ, ಸಾಮಾನ್ಯ ನಾಗರಿಕರಿಗೂ ಏನೂ ತೊಂದರೆ ಆಗಿಲ್ಲ.
ಇವೆರಡರ ಪೈಕಿ ಏನೇ ಆಗಿದ್ದರೂ ಪಾಕಿಸ್ತಾನದ ಸಾವಭೌಮತ್ವಕ್ಕೆ ಧಕ್ಕೆ ಮಾಡಿದಂತೆ ಆಗುತ್ತಿತ್ತು. ಇದರ ಜತೆಗೆ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಕೆಲವು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು. ಆ ನಿಯಮಗಳ ಪೈಕಿ ಯಾವುದನ್ನು ಮೀರಿದರೂ ಅದು ಆ ದೇಶದ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತದೆ.
ಈಗ ಜೈಶ್-ಇ-ಮೊಹ್ಮದ್ ಉಗ್ರ ಸಂಘಟನೆಯ ನಾಯಕ ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಬೇಕು ಎಂಬುದು ಭಾರತದ ಬೇಡಿಕೆ. ಅದಕ್ಕಾಗಿಯೇ ವಿಶ್ವಸಂಸ್ಥೆಯಲ್ಲಿ ಪ್ರಯತ್ನ ಕೂಡ ನಡೆಸುತ್ತಿದೆ. ಇಂಥ ಸನ್ನಿವೇಶದಲ್ಲಿ ತಾನೇ ವಿಶ್ವಸಂಸ್ಥೆಯ ನಿಯಮಗಳನ್ನು ಮೀರಿದರೆ ಅದು ಅಪಾಯಕಾರಿ ಅಲ್ಲದೆ ಮತ್ತೇನೂ ಅಲ್ಲ.
ಉಗ್ರರ ನೆಲೆಗಳನ್ನು ಸೇನೆ ಧ್ವಂಸ ಮಾಡಿದ್ದು ಹೇಗೆ? ರೋಚಕ ಮಾಹಿತಿ
ಇನ್ನು ಪುಲ್ವಾಮಾದಂಥ ಉಗ್ರಗಾಮಿ ದಾಳಿ ಆದ ನಂತರವೂ ಸುಮ್ಮನೆ ಕೂರುವುದು ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಅವಮಾನ. ಆ ಕಾರಣಕ್ಕೆ ಆಯ್ದುಕೊಂಡಿದ್ದು Non-Military, pre-emptive action ಎನ್ನುತ್ತಾರೆ ತಜ್ಞರು. ಹೀಗೆ ಮಾಡುವ ಮೂಲಕ ಉಗ್ರಗಾಮಿಗಳನ್ನು ಹೊಸಕಿ ಹಾಕಲಾಗಿದೆ. ಅದೇ ವೇಳೆ ಪಾಕಿಸ್ತಾನದ ಸಾರ್ವಭೌಮತೆಗೆ ಧಕ್ಕೆ ಬರುವಂಥದ್ದೇನೂ ಭಾರತ ಮಾಡಿಲ್ಲ ಎಂದು ಜಗತ್ತಿನ ಮುಂದೆ ಹೇಳಿದಂತೆಯೂ ಆಗಿದೆ.
ಜೈಶ್-ಇ-ಮೊಹ್ಮದ್ ಸಂಘಟನೆಯ ಉಗ್ರರು ಭಾರತದ ಮೇಲೆ ಇನ್ನಷ್ಟು ಆತ್ಮಾಹುತಿ ದಾಳಿ ನಡೆಸಲು ಸಿದ್ಧತೆ ನಡೆಸುತ್ತಿದ್ದರು. ದೇಶದ ರಕ್ಷಣೆ ಮಾಡಿಕೊಳ್ಳುವ ಸಲುವಾಗಿ ಉಗ್ರಗಾಮಿಗಳನ್ನು ಕೊಲ್ಲಲಾಗಿದೆ. ಇದರಲ್ಲಿ ಪಾಕಿಸ್ತಾನದ ಸೈನಿಕರು ಹಾಗೂ ಸೈನ್ಯಕ್ಕೆ ಸಂಬಂಧಿಸಿದ ಯಾವುದಕ್ಕೂ ಹಾಗೂ ಅಲ್ಲಿನ ನಾಗರಿಕರಿಗೂ ಹಾನಿ ಆಗಿಲ್ಲ ಎಂದು ಭಾರತ ಹೇಳಿ ಮುಗಿಸಿದೆ. ಹಾಗಿದ್ದರೆ ಮುಂದೇನು? ಕಾದು ನೋಡೋಣ.