ಲೋಕಸಭೆಗೆ ವಾಟಾಳ್ ನಾಗರಾಜ್ ಸ್ಪರ್ಧಿಸುತ್ತಾರಾ?
Recommended Video

ಕಳೆದ ಕೆಲವು ವರ್ಷಗಳಿಂದ ಪಂಚಾಯತ್ ಮಟ್ಟದ ಚುನಾವಣೆಯನ್ನು ಹೊರತು ಪಡಿಸಿ ಉಳಿದ ವಿಧಾನಪರಿಷತ್, ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿ ಠೇವಣಿಯನ್ನು ಉಳಿಸಿಕೊಳ್ಳಲಾಗದೆ, ರಾಜಕೀಯ ಭವಿಷ್ಯ ಕಾಣದ ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಅವರಿಗೆ ಲೋಕಸಭಾ ಚುನಾವಣೆಯಲ್ಲಿಯೂ ಸ್ಪರ್ಧಿಸುವ ಬಯಕೆಯಿದೆ ಎನ್ನಲಾಗುತ್ತಿದೆ.
ಇತ್ತೀಚೆಗೆ ಅವರು ಸ್ಪರ್ಧಿಸಿದ್ದ ಯಾವ ಚುನಾವಣೆಯಲ್ಲಿಯೂ ಗೆಲುವನ್ನು ಸಾಧಿಸಿಲ್ಲ. ಆದರೂ ಕೂಡ ಸ್ಪರ್ಧಾ ಉತ್ಸಾಹ ಮಾತ್ರ ಕಡಿಮೆಯಾಗಿಲ್ಲ. ಇದೀಗ ಅವರು ವಾಟಾಳ್ ಪಕ್ಷದಿಂದ ಸ್ಪರ್ಧಿಸುವ ಬಗ್ಗೆ ಬಯಕೆ ಹೊಂದಿದ್ದು, ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುದು ಮಾತ್ರ ಇನ್ನೂ ನಿಗೂಢವಾಗಿದೆ.
ಈ ನಡುವೆ ರಾಮನಗರದಲ್ಲಿ ಕಾಣಿಸಿಕೊಂಡಿರುವ ಅವರು ಪ್ರಜಾಪ್ರಭುತ್ವದ ಬಗ್ಗೆ ಭಾಷಣ ಮಾಡಿದ್ದು, ರಾಜ್ಯದಲ್ಲಿ ಪ್ರಜಾಪ್ರಭುತ್ವ ನಾಶವಾಗುತ್ತಿದ್ದು, ಜಾತಿ ಪ್ರಭುತ್ವ ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆಯಲ್ಲದೆ, ಇದಕ್ಕೆ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಮೂರು ಪಕ್ಷಗಳು ಕಾರಣ ಎಂದು ಟೀಕಿಸುವ ಮೂಲಕ ಪ್ರಜಾಪ್ರಭುತ್ವ ಉಳಿವಿಗಾಗಿ ವಾಟಾಳ್ ಪಕ್ಷದ ಅಗತ್ಯವಿದೆ ಎಂಬ ಪರೋಕ್ಷವಾದವನ್ನು ಜನರ ಮುಂದಿಟ್ಟಿದ್ದಾರೆ.
ವಾಟಾಳ್ ಪಕ್ಷದಿಂದ ಏಕೆ ಸ್ಪರ್ಧೆ ಮಾಡಬೇಕು ಎಂಬುದಕ್ಕೆ ಕಾರಣ ನೀಡಿರುವ ಅವರು, ಲೋಕಸಭೆಯಲ್ಲಿ ಕನ್ನಡ ಭಾಷೆಯನ್ನು ಮೊಳಗಿಸಲು, ರಾಜ್ಯದ ಜ್ವಲಂತ ಸಮಸ್ಯೆಗಳನ್ನು ಚರ್ಚಿಸಲು ಹಾಗೂ ಕೆಂಪು ಕೋಟೆಯ ಮೇಲೆ ಕನ್ನಡ ಧ್ವಜವನ್ನು ಹಾರಿಸುವ ಉದ್ದೇಶದಿಂದ ಸ್ಪರ್ಧೆ ಮಾಡುತ್ತಿರುವುದಾಗಿ ಹೇಳಿದ್ದಾರೆ.
ರಾಜ್ಯದಲ್ಲಿ ವಾಟಾಳ್ ಪಕ್ಷದಿಂದ ಎಷ್ಟು ಜನ ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಿದ್ದಾರೆ? ವಾಟಾಳ್ ನಾಗರಾಜ್ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲವಾದರೂ ಈ ಕುರಿತಂತೆ ಒಂದೆರಡು ದಿನದಲ್ಲಿ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಯಾವ ರೀತಿಯಲ್ಲಿ ಪರಿಣಾಮ ಬೀರಬಹುದು?
1962ರಿಂದ ಕನ್ನಡ ಪರ ಹೋರಾಟ ಮಾಡಿಕೊಂಡು ಬರುತ್ತಿರುವ ಅವರು ಅದನ್ನೇ ಮುಂದಿಟ್ಟುಕೊಂಡು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಇರಾದೆ ಹೊಂದಿದ್ದಾರೆ. ಸದ್ಯ ರಾಮನಗರದಲ್ಲಿ ಕಾಣಿಸಿಕೊಂಡಿರುವುದರಿಂದ ಒಂದು ವೇಳೆ ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದಾರಾ? ಎಂಬ ಸಂಶಯಗಳು ಮೂಡುತ್ತಿವೆ. ಆ ಕ್ಷೇತ್ರದಲ್ಲಿ ಡಿಕೆಶಿ ಬ್ರದರ್ ಮತ್ತು ಯೋಗೇಶ್ವರ್ ಅವರ ನಡುವೆ ಪ್ರಬಲ ಪೈಪೋಟಿಯಿದೆ. ಇವರ ನಡುವೆ ವಾಟಾಳ್ ನಾಗರಾಜ್ ಸ್ಪರ್ಧೆ ಯಾವ ರೀತಿಯಲ್ಲಿ ಪರಿಣಾಮ ಬೀರಬಹುದು ಎಂಬುದು ಕೂಡ ಅಚ್ಚರಿಯನ್ನುಂಟು ಮಾಡುತ್ತಿದೆ.

