ವಿಡಿ ಸಾವರ್ಕರ್ ಬಗ್ಗೆ ಇರುವ ತಗಾದೆ, ಆಕ್ಷೇಪಗಳೇನು?
ನರೇಂದ್ರ ಮೋದಿ ಪ್ರಧಾನಿ ಆದ ಬಳಿಕ ವಿನಾಯಕ ದಾಮೋದರ ಸಾವರ್ಕರ್ ಸುತ್ತ ವಿವಾದಗಳ ಸದ್ದು ಆಗುತ್ತಲೇ ಇದೆ. ಸಾವರ್ಕರ್ ಅವರನ್ನು ಕೇಂದ್ರ ಸರಕಾರ ಮುನ್ನೆಲೆಗೆ ತರಲು ಯತ್ನಿಸಿದಷ್ಟೂ ವಿಪಕ್ಷಗಳು ಪ್ರತಿರೋಧ ಒಡ್ಡುತ್ತಿವೆ.
ಸಾವರ್ಕರ್ರನ್ನು ಸರಕಾರ ಸ್ವಾತಂತ್ರ್ಯವೀರ ಎಂದರೆ ವಿಪಕ್ಷಗಳು ರಣಹೇಡಿ ಎನ್ನುತ್ತವೆ. ಸಾವರ್ಕರ್ ಅಪ್ಪಟ ದೇಶಪ್ರೇಮಿ ಎಂದು ಸರಕಾರ ಎಂದರೆ, ಆತ ಮಹಾತ್ಮ ಗಾಂಧಿಯ ಕೊಲೆ ಹಿಂದಿನ ಸಂಚುಗಾರ ಎಂದು ಪ್ರತಿಪಕ್ಷಗಳು ವಾದಿಸುತ್ತವೆ. ಹೀಗೆ ವಿ.ಡಿ. ಸಾವರ್ಕರ್ ಸುತ್ತಲು ವಿವಾದಗಳು ಕಡಿಮೆಗೊಳ್ಳುವುದೇ ಇಲ್ಲ.
ಮತ್ತೆ ಭುಗಿಲೆದ್ದ ಸಾವರ್ಕರ್ ಫೋಟೊ ವಿವಾದ: ಶಿವಮೊಗ್ಗದಲ್ಲಿ ಲಘು ಲಾಠಿ ಪ್ರಹಾರ, ನಿಷೇಧಾಜ್ಞೆ
ನಮ್ಮ ಶಿವಮೊಗ್ಗದಲ್ಲಿ ಸಾರ್ವಕರ್ ವಿಚಾರ ಇನ್ನೂ ವಿಪರೀತ ಹಂತಕ್ಕೆ ಹೋಗಿದೆ. ಅಲ್ಲಿ ಸಾರ್ವಕರ್ ವರ್ಸಸ್ ಟಿಪ್ಪು ಎಂಬಂತಾಗಿ, ಕೊನೆಗೆ ಹಿಂದೂ ವರ್ಸಸ್ ಮುಸ್ಲಿಂ ಎಂಬಂತಾಗಿರುವುದು ಗೊತ್ತಿದೆ. ಇಲ್ಲಿ ಹಿಂದೂ ಮತ್ತು ಮುಸ್ಲಿಂ ಎಂದರೆ ಆ ಕೋಮಿನ ಎಲ್ಲರೂ ಅಲ್ಲ, ಒಂದು ನಿರ್ದಿಷ್ಟ ಗುಂಪುಗಳು.
ಶಿವಮೊಗ್ಗದ ಮಸೀದಿ ಬಳಿ ಸಾವರ್ಕರ್ ಫ್ಲೆಕ್ಸ್ ಕಟ್ಟಿಹಾಕಿದ್ದಕ್ಕೆ ಮುಸ್ಲಿಮ್ ಕೋಮಿನ ಕೆಲ ಯುವಕರು ತಗಾದೆ ತೆಗೆದು, ಆ ಫ್ಲೆಕ್ಸ್ ತೆಗೆದು ಟಿಪು ಸುಲ್ತಾನ್ ಫ್ಲೆಕ್ಸ್ ಹಾಕಿದರು. ಇದು ಅಲ್ಲಿ ಕೋಮುಗಲಭೆಗೆ ಕಾರಣವಾಯಿತು. ಇಲ್ಲಿ ತಪ್ಪು ಯಾರದ್ದೇ ಇರಲಿ, ಸದ್ಯ ವಿ ಡಿ ಸಾವರ್ಕರ್ ಬಗ್ಗೆ ಅಷ್ಟು ಅಸಹನೆ ಯಾಕೆ ವ್ಯಕ್ತವಾಗುತ್ತಿದೆ? ಸಾವರ್ಕರ್ ಅವರ ಯಾವ ವಿಚಾರ ಮತ್ತು ಕೃತ್ಯಗಳು ಆಕ್ಷೇಪಗಳಿಗೆ ಕಾರಣವಾಗಿವೆ?
ದೇಶ ವಿಭಜನೆಗೆ ಜಿನ್ನಾ ಜೊತೆ ಸಾವರ್ಕರ್ ಒಪ್ಪಿಗೆ ಇತ್ತು: ಸಿಎಂ ಭೂಪೇಶ್ ಬಘೇಲ್
ಯಾರು ಈ ಸಾವರ್ಕರ್?
ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ 1883 ಮೇ 28ರಂದು ಜನಿಸಿ 82 ವರ್ಷ ಕಾಲ ಬದುಕಿದವರು ವಿನಾಯಕ ದಾಮೋದರ್ ಸಾವರ್ಕರ್. ಸ್ವಾತಂತ್ರ್ಯ ಸಂಗ್ರಾಮದ ಕಾಲಘಟ್ಟದಲ್ಲಿ ಸಾವರ್ಕರ್ ಹಿಂದೂಗಳ ಸಂಘಟನೆಗೆ ಒತ್ತು ಕೊಟ್ಟವರು. ವೈಯಕ್ತಿಕವಾಗಿ ನಾಸ್ತಿಕನಾದರೂ ಹಿಂದುತ್ವದ ಸಿದ್ಧಾಂತ ಪ್ರತಿಪಾದಿಸುತ್ತಿದ್ದವರು.
ಹಿಂದೂ ಮಹಾಸಭಾ ಎಂಬ ಕಟ್ಟರ್ ಹಿಂದೂ ಸಂಘಟನೆಯ ಮುಂಚೂಣಿಯ ನಾಯಕರಾಗಿದ್ದವರು. ಅಭಿನವ ಭಾರತ್ ಸೊಸೈಟಿ ಎಂಬ ಮತ್ತೊಂದು ರಹಸ್ಯ ಉಗ್ರ ಚಟುವಟಿಕೆಯ ಸಂಘಟನೆಯನ್ನು ಸ್ಥಾಪಿಸಿದವರು. ಬ್ರಿಟಿಷರ ವಿರುದ್ಧ ತಮ್ಮದೇ ರೀತಿಯಲ್ಲಿ ಹೋರಾಟ ನಡೆಸಿದವರು. ಅಂಡಮಾನ್ ಜೈಲಿನಲ್ಲಿ 10 ವರ್ಷ ಕಠಿಣ ಜೈಲುಶಿಕ್ಷೆ ಅನುಭವಿಸಿದವರು.
ಮಹಾತ್ಮ ಗಾಂಧಿ ಹತ್ಯೆ
ಭಾರತಕ್ಕೆ ಸ್ವಾತಂತ್ರ್ಯ ಬಂದು ಒಂದು ಕೆಲ ತಿಂಗಳಲ್ಲಿ ಮಹಾತ್ಮ ಗಾಂಧಿಯನ್ನು ನಾಥುರಾಮ್ ಗೋಡ್ಸೆ ಹತ್ಯೆಗೈದಿದ್ದ. ಗೋಡ್ಸೆ ಹಿಂದೂ ಮಹಾಸಭಾ ಸಂಘಟನೆಯ ಕಾರ್ಯಕರ್ತನಾಗಿದ್ದ. ಈ ಹತ್ಯೆ ಹಿಂದೆ ವಿಡಿ ಸಾವರ್ಕರ್ ಕೈವಾಡ ಇದೆ ಎಂದು ಹೇಳಲಾಗುತ್ತದೆ. 1948, ಜನವರಿ 30ರಂದು ಗಾಂಧಿ ಹತ್ಯೆಯಾಯಿತು. ಫೆಬ್ರವರಿ 5ರಂದು ಪೊಲೀಸರು ಸಾವರ್ಕರ್ನ್ನು ಬಂಧಿಸಿದರು. ಆದರೆ, ಸಾಕ್ಷ್ಯಾಧಾರಗಳ ಕೊರತೆಯಿಂದ ಅವರನ್ನು ಬಿಡುಗಡೆ ಮಾಡಲಾಯಿತು.
ಅದೇನೇ ಇದ್ದರೂ ನಾಥುರಾಮ್ ಗೋಡ್ಸೆಗೆ ಮಹಾತ್ಮ ಗಾಂಧಿಯನ್ನು ಕೊಲ್ಲಲು ಕುಮ್ಮಕ್ಕು ಕೊಟ್ಟಿದ್ದು ಸಾವರ್ಕರ್ ಅವರೆಯೇ ಎಂದು ಹಲವರು ಈಗಲೂ ಆರೋಪಿಸುತ್ತಾರೆ.
ಗಾಂಧಿ ಹತ್ಯೆ ಪ್ರಕರಣದಲ್ಲಿ ಒಂಬತ್ತನೇ ಆರೋಪಿ ದಿಗಂಬರ್ ಬಾಡಗೆ ಎಂಬಾತ ತಾನು, ಗೋಡ್ಸೆ ಮತ್ತು ಇನ್ನೊಬ್ಬ ಆರೋಪಿ ನಾರಾಯಣ ಆಪ್ಟೆ ಸಾವರ್ಕರ್ ಸದನಕ್ಕೆ ಎರಡು ಬಾರಿ ಹೋಗಿ ಬಂದ ವಿಚಾರವನ್ನು ಪೊಲೀಸರಿಗೆ ಹೇಳಿದ್ದರು. ಇದು ಗಾಂಧಿ ಹತ್ಯೆಗೆ ಕೆಲ ದಿನಗಳ ಮೊದಲು ನಡೆದ ಭೇಟಿಯಾಗಿತ್ತು. ಹೀಗಾಗಿ, ಗಾಂಧಿ ಹತ್ಯೆಯಲ್ಲಿ ಸಾವರ್ಕರ್ ಕೈವಾಡ ಇದೆ ಎಂದು ಹೇಳಲಾಗುತ್ತದೆ.
ಸ್ವಾತಂತ್ರ್ಯ ವೀರ ಅಲ್ಲ
ವಿನಾಯಕ್ ದಾಮೋದರ್ ಸಾವರ್ಕರ್ ಅವರನ್ನು ಬಲಪಂಥೀಯ ಪಕ್ಷಗಳು ಸ್ವಾತಂತ್ರ್ಯವೀರ ಸಾವರ್ಕರ್ ಎಂದೇ ಕರೆಯುತ್ತವೆ. ಬ್ರಿಟಿಷರ ವಿರುದ್ಧ ಕೆಚ್ಚೆದೆಯ ರೀತಿಯಲ್ಲಿ ಹೋರಾಡಿದ್ದರು ಎಂದು ಹೇಳುತ್ತವೆ. ಆದರೆ, ಈ ಅಭಿಪ್ರಾಯವನ್ನು ವಿರೋಧಿಗಳು ಬಲವಾಗಿ ಅಲ್ಲಗಳೆಯುತ್ತವೆ.
ಯಾಕೆಂದರೆ, ಜೈಲಿನಲ್ಲಿ ಕೈದಿಯಾಗಿದ್ದ ಸಾವರ್ಕರ್ ಬಿಡುಗಡೆಗಾಗಿ ಬ್ರಿಟಿಷರಲ್ಲಿ ಭಿಕ್ಷೆ ಬೇಡಿದ್ದರು. ಮತ್ತೆಂದು ಬ್ರಿಟಿಷರ ವಿರುದ್ಧ ಚಟುವಟಿಕೆ ನಡೆಸುವುದಿಲ್ಲ ಎಂದು ಆಶ್ವಾಸನೆ ಕೊಟ್ಟು ಬ್ರಿಟಿಷರಿಂದ ಕ್ಷಮಾಪಣೆ ಪಡೆದು ಜೈಲಿನಿಂದ ಬಿಡುಗಡೆಗೊಂಡಿದ್ದರು. ಅದಾದ ಬಳಿಕ ಅವರು ಮತ್ತೆ ಬ್ರಿಟಿಷರ ವಿರುದ್ಧ ನಿಲ್ಲುವ ಧೈರ್ಯ ಮಾಡಲಿಲ್ಲ ಎಂದು ಹೇಳಲಾಗುತ್ತದೆ.