ಹೋರಾಟಗಾರರ ಪರವಾಗಿ ಮಾತು
ಕನ್ನಡಪರ ಹೋರಾಟಗಾರರು ತಮ್ಮ ಬೆಂಬಲಕ್ಕೆ ನಿಲ್ಲಬಹುದು ಎಂಬ ಆಲೋಚನೆಯಲ್ಲಿರುವ ಅವರು ಹೋರಾಟಗಾರರ ಪರವಾಗಿಯೇ ರಾಮನಗರದಲ್ಲಿ ಮಾತನಾಡಿದ್ದಾರೆ. ಅದೇನು ಮಾತನಾಡಿದ್ದಾರೆ ಎಂಬುದು ಇಲ್ಲಿದೆ.

ಹೊಸ ಯುಗ ಆರಂಭವಾಗಬೇಕು
ರಾಮನಗರ ಜಿಲ್ಲೆಯಿಂದ ತಾವು ಜಾಗೃತಿ ಸಭೆಗಳನ್ನು ಆರಂಭಿಸಿದ್ದು, ಹೋರಾಟಗಾರರೆಲ್ಲರೂ ಒಂದೇ ವೇದಿಕೆಗೆ ಬಂದು ಗಂಭೀರವಾಗಿ ಚಿಂತನೆ ನಡೆಸಬೇಕು. ಆ ಮೂಲಕ ಹೊಸ ಯುಗ ಆರಂಭವಾಗಬೇಕು. ಲೋಕಸಭಾ ಚುನಾವಣೆಯಲ್ಲಿ ರೈತ, ದಲಿತ, ಕನ್ನಡ ಪರ ಹೋರಾಟಗಾರರು ಸಂಘಟಿತರಾಗಿ ಹೊಸ ಶಕ್ತಿಯ ಉದಯಕ್ಕೆ ಕಾರಣರಾಗಬೇಕು ಎಂದು ವಾಟಾಳ್ ತಿಳಿಸಿದ್ದಾರೆ.

ಮತ ಕೇಳುವ ನೈತಿಕ ಹಕ್ಕಿಲ್ಲ
ರಾಜ್ಯ ಸರ್ಕಾರ 2 ಲಕ್ಷ ಸಾವಿರ ಕೋಟಿ ಬಜೆಟ್ ಮಂಡಿಸಿತು. ಆದರೆ ಶಾಸಕರು ವಿವಿಧ ಇಲಾಖೆಗಳ ಬೇಡಿಕೆಗಳ ಬಗ್ಗೆ ಚರ್ಚಿಸಲಿಲ್ಲ. ಜನರ ಬೇಡಿಕೆಗಳು ಈಡೇರಲಿಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಧಿಕ್ಕರಿಸಿರುವ ಈ ಮೂರು ಪಕ್ಷಗಳಿಗೆ ಮತ ಕೇಳುವ ನೈತಿಕ ಹಕ್ಕಿಲ್ಲ ಎಂದು ವಾಟಾಳ್ ರಾಮನಗರದ ಸಭೆಯಲ್ಲಿ ಆರೋಪಿಸಿದ್ದಾರೆ.

ಮಾತನಾಡದವರನ್ನು ಆರಿಸಬಾರದು
ಲೋಕಸಭೆಯಲ್ಲಿ ರಾಜ್ಯದಿಂದ ಆಯ್ಕೆಯಾದ ಪ್ರತಿನಿಧಿಗಳು ರಾಜ್ಯದ ಹಿತಾಸಕ್ತಿಯ ಬಗ್ಗೆ ಮಾತನಾಡಲಿಲ್ಲ ಎಂದಿರುವ ವಾಟಾಳ್ ನಾಗರಾಜ್, ಕಾವೇರಿ, ಮೇಕೆದಾಟು ಹಾಗೂ ಮಹಾದಾಯಿ ಸೇರಿದಂತೆ ರಾಜ್ಯದ ಹಲವು ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಿಲ್ಲ. ಲೋಕಸಭೆಯಲ್ಲಿ ರಾಜ್ಯದ ಜನರ ಸಂಕಷ್ಟದ ಬಗ್ಗೆ ಮಾತನಾಡದವರನ್ನು ಮತದಾರರು ಈ ಬಾರಿ ಆರಿಸಬಾರದು, ಮಾತನಾಡುವವರನ್ನು ಆಯ್ಕೆ ಮಾಡಿ ಕಳಿಸಬೇಕು ಎಂದು ಸೂಚಿಸಿದ್ದಾರೆ.
ವಾಟಾಳ್ ನಾಗರಾಜ್ ಅವರ ಈ ಹೇಳಿಕೆಯನ್ನು ಓದಿದ ಬಳಿಕ ಅವರ ಬಯಕೆ ಏನು ಎಂಬುದು ಎಲ್ಲರಿಗೂ ಗೊತ್ತಾಗಿಬಿಡುತ್ತದೆ. ಅವರ ನಿರ್ಧಾರ ಏನೆಂಬುದನ್ನು ಕಾದು ನೋಡುವುದು ಅನಿವಾರ್ಯವಾಗಿದೆ.












Click it and Unblock the Notifications