ಅಷ್ಟೇ ಅಲ್ಲ, ನಾಥುರಾಮ್ ಗೋಡ್ಸೆಗೆ ಗಾಂಧಿ ಕೊಲ್ಲಲು ಕುಮ್ಮಕ್ಕು ಕೊಟ್ಟು ಕೊನೆಗೆ ಆ ಘಟನೆಯನ್ನು ಖಂಡಿಸಿದ ಸಾವರ್ಕರ್ ಒಬ್ಬ ಹೇಡಿ ಎಂದು ಕೆಲವರು ಆಕ್ಷೇಪಿಸುತ್ತಾರೆ.
ಹಿಂದೂ ಉಗ್ರವಾದ, ಫ್ಯಾಸಿಸಂ
ವಿಡಿ ಸಾವರ್ಕರ್ ಹಿಂದುತ್ವ ಉಗ್ರವಾದದ ಪ್ರತಿಪಾದಕರೆಂಬ ಟೀಕೆ ಇದೆ. ಬ್ರಿಟಿಷರ ವಿರುದ್ಧ ಸಶಸ್ತ್ರ ಹೋರಾಟ ನಡೆಸಲು ಅಭಿನವ ಭಾರತ್ ಎಂಬ ಸಂಘಟನೆಯನ್ನು ಹುಟ್ಟುಹಾಕಿದ್ದರು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ನೆನೆಗುದಿಗೆ ಬಿದ್ದಿದ್ದ ಈ ಸಂಘಟನೆ ಸಾವರ್ಕರ್ ವಿಚಾರಧಾರೆಗಳ ಸ್ಫೂರ್ತಿಯಲ್ಲಿ ಈಗ ಮತ್ತೆ ಕುಡಿಯೊಡೆದಿದೆ. ಬಾಂಬ್ ಸ್ಫೋಟದಂತಹ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿದೆ ಎಂಬ ಆಪಾದನೆ ಕೇಳಿಬರುತ್ತದೆ.
ಅಷ್ಟೇ ಅಲ್ಲ, ವಿಡಿ ಸಾರ್ವಕರ್ ಸ್ವಾತಂತ್ರ್ಯಪೂರ್ವದಲ್ಲಿ ಜರ್ಮನಿಯ ನಾಜಿವಾದ ಹಾಗೂ ಇಟಲಿಯ ಫ್ಯಾಸಿಸಂಗೆ ಬೆಂಬಲ ನೀಡಿದ್ದರೆನ್ನಲಾಗಿದೆ. ಎರಡನೇ ವಿಶ್ವ ಮಹಾಯುದ್ಧದಲ್ಲಿ ಜರ್ಮನಿ, ಇಟಲಿ ಮತ್ತು ಜಪಾನ್ ದೇಶಗಳು ಒಂದು ಮೈತ್ರಿ ಮಾಡಿಕೊಂಡು ವಿವಿಧ ದೇಶಗಳ ಮೇಲೆ ಯುದ್ಧ ಮಾಡುತ್ತಿದ್ದವು. ಮಹಾತ್ಮ ಗಾಂಧಿ ಈ ಮೂರು ದೇಶಗಳ ವಿರುದ್ಧ ಹೇಳಿಕೆ ನೀಡಿದ್ದರು. ಆದರೆ, ಗಾಂಧಿ ಅಭಿಪ್ರಾಯವನ್ನು ಸಾವರ್ಕರ್ ವಿರೋಧಿಸಿದ್ದರು.
ಜರ್ಮನಿ, ಇಟಲಿ ಮಾದರಿಯಲ್ಲಿ ರಾಷ್ಟ್ರೀಯವಾದವು ಭಾರತದಲ್ಲೂ ಆಗಬೇಕು. ಇಲ್ಲಿ ಹಿಂದೂ ರಾಷ್ಟ್ರವಾದ ಇರಬೇಕು. ಮುಸ್ಲಿಮರು, ಕ್ರೈಸ್ತರು ಭಾರತೀಯ ಸಂಸ್ಕೃತಿಗೆ ಹೊಂದಿಕೆಯಾಗುವವರಲ್ಲ ಎಂಬುದು ಸಾವರ್ಕರ್ ಪ್ರತಿಪಾದನೆಯಾಗಿತ್ತು. ಅವರಿಗೆ ಮುಸ್ಲಿಮ್, ಕ್ರೈಸ್ತರ ಬಗ್ಗೆ ಅಸಹನೆ ಇತ್ತು ಎಂದು ಹಲವರು ವಾದಿಸುತ್ತಾರೆ.
(ಒನ್ಇಂಡಿಯಾ ಸುದ್ದಿ